ಶುಕ್ರವಾರ, ಜನವರಿ 11, 2013


ಎಲೆ ಮರೆ ಕಾಯಿ ೭೦
ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು 
ಕಾಣಬಾರದೆಂದು ಕಣ್ಮುಚ್ಚಬೇಡ
ಭ್ರಮೆಯ ಕವಚ ಸುರಕ್ಷವೆಂದು
ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ
ಕಾಲಲೊದ್ದಾದರೂ ಒಮ್ಮೆ ನೋಡು
ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು

ಪ್ರೀತಿ ಕುರಿತ ಮೇಲಿನ ಚಂದದ ಸಾಲುಗಳು ಅನುಭಾವಶರಧಿ ಎಂಬ ಬ್ಲಾಗಿನಲ್ಲಿ ಕಣ್ಣಿಗೆ ಬಿದ್ದಾಗ "ಅಬ್ಬಾ! ಎಂಥಾ ಸಾಲುಗಳು" ಎನಿಸಿತ್ತು. ಕಾವ್ಯಧಾರೆಯಲ್ಲೇ ನಿತ್ಯ ಮುಳುಗೇಳುವ ಕವಿಯ ಹಾಗೆ ಕಾಣುವ ಈ ಬರಹದ ಸೃಷ್ಟಿಕರ್ತಳ ಪದಪಯೋಗ, ಭಾವನೆಗಳ ಹೊರ ಹರಿವು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಕಾವ್ಯಲೋಕದಲ್ಲಿ ಕಂಡುಕೊಂಡ ಲೋಕ ನಮಗೆ ಖಂಡಿತಾ ಕಾಣಲಾರದು ಎನಿಸಿಬಿಡುತ್ತದೆ. ಕವಿತೆ ಬರೆಯುತ್ತಾ ಬರೆಯುತ್ತಾ ಈ ಲೋಕದಿಂದ ಮತ್ತೊಂದು ಲೋಕಕ್ಕೆ ಹೋಗಿ ಅಲ್ಲಿ ವಿಹರಿಸುತ್ತಾ ಆ ಲೋಕದ ಸೌಂದರ್ಯವನ್ನು ಸವಿಯುತ್ತಾ ನಮಗೂ ಕಾವ್ಯರೂಪದಲ್ಲಿ ಅವರ ಅನುಭವಗಳ ಮಾಲೆಗಳನ್ನು ಕಟ್ಟಿಕೊಡುವ ಇಂತಹ ಕವಿಗಳಿಗೆ ನಮನಗಳು. "ಭಾವಗಳ ಅನುಭವಿಸಿ ..... ಅನುಭವವ ಅನುಭಾವವಾಗಿಸಿದ ಅನುಭಾವಶರಧಿ" ಎಂದು ತಮ್ಮ ಬ್ಲಾಗಿಗೊಂದು ವ್ಯಾಖ್ಯಾನ ನೀಡಿರುವ ಈ ಕವಿಯತ್ರಿಯ ಕವನಗಳು ಸುಂದರ ಅನುಭಾವ ಉಳ್ಳ ಸಾಲುಗಳು.

"ನಾಲ್ಕು ಗೋಡೆಗಳ ನಡುವೆ ಕಡಿಮೆಯೆಂದರೆ ಸುಮಾರು ಹತ್ತು ಹದಿನೈದು ವರ್ಷ ನಾವು ಶೈಕ್ಷಣಿಕವಾಗಿ ಕಲಿಯುವುದು, ಪದವೀಧರರಾಗುವುದು, ಎಂದು ಯಾವುದನ್ನು ಹೇಳುತ್ತೇವೋ ಅದು ಕಲಿಯುವ ಪ್ರಕ್ರಿಯೆಯನ್ನು ಕಲಿಯಲಿಕ್ಕೆ ಮಾತ್ರ ಎಂದು ನನ್ನ ಭಾವನೆಯೂ ಹೌದು, ಅನುಭವವೂ ಹೌದು. ಅದರೊಳಗಿನ ವಸ್ತುವಿಷಯದ ಮುಖಾಂತರಕ್ಕಿಂತ ಹೆಚ್ಚು ಅದನ್ನು ಅಭ್ಯಸಿಸಿದ ರೀತಿ, ಬೇಕಾದ ಶ್ರದ್ಧೆ, ಸಾಧನೆಗೆ ಇರಬೇಕಾದ ಬದ್ಧತೆ, ಪರಿಶ್ರಮದ ಗುಟ್ಟು, ಮತ್ತು ಸೋಲುಗೆಲುವಿನ ರುಚಿ-ಇವುಗಳ ಮೂಲಕ ಮುಂದಿನ ಜೀವನಕ್ಕೆ ಸಹಾಯ ಒದಗುವುದೆಂದು ನನ್ನ ಭಾವನೆ."

ಎನ್ನುವ ಕವಯತ್ರಿಯ ಗದ್ಯ ಪ್ರಯೋಗವೂ ಭಾವನೆಗಳಿಂದ ತುಂಬಿ ತುಳುಕುತ್ತಿವೆ ಅನಿಸಿಬಿಡುತ್ತದೆ. ಅದಕ್ಕೇ ಸಾಕ್ಷಿ ಮೇಲಿನ ಸಾಲುಗಳು.

ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.
ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,
ಬದಲಾಗುವುದು, ಹಿಂತೆಗೆಯುವುದು- ಈಗಾಗದು.

ಎಂದು ಬರೆಯುವ ಕವಯತ್ರಿ ಅನುರಾಧ ಪಿ ಸಾಮಗ ಅವರನ್ನು ಎಲೆ ಮರೆ ಕಾಯಿ ಎನ್ನಲಾಗದು. ಗದ್ಯಕ್ಕಿಂತ ಹೆಚ್ಚು ಪದ್ಯಗಳನ್ನು ಬರೆಯಲು ಇಚ್ಚಿಸುವ ಈ ಕವಯತ್ರಿ ಚಂದದ ಗದ್ಯಗಳನ್ನೂ ಸಹ ಬರೆಯಬಲ್ಲರು. ಇವರ ಗದ್ಯ ಪದ್ಯಗಳ ಪಯಣ ಹೀಗೆಯೇ ಸಾಗುತ್ತಿರಲಿ. ನನ್ನ ಬಗ್ಗೆ ಎಂದು ತಮ್ಮ ಬ್ಲಾಗಿನಲ್ಲಿ "ನಾನೊಬ್ಬ ಮನುಷ್ಯಳು. ಅದಕ್ಕಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ." ಎಂದು ಬರೆದುಕೊಂಡಿರುವ ಇವರು ಮನುಷ್ಯರೇನೋ ಸರಿ ಆದರೆ ಕವಿತೆಗಳ ಬರೆಯುವ ಇವರು ನಮ್ಮ ಪಾಲಿಗೆ ಕವಯತ್ರಿ. ಸಹೃದಯಿಗಳೇ.. ಅನುರಾಧ ಮೇಡಂ ರವರ ಬಗ್ಗೆ ಅವರದೇ ಮಾತುಗಳು ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಇಗೋ ನಿಮಗಾಗಿ..
ಅನುರಾಧ ಪಿ. ಸಾಮಗ

"ಎಲೆ ಮರೆ ಕಾಯಿ ಅಂಕಣಕ್ಕಾಗಿ ನಿಮ್ಮ ವಿವರಗಳನ್ನು ಕೊಡಿ ಎಂದು ಸಹೋದರ ನಸೀಮ ಅವರು ಕೇಳಿದಾಗ ನನಗೆ ಮೊದಲು ಅನ್ನಿಸಿದ್ದು- ಎಲೆಮರೆಯದ್ದೇನೋ ಹೌದು, ಆದರೆ ನನ್ನ ವ್ಯಕ್ತಿತ್ವ ಅಥವಾ ಬರವಣಿಗೆಯ ಕ್ಷೇತ್ರದಲ್ಲಿ ನಾನು ಕಾಯಿಯ ಘಟ್ಟ ತಲುಪಿದ್ದು ಹೌದಾ...? ಹೊರಬರಲಿರುವ ನನ್ನ ಅಂಬೆಗಾಲಿನ ಕವನಸಂಕಲನಕ್ಕೆ ನಾನು ಯೋಚಿಸಿರುವ ಹೆಸರು ’ಮೊಗ್ಗು ಮಾತಾಡಿತು’ ಅಂತ.. ಅಂದರೆ ನಾನಿನ್ನೂ ಮೊಗ್ಗು, ಮಾತಾಡುವ ಹಂತಕ್ಕಷ್ಟೇ ತಲುಪಿದ್ದೇನೆ, ಅರಳಿ ಹೂವಾಗಿ ಕಾಯಾಗುವ ಕ್ಷಣ ಇನ್ನೂ ತುಂಬಾ ದೂರ ಇದೆ ಅನ್ನುವುದೇ ನನ್ನ ಅನಿಸಿಕೆ. ಆ ದಾಕ್ಷಿಣ್ಯದಿಂದಲೇ ಸ್ವಪರಿಚಯ ಮಾಡಿಕೊಳ್ಳುತ್ತಿದ್ದೇನೆ.

ಉಡುಪಿ ಜಿಲ್ಲೆಯ ಕಾಪುವಿನ ಒಂದು ಸಣ್ಣ ಹಳ್ಳಿ, ಉಳಿಯಾರು ನನ್ನೂರು, ಮಾತೃಭಾಷೆ ತುಳು. ಅಪ್ಪ ಶ್ರೀ ಯು. ಅನಂತಕೃಷ್ಣ ಭಟ್ ರವರು ಭಾರತೀಯ ಜೀವನ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು, ಅಮ್ಮ ಶ್ರೀಮತಿ ಗಾಯತ್ರಿ ಭಟ್, ನನಗೆ ಇಬ್ಬರು ತಂಗಿಯರು. ಕರಾವಳಿಯ ಅದರಲ್ಲೂ ನಮ್ಮೂರಿನ ಪ್ರಕೃತಿ ಸೌಂದರ್ಯ ನಾನು ಜೀವನದಲ್ಲಿ ಅತ್ಯಂತ ಹೆಚ್ಚು ಆಸ್ವಾದಿಸಿದ ವಿಷಯ. ಭೋರ್ಗರೆಯುತ್ತ ದಡ ಮುಟ್ಟಲು ಹವಣಿಸಿ ಬರುವ ಮತ್ತು ದಡ ಮುಟ್ಟಿದ ಕ್ಷಣ ತಟ್ಟನೆ ಶಾಂತವಾಗುವ ಸಾಗರದ ಅಲೆಗಳು, ಮಳೆಗಾಲದಲ್ಲಿ ಗದ್ದೆಬಯಲನ್ನೆಲ್ಲ ಆವರಿಸಿ ಹರಿವ ಕೆಂಬಣ್ಣದ ಅಗಾಧ ನೀರಿನ ಹರಿವು (ತುಳುವಿನ "ಬೊಳ್ಳ" ) ಅತ್ಯಂತ ಪ್ರೀತಿಪಾತ್ರ ಮತ್ತು ಆಸಕ್ತಿ ಕೆರಳಿಸಿದ ಬಾಲ್ಯದ ಅಂಗಗಳು. ನೀರು ಪ್ರತಿ ಘಟ್ಟದಲ್ಲೂ ಒಂದಲ್ಲ ಒಂದು ತರ ಹೋಲಿಕೆಯಾಗಿ, ಮಾದರಿಯಾಗಿ, ಪಾಠವಾಗಿ... ಹೀಗೆ ಹಲವು ರೂಪದಲ್ಲಿ ನನ್ನ ಯೋಚನೆಯ ಅವಿಭಾಜ್ಯ ಭಾಗವಾಗಿರುವುದು ಸಮುದ್ರತಟದಲ್ಲಿ ಕಳೆದ ಬಾಲ್ಯದ ಪರಿಣಾಮ ಅನ್ನಿಸುತ್ತದೆ. ಈಗ ನೆಲೆಸಿರುವುದು ಮೈಸೂರು, ಪತಿ ಪ್ರಶಾಂತ್ ಸಾಮಗರವರು ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪನಿಯಲ್ಲಿ ಇಂಜಿನಿಯರ್ ಹಾಗೂ ಮಗಳು ಅರ್ಪಿತಾ ಮೂರನೆಯ ತರಗತಿಯ ವಿದ್ಯಾರ್ಥಿನಿ.

ಒಂದನೇ ತರಗತಿ ಮತ್ತು ಹತ್ತನೇ ತರಗತಿಯನ್ನು ಕಾರಣಾಂತರಗಳಿಂದ ಉಡುಪಿಯ ಸಂತ ಸಿಸಿಲಿ ಕಾನ್ವೆಂಟ್ ನಲ್ಲಿ ಓದಿದೆ, ಉಳಿದ ಮಧ್ಯದ ಭಾಗ ಕರಂದಾಡಿಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಪುವಿನ ಮಹಾದೇವಿ ಪ್ರೌಢ ಶಾಲೆಯಲ್ಲಿ ಓದಿದೆ. ಈ ಮಧ್ಯಭಾಗದಲ್ಲಿಯೇ ನನ್ನ ವ್ಯಕ್ತಿತ್ವದೊಳಕ್ಕೆ ಬರವಣಿಗೆ, ಅಭಿನಯ ಮತ್ತು ಹಾಡುವಿಕೆ ಸೇರ್ಪಡೆಯಾದದ್ದು. ಅಳಿದವರಲ್ಲಿ ಉಳಿದವನೇ ಗೌಡ ಎಂಬಂತೆ ಆ ಹಳ್ಳಿಯ ವಾತಾವರಣದಲ್ಲಿ ನಾನು ಮಾಡಿದ ಪ್ರತಿಯೊಂದು ಪಠ್ಯ ಹಾಗೂ ಪಾಠ್ಯೇತರ ಚಟುವಟಿಕೆಗಳಿಗೆ ಸಿಗಬೇಕಾದ್ದಕ್ಕಿಂತ ಹೆಚ್ಚೇ ಪ್ರಶಂಸೆ ಸಿಕ್ಕಿ ಬಹುಶಃ ಆ ಪ್ರೋತ್ಸಾಹವೇ ನನ್ನನ್ನು ಇಂದಿಗೂ ಮುನ್ನಡೆಸುತ್ತಿರುವುದು. ಅಪ್ಪ ಹಲವಾರು ಭಕ್ತಿಗೀತೆಗಳು ಮತ್ತು ತತ್ವಪದಗಳನ್ನು ರಚಿಸಿರುತ್ತಾರೆ, ಹಾಗಾಗಿ ಅವರಿಂದ ರಕ್ತಗತವಾಗಿ ಬರವಣಿಗೆಯೆಡೆಗೆ ಒಲವು ನನ್ನಲ್ಲಿ ಬಂದಿದೆ, ಮತ್ತು ದೇವರ ಅನುಗ್ರಹದಿಂದ ಇತ್ತೀಚೆಗೆ ಬರೆಯುವ ಕಡೆಗಿನ ದಾಹ ತುಸು ಜಾಸ್ತಿಯಾಗಿದೆ. ನಾನು ಓದಿದ್ದು ಬಿ. ಎಸ್. ಸಿ., ಹಿಂದಿಯನ್ನು ಎರಡನೇ ಐಚ್ಚಿಕ ಭಾಷಾವಿಷಯವಾಗಿರಿಸಿಕೊಂಡು, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದೊಂದಿಗೆ. ಪಠ್ಯ ವಿಷಯವಾಗಿ ಕನ್ನಡದ ಓದು ಹತ್ತನೇ ತರಗತಿಗೆ ಕೊನೆಗೊಂಡಿದ್ದು ಈಗ ಅದನ್ನು ಕನ್ನಡ ಎಮ್. ಎ.(ಮೊದಲನೇ ವರ್ಷ ಮುಗಿಯಿತು) ಮಾಡುವ ಮೂಲಕ ಮುಂದುವರೆಸುತ್ತಿದ್ದೇನೆ.

ಸಾಹಿತ್ಯಕೃಷಿಯ ಬಗ್ಗೆ ತಿಳಿಸಿ ಅಂದಿದ್ದಾರೆ, ನಟರಾಜ್ ಅವರು. ನಾನು ಸಾಹಿತ್ಯಿಕವಾಗಿ ಹೆಚ್ಚೇನೂ ಓದಿಕೊಂಡಿಲ್ಲ. ಸಣ್ಣವಯಸ್ಸಿನಲ್ಲಿ ಚಂದಮಾಮ, ಬಾಲಮಿತ್ರಗಳ ಜೊತೆ ಸುಧಾ, ಪ್ರಜಾಮತ, ತುಷಾರ, ಮಲ್ಲಿಗೆಯಂಥ ಪುಸ್ತಕಗಳ ಓದು ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಕದ್ದುಮುಚ್ಚಿ ಕಾದಂಬರಿಗಳನ್ನು ಓದಿದ್ದೂ ಇದೆ. ಅದರಲ್ಲೂ ನವೋದಯ ಕವಿಗಳಾದ ಕುವೆಂಪು, ಬೇಂದ್ರೆ, ಕೆ ಎಸ್ ನ, ಎನ್ ಎಸ್ ಎಲ್, ಜಿ ಎಸ್ ಎಸ್ ರವರೇ ಮೊದಲಾದ ಕವಿಗಳ ಕವನಗಳನ್ನು ಓದಿ ಮೊದಲು ಬರೆಯಲಿಕ್ಕೆ ಶುರು ಮಾಡಿದ್ದು ಅದೇ ಪ್ರಾಸಬದ್ಧ, ಗೇಯತೆಯ ಗುಣವುಳ್ಳ ಮಾತ್ರಾಬದ್ಧತೆಯ ಕವನಗಳನ್ನು. ಹತ್ತನೇ ವರ್ಷದಲ್ಲಿ ಮೊದಲ ಕವನ "ಅಜ್ಜನಗಡ್ಡ" ಬರೆದಿದ್ದೆ. ಆಮೇಲೆ ಕಾಲೇಜುದಿನಗಳಲ್ಲೂ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು) ಸ್ವಲ್ಪ ಬರೆದಿದ್ದೆ. ಇತ್ತೀಚೆಗೆ ಬಿ. ಎಸ್. ಎನ್. ಎಲ್. ನ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಿಂದ ಐಚ್ಚಿಕನಿವೃತ್ತಿ ಪಡೆದ ನಂತರ ಪುನಃ ಬರೆಯಲು ಶುರು ಮಾಡುವಾಗ ಬಹುಶಃ ನವ್ಯದ ಮಾದರಿಯಲ್ಲಿ ಬರೆಯಲು ಆರಂಭಿಸಿದ್ದೇನೆ. ಪ್ರಾಸತ್ಯಾಗವೇ ಮೊದಲಾದ ಸಡಿಲಿಕೆಗಳು ರಚನೆಯಲ್ಲಿ ಕಟ್ಟುಪಾಡುಗಳಿಲ್ಲದ ಮುಕ್ತತೆಗೆ ಹಾದಿಯಾಗುವ ಮತ್ತು ವಸ್ತುವಿನ ಗೋಪ್ಯತೆ ಕಾಯ್ದುಕೊಳ್ಳುವ ಮೂಲಕ ರಚನೆಗಳನ್ನು ಸ್ವಲ್ಪ ಮಟ್ಟಿಗೆ ಕ್ಲಿಷ್ಟವಾಗಿಸುವ ಶೈಲಿ ನವ್ಯದ್ದು. ಸಾಧ್ಯವಾದಷ್ಟು ಅದನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ. ತೊದಲುನುಡಿಯನ್ನೂ ಆಸ್ಥೆಯಿಂದ ಆಲಿಸಿ ಮೆಚ್ಚುವುದು ನಮ್ಮ ತೀರಾ ಹತ್ತಿರದ ಅನುಬಂಧಗಳಿಗಷ್ಟೇ ಸಾಧ್ಯ. ಅಂಥ ಓದುಗವರ್ಗ ಇಲ್ಲಿ ಎಫ್. ಬಿ. ಮತ್ತು ಕನ್ನಡ ಬ್ಲಾಗ್ನಲ್ಲಿ ನನಗೆ ಸಿಕ್ಕಿ ಅವರೆಲ್ಲರ ಮೆಚ್ಚುಗೆಯಿಂದ, ಪ್ರೋತ್ಸಾಹದಿಂದ ಮುನ್ನಡೆಯುತ್ತಿದ್ದೇನೆ. ನನ್ನ ಬ್ಲಾಗ್ ಅನುಭಾವಶರಧಿಯಲ್ಲಿ (http://bhaavasharadhi.blogspot.com)
ಎಲ್ಲ ಬರಹಗಳನ್ನು ಒತ್ತಟ್ಟಿಗೆ ಸೇರಿಸಿಟ್ಟಿದ್ದೇನೆ.

ಇನ್ನು ಬರವಣಿಗೆಯ ಮುಂದಿನ ಕನಸಿನ ಬಗ್ಗೆ ..... ಬರವಣಿಗೆಗೇ ಅಂತ ಪ್ರತ್ಯೇಕವಾಗಿ ನಾನು ಕನಸು ಹೆಣೆದಿಲ್ಲ, ಬರೆಯುವ ಮುಂಚಿನಿಂದಲೂ ಇದ್ದ, ಈಗಲೂ ಇರುವ ಕನಸು ಒಂದೇ... ಇತರರನ್ನು ನೋಯಿಸದೇ ಬದುಕಬೇಕು, ಪ್ರತಿಕ್ಷಣವನ್ನೂ ಮಾನವನಾಗಿ ಹುಟ್ಟಿಸಿದ ವಿಧಿಗೆ ಕೃತಜ್ಞತಾಪೂರ್ವಕವಾಗಿ, ಸಂತೋಷದಿಂದ ಕಳೆಯುವ ಮುಕ್ತವಾದ ಸರಳಜೀವನ ನನ್ನದಾಗಬೇಕು, ಆ ನಿಟ್ಟಿನಲ್ಲಿ ಮುಂದಿರುವ ಗಳಿಗೆಗೆ ಒದಗಬೇಕು ಅದನ್ನು ಒದಗಿಸಿಕೊಳ್ಳಬೇಕು- ಅಷ್ಟೇ. ಯೋಚಿಸಿದ್ದನ್ನೇ ಆಡುವ ಹಾಗೂ ಆಡಿದಂತೆ ಬದುಕುವ, ನಾನು ತುಂಬಾ ಪ್ರೀತಿಸುವ ಜೀವನರೀತಿ ನನ್ನದು, ಕಲಿತು ಬಂದದ್ದಲ್ಲ ಸಹಜವಾಗಿ ಬಂದದ್ದು. ಅದರಿಂದ ಹಾನಿಗೊಳಗಾದರೂ ಅದನ್ನು ಕೈಬಿಡದೆ ಕೊನೆಯತನಕ ಬಾಳುವ ಕನಸೂ ಇದೆ.

ಬಹುಶಃ ನನ್ನ ಬಗ್ಗೆ ಇಷ್ಟೇ ಹೇಳಲಿಕ್ಕಿರುವುದು... ಈ ಮೂಲಕ ನಟರಾಜು ಮತ್ತು ಉಳಿದ ಎಲ್ಲಾ ಇಲ್ಲಿನ ಸನ್ಮಿತ್ರರಿಗೆ ನನ್ನಂಥ ಎಲ್ಲಾ ಕಿರಿಯ ಬರಹಗಾರನ್ನು ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಮನಸಾರೆ ನಮನಗಳನ್ನು, ಕೃತಜ್ಞತೆಗಳನ್ನು ತಿಳಿಸುತ್ತೇನೆ."

ಎಂದು ಮಾತು ಮುಗಿಸಿದ ಅನುರಾಧ ಮೇಡಂ ರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗ್ ಲಿಂಕನ್ನು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ. ಅವರ ಬ್ಲಾಗ್ ಅನುಭಾವಶರಧಿ'ಯಲ್ಲಿ ನೀವು ಒಂದಷ್ಟು ವಿಹರಿಸಿ ಖುಷಿಪಡಿ..

ಅನುರಾಧ ಮೇಡಂ ರವರ ಒಂದೆರಡು ಕವನಗಳ ತುಣುಕುಗಳ ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಉತ್ತರವಿಲ್ಲವೆಂದಲ್ಲ, ದನಿಯಿಲ್ಲ.... 
ನಗಲಾರೆ, ನಗುವಿಲ್ಲವೆಂದಲ್ಲ, ಮೊಗವಿಲ್ಲ...
ಆಡಲಾರೆ, ಮಾತಿಲ್ಲವೆಂದಲ್ಲ, ಬಾಯಿಲ್ಲ....
ಅಳಲಾರೆ, ನೋವಿಲ್ಲವೆಂದಲ್ಲ, ಕಣ್ಣೀರಿಲ್ಲ...

ನಿನ್ನೆಡೆಗೇ ಹೊರಟದ್ದು, ತಲುಪಲಾಗಲಿಲ್ಲ...
ಕಾಲಿಲ್ಲವೆಂದಲ್ಲ, ದಾರಿಯಿಲ್ಲ....
ನೀನಂದದ್ದು ಕೇಳಿಸಿತು, ಅರಗಲಿಲ್ಲ,
ಮೆಚ್ಚಿಲ್ಲವೆಂದಲ್ಲ, ಕೆಚ್ಚಿಲ್ಲ.... 
ಲೋಕದಲಿದಕಿಂತ ಬೇರಿಲ್ಲ ಉಸಿರೇ..
ಹಾರಲೆಳಸುವ ರೆಕ್ಕೆ, 
ಹಾಡಲೆಳಸುವ ನಾಲಿಗೆ,
ತುಂಡಾಗುವುದು.. ಮತ್ತು....
ಸತ್ಯ ಅಲ್ಲೆಲ್ಲ ಸೋಲುವುದು 
*****
ನನಗೆ ತಾಗಲೆಂದೇ ನೀ ಕಳಿಸಿದ್ದು
ಬಂದು ತಲುಪಿದೆ, ಧನ್ಯವಾದಗಳು.
ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ, 
ನನ್ನ ತಲುಪಿದಾಗ ಬಿಸಿಯಿರಲಿಲ್ಲ.
ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,
ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.
ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,
ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.
ಕೋಪಿಸಿಕೊಂಡಾದರೂ ಸರಿ, ಜೀವವೆ
ನೆನೆಯುತಿರು, ತೊರೆಯದಿರು,
ತೊರೆದು, ಮರೆಯದಿರು.
*****
ಕಾಯುತಿದ್ದ ಕಾದ ಭೂಮಿಯ ಮೇಲೆ 
ಹಲಕಾಲದ ನಂತರ ಬಿದ್ದ ಕೆಲವೇ
ತುಂತುರು ಮಳೆಹನಿ
ಮಣ್ಣಿನೊಳ ಹೊಕ್ಕು ಕೂತಿದ್ದ
ವಾಸನೆಯ ಹೆಕ್ಕಿ ತಂದು 
ಹಿತವಾದ ಪರಿಮಳವಾಗಿಸಿದವು
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :)

ಮಂಗಳವಾರ, ಜನವರಿ 1, 2013


ಎಲೆ ಮರೆ ಕಾಯಿ ೬೯
ಮೆಚ್ಕಂಡ್ ಮದ್ವಾತರೆ
ವರ್ಷ ತುಂಬಂಗಿಲ್ಲ
ಕಚ್ಚಾಡ್ಕಂಡ್ ದೂರಾತಾರೆ..!

ದಿನ್ವಿಡೀ ದುಡಿತರೆ
ಹೊಟ್ತುಂಬ ತಿನ್ನಕ್ಕಿಲ್ಲ
ಮೈ ತುಂಬ ತ್ವಡಾಕಿಲ್ಲ....!

ಯೋನ್ ಇಲ್ದಿದ್ರೂ ಅವಾಗ್ ನೆಮ್ದಿತ್ತು ಕನ
ಈಗ್ ನೋಡ್ರೆ ನಂಬ್ಕೂ ಇಲ್ಲ ನೆಮ್ದೂ ಇಲ್ಲ ಅಲ್ವೇನಾ..?!?

ಮೇಲಿನ ಆಡು ಭಾಷೆಯ ಸೊಗಡನ್ನು ತನ್ನೊಳಗೆ ತುಂಬಿಕೊಂಡು ಇಂತಹ ಕವಿತೆಗಳು ಎದುರು ನಿಂತಾಗ ಅಚ್ಚರಿಯಿಂದ ಈ ಕವಿ ಗೆಳೆಯನ ಕವಿತೆಗಳನ್ನು ಓದಿಕೊಂಡಿದ್ದೇನೆ. ಮಯಾಸ ಅನ್ನೋ ಹೆಸರಿನಲ್ಲಿ ಈ ಕವಿತೆಗಳು ಮೊದಲ ಬಾರಿಗೆ ನನ್ನ ಕಣ್ಣಿಗೆ ಬಿದ್ದಾಗ ದೇವನೂರ ಮಹಾದೇವರ "ಅಮಾಸ" ಜ್ಞಾಪಕಕ್ಕೆ ಬಂದಿದ್ದ. ದೇವನೂರ ಮಹಾದೇವರ ಬರಹದ ಶೈಲಿಯನ್ನು ಅನುಸರಿಸುವ ಪ್ರಯತ್ನ ಈ ಗೆಳೆಯನದೇ ಎಂದು ನಾನಂದುಕೊಂಡು ಇವರ ಕವಿತೆಗಳನ್ನು ಓದತೊಡಗಿದಾಗ ನಮ್ಮ ಮಯಾಸರಿಗೆ ಅವರದೇ ಆದ ಶೈಲಿ ಇದೆ ಎನಿಸಿತು. ಈ ಗೆಳೆಯನ ಪ್ರತಿ ಕವಿತೆಗಳನ್ನು ನೋಡಿದಾಗ ಸದ್ದಿಲ್ಲದೆ ಕಣ್ಮರೆಯಾಗುತ್ತಿರುವ ನಮ್ಮ ಊರುಗಳ ಸಂಸ್ಕೃತಿ, ಅಲ್ಲಿಯ ಜನರ ಭಾಷೆ, ಅವರ ಮುಗ್ಧತೆ ಕಣ್ಣ ಮುಂದೆ ಬಂದಂತಾಗುತ್ತದೆ. ಮೊದಲೊಮ್ಮೆ ಹೇಳಿದಂತೆ ಒಂದು ಪೀಳಿಗೆಯ ಬರಹಗಾರರು ನಮಗೆ ತಮ್ಮ ಬಾಲ್ಯದ ಯೌವನದ ದಿನಗಳ ಬದುಕುಗಳನ್ನು ನಮಗೆ ನೆನಪುಗಳ ಹಾಗೆ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಅವರ ಮುಂದಿನ ಪೀಳಿಗೆಯ ಬರಹಗಾರರು ಸಹ ತಮ್ಮ ನೆಲದ ಸಂಸ್ಕೃತಿಯ ಸೊಗಡನ್ನು ತಮ್ಮ ಬರಹಗಳಲ್ಲಿ ಬರೆಯುತ್ತಾ ಹೋದರೆ ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಬರಹದ ರೂಪದಲ್ಲಾದರೂ ಸಿಗುತ್ತವೆ. ಮಯಾಸನ ಕವಿತೆಗಳ ಓದಿದಾಗ ಪ್ರತೀ ಬರಹಗಾರ ತನ್ನ ಸುತ್ತ ಮುತ್ತಲ ಪರಿಸರದ ಚಿತ್ರಣವನ್ನು ತನ್ನ ಸಂಸ್ಕೃತಿಯನ್ನು ತನ್ನ ಬರಹಗಳಲ್ಲಿ ಈ ರೀತಿ ಚಂದವಾಗಿ ಕಟ್ಟಿಕೊಟ್ಟರೆ ಅದೆಷ್ಟು ಚಂದವಿರುತ್ತದೆ ಎನಿಸಿತ್ತದೆ. ಮಯಾಸನ ಪ್ರತೀ ಕವಿತೆಯೂ ಅವರ ಸರಣಿ ನೆನಪುಗಳ ಆಗರವನ್ನೇ ನಮ್ಮ ಮುಂದೆ ತೆರೆದಿಡುತ್ತಾ ಹೋಗುವುದು ನಿಜಕ್ಕೂ ಅನನ್ಯ..

ಮಳೆ ಜ್ವತಿಗೆ ಗಾಳಿ ಬಂದ್ರೆ
ಅಣ್ಬೆ ಏಳ್ತಾವೆ...!

ಬಿಸಿಲು ಮಳೆ ಒಟ್ಟಿಗ್ ಹೂದ್ರೆ
ಬಿಲ್ದೊಳ್ಗಿನ್ ಹಾವು ಈಚಿಗ್ ಬತ್ತಾದೆ..!

ಸಿಡ್ಲು ಜ್ವತಿಗೆ ಗುಡುಗ್ ಬಂದ್ರೆ
ಹಾಲೇಡಿ ಗದ್ದೆ ಬದೀಗೆ ಬತ್ತವೆ..!

ಬಿಸಿಲ್ ಮುಗ್ದು ಟಿಸಿಲ್ ಹೊಡ್ದ್ರೆ
ಬಿದ್ರು ಮಣ್ಕೆಲಿ ಕಳ್ಲೆ ಸಿಗ್ತಾವೆ..!

ಇಟ್ಗೆ ಗುಂಡಿಗೆ ನೀರ್ ತುಂಬ್ಸಿ
ಹೊಳಿಳ್ದ್ರೆ- ಮಳ್ಳಿ ಮೀನ್ ಸಿಗ್ತಾವೆ..!

ಅಬ್ಬಾ..! ಮಲ್ನಾಡೊಳ್ಗೆ
ಎಲ್ಲಾ ಐತೆ...ನಾನಿಲ್ಲ ಕನ..!?!

ಮೇಲಿನ ಸಾಲುಗಳ ಓದುತ್ತಿದ್ದಂತೆ ಮಯಾಸ ಏನ್ ಸೂಪರ್ ಆಗಿ ಬರೆದಿದ್ದಾರೆ ಅನಿಸುತ್ತಲ್ವಾ? ಅಣಬೆ ನೋಡಿ ಅದೆಷ್ಟು ವರ್ಷ ಆಗಿ ಹೋಯಿತು ಅಂದುಕೊಳ್ತಾ ಹಳೆಯ ನೆನಪುಗಳಿಗೆ ನಾವು ಜಾರಿದರೆ ಹಳ್ಳ ಕೊಳ್ಳಗಳ ಮೀನು, ಎಂದೋ ಎದುರಾಗಿದ್ದ ಹಾವುಗಳು, ಗೆಡ್ಡೆ ಗೆಣಸು ಬೆಟ್ಟ ಗುಡ್ಡ ಏನೆಲ್ಲಾ ಕಣ್ಣ ಮುಂದೆ ಬಂದು ನಿಂತು ಬಿಡುತ್ತವೆ. ನಮ್ಮ ಸಂಸ್ಕೃತಿಗಳು ಒಬ್ಬ ಪ್ರೇಯಸಿಯ ಹಾಗೆ ನಮ್ಮನ್ನು ಕಾಡಲು ಶುರು ಮಾಡದ ಹೊರತು ಆ ಸಂಸ್ಕೃತಿ ಕುರಿತ ಬರಹಗಳು ನಮ್ಮ ಬರಹಗಳಲ್ಲಿ ಎಂದಿಗೂ ಕಾಣಿಸಿಕೊಳ್ಳಲಾರವು. ಹಾಗೆ ಪ್ರೇಯಸಿಯ ಹಾಗೆ ಕಾಡಲು ತೊಡಗಿದ ನಮ್ಮ ಸಂಸ್ಕೃತಿಯ ನೆನಪುಗಳು ಇನ್ನಿಲ್ಲದಂತೆ ಚಂದವಾಗಿ ಬರೆಸಿಕೊಳ್ಳುತ್ತವೆ. ಅಂತಹ ಚಂದವಾಗಿ ಕಾಡಿಸಿಕೊಂಡು ಮೂಡಿದ ಬರಹಗಳು ಸದಾ ಕಾಲ ನೆನಪುಗಳಲ್ಲಿ ಉಳಿಯುವಂತ ಬರಹಗಳಾಗಿ ಹೊಮ್ಮಿಬಿಡುತ್ತವೆ. ನೀವು ಏನೇ ಹೇಳಿ ನಮ್ಮ ಭಾಷೆಗೆ ಸಂಸ್ಕೃತಿಗೆ ಅದರದೇ ಆದ ವೈಶಿಷ್ಟ್ಯತೆ ಇದೆ. ನಮ್ಮ ಭಾಷೆಯನ್ನು ಉಳಿಸಬೇಕು ಅಂತ ಎಷ್ಟೇ ಹೋರಾಟಗಳು ನಡೆದರೂ ಮಯಾಸ ನಂತಹ ಕವಿಗಳು ತಮ್ಮ ಬರಹಗಳಲ್ಲಿ ನಮ್ಮ ಸಂಸ್ಕೃತಿಯನ್ನು ಸದ್ದಿಲ್ಲದೆ ತಮ್ಮದೇ ರೀತಿಯಲ್ಲಿ ಉಳಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಬೆಳವಣಿಗೆ ನಿಜಕ್ಕೂ ಆರೋಗ್ಯಕರ. ಮಯಾಸ ರಂತಹ ಕವಿಗಳ ಬರಹಗಳು ಹೆಚ್ಚು ಹೆಚ್ಚು ಜನರನ್ನು ತಲುಪಬೇಕು. ಪ್ರಶಸ್ತಿ ಪುರಸ್ಕಾರಗಳು ಇಂತಹ ಚಂದದ ಕವಿಗೆ ಸಿಗಬೇಕು.

ಬಯಸಿದ್ನ
ಪಡ್ಕಾಬ್ಯಾಕಾ...?
ಬುಟ್ಬುಡ್ಬ್ಯಾಕಾ..?
ಪಡ್ಕಂಡ್ರೆ ಹೆಂಗ್ ಸಂಬಾಳ್ಸೋದು..?
ಬುಟ್ಬುಟ್ರೆ ಹೆಂಗ್ ತಡ್ಕಳ್ಳೋದು..?
ಇಂತವ್ ನೂರ್ ಪ್ರಶ್ನೆ ಮೂಡ್ತವೆ ಕನ
ಯೋನ್ ಮಾಡ್ಲಿ..???
ಉತ್ರುವೇ ಸಿಗಬಾರ್ದು ಅನ್ಕಂಡೀವ್ನಿ ಕನ...!!!

ಪ್ರತಿ ಬಾರಿ ಮಯಾಸ ಇಂತಹ ಕವಿತೆಗಳನ್ನು ಬರೆದು ನಮ್ಮ ಎದುರಿಗೆ ಇಟ್ಟಾಗ ಇವರ ನೆನಪಿನ ಶಕ್ತಿಗೆ, ತನ್ನ ನೆಲದ ಭಾಷೆಯ ಮೇಲಿರುವ ಇವರ ಪ್ರೀತಿಗೆ ಹ್ಯಾಟ್ಸ್ ಆಫ್ ಹೇಳಬೇಕು ಎನಿಸುತ್ತೆ. ಪತ್ರಿಕಾ ರಂಗದಲ್ಲಿ ಅಪಾರ ಅನುಭವ ಹೊಂದಿರುವ ಮಯಾಸ ಖಂಡಿತಾ ಎಲೆ ಮರೆ ಕಾಯಿಯಲ್ಲ. ಅಂದ ಹಾಗೆ ಮಯಾಸನ ನಿಜವಾದ ಹೆಸರು ಜ್ಞಾನೇಂದ್ರ ಕುಮಾರ್. ಮಯಾಸನ ಕವಿತೆಗಳು ನಮಗೆ ಎಷ್ಟು ಆಪ್ತವಾದಂತೆ ಕಾಣುತ್ತವೆಯೋ ಅಷ್ಟೇ ಆಪ್ತ ಅವರ ಮಾತುಗಳು.. ಇಗೋ ಮಯಾಸರ ಜೊತೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆಯ ತುಣುಕುಗಳು ನಿಮಗಾಗಿ..

 ಜ್ಞಾನೇಂದ್ರ ಕುಮಾರ್ ಪಿ.ಬಿ. (ಮಯಾಸ)

"ಮಲೆನಾಡ ಮಡಿಲು ಕಾಫಿ ಏಲಕ್ಕಿಯ ತವರೂರು ಹೇಮಾವತಿ ನದಿ ತೀರದ ಸಕಲೆಶಪುರ ತಾಲ್ಲಕೂಕಿನ ಹೆತ್ತೂರು ಹೋಬಳಿಯ ವಣಗೂರು ಅಂಚೆಯ ಬಿಸಲೆ ಅಭಯಾರಣ್ಯದ ತಪ್ಪಲಿನ ಕುಗ್ರಾಮ 'ಪಟ್ಲ' ನನ್ನ ಹುಟ್ಟೂರು. ತಂದೆ ಪಿ. ಸಿ ಬಸವಯ್ಯ ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಸೀನಿಯರ್ ಹೆಲ್ತ್ ಇನ್ಸ್ ಫೆಕ್ಟರ್ ಆಗಿದ್ದವರಾದರೂ ಕಡುಬಡತನದ ರುಚಿ ಕಂಡವರು. ತಂದೆ ಚಿಕ್ಕವಯಸ್ಸಿನಿಂದಲೂ ಸವರ್ಣೀಯರ ಶೋಷಣೆಯ ವಿರುದ್ದ ಸ್ವಾಭಿಮಾನದ ನ್ಯಾಯಬದ್ದ ಹೋರಾಟ ನಡೆಸಿಕೊಂಡೇ ಬಂದವರಾದ್ದರಿಂದ 1980 ರ ದಲಿತ ಸಂಘಟನೆ ಉಛ್ರಾಯ ಘಟ್ಟದಲಿದ್ದವೇಳೆ. ನೌಕರಿಯ ನಡುವೆಯೂ ದಸಂಸ ದಲ್ಲಿ ಸಕ್ರೀಯರಾಗಿದ್ದರ ಪರಿಣಾಮ ನಾನು 15 ನೇ ವಯಸ್ಸಿಗೆ ದಸಂಸ ಮುಖೇನ ವಿಧ್ಯಾರ್ಥಿ ದೆಸೆಯಲ್ಲೇ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡೆ. ಸಾಮಾನ್ಯರ ನಡುವೆ ಸಾಮಾನ್ಯವಾಗಿ ಬೆರೆಯುವ..ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ದ ಸಿಡಿಮಿಡಿಗೊಳ್ಳತೊಡಗಿದೆ. ಅಪ್ಪನ ಓದು ಮತ್ತು ಬರವಣಿಗೆಯ ಹವ್ಯಾಸ ಓದು ಮತ್ತು ಬರವಣಿಗೆಗೆ ಆಕರ್ಷಿಸಿತಾದರೂ ಅಪ್ಪ ಓದುತಿದ್ದ ಲೆನಿನ್ನು..ಕಾರ್ಲ್ ಮಾರ್ಕ್ಷ್..ಭಗತ್ ಸಿಂಗ್ ಅಜಾದ್ ಚಂದ್ರಶೇಖರ್ ಅಂಬೇಡ್ಕರ್..ಬಸವಣ್ಣ..ಕುವೆಂಪು ತೇಜಸ್ವಿ...ಯಾವುದೂ ಅರ್ಥವಾಗುತ್ತಿರಲಿಲ್ಲ...

ಅಪ್ಪನ ಓದೆಂಬ ಭಯಕ್ಕೆ ಮನೆಯಲಿರುತಿದ್ದ 'ಲಂಕೇಶ್' ಕೈಗೆತ್ತಿಕೊಂಡು ಕೂರುತಿದ್ದೆ..ಪದೇ ಪದೇ ನೀಲು ಪಧ್ಯಗಳ ಮೇಲೆ ಕಣ್ಣಾಯಿಸುತಿದ್ದೆ. ಕಾಲೇಜಿಗೆ ಬರುವಷ್ಟರಲ್ಲಿ ಹನಿಕವಿತೆಗಳ ಬರೆವ ಪ್ರಯತ್ನಪಟ್ಟೆ...ಈ ನಡುವೆ ಜೀವದ ಗೆಳೆಯ ನನ್ನೂರಿನ ದಿನೇಶ್ ಕುಮಾರ್ ಎಸ್. ಸಿ. ಸಂವಹನ ವೇದಿಕೆ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ಕ್ರಿಯಾಶೀಲನಾಗಿದ್ದು ಆಗಾಗ್ಗೆ ಆಯೋಜಿಸುವ ಸಾಹಿತ್ಯ ಸಮಾರಂಭಗಳಿಗೆ ಕರೆದೊಯ್ಯಲು ಆರಂಬಿಸಿದಾಗ ಸಾಹಿಯ್ಯದ ಮಜಲುಗಳ ಪರಿಚಯವಾಗತೊಡಗಿತು ಸಂವಾದಗಳಲ್ಲಿ ಭಾಗವಹಿಸೋದು ಕವಿಗೋಷ್ಟಿಗೋಸ್ಕರ ಕವಿತೆ ಬರೆಯೋದು..ವಾಚಿಸೋದು ಹಿಂಗೆ ಶುರುವಾದ ಸಾಹಿತ್ಯ ಕೃಷಿ...ಬಿಎ ಪದವೀಧರನಾದ ನನ್ನಲ್ಲಿ ಸಾಂಸ್ಕೃತಿಕ ಅಭಿರುಚಿಗಳನ್ನು ಪರಿಚಯಿಸತೊಡಗಿತು. ಗೆಳೆಯ ದಿನೇಶ್ ಆದಿನಗಳಲ್ಲೇ ಹವ್ಯಾಸಿ ಪತ್ರಕರ್ತ. ಈತನ ಸಹವಾಸದಿಂದ ಇಂದು ಪತ್ರಿಕಾವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ವಾರಪತ್ರಿಕೆ..ದಿನಪತ್ರಿಕೆಗಳಲ್ಲಿ ವರದಿಗಾರಿಕೆ ಮಾಡಿದ್ದೇನೆ. ಹಾಲಿ ರಕ್ಷಣಾವೇದಿಕೆ ಮುಖವಾಣಿ 'ಕರವೇ ನಲ್ನುಡಿ' ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದಾನೆ. ಓದುವ ಛಾಳಿಯಿದೆ. ತೋಚಿದಕ್ಕೆ ಬಣ್ಣ ಕಟ್ಟಿ ಗೀಚುತ್ತೇನೆ.

ನಂಗೆ ಎರಡ್ ಹೆಸ್ರು. ಮನೆಲಿ ಮಹೇಶ ಅಂತ್ ಕರೆಯೋರು. ಇಸ್ಕೂಲಲ್ಲಿ ಜ್ಞಾನೇಂದ್ರ ಕುಮಾರ್ ಪಿ.ಬಿ. ಅಂತ ಕರ್ಯೋರು. ಪಿ.ಬಿ. ಒಂದ್ ದಶಕದ ಕೆಳ್ಗೆ ನಾನೇ ಪ.ಬ ಮಾಡ್ಕಂಡೆ. ಮೂರ್ ದಶಕದ ಕೆಳ್ಗೆ ನನ್ ವಾರಗೆಯವರು ಸರಿಯಾಗಿ ಉಚ್ಚಾರ ಮಾಡಕ್ಕಾಗದೆ....ನನ್ನುನ್ನ ಮಯಾಸ ಅಂತ ಕರ್ಯೋರು....ಹಂಗಾಗಿ ಮಯಾಸ ಹೆಸರಲ್ಲಿ ಏನಾರ ಬರೆದ್ರೆ ಅದುನ್ನ ಮಡಗಕ್ಕೆ ಒಂದ್ ಕಣಜಬೇಕಲ್ಲ ಅದ್ಕೆ ಈ ಜೋಕಾಲಿ ಕಣಜ. ಬುದ್ವಂತ್ರು ಓದೋ ಚನಾಗಿರೋದ್ನಓದ್ತೀನಿ. ವ್ಯಾಕರಣ ಪಾಕರಣ ಗೊತ್ತಿಲ್ಲ ತೋಚಿದನ್ನ ಗೀಚಾಕೋ ಛಾಳಿ ಇದೆ. ಗುಂಪಲ್ಲಿ ಪಸಂದಾಗ್ ಹಾಡ್ತೀನಿ ರಾಗ ವಸಿ ದೊಡ್ದು. ಸುಮಾರಿಕೆ ಬಡಿಯಕ್ಕೆ ಬರುತ್ತೆ. ನನ್ನೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ 'ಪಟ್ಲ' ಹಳ್ಳಿಲುಟ್ಟಿರು ಪ್ಯಾಟೆಲೆ ಬೆಳದಿರೋದು. ಸದ್ಯಕ್ಕೆ ಕೆಟ್ಟು ಬೆಂಗಳೂರ್ ಪಟ್ಣ ಸೇರೀವ್ನಿ. ಅಮಾಯಕನೂ ಮುಗ್ಧನೂ ಆದ ನನಗೆ ನಿಮ್ಮಂತ ನಾಕ್ ಜನ ಸಿಕ್ಕವ್ರೆ. ಸುಳ್ಳೇಳಿರೂ ಗೊತ್ತಾಗದ ಹೆಂಡತಿ ಜೊತೆಗವ್ಳೆ. ಈಗ್ ತಾನೆ ಪಿಳಿಪಿಳಿ ಕಣ್ ಬಿಡ್ತಾ ಇರೋ ಎಂಡ್ ಮಕ್ಕಳಿವೆ. ಮರೆತ ಹುಡ್ಗೀರ್ ಹೆಸರು ಒಂದು ನೆನಪಿಲ್ಲ.

ಗಣ-ಮಾತ್ರೆಗಳು..ಛಂದಸ್ಸುಗಳು ತದ್ಭವ ತತ್ಸಮಗಳ ಹಂಗಿಲ್ಲದೇ ಆಡುಭಾಷೆಯಲ್ಲಿ ಯಥಾವಥ್ ಪಧ್ಯಬರೀಬೇಕು ಅನಿಸ್ತು. ಬರ್ಯೋಕೆ ಆರಂಭಿಸಿದೆ. ಅವನೆಲ್ಲಾ ಒಂದೆಡೆ ಕಲೆಹಾಕಬೇಕು ಅನಿಸ್ತು' ಜೆಕೆ ಜೋಕಾಲಿ ನರ್ಕೆ ಮನೆ ಅಂತ ಒಂದ್ ಬ್ಲಾಗ್ ಮಾಡಿದೆ. ಸರಳತೆ ಮತ್ತು ಸಹಜತೆ ನನಗೆ ಇಷ್ಟ. ಆದುನಿಕ ಭರಾಟೆ ನಡುವೆ ಕಳೆದೋದೆ ಅನಿಸುತ್ತೆ.ಆಗೆಲ್ಲ ಹಳೆದಿಗಳ ಮೆಲುಕು ಹಾಕ್ತೇನೆ. ಬಂದ ಭಾವನೆಗೆ ಮಯಾಸ ಜೀವ ತುಂಬ್ತಾನೆ. ನನಗಿಷ್ಟ ಆಗೋಹಾಗೆ ಬರೆಯೋ ಪ್ರಯತ್ನದಲ್ಲಿದ್ದೇನೆ."

ಎಂದು ಮಾತು ಮುಗಿಸಿದ ಗೆಳೆಯ ಮಯಾಸ "ಜಾಸ್ತಿ ಅನಿಸಿದ್ದನ್ನ ಮುಲಾಜಿಲ್ಲದೆ ಕಿತ್ತೆಸಿರಿ ಸಾ...ಯಾವ್ದಾರ ಬಿಟ್ಟೀನಿ ಅಂದ್ರ ಒಂದ್ ಪೋನ್ ಹಚ್ಚಿ ಆಪ್ ದ ರೆಕಾರ್ಡ್ ಕೂಡ ಹ್ಯೋಳ್ತೀನಿ ನನ್ ಜೀವನದಲ್ಲಂತು ಮಜಬೂತ್ ಕತೆಗಳಿವೆ. ಹೋರಟಕ್ಕೋಸ್ಕರ 23 ಕೇಸು ಅನುಭವಿಸಿದ್ದೀನಿ. ನಂದು ಹಿಂಗೆ ಅಂತ ಕ್ಯಾರೆಕ್ಟರ್ ಇಲ್ಲ ಸಾ..ನನ್ ಮನ್ಸಿಗೆ ಹಿಡ್ಸೋದೆಲ್ಲಾ ಮಾಡ್ತೀನಿ. ಸಖತ್ ಸ್ವಾಭಿಮಾನಿ..ನಿಯತ್ತು ಅಂತ ಮಾತ್ರ ಅನ್ಕಂಡೀವ್ನಿ." ಅಂತ ಥೇಟ್ ಹಳ್ಳಿ ಹೈದನ ತರಹ ಮಾತನಾಡುವಾಗ ಅವರ ಮಾತುಗಳನ್ನು ಇನ್ನಷ್ಟು ಹೊತ್ತು ಕೇಳಿಸಿಕೊಳ್ಳಬೇಕು ಅನಿಸುತ್ತೆ. ಏನು ಮಾಡೋದು ಇಲ್ಲಿ ಹೆಚ್ಚು ಮಾತನಾಡಲಾಗದು. ಆ ಕಾರಣದಿಂದ ಅವರ ಮಾತುಗಳನ್ನೆಲ್ಲಾ ಅವರ ಬ್ಲಾಗಿನಲ್ಲೇ ಕೇಳಿಸಿಕೊಳ್ಳೋಣ..

ಮಯಾಸ ಅವರ "ಜೆ ಕೆ ಜೋಕಾಲಿ" ಎಂಬ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ. ಸಮಯವಿದ್ದಾಗ ತಪ್ಪದೇ ಕಣ್ಣಾಡಿಸಿ..
http://jkjokaali.blogspot.in/

ಮಯಾಸ ಅವರ ಒಂದೆರಡು ಸೂಪರ್ ತುಣುಕುಗಳು ನಿಮಗಾಗಿ...

ಇಬ್ರೂ ಸೇರ್ಕಂಡೆ
ಒಪ್ಕಂಡೆ ಪಿರೂತಿ ಮಾಡಿದ್ವಿ
ನನ್ ಮರ್ತ್ ನೀ-
ಗಟ್ಮುಟ್ಟಾಗ್ ಗುಂಡ್ಕಲ್ ಇದ್ದಂಗಿದ್ದೀ
ಮತ್ ನಾ ಯಾಕ್ 
ಕಣ್ಣೀರಾಕಂಡ್ ಗೋಳಾಡ್ಕಂಡ್
ಕಾಲ ತಳ್ಲೀ ಮಾರಾಗಿತ್ತಿ
ನಗ್ಸೋರ್ ಸಿಕ್ಕೇ ಸಿಗ್ತಾರ
ನಕ್ಕಂಡ್ ನಕ್ಕಂಡೆ
ಕಾಲಕಳಿತೀನ್ ಬುಡತ್ಲೆಗೆ...!
*****
ಕವ್ಲಿ ನೀರಲ್ ಕೈ ತೊಕ್ಕಂದ್
ಗದ್ದೆ ಬದೀಲ್ಕುಂತು
ಬುತ್ತಿ ಬಿಡಿಸ್ಕಂಡು
ಬಾಳೆಲೆ ಹರ್ಡ್ಕಂಡ್ ಬಡಿಸ್ಕಂಡ್
ಬಾರ್ಸೋ ಮಜ ಪ್ಲೇಟ್ ಮೀಲ್ಸಲಿಲ್ಲ ಕನ..!

ಸೌದೆವಲೀಲಿ, ಮಣ್ಣಿನ್ಮಡ್ಕೆಲಿ
ಮುಳ್ ಹೊಡ್ಸಿದ್ ಒಳ್ಕಲಲ್ಲಿ
ಕಾರಕಡ್ದು , ರುಬ್ ಮಾಡ್ತಿದ್
ಸೊಪ್ಸಾರಿನ್ಗಮ ಮಿಕ್ಸಿ, ಗ್ರೈಂಡರ್
ಬಳ್ಸಮಾಡ್ರೆ ಗಮ್ಗುಡಲ್ಲ ಕನ...!
*****
ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))


ಶನಿವಾರ, ಡಿಸೆಂಬರ್ 22, 2012


ಎಲೆ ಮರೆ ಕಾಯಿ ೬೮
ಕೆಲವು ಹಿರಿಯರ ಮುಂದೆ ಯಾಕೋ ಮೌನ ವಹಿಸಬೇಕು ಎನಿಸುತ್ತೆ. ಯಾಕೆಂದರೆ ಅವರ ಜೀವನದ ಅನುಭವಗಳ ಎದುರು ನಾವು ತುಂಬಾ ತುಂಬಾ ಚಿಕ್ಕವರು. ಅಂತಹ ಜೀವನದ ಅನುಭವವುಳ್ಳ ಹಿರಿಯರು ಮಾತನಾಡುವಾಗ ಅವರು ಮಾತುಗಳನ್ನು ಶ್ರದ್ಧೆಯಿಂದ ಕೇಳಬೇಕು ಎನಿಸುತ್ತದೆಯೇ ಹೊರತು ಮಧ್ಯೆ ಮಾತನಾಡಬೇಕು ಎನಿಸುವುದಿಲ್ಲ. ಈ ದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಹಿರಿಯರ ಮಾತುಗಳನ್ನು ಕೇಳಿದಾಗ ನಾನು ಮೌನಕ್ಕೆ ಶರಣಾದೆ. ಅವರ ಮಾತುಗಳನ್ನು ಕೇಳಿ ನನ್ನ ಹಾಗೆ ಮೌನಕ್ಕೆ ಶರಣಾಗುವ ಸರದಿ ನಿಮ್ಮದೂ ಸಹ ಆಗಲಿ.. ಇವತ್ತಿನ ಎಲೆ ಮರೆ ಕಾಯಿ ಅಂಕಣಕ್ಕೆ ವಿಶೇಷ ಅತಿಥಿಯಾಗಿ ಬಂದಿರುವ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಇಗೋ ನಿಮಗಾಗಿ...

ಪಾರ್ಥಸಾರಥಿ ನರಸಿಂಗರಾವ್

-ಪ್ರಿಯ ನಟರಾಜುರವರೆ
’ಎಲೆ ಮರೆಕಾಯಿಗಳ ಜೊತೆ ಮಾತುಕತೆ ಅಂಕಣಕ್ಕಾಗಿ ನಿಮ್ಮ ಕಿರು ಪರಿಚಯವೊಂದನು ದಯಮಾಡಿ ಮೆಸೇಜ್ ಮಾಡಿ.” ಎಂಬ ನಿಮ್ಮ ಕೋರಿಕೆ ನನಗೆ ಸ್ವಲ್ಪ ಗೊಂದಲ ಮೂಡಿಸಿತು. ಯಾರ ಕಣ್ಣಿಗೂ ಬೀಳದಂತೆ ಇದ್ದು ಸಮಾಜಕ್ಕೆ ಉಪಯೋಗಿಯಾಗಿರುವರನ್ನು ಎಲೆಮರೆ ಕಾಯಿ ಅನ್ನುವರೇನೊ. ನಾನು ಎಲ್ಲರಿಗೆ ಪರಿಚಯ ಮಾಡಿಕೊಡುವಂತ ದೊಡ್ಡ ಸಾಧನೆಯೇನು ಮಾಡಿಲ್ಲ ಎನ್ನುವ ಭಾವ ಒಮ್ಮೆ, ’ನನಗೆ ಅದೆಲ್ಲ ಇಷ್ಟವಿಲ್ಲ’ ಎಂದು ಹೇಳಿದರೆ ಅಹಂಕಾರವಾಗುವದೇನೊ ಎಂಬ ಭಾವ ಮತ್ತೊಮ್ಮೆ , ಈ ದ್ವಂದ್ವದಲ್ಲಿಯೆ ನಿಮ್ಮ ಆತ್ಮೀಯ ಕೋರಿಕೆ ಸ್ವೀಕರಿಸಿದೆ.

ಕತೆ ಕವನ ಕಾದಂಬರಿ ಇವೆಲ್ಲ ಚಿಕ್ಕ ವಯಸ್ಸಿನಲ್ಲಿಂದಲೆ ಪ್ರಾರಂಬವಾದ ಹುಚ್ಚು. ಚಂದಮಾಮದ ’ಭೇತಾಳ’ ವಾಗಲಿ ಸುಧಾ ಪತ್ರಿಕೆಯ ’ಡಾಬು’ ವಾಗಲಿ ನನಗೆ ಅಚ್ಚುಮೆಚ್ಚೆ ಆಗಿತ್ತು. ಏನನ್ನು ಓದಬೇಕೆಂಬ ಕಲ್ಪನೆ ಇಲ್ಲದೆ ಸಿಕ್ಕಿದ್ದನೆಲ್ಲ ಓದುತ್ತಿದ್ದ ನನ್ನ ಓದನ್ನು ಸರಿ ದಾರಿಗೆ ತಿರುಗಿಸಿದವರು ನಮ್ಮ ತಂದೆಯೆ. ಒಮ್ಮೆ ಜಿಂದೆನಂಜುಂಡಸ್ವಾಮಿಯವರ ’ಜಂಟಿ ಪ್ರೇಯಸಿ’ ಪುಸ್ತಕವನ್ನು ಓದುತ್ತಿದ್ದಾಗ ಇಣುಕಿ ನೋಡಿದವರು, ’ನಿನಗೆ ಓದಲೆ ಬೇಕೆಂಬ ಆಸಕ್ತಿ ಇದ್ದಲ್ಲಿ ಸಾಕಷ್ಟು ಇದೆ ಓದು ’ ಎಂದು ಹಲವು ವಿಷಯ ತಿಳಿಸಿ, ಅವರು ’ಮೂಕಜ್ಜಿಯ ಕನಸು’ ಪುಸ್ತಕ ತಂದು ಕೊಟ್ಟಾಗ ನಾನಿನ್ನು ಏಳನೆ ತರಗತಿ. ಆಗ ಪ್ರಾರಂಬವಾದ ಓದು ಕನ್ನಡದ ಬಹುತೇಕ ಎಲ್ಲ ಸಾಹಿತಿಗಳ ಬರಹಗಳನ್ನು ಓದುವಂತೆ ಮಾಡಿತು. ಬೈರಪ್ಪ, ಕಾರಂತ, ಎಂ.ಕೆ. ಇಂದಿರ, ತರಾಸು, ಅನಾಕೃ, ಬೀಚಿ, ಟಿ.ಕೆ.ರಾಮರಾವ್ ಎಲ್ಲರು ನನ್ನ ಸುತ್ತಲು ಸುತ್ತುತ್ತಿದ್ದರು. ಕಡೆಗೆ ಅಂಗಡಿಯಲ್ಲಿ ಕಡ್ಲೆಕಾಯಿ ಕಟ್ಟಿಕೊಟ್ಟರೆ , ತಿನ್ನುತ್ತ ಕಡ್ಲೆಕಾಯಿ ಕಟ್ಟಿದ್ದ ಆ ಪೇಪರಿನ ತುಂಡಿನಲ್ಲಿ ಏನಿದೆ ಎಂದು ಓದುವ ಅಕ್ಷರದಾಹ.....ಹಹ್ಹಹ್ಹ,,

ಹುಟ್ಟಿದ್ದು ತುಮಕೂರು ಜಿಲ್ಲೆಯಾದರು, ತಂದೆಯವರು ಉಪಾದ್ಯಾಯ ವೃತ್ತಿಯಲ್ಲಿದ್ದು ತುಮಕೂರು, ಹಾಸನ, ಚಿಕ್ಕಮಂಗಳೂರು,ಬೆಂಗಳೂರಿನ ಜಿಲ್ಲೆಯ ಹಲವು ಸ್ಥಳ ಸುತ್ತುವಂತಾಗಿತ್ತು. ಹಾಗಾಗಿ ನನಗೆ ಕರ್ನಾಟಕದ ಯಾವುದೆ ಸ್ಥಳವು ಪ್ರಿಯವೆ. ಕೆಲಸಕ್ಕೆ ಸೇರಿ ಕನಕಪುರದಲ್ಲಿ ಎಂಟು ವರ್ಷ ಕಳೆದು, ಬೆಂಗಳೂರಿನಲ್ಲಿ ನೆಲೆಸಿರುವೆ. ಪತ್ನಿ ಹಾಗು ಒಬ್ಬಳು ಮಗಳು ಇರುವ ಪುಟ್ಟ ಸಂಸಾರ.
ಸಾಹಿತ್ಯದ ಪ್ರಾಕಾರದಲ್ಲಿ ಏನನ್ನಾದರು ಬರೆಯಬಲ್ಲೆ ಎಂದು ಯಾವ ಕನಸು ಕಂಡಿರಲಿಲ್ಲ. ಎರಡು ವರ್ಷದ ಕೆಳಗೆ ತಮ್ಮನ ಮಗಳು ದೆವ್ವದ ಕತೆ ಹೇಳಿ ಎಂದು ದುಂಬಾಲು ಬಿದ್ದಾಗ, ಸುಮ್ಮನೆ ಅಂತರ್ಜಾಲದಲ್ಲಿ ಹುಡುಕಿದೆ. ಆಗ ಕಣ್ಣಿಗೆ ಬಿದ್ದಿದ್ದು ’ಸಂಪದ’ ತಾಣ. ಅಲ್ಲಿಯವರೆಗು ಅಂತರ್ಜಾಲದಲ್ಲಿ ಕನ್ನಡ ಅಕ್ಷರವಿರಬಹುದು ಎಂಬ ಕಲ್ಪನೆಯು ಇರದಿದ್ದ ನನಗೆ ಸಂತಸವೆನಿಸಿ, ಅಲ್ಲಿ ಏನಾದರು ಬರೆಯುವ ಕುತೂಹಲ ಮೂಡಿತು. ಹಾಗೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿ ಕೊಂಡಿರುವ ಹಲವು ಸಹೃದಯಿಗಳ ಪರಿಚಯವಾಯಿತು. ’ಸಂಪದದಲ್ಲಿ’ ಸುಮ್ಮನೆ ಬರೆಯುತ್ತ ಹೋದೆ,

ನಾನು ಬರೆದುದ್ದನ್ನೆಲ್ಲ ಓದಿ ಬೆನ್ನು ತಟ್ಟಲು ಹಲವರಿದ್ದರು. ತಪ್ಪು ತಿದ್ದಿದವರು ಇದ್ದರು. ಸಣ್ಣಕತೆಗಳ ರಚನೆಯಲ್ಲಿ ಹೆಚ್ಚು ಆಸಕ್ತಿ . ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯಸೇವೆ ನಡೆಸುತ್ತಿರುವ ಹತ್ತು ಹಲವು ಗೆಳೆಯರ ನಡುವೆ ನಾನೊಬ್ಬ , ಇನ್ನು ತಪ್ಪು ಹೆಜ್ಜೆ ಇಡುತ್ತಿರುವ ’ಶಿಶು’ ಎಂದೆ ನನ್ನ ಭಾವನೆ. ಸಾಹಿತ್ಯ ಸೇವೆ , ಕನ್ನಡಸೇವೆ ಅನ್ನುವದೆಲ್ಲ ದೊಡ್ಡ ಪದಗಳು, ನನ್ನೊಳಗಿನ ಏನನ್ನೊ ತೃಪ್ತಿಪಡಿಸಲು, ನನ್ನೊಳಗೆ ಹುಟ್ಟುವ ಭಾವನೆಗಳನ್ನು ಹೊರಹಾಕಲು ಇದೊಂದು ಮಾರ್ಗವಷ್ಟೆ.

ನನ್ನದೊಂದು ‘ಕರಿಗಿರಿ’ ಎಂಬ ಅಂತರ್ಜಾಲಪುಟವಿದೆ , ಸಣ್ಣಕತೆಗಳಿಗಷ್ಟೆ ಹೆಚ್ಚು ಒತ್ತುಕೊಟ್ಟಿರುವ ಪುಟವದು , ಆಸಕ್ತಿ ಇರುವವರು ಬೇಟಿಕೊಡಬಹುದು www.narvangala.blogspot.in

ನಾನು ಬರೆದ ಕವನಗಳಲ್ಲಿ ನನಗೆ ಅಚ್ಚುಮೆಚ್ಚು :ಮನೆ ಎಂದರೆ ಅದು ಬರಿ ಮನೆಯಲ್ಲ (೨೦೧೧) , ತರಕಾರಿ ಹುಡುಗಿ ಮತ್ತು ನಾನು (೨೦೧೨) ನನ್ನ ಬಾಲ್ಯದ ಗೆಳತಿ (೨೦೧೧)
ಹಾಗೆ ಕತೆಗಳಲ್ಲಿ ನಾನು ಇಷ್ಟಪಟ್ಟಿದ್ದು ವಿಕ್ಷಿಪ್ತ(೨೦೧೦) ಪ್ರಮಥಿನಿ (೨೦೧೦) ಲೌಕಿಕ ಅಲೌಕಿಕ (೨೦೧೧) ದೂರತೀರದ ಕರೆ (೨೦೧೨)

ತಮ್ಮ ವಿನಯದ ಮಾತುಗಳಿಂದಲೆ, ನಮ್ಮೊಳಗೆ ಹಿರಿತನ ತುಂಬುವ ಮಾತಿನ ಜಾಣ ನಟರಾಜುರವರಿಗೆ, ಅಭಿನಂದಿಸುತ್ತ
ಎಲ್ಲ ಸಾಹಿತ್ಯ ಪ್ರೇಮಿಗಳಿಗು ವಂದನೆಗಳನ್ನು ಅರ್ಪಿಸಲು ಈ ಅವಕಾಶ ಬಳಸಿಕೊಳ್ಳುತ್ತ
ನಮಸ್ಕಾರಗಳೊಡನೆ
ಪಾರ್ಥಸಾರಥಿ"

ಎಂದು ಚಂದವಾಗಿ ಮಾತನಾಡಿದ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ.. ಅವರು ತಿಳಿಸಿದ ಅವರ "ಕರಿಗಿರಿ" ಬ್ಲಾಗಿಗೆ ಭೇಟಿ ನೀಡಿ ಅವರ ಬರಹಗಳನ್ನು ಓದಿ ಆಹ್ವಾದಿಸಿ..

ಪಾರ್ಥಸಾರಥಿ ಸರ್ ಅವರ ಬ್ಲಾಗಿನಿಂದ ಆಯ್ದ ಒಂದೆರಡು ಕವನಗಳ ತುಣುಕುಗಳನ್ನು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಅಮ್ಮ  ಕೈಯ ತೋರಿ ಹೇಳಿದಳು
'ಅಲ್ಲಿ ಹೋಗಿ ತಾ'
ಎಡವುತ್ತ ನಡೆದು ಹೋದೆ
"ಏನು ಬೇಕು ಪುಟ್ಟಾ?"
ಕೇಳಿದಳು ಅವಳು
ತರಕಾರಿ ಮಾರುವವಳು
"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ
"ಅಯ್ಯೊ ನನ್ನ ಬಂಗಾರ"
ಉಲಿದಳು ಆಕೆ ಜೊತೆಗೆ ಒಂದು ಸೇಬು
'ತಿನ್ನು ಪುಟ್ಟು' ಎಂದು
*****

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲು
ಆದರೆ
ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತು

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು
*****

ಶುಭವಾಗಲಿ

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಡಿಸೆಂಬರ್ 13, 2012


ಎಲೆ ಮರೆ ಕಾಯಿ ೬೭
ಬದುಕಿನ ಕಾಲಘಟ್ಟದಲ್ಲಿ ಒಂದಷ್ಟು ದಿನಗಳಿರುತ್ತವೆ. ಏನಾದರು ಸಾಧಿಸಲೇಬೇಕು ಎಂಬ ಹಂಬಲದಿಂದ ಕಷ್ಟಪಡುತ್ತಲೇ ಯಶಸ್ಸಿನತ್ತ ದೃಷ್ಟಿ ನೆಟ್ಟು ಧ್ಯಾನಿಸುವ ಕನಸು ಕಾಣುವ ದಿನಗಳವು. ಅಂತಹ ಧ್ಯಾನಕ್ಕೆ ಕುಳಿತವರು ತಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು ಎಂದುಕೊಳ್ಳುತ್ತಲೇ ತಮ್ಮ ಬದುಕನ್ನು ಚಂದವಾಗಿ ಕಟ್ಟುತ್ತಾರೆ ಎನ್ನುವುದಕ್ಕಿಂತ ತಮ್ಮ ಮಕ್ಕಳಿಗೆ ಭವಿಷ್ಯವೊಂದನ್ನು ಕಟ್ಟಿಕೊಡುತ್ತಾರೆ ಎನ್ನಬಹುದು. ಬಡತನದ ದಿನಗಳನ್ನು ಕಳೆದು ತನ್ನ ಆರ್ಥಿಕ ಮಟ್ಟವನ್ನು ಉತ್ತಮ ಸ್ಥಿತಿಗೆ ತಂದುಕೊಂಡಿರುವ ಪ್ರತಿಯೊಬ್ಬರ ಒಳಗೂ ತಾವೇ ಬರೆದಿಟ್ಟುಕೊಂಡ ಡೈರಿಗಳಂತೆ ಕಾಣುವ ಮನದ ಮಾತುಗಳು ಸಾವಿರವಿರುತ್ತವೆ. ಎಂದಾದರು ಅಂತಹವರನ್ನು ಮಾತಿಗೆ ಎಳೆದರೆ ತಾವು ಕಷ್ಟಪಟ್ಟು ಉತ್ತಮ ಸ್ಥಿತಿಗೆ ಬೆಳೆದು ಬಂದ ದಿನಗಳನ್ನು ಅವರು ನೆನೆಸಿಕೊಳ್ಳುವಾಗ ಅವರ ಬಗ್ಗೆ ನಮಗೆ ಹೆಮ್ಮೆ ಹಾಗು ಗೌರವ ಮೂಡಿಬಿಡುತ್ತದೆ. ಇವತ್ತು ಓದಿಗೆ ಸಿಕ್ಕಿದ ಚಿನ್ಮಯಧಾರೆ ಎಂಬ ಬ್ಲಾಗಿನ ಲೇಖನವೊಂದರಲ್ಲಿ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿಕೊಂಡಿರುವ ಗೆಳೆಯ ಚಿನ್ಮಯ್ ಅವರ ಮನದ ಈ ಕೆಳಗಿನ ಮಾತುಗಳು ತುಂಬಾ ಇಷ್ಟವಾದವು...

"ಸಂಜೆ ಅಪರೂಪಕ್ಕೊಮ್ಮೆ ಸುತ್ತಾಡಲು ಹೋಗುತ್ತಿದ್ದ ನಾವು ಎಲ್ಲರಂತೆ ಹೊರಗಡೆ ಏನಾದರು ತಿನ್ನೋಣ ಅಂದುಕೊಂಡಾಗಲೆಲ್ಲ ಕೂಡಿಸಿ, ಕಳೆದು, ಗುಣಿಸಿ, ಬಾಗಿಸಿ ಕೊನೆಗೆ ಚಹಾ ಕುಡಿಯೋಣ ಎಂಬ ಒಕ್ಕೊರಲಿನ ತಿರ್ಮಾಣಕ್ಕೆ ಬರುತಿದ್ದೆವು. ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾವನ್ನು ಮೂರು ಜನ ಕುಡಿಯುತ್ತಿದ್ದೆವು ಅಂದರೆ, ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾ ಮೂರು ಜನರ ಪಾಲು..!! ಜೇಬಿನಲ್ಲಿ ಒಂದೊಂದು ರೂಪಾಯಿಗೂ ಘನವಾದ ಬೆಲೆ ಸಂದಾಯವಾಗುವಂಥ ಸಮಯ ಅದು..!!"

ಗೆಳೆಯ ಚಿನ್ಮಯ್ ಅವರ ಚಹಾ ದಿನಗಳ ಕುರಿತ ಮೇಲಿನ ಸಾಲುಗಳನ್ನು ಓದುತ್ತಲೇ ನೆಪೋಲಿಯನ್ ಹಿಲ್ ರವರ "ನಮ್ಮಪ್ಪ ಶ್ರೀಮಂತನಾಗಲು ಬಯಸಿರಲಿಲ್ಲ ಆದ್ದರಿಂದ ನಾವು ಬಡವರಾಗಿದ್ದೆವು" ಎಂಬ ಸಾಲೊಂದು ನೆನಪಾಯಿತು. ನಮ್ಮಪ್ಪ ಬಡವನಾಗಿದ್ದ ನಾವು ಬಡವರಾಗಿ ಉಳಿಯಬಾರದು ಎಂಬ ಕಿಚ್ಚು ನಮ್ಮಲ್ಲಿ ಹುಟ್ಟಿದ ದಿನವಲ್ಲವೇ ನಾವು ಯಶಸ್ಸಿನತ್ತ ಪಯಣ ಬೆಳೆಸುವುದು. ಅಂತಹ ಯಶಸ್ಸಿನತ್ತ ಪಯಣ ಬೆಳೆಸಿದ ದಿನಗಳ ಕುರಿತು ಗೆಳೆಯ ಚಿನ್ಮಯ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿರುವುದು ಖುಷಿಯ ವಿಚಾರ..

ನನ್ನ ಮುಗ್ಧ ಗೆಳತಿಗೆ          
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..

ಕವಿತೆ, ಚುಟುಕಗಳನ್ನು ಬರೆಯುವ ಕವಿ ಕಾಲಾಂತರದಲ್ಲಿ ಓದುಗರ ಓದುವ ರುಚಿಯನ್ನು ಅರ್ಥೈಸಿಕೊಂಡು ತನ್ನ ಕಾವ್ಯ ಕೃಷಿಯಲ್ಲಿ ಬದಲಾವಣೆಯನ್ನು ಹೇಗೆ ಕಂಡುಕೊಳ್ಳುತ್ತಾನೆ ಎನ್ನುವುದಕ್ಕೆ ಈ ಕವಿ ಗೆಳೆಯನ ಮೇಲಿನ ಸಾಲುಗಳು ಉತ್ತಮ ಉದಾಹರಣೆ.. ಚುಟುಕಗಳಲ್ಲೇ ತಮ್ಮನ್ನು ಗುರುತಿಸಿಕೊಳ್ಳಲು ತೊಡಗಿರುವ ಕವಿಗಳ ಸಂಖ್ಯೆ ದಿನ ದಿನಕ್ಕೆ ಅದರಲ್ಲೂ ಫೇಸ್ ಬುಕ್ ತಾಣದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉಳಿದವರಿಗಿಂತ ವಿಭಿನ್ನವಾಗಿ ನಿಲ್ಲುವುದು ಕಷ್ಟದ ಕೆಲಸ.. ಆ ವಿಭಿನ್ನತೆ ನಮ್ಮ ಬರಹಗಳಲ್ಲಿ ಕಂಡ ದಿನ ಜನ ಮೆಚ್ಚುಗೆ ತಾನಾಗಿಯೇ ಸಿಕ್ಕಿಬಿಡುತ್ತದೆ ಎನ್ನಬಹುದು. ಗೆಳೆಯ ಚಿನ್ಮಯ್, ತಮ್ಮ ವೃತ್ತಿಯ ನಿಮಿತ್ತ ವಿವಿಧ ಜಾಗಗಳನ್ನು ಸುತ್ತಿ ಬಂದವರು. ಅವರು ಚುಟುಕ ಮತ್ತು ಕಾವ್ಯಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರ ಹೊರತು ತಮ್ಮ ಬದುಕಿನ ಅನುಭವಗಳ ದಾಖಲಿಸುವ ಪ್ರಯತ್ನ ಮಾಡಿಲ್ಲ. ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಲು ತೊಡಗಿದರೆ ಅವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಬದುಕನ್ನು ತಮ್ಮ ಬರಹಗಳಲ್ಲಿ ಕಟ್ಟಿಕೊಡಬಲ್ಲರು. ಇತ್ತೀಚೆಗಷ್ಟೇ ಗುಜರಾತ್ ನಿಂದ ಮತ್ತೆ ಕರ್ನಾಟಕಕ್ಕೆ ಬಂದಿರುವ ಅವರ ಬರಹಗಳಲ್ಲಿ ಗುಜರಾತ್ ಕುರಿತ ಅವರ ಅನುಭವ ಲೇಖನಗಳು ಹೊರ ಬರಲಿ ಎಂದು ಆಶಿಸುತ್ತಾ ಚಿನ್ಮಯ್ ರವರ ಕಿರು ಪರಿಚಯ ಎಲೆ ಮರೆ ಕಾಯಿಗಾಗಿ ಗೆಳೆಯರೇ ಇಗೋ ನಿಮ್ಮ ಮುಂದೆ..

[Image1075.jpg]
ಚಿನ್ಮಯ್ ಮಠಪತಿ

"ಮಾತೆ ಭುವನೇಶ್ವರಿ ಮತ್ತು ಸಹೃದಯಿ ಕನ್ನಡ ಕವಿ ಹೃದಯಗಳಿಗೆ ನಮಿಸುತ್ತಾ…
ಮೊದಲನೆಯದಾಗಿ ಕನ್ನಡ ಬ್ಲಾಗ್ ಮುಖಾಂತರ ಯುವ ಬರಹಗಾರರನ್ನು ನಾಡಿಗೆ “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದ ಮೂಲಕ ಪರಿಚಯಿಸುತ್ತಿರುವ ಸಹೃದಯಿ ಅಂಕಣಕಾರ ಮತ್ತು ಯುವ ಕವಿ ಮಿತ್ರರಾದ ನಟರಾಜು ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಟರಾಜು ಅವರಿಂದ ನಿಮ್ಮ ಬ್ಲಾಗ್ ಮತ್ತ ನಿಮ್ಮ ಕುರಿತು “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದಲಿ ಪರಿಚಯಿಸಲು ಇಚ್ಚಿಸಿದ್ದೇನೆ ಆದ್ದರಿಂದ ನಿಮ್ಮ ಸ್ವ ಪರಿಚಯವನ್ನು ಕಳುಯಿಸಿ ಕೊಡಿ ಎಂದು ಸಂದೇಶ ಬಂದಾಗ, ಆ ಸಂದೇಶವನು ನೋಡಿ ನನಗೆ ಸಂತಸಕ್ಕಿಂತ ಅಶ್ಛರ್ಯವೇ ದ್ವಿಗುಣವಾಗಿ ಕಾಡಿತು. ಕಾರಣಗಳು ಸಾವಿರಾರು, ನನ್ನಂಥ ಪುಟ್ಟ ಬರಹಗಾರನಿಗೆ ಇಂತಹ ಮಾನ್ಯತೆ ನಿಜವಾಗಲೂ ದೊಡ್ಡದಾದ ಬಿರುದು ಬಹುಮಾನಕ್ಕಿಂತಲೂ ಮಿಗಿಲಾದದ್ದು. ಅವರ ಪ್ರೀತಿತುಂಬಿದ ಮನವಿಯನ್ನು ಸಂಕೋಚದಿಂದಲೆ ಒಪ್ಪಿಕೊಂಡು ನನ್ನ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಹುಟ್ಟಿದ್ದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ತಲ್ಲೂರು ಎಂಬ ಪುಟ್ಟ ಗ್ರಾಮದಲಿ. ತಂದೆ ಶ್ರೀ. ಸಿದ್ದಯ್ಯ ಮತ್ತು ತಾಯಿ ಶ್ರಿಮತಿ.ಗುರುಸಿದ್ದಮ್ಮ. ನನ್ನ ಹುಟ್ಟೂರೆಂದರೆ ನನಗೆ ಅತೀವ ಪ್ರೀತಿ ಮತ್ತು ಅಭಿಮಾನ ಕೂಡ. ಸುತ್ತಲೂ ನಾಲ್ಕು ಕಡೆಗಳಿಂದ ಹಸುರಿನ ಬೆಟ್ಟಗಳ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ನನ್ನ ಹುಟ್ಟೂರಲಿ ದೇಸಾಯಿ ಒಡೆತನದ ಒಂದು ಸುಂದರ ಅರಮನೆ (ವಾಡೆ) ಇದೆ. ಆ ಕಾರಣಕ್ಕಾಗಿ ಕನ್ನಡದ ಹಲವಾರು ಚಲನ ಚಿತ್ರಗಳು ನನ್ನೂರಲ್ಲಿ ಚಿತ್ರಿಕರಣಗೊಂಡಿವೆ. ಕಾರಣಾಂತರಗಳಿಂದ ನಮ್ಮೂರಲ್ಲಿ ನಾನು ಇದುವರೆಗೂ ಜೀವನ ಕಳೆದದ್ದು ಕೇವಲ ಎರಡು ವರ್ಷ. ಧಾರವಾಡದಲ್ಲಿ ನನ್ನ ಸಹೋದರ ನೆಲೆಸಿರುವುದರಿಂದ ಸಧ್ಯಕ್ಕೆ ಸಾಹಿತ್ಯ ನಗರಿ ಧಾರವಾಡ ನನ್ನೂರಾಗಿ ಹೋಗಿದೆ. ಅಂದ ಹಾಗೆ ನಾನು ಓದಿದ್ದು ಎಂ.ಎಸ್.ಸಿ ನರ್ಸಿಂಗ್. ನನ್ನ ಓದು ಉದ್ಯೋಗ ಮತ್ತು ಸಾಹಿತ್ಯಾಸಕ್ತಿಗೂ ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಕೊಂಡರು ತಪ್ಪಿಲ್ಲ.

ಮಾತೃ ಭಾಷೆ ಕನ್ನಡ ನನ್ನೆದೆಯಾಳಕ್ಕೆ ಇಳಿದು ನನ್ನ ಉಸಿರಾಗಿದ್ದು ನನ್ನ ಬಾಲ್ಯದ ದಿನಗಳಲಿ. ಮೂಲತಃ ಕನ್ನಡ ಮಾದ್ಯಮದಲಿ ಹತ್ತನೆಯ ತರಗತಿವರೆಗೆ ಓದಿದ ನಾನು, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಕನ್ನಡದ ಸಾಹಿತ್ಯ ಪ್ರಕಾರಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಂಡೆ. ಅದರಲ್ಲಿ ಪ್ರಥಮ ಭಾಷೆ ಕನ್ನಡ ವಿಷಯ ನನ್ನ ಅಚ್ಚು ಮೆಚ್ಚಿನ ವಿಷಯವಾಗಿತ್ತು. ನಾನು ಎಂಟನೆಯ ತರಗತಿಯಲ್ಲಿದ್ದಾಗ ಸಾಕ್ಷರತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತಹ ಒಂದು ಪುಟ್ಟ ನಾಟಕವನ್ನು ಬರೆದು ನನ್ನ ಸ್ನೇಹಿತರೊಡಗೂಡಿ ಹಳ್ಳಿಯಲಿ ನಾಟಕವಾಡಿದ್ದೆ. ತದನಂತರ ಜೀವನದ ಒಂದಿಷ್ಟು ಅಹಿತಕರ ತಿರುವುಗಳಲ್ಲಿ ನನ್ನ ಬದುಕಿನ ಮುಕ್ಕಾಲು ಭಾಗ ಸೆವೆಸಿದ ಕಾರಣ ಹೃದಯ ಗೂಡಲ್ಲಿ ಕನ್ನಡ ತಾಯಿನ ನುಡಿ ಸೇವೆಯ ವಾಂಛೆ ಸಂಘರ್ಷದ ಬದುಕಿನಲಿ ಕನಸಾಗಿಯೇ ಉಳಿದು ಹೋಗಿತ್ತು. ನನ್ನ ಎಂ.ಎಸ್.ಸಿ ಓದು ಮುಗಿದ ನಂತರ ಜೀವನಕೆ ಒಂದು ನೆಲೆ ಸಿಕ್ಕಿತು.ಇತ್ತೀಚಿನ ಆರೆಂಟು ತಿಂಗಳುಗಳಿಂದ ನನ್ನ “ಚಿನ್ಮಯಧಾರೆ”ಯಲಿ ನನ್ನ ಪುಟ್ಟ ಕಥೆ, ಕವನ, ಚುಟುಕುಗಳ ಮುಖಾಂತರ ಅಕ್ಷರ ಕಲಿಸಿಕೊಟ್ಟ ಕನ್ನಡಮ್ಮನ ಸೇವೆಯಲಿ ತೊಡಗಿದ್ದೇನೆ.

ಇನ್ನು ಕನ್ನಡ ಬ್ಲಾಗುಗಳೆಂದರೆ ಅವು ಆಧುನಿಕ ಸಾಹಿತ್ಯ ಲೋಕದ ಆವಿಷ್ಕಾರಗಳು. ಇದ್ದಲ್ಲಿಯೇ ಸಾಹಿತ್ಯಾಮೃತವನ್ನು ನೀಡುವ ಅಕ್ಷ(ರ)ಯ ಪಾತ್ರೆಗಳು.

ಕೊನೆಯದಾಗಿ ನನ್ನೆಲ್ಲ ಗೌರವಾನ್ವಿತ ಹಿರಿಯ ಬರಹಗಾರರಲ್ಲಿ ನನ್ನ ವಿನಮ್ರ ವಿನಂತಿ. ನಿಮ್ಮ ಅನುಭವಧಾರೆಯಿಂದ ನನ್ನಂತಹ ಯುವ ಬರಹಗಾರರನ್ನು ತಿದ್ದಿ ತೀಡಿ ಅವರನ್ನು ನಿಮ್ಮಂತೆಯೇ ಒಬ್ಬ ಪಕ್ವ ಬರಹಗಾರನನ್ನಾಗಿಸಿ. ನಾನು ಸಹ ನಿಮ್ಮ ಸಲಹೆ ಸೂಚನೆಗಳಿಗೆ ತಲೆಬಾಗಿ ಇನ್ನು ಒಂದಿಷ್ಟು ಸಮಾಜಮುಖಿ ಸಾಹಿತ್ಯವನ್ನು ಮಾತೃ ಭಾಷೆ ಕನ್ನಡಮ್ಮನ ಅಕ್ಷರ ರೂಪದಲ್ಲಿ ಓದು ಮುಕ್ಕಾಲಾಗಿಸಿಕೊಂಡು ಬರಹ ಒಕ್ಕಾಲಾಗಿಸಿಕೊಂಡು ಅಳಿಲು ಸೇವೆ ನೀಡುವೆ.ಶುಭಕಾಮನೆಗಳೊಂದಿಗೆ."

ಎಂದು ಚಂದದ ಮಾತನಾಡಿದ ಗೆಳೆಯ ಚಿನ್ಮಯ್ ರವರ ಕನ್ನಡ ಪ್ರೇಮಕ್ಕೆ ನಮನಗಳು..
ಸಹೃದಯಿ ಗೆಳೆಯರೇ, ಗೆಳೆಯ ಚಿನ್ಮಯ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಕಣ್ಣಾಡಿಸಿ..
http://chinmayadhare.blogspot.in/

ಚಿನ್ಮಯ್ ರವರ ಚಂದದ ಒಂದೆರಡು ಚುಟುಕಗಳು ಇಗೋ ನಿಮಗಾಗಿ.. ಖುಷಿಯಿಂದ ಓದಿಕೊಳ್ಳಿ..

ಪ್ರೀತಿಯ ಪರೀಕ್ಷೆಯಲಿ
ಇಬ್ಬರೂ ನಕಲು ಮಾಡಿಯೇ
ಉತ್ತೀರ್ಣರಾದೆವು…
ಈಗ ನಕಲು ಪ್ರೀತಿಯಿಂದ
ಜೀವನವೇ ನಕಲು ನಕಲು.
*****
ಅಳಿದು ಹೋಗುತ್ತಿರುವ
ಮನುಜ ಸಂಬಂಧಗಳ
ಮೂರ್ತಿಯ ಮಾಡಿ
ಗುಡಿಯ ಕಟ್ಟಬೇಕು,
ದೇವರೆಂಬ ಭಯದಿ
ಕಠೋರ ಹೃದಯಗಳು
ತಲೆಬಾಗಿ ನಮಿಸ ಬಹುದು..!!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಡಿಸೆಂಬರ್ 6, 2012


ಎಲೆ ಮರೆ ಕಾಯಿ 
ವರ ಸಿಕ್ಕಿದ ಭ್ರಮೆಯಲ್ಲಿ 
ಜಗವ ಮರೆತವಳು 
ನಶೆಯ ಮತ್ತಲ್ಲಿ
ಹರೆಯದ ಕೊಳ ಈಜಿದವಳು 

ಅವನೋ ಕೊಡವಿಕೊಂಡು ಎದ್ದನು 
ಇವಳು ಎಡವಿ ಬಿದ್ದಳು 
ನಿಲ್ಲೆಂದರೆ ಅಂವ ಕೇಳ 
ಬಾರದಿರೆಂದರೆ ಬಸಿರು ಕೇಳ 

ಇಂತಹ ಕವಿತೆಯನ್ನು ಹೆಣ್ಣೊಬ್ಬಳಷ್ಟೇ ಚಂದವಾಗಿ ಕಟ್ಟಿಕೊಡಬಲ್ಲಳು. ಅವಿವಾಹಿತ ಹೆಣ್ಣನ್ನು ಬೆಡ್ ರೂಮಿನ ಹಾಸಿಗೆಯ ಮೇಲಷ್ಟೇ ಕಾಣುವ ಗಂಡಿಗೆ  ಅವಳ ಜೊತೆ ಸುಖಿಸಿ ಎದ್ದ ನಂತರದ ಪರಿಣಾಮಗಳ ಅರಿವು ಎಷ್ಟಿರುತ್ತದೋ ಏನೋ ತಿಳಿಯದು. ಅವಳ ಜೊತೆ ಸುಖಿಸುವ ಮುನ್ನ ಒಂದು ಕ್ಷಣ ಆಸ್ಪತ್ರೆಯ ಬೆಡ್ ಮೇಲೆ ಆ ಹೆಣ್ಣನ್ನು ಊಹಿಸಿಕೊಂಡರಷ್ಟೇ ಆ ಕ್ಷಣದ ಹೆಣ್ಣು ಗಂಡಿನ ನೋವು, ಹತಾಶೆ, ಅಸಹಾಯಕತನ, ಭಯವನ್ನು ಅವನು ಕಾಣಲು ಸಾಧ್ಯ. ಆ ಭಯ ಇಬ್ಬರಲ್ಲೂ ಮೂಡಿದ್ದೇ ಆದರೆ ಅಂತಹ ಸ್ಥಿತಿ ಬಾರದಿರಲಿ ಎಂದು ಕೆಲವರು ತಮ್ಮ ಆಸೆಗಳನ್ನು ನಿಗ್ರಹಿಸಿದರೆ ಮತ್ತೆ ಕೆಲವರು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಸುಖಿಸಿಬಿಡಬಹುದು ಅಥವಾ ಇನ್ನೂ ಕೆಲವರು ಯಾವ ಕ್ರಮಗಳನ್ನು ಅನುಸರಿಸದೆ ಅದೃಷ್ಟ ಕೈ ಕೊಟ್ಟರೆ ಸಮಸ್ಯೆಯಲ್ಲಿ ಸಿಲುಕಬಹುದು. ಮೇಲಿನ ಕವಿತೆಯ ಸಾಲುಗಳನ್ನು ಓದುತ್ತಲೇ ಹೆಣ್ಣಿನ ಒಳ ತುಮುಲ ಯಾಕೋ ಮನಸಿನ ಒಳಗೆ ಬಂದು ನಿಂತಂತಾಯಿತು. ಅದರ ಜೊತೆಗೆ ಹಿರಿಯ ಕವಿ ದೊಡ್ಡ ರಂಗೇ ಗೌಡರು ಬರೆದ "ಪ್ರೀತಿ ಪ್ರೇಮ ನಡೆಯೋ ವೇಳೆ ತಪ್ಪೋದಿಲ್ಲ ರಾಸಲೀಲೆ.. ಕದ್ದು ಮುಚ್ಚಿ ನಡೆಸೋ ವೇಳೆ ಮನಸ್ಸಿನಲ್ಲಿ ತೂಗುಯ್ಯಾಲೆ" ಎಂಬ ಸಾಲುಗಳೂ ಸಹ ನೆನಪಾದವು.

"ಸ್ವಲ್ಪ ದಿನದಿಂದ ಬಹಳನೇ ಬಾಬಜ್ಜನ ನೆನಪು....ಸಿಕ್ಕಾಪಟ್ಟೆ ಅನ್ನುವಷ್ಟು ಜಾಸ್ತಿಯಾಗಿತ್ತು...ಅಜ್ಜನ ಗುಳಿ ಬಿದ್ದ ಕೆನ್ನೆ ಹಿಂಡಿ, ಜೋಬಲ್ಲಿನ ಎಂಟಾಣೆ ರಸಗುಲ್ಲಕ್ಕೆ ಆಸೆಯಾಗಿತ್ತು....ಜಗಳ ಕಾದು ಸೋಲಿಸಬೇಕೆನಿಸಿತ್ತು... ಮುದ್ದಿನ ಅಜ್ಜನ ಬಳಿ ಆಟವಾಡಬೇಕೆನ್ನುವ ಹುಮ್ಮಸ್ಸು.. ಹಮ್ಮು ಬಿಮ್ಮಿಲ್ಲದ ಅಜ್ಜ ಎಂದರೆ ಅದೇನೋ ಅದಮ್ಯ ಅಕ್ಕರೆ.."

ಮೇಲಿನ ಚಂದದ ಸಾಲುಗಳ ಬರೆದ ಇಂತಹ ಲೇಖಕಿ ಸಹೋದರಿಯರ ಬರಹಗಳನ್ನು ಓದಿದಾಗ ಹೀಗೆ ಅನಿಸುತ್ತೆ. ನಾವು ಪ್ರಪಂಚವನ್ನು ಸುತ್ತುತ್ತೇವೆ ಆದರೆ ಅವರು ನಮ್ಮಷ್ಟು ಪ್ರಪಂಚ ಸುತ್ತುವುದಿಲ್ಲ. ಬದಲಿಗೆ ತಾವು ಇದ್ದಲ್ಲಿಯೇ ಪ್ರಪಂಚವೊಂದನ್ನು ಕಾಣುತ್ತಾರೆ ಇಲ್ಲ ಪ್ರಪಂಚವೊಂದನ್ನು ಕಟ್ಟುತ್ತಾರೆ. ಅವರು ಕಟ್ಟುವ ಪ್ರಪಂಚದಲ್ಲಿ ಅಜ್ಜಿ ತಾತ ಅಪ್ಪ ಅಮ್ಮ ಮನೆ ಮಕ್ಕಳು ಕೈದೋಟ ಅಡುಗೆ ಊಟ ಆಟೋಟ ಇಂತಹ ಪುಟ್ಟ ಪುಟ್ಟ ಸಂಗತಿಗಳಿಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಅದನ್ನು ಮೀರಿದ ಪ್ರಪಂಚವನ್ನು ಅವರು ಕಟ್ಟುವುದಾದರೆ ಅದು ತಾವಷ್ಟೇ ಬಿಡುವಿನ ವೇಳೆಯಲ್ಲಿ ವಿಹರಿಸಲು ಕಟ್ಟಿಕೊಳ್ಳುವ ಪ್ರಪಂಚ. ಅದು ಅವರ ಪಾಲಿಗೆ ತಮ್ಮನ್ನೋ ತಮ್ಮ ಮಕ್ಕಳನ್ನೋ ಕಿನ್ನರಿಯರಂತೆ ಊಹಿಸಿಕೊಂಡು ಖುಷಿಪಡುವ ಒಂದು ಕಲ್ಪನಾ ಲೋಕ. ಅಂತಹ ಖುಷಿಯ ಪ್ರಪಂಚವನ್ನು ನಮ್ಮ ಬರಹಗಳಲ್ಲಿ ನಾವೇಕೆ ಕಟ್ಟಿಕೊಡಲು ವಿಫಲರಾಗುತ್ತೇವೆ ಎಂದು ಪದೇ ಪದೇ ಅನಿಸುತ್ತದೆ. ತನ್ನ ಅಜ್ಜನ ಕುರಿತು ಪುಟ್ಟ ಮಗುವಿನಂತೆ ಈ ಸಹೋದರಿ ಬರೆದ ಸಾಲುಗಳ ನೋಡಿ ಯಾಕೋ ಹಾಗೆ ಅನಿಸಿತು.

ಇಬ್ಬರಿಗೂ ಗೊತ್ತಿತ್ತು
ಒಬ್ಬರಿಗೊಬ್ಬರು ದಕ್ಕುವುದಿಲ್ಲವೆಂದು
ಆದರೂ ಅದ್ಯಾವ ಮಾಯೆ ಆವರಿಸಿತ್ತು..?
ಗೊತ್ತಿದ್ದೂ ಮಾಡಿದ ತಪ್ಪಿಗೆ ಶಿಕ್ಷೆ ಇಷ್ಟು ಘೋರವಾಗಿರುತ್ತಾ?
ಅಷ್ಟಕ್ಕೂ ಅದು ತಪ್ಪಾ?
ಇಬ್ಬರೂ ಬೆನ್ನು ಮಾಡಿ ಹೊರಟಿದ್ದಾರೆ...
ಅವಳಿಗೆ ಅವನಿಲ್ಲ..
ಅವನಿಗೆ ಅವಳಿಲ್ಲ..
ಯಾತನೆ ಬಾಳೆಲ್ಲ.. :'(

ಹೀಗೆ ಅಧ್ಬುತವಾಗಿ ಬರೆಯುವ ನಿಜಕ್ಕೂ ಎಲೆ ಮರೆ ಕಾಯಿ ಎನ್ನಬಹುದಾದ ಪ್ರತಿಭೆ ಸುಷ್ಮಾ ಮೂಡುಬಿದಿರೆ. ಸಹೋದರಿ ಸುಷ್ಮಾ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಈ ವಾರದ ಎಲೆ ಮರೆ ಕಾಯಿಯಲ್ಲಿ ಸಹೃದಯಿಗಳೇ ಇಗೋ ನಿಮಗಾಗಿ..

ಸುಷ್ಮಾ ಮೂಡುಬಿದಿರೆ

"ಹೆಸರು ಸುಷ್ಮಾ ಮೂಡುಬಿದಿರೆ.. ಊರು ಜೈನಕಾಶಿ ಎಂದೇ ಪ್ರಖ್ಯಾತವಾದ ಮೂಡಬಿದಿರೆ.

ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ... ದ್ವೀತಿಯ ಪಿಯುಸಿ ವರೆಗಿನ ವ್ಯಾಸಂಗವೂ ಅಲ್ಲೇ...ಸದ್ಯ ಪದವಿ ಶಿಕ್ಷಣ, ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜ್ ನಲ್ಲಿ. ಊರೆಂದರೆ ಅದಮ್ಯ ಮೋಹ, ಪ್ರೀತಿ.. ಜೀವನದ ಏಳುಬೀಳು ಅಲ್ಲಿಂದ ಇಲ್ಲಿಗೆ ಎಳೆದುಕೊಂಡು ಬಂದಿದ್ದರೂ ಊರಿನೆಡಗಿನ ಸೆಳೆತ ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ.. ಇಲ್ಲಿನ ಕಾಂಕ್ರಿಟ್ ಕಾಡು ನಮ್ಮೂರಿನ ಹಸುರಿನ ಸೊಬಗಿಗೆ ಸಮಾನಾಗಿ ನಿಲ್ಲುವುದೇ ಇಲ್ಲಾ.. ಇದು ಹೊಟ್ಟೆ ಪಾಡಾದರೆ, ಅದು ಜೀವನಾಡಿ..  ಅಮ್ಮ,ಅಪ್ಪ ತಮ್ಮಂದಿರೆಡೆಗೆ ನಿಲ್ಲದ ತುಡಿತ.. ಇಂತಿಪ್ಪ ಭಾವನೆಯ ನನಗೆ ನಟಣ್ಣನ "ಬಿಟ್ಟು ಬಂದ ಮಣ್ಣಿಗೂ ಮಡಿಲಿಗೂ ಮರಳುವುದು ಸುಲಭವಲ್ಲ..." ಈ ಮಾತು fb ನಲ್ಲಿ ಓದಿದಾಗಿನಿಂದ ಬಹಳ ಕಾಡುತ್ತದೆ..

ಬರವಣಿಗೆ ಹೇಗೆ ಆರಂಭವಾಯಿತು ಎನ್ನುವುದರ ಬಗ್ಗೆ ನನಗಿನ್ನೂ ಸ್ಪಷ್ಟ ಅರಿವಿಲ್ಲ..ಮೊದಲು ಬರೆದ ಕವನ, ಕತೆಯ ನೆನಪೂ ನನಗಿಲ್ಲ..ಅದನ್ನೆಲ್ಲಾ ಜೋಡಿಸಿಟ್ಟುಕೊಳ್ಳಬೇಕೆನ್ನುವ ಜ್ಞಾನವೂ ಇರಲಿಲ್ಲ.. ಓದುವ ಹುಚ್ಚು ಅಪ್ಪ ಅಮ್ಮ ಮತ್ತು ಅಜ್ಜನ ಬಳುವಳಿ.. ಬಾಲ್ಯದಲ್ಲಿ ನೋಡುತ್ತಿದ್ದ ಶಕ್ತಿಮಾನ್, ಆರ್ಯಮನ್, ಶಕಲಕ ಬೂಮ್ ಬೂಮ್ ಧಾರಾವಾಹಿಗಳು, ತುಂತುರು, ಬಾಲಮಂಗಳದ ಮಾಮಿ ಕಾಲಂ, ಡಿಂಗ,ಶಕ್ತಿಮದ್ದು ಗಳು ಕಾಲ್ಪನಿಕ ಶಕ್ತಿಯನ್ನು ವಿಸ್ತರಿಸಿದ್ದಿರಬೇಕು..ನನ್ನ ಅಮ್ಮ ನಾ ಬರೆದ ಪ್ರತಿಯೊಂದಕ್ಕೂ ಮೊದಲ ಓದುಗಿ..ಅಮ್ಮನ ಬೆಂಬಲವೇ ನನ್ನ ಶಕ್ತಿ .ಅಮ್ಮನ ಪ್ರೋತ್ಸಾಹ ವಿಲ್ಲದೆ ಯಾವುದೂ ಸಾಧ್ಯವಾಗುತ್ತಿರಲಿಲ್ಲ..ನನ್ನನ್ನು ಅವಳು ಅಣಿಗೊಳಿಸುತ್ತಿದ್ದ ರೀತಿಯೇ ನನ್ನ ವ್ಯಕ್ತಿತ್ವಕ್ಕೆ ಕಾರಣ. ಅಮ್ಮನೊಂದಿಗೆ ಸಾಥ್ ನೀಡುತ್ತಿದ್ದ ಅಜ್ಜ, ಮಾವ.. ನನ್ನ ಕುಟುಂಬಕ್ಕೆ ನನ್ನ ಮೊದಲ ಥ್ಯಾಂಕ್ಸ್..

ನಾನು, ನನ್ನ ಪ್ರಾಥಮಿಕ ಶಾಲಾ ಹಂತದಲ್ಲೇ ಬಹಳಷ್ಟು ಕಾದಂಬರಿಗಳನ್ನು ಓದಿ ಮುಗಿಸಿದ್ದು..ಮುಖ್ಯವಾಗಿ ಅಮ್ಮನಿಷ್ಟದ ಪ್ರಕಾರವಾದ ಸಾಮಾಜಿಕ ಕಾದಂಬರಿಗಳು(ಅಮ್ಮನ ವಿರೋಧದ ನಡುವೆಯೂ ಓದಿ ಬಿಟ್ಟಿದ್ದೆ..) ಮೂರನೇಯ ತರಗತಿಯಲ್ಲಿ ಇದ್ದಾಗ ಸಣ್ಣ ಪುಟ್ಟ ಚುಟುಕುಗಳನ್ನು ನನ್ನದೇ ಆದ ದಾಟಿಯಲ್ಲಿ ಎದ್ದೆ-ಬಿದ್ದೆ-ಒದ್ದೆ ಮುಂತಾದ ಪ್ರಾಸಗಳನ್ನು ಉಪಯೋಗಿಸಿ ಬರೆಯುತ್ತಿದ್ದೆ. 5ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಪ್ರತಿಭಾಕಾರಂಜಿಯ ಕತೆ ಹೇಳುವ ಸ್ಪರ್ಧೆಗೆ ಸ್ವಂತವಾಗಿ ಕತೆ ರಚಿಸಿ, ಸಭೆಗೆ ಪ್ರಸ್ತುತ ಪಡಿಸಿ ಬಹುಮಾನ ಪಡೆದಿದ್ದೆ.ಅದಕ್ಕೆ ಕಾರಣವಾಗಿದ್ದು ನಳಿನಿ ಟೀಚರ್. ಅಲ್ಲಿಂದ ಸಣ್ಣ ಪುಟ್ಟ ಕತೆ ಬರೆಯುವ ಹವ್ಯಾಸ ಆರಂಭವಾಯಿತು.. ಹೈ ಸ್ಕೂಲ್ ಜೀವನ ನನ್ನ ಜೀವನದ ಬಹು ಮುಖ್ಯ ತಿರುವು. ಅಲ್ಲೇ ನಾನು ಮುನಿರಾಜ್ ಸರ್ ಅಂತಹ ಗುರುಗಳನ್ನು ಪಡೆದ್ದಿದ್ದು. ನಿತೇಶ್ ಸರ್ ಅಂತಹ ಸ್ನೇಹಜೀವಿ ಶಿಕ್ಷಕರನ್ನು ಪಡೆದಿದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಭಾಗವಹಿಸಲು ಮುಖ್ಯ ಪ್ರೇರಕ ಶಕ್ತಿಯೇ ಅವರುಗಳು. ಚರ್ಚಾ ಸ್ಪರ್ಧೆ, ಭಾಷಣ, ಪ್ರಬಂಧ, ನಾಟಕ ಹೀಗೆ ಭಾಗವಹಿಸುತ್ತಿದ್ದೆ. ನಾನು ಓದಿದ ಪುಸ್ತಕಗಳಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ್ದು ಆ ಕಾಲಘಟ್ಟದಲ್ಲೇ..ನೆಹರು ಪರದೆ ಸರಿಯಿತು,ಗಾಂಧಿ ಮತ್ತು ಗೋಡ್ಸೆ, ಸಾವರ್ಕರ್, ಭಗತ್ ಸಿಂಗ್, ಬದುಕಲು ಕಲಿಯಿರಿ...ಹೀಗೆ ಪುಸ್ತಕಗಳ ಪಟ್ಟಿ ಬೆಳೆಯುತ್ತದೆ..

ಇದಾದ ಮೇಲೆ ಬ್ಲಾಗಿನಂಗಳ ಮತ್ತು ಮುಖಪುಟ ನನ್ನಮೇಲೆ ಪ್ರೋತ್ಸಾಹದ ಸುರಿಮಳೆಯನ್ನೇ ಸುರಿಸಿದೆ.. ನಾ ಬರೆದ ಲೇಖನ,ಕವಿತೆಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಪ್ರೋತ್ಸಾಹ ನೀಡಿದೆ, ತಪ್ಪಾದಾಗ ತಿದ್ದಿದೆ. ಎಲ್ಲೊ ಇದ್ದು ತನ್ನ ಪಾಡಿಗೆ ತಾನು ಆತ್ಮ ಸಂತೋಷಕ್ಕಾಗಿ ಬರೆಯುತ್ತಿದವಳನ್ನು ಜಗತ್ತಿನ ಮುಂದೆ ತಂದು ನಿಲ್ಲಿಸಿದೆ..ಬ್ಲಾಗ್ ಬಂಧುಗಳ ಸಹೃದಯತೆಗೆ ಹೇಗೆ ಥ್ಯಾಂಕ್ಸ್ ಹೇಳಲಿ? ಮೌನರಾಗ ಮತ್ತು ಕನಸು ಕಂಗಳ ತುಂಬಾ.. ಎನ್ನುವ 2 ಬ್ಲಾಗ್ ಗಳನ್ನು ಎರಡು ವರುಷಗಳಿಂದ ನಡೆಸುತ್ತಾ ಬಂದಿದ್ದೇನೆ. ಬರೆದಿದ್ದು, ಓದಿದ್ದು ತೀರಾ ಕಡಿಮೆ..ಆ ನಿಟ್ಟಿನಲ್ಲಿ ನಾನಿನ್ನೂ ಬಹಳ ಚಿಕ್ಕವಳು. ಕನಸು ಕಂಗಳ ತುಂಬಾ ಬಣ್ಣದ ಕನಸುಗಳಿವೆ. ನನಸಾಗಲು ನನ್ನ ಶ್ರಮ, ನಿಮ್ಮ ಆಶೀರ್ವಾದ, ದೈವ ಕೃಪೆ ಅತ್ಯಗತ್ಯ. ಬ್ಲಾಗ್ ನಲ್ಲಿ ಆರಂಭದ ದಿನಗಳಿಂದಲೂ ಪ್ರೋತ್ಸಾಹಿಸುತ್ತಾ ಬಂದ ರವಿ ಮೂರ್ನಡ್ ಸರ್, ಅಜಾದ್ ಸರ್, ಗೌಡ್ರು, ಶಶೀ, ಸುರೇಖಾ, ಬದರಿ ಸರ್, ಅಣ್ಣ ಮಂಜು, ಗೆಳೆಯ ವಿನಯ್ ಯಿಂದ ಹಿಡಿದು ಇತ್ತೀಚಿನ ಸಂಧ್ಯಾ, ಚಿನ್ಮಯ್ ಮತ್ತು ಹೆಸರಿಸಲಾಗದ ಅಷ್ಟೂ ಜನಕ್ಕೂ ನನ್ನ ಕೋಟಿ ಕೋಟಿ ನಮನಗಳು..
ಮಾತುಕತೆಗೆ ಕರೆದು ಎಲೆಮರೆಕಾಯಿಯಲ್ಲಿ ನನಗೂ ಒಂದು ಜಾಗ ನೀಡಿದ್ದಕ್ಕೆ ಸಹೋದರ ನಟರಾಜ್ ಅವರಿಗೂ ಧನ್ಯವಾದ..

ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ.. ತಪ್ಪು ಒಪ್ಪು ತಿಳಿಯದೇ ಅಂಜಿಕೆ ಅಳುಕಿನಿಂದಲೇ ನನ್ನ ಪರಿಚಯ ಮಾಡಿಕ್ಕೊಟ್ಟಿದ್ದೇನೆ ಇಷ್ಟವಾದರೆ ಒಪ್ಪಿಸಿಕ್ಕೊಳ್ಳಿ, ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳಿ...
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ,
ಸುಷ್ಮಾ ಮೂಡುಬಿದಿರೆ."

ಎಂದು ಚಂದವಾಗಿ ತನ್ನ ಪರಿಚಯ ಮಾಡಿಕೊಂಡ ಸುಷ್ಮಾರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಸಹೃದಯಿಗಳೇ.. ಸುಷ್ಮಾರವರ ಬ್ಲಾಗುಗಳ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಅವರ ಬ್ಲಾಗುಗಳ ಮೇಲೆ ಒಮ್ಮೆ ಕಣ್ಣಾಡಿಸಿ..
http://mounaraaga-suvi.blogspot.in/
http://kanasukangalathumbaa.blogspot.in/

ಸುಷ್ಮಾರವರ ಬರಹದ ಮತ್ತೊಂದು ಚಂದದ ತುಣುಕು ಇಗೋ ನಿಮಗಾಗಿ..

"ಮದುವೆ ಎನ್ನುವುದೊಂದು ಆಗುವುದಕ್ಕಿಂತ ಮುಂಚೆ ನಾವು ಹುಡುಗಿಯರು  ತೀರಾ ಭಿನ್ನವಾಗಿ ಯೋಚಿಸುತ್ತಿರುತ್ತೇವೆ...ಗಂಡುಬೀರಿ, ಬಜಾರಿ ಅನಿಸಿಕೊಂಡದಾರೂ ಗಂಡು ಮಕ್ಕಳಿಗೆ ನಾವು ಸಮ ಎನ್ನುವುದನ್ನ ಸಾಬೀತು ಮಾಡ ಹೊರಡುತ್ತೇವೆ...ಜಿದ್ದಿಗೆ ಬಿದ್ದಾದರೂ ಪೈಪೋಟಿ ನೀಡುತ್ತೇವೆ...ಮದುವೆ, ಮನೆ, ಗಂಡ, ಮಕ್ಕಳು...ಥತ್, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲೇ ಮಾಡಿರೋ ವ್ಯವಸ್ಥೆ ಎಂದು ತಾಸುಗಟ್ಟಲೆ ಗೆಳತಿಯರ ಮಧ್ಯ  ಭಾಷಣ ಬಿಗಿದಿರುತ್ತೇವೆ... ಇಷ್ಟಾದರೂ ಮನೆಯಲ್ಲಿ ಹಿಡಿದು ಮದುವೆ ಮಾಡೇ ಮಾಡುತ್ತಾರೆ...ಸರಿ ಮದುವೆಯಾಗಿತ್ತಲ್ಲ ಮಕ್ಕಳಂತೂ ಸದ್ಯದ ವಿಚಾರ ಅಲ್ಲಾ...ಎರಡು-ಮೂರು  ವರ್ಷ ಗ್ಯಾಪ್ ಇರಲಿ ಎಂದುಕೊಳ್ಳುತ್ತಲೇ ಮಡಿಲು ತುಂಬಿರುತ್ತದೆ...ಇಲ್ಲಿಯ ತನಕ 'ನಾವೂ ಗಂಡಿನ ಹಾಗೆ' ಅಂದುಕೊಂಡ ಮುಖವಾಡ ಕಳಚುವುದು ಈಗಲೇ...ಇದು ಅಮ್ಮನಾಗುವ ಖುಷಿ...ಹೆಣ್ತನ, ತಾಯ್ತನ ಜಾಗೃತವಾಗುವ ಹೊತ್ತು.. ಪೂರ್ತಿಯಾಗಿ ಮಾತೃ ಭಾವವನ್ನು ಆಸ್ವಾದಿಸುವ ಹೊತ್ತು.. ಗಂಡಾಗಿ ಇಂತಹ ಆನಂದ ಪಡೆಯಲು ಸಾದ್ಯವೇ ಎಂದೆಣಿಸುವಾಗ ಬಜಾರಿ ಕಳೆದು ಹೋಗುತ್ತಾಳೆ.. ಮೊಗ್ಗು ಅರಳುವ ಸಮಯದ ನಾವಿನ್ಯ ಭಾವದ ಹೆಣ್ಣು ಮೈದಳೆಯುತ್ತಾಳೆ.."

ಮತ್ತೆ ಸಿಗೋಣ

ಇತಿ
ನಿಮ್ಮ ಪ್ರೀತಿಯ
ನಟರಾಜು :))





ಸೋಮವಾರ, ನವೆಂಬರ್ 19, 2012

ಎಲೆ ಮರೆ ಕಾಯಿ 

ಖಾಲಿ ಹಾಳೆಯ ಮೇಲೆ
ಕಸಿವಿಸಿಯ ಮಸಿಯ ಹಸಿ
ಭಾವಗಳ ವಿಶ್ರಾಮಕೆ
ಬಿಳಿ ಹಾಳೆಯ ಹಾಸಿಗೆ

ಆಂತರ್ಯದ ತೊಟ್ಟಿಲು
ಲೇಖನಿಯ ಮಸಿಯ ಬಟ್ಟಲು
ಅದ್ದಿ-ಬಸಿದು ಬರೆಯುತಿರುವೆ
ಅಂತರಾಳ ಮುಟ್ಟಲು..

ಮೇಲಿನ ಸಾಲುಗಳನ್ನು ಓದುತ್ತಿದ್ದಂತೆ ಹಿರಿಯ ಲೇಖಕರಾದ ಗುಲ್ಜಾರ್ ರವರು ಸಂದರ್ಶನವೊಂದರಲ್ಲಿ ಹೇಳಿದ್ದ "ನಮ್ಮ ದುಃಖ, ದುಗುಡ, ದುಮ್ಮಾನಗಳ ಹೀರಿಕೊಳ್ಳುವ ಶಕ್ತಿ ಬರವಣಿಗೆಗೆ ಇದೆ" ಎನ್ನುವಂತಹ ಮಾತು ನೆನಪಾಯಿತು. ಕಷ್ಟ ಬಂದಾಗ ಎಲ್ಲರಿದ್ದರೂ ಯಾರೂ ಇಲ್ಲದಂತಹ ಭಾವ ನಮ್ಮನ್ನು ಒಮ್ಮೊಮ್ಮೆ ಆವರಿಸಿಬಿಡುತ್ತದೆ. ಆಗ ಯಾಕೋ ಯಾರೊಡನೆಯೂ ಮಾತು ಬೇಕೆನಿಸುವುದಿಲ್ಲ. ಯಾರನ್ನು ನೋಡಲು ಸಹ ಮನಸ್ಸು ಇಚ್ಚಿಸುವುದಿಲ್ಲ. ದುಃಖ ನಮ್ಮೊಳಗೆ ಮಡುಗಟ್ಟುತ್ತಾ ಹೋಗುತ್ತದೆ. ಕೆಲವರು ಹತ್ತಿರ ಎನಿಸಿಕೊಂಡವರ ಜೊತೆ ಒಂದಷ್ಟು ಮನದ ದುಗುಡಗಳನ್ನು ಹಂಚಿಕೊಂಡರೂ ನಾವು ಹಗುರಾಗುತ್ತೇವೋ ಏನೋ ಗೊತ್ತಿಲ್ಲ. ಆದರೆ ಡೈರಿಯೊಂದನ್ನು ಬರೆದಿಡುವ ಅಭ್ಯಾಸವಿದ್ದರೆ ಖಂಡಿತಾ ನಾವು ಬರೆದು ಬರೆದು ಹಗುರವಾಗಬಹುದು. ಒಬ್ಬ ಆತ್ಮೀಯ ಗೆಳೆಯನಿಗಿಂತ ಎತ್ತರದ ಸ್ಥಾನದಲ್ಲಿ ನಮ್ಮ ಡೈರಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ನೋವಿನಿಂದ ಹೊರ ಬರಬೇಕು ಎಂದರೆ ನಾವು ಮಾತನಾಡುವುದಕ್ಕಿಂತ ಹೆಚ್ಚು ಬರೆಯಬೇಕು ಎನಿಸಿದ್ದು ಭಾವ ದರ್ಪಣ ಎಂಬ ಚಂದದ ಬ್ಲಾಗಿನಲ್ಲಿ ಮೇಲಿನ ಕವಿತೆಯ ಸಾಲುಗಳನ್ನು ಕಂಡಾಗ..

ಭಾವ ದರ್ಪಣದ ಒಡತಿಯ ಲೇಖನಗಳ ಕುರಿತಾಗಲಿ, ಕವಿತೆಗಳ ಕುರಿತಾಗಲಿ ಮಾತನಾಡಲು ಯಾಕೋ ನನ್ನಲ್ಲಿ ಶಕ್ತಿ ಇಲ್ಲ. ಅವರ ಬರವಣಿಗೆಯ ತುಣುಕೊಂದನ್ನು ಈ ಕೆಳಗೆ ನೀಡಿರುವೆ.. ನೀವೇ ಮನಸ್ಸಿಟ್ಟು ಓದಿಕೊಳ್ಳಿ..

"ಇಂದು ಸಂಜೆ ಏನೋ ಅಳುಕು ಮನದಲ್ಲಿ.. ಏನು ಅಂತ ಗೊತ್ತಿಲ್ಲ.. ಅರ್ಥಾನೂ ಆಗ್ತಿಲ್ಲ.. ಯಾವುದೋ ನೋವಿನ ಎಳೆ.. ಏನೋ ತಳಮಳ..

ಕತ್ತಲಲ್ಲಿ ಏನೋ ತಡಕಾಡುತ್ತಿರೋ ಅನುಭವ..ಒಂದೊಂದು ಸಲ ಬದುಕೇ ಕತ್ತಲಲ್ಲಿ ಗೊತ್ತಿರದ ವಸ್ತುವಿಗಾಗಿ ತಡಕಾಡುವುದೇನೊ ಅನ್ನೋ ಭಾವನೆ.. ಈ ಮನಸು, ಅದರ ಅಸ್ತಿತ್ವ ಅದರ ಆಳ.. ಅದರ ನಿರೀಕ್ಷೆ.. ಅದರ ತಳಮಳ ಎಲ್ಲ ನೋಡಿದರೆ.. ನನಗೆ ನಾನೇ ಅಪರಿಚಿತಳು ಅನಿಸುತ್ತೆ..ಅಂಥದರಲ್ಲಿ ಇನ್ನೊಂದು ಮನಸು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುತ್ತೆ ಈ ಮುಗ್ಢ ಮೂರ್ಖ ಮನಸು..ಎಷ್ಟು ಗೊಂದಲಮಯ ಅಲ್ವಾ??  ದಿನದ ರಭಸದ ಜಂಜಾಟಗಳಲಿ.. ಹೊರ-ಪ್ರಪಂಚದ ಸೊಗಸು ಸವಿಯುವ ಗದ್ದಲದಲ್ಲಿ.. ದಿನ-ನಿತ್ಯದ ಕೆಲಸದ ಭರಾಟೆಯಲ್ಲಿ.. ಮೆಲ್ಲನೆ ಇಣುಕಿ ನೋಡುತ್ತೆ ಮನ.. ಇದ್ದರೂ ಇಲ್ಲದಂತಿರೋ ಇದು.. ಒಂದೊದು ಸಲ ಇಲ್ಲದ ತಲ್ಲಣ ಹುಟ್ಟಿಸುತ್ತೆ.. ಮನಸು ಅನ್ನೊದೇ ಇಲ್ಲದಿದ್ರೆ..?! ಅದರಿಂದಾಗೋ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆನೇ ಪುಟಗಟ್ಟಲೇ ಬರೀಬಹುದೇನೋ.. ಈ ಮನಸು ಮತ್ತೆ ಬುಧ್ಧಿ ಒಟ್ಟಿಗೆ ಕೆಲಸ ಮಾಡೊ ರೀತಿ ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತೆ.. ಒಂದು ಸಲ ಮನಸಿಗೆ ಬುದ್ಧಿ ಇಷ್ಟ ಆಗಲ್ಲ ಇನ್ನೊಂದು ಸಲ ಬುದ್ಧಿಗೆ ಮನಸು ಇಷ್ಟ ಆಗಲ್ಲ.. ಮತ್ತೊಮ್ಮೆ ಎರಡೂ ಗೆಳೆಯರು.. ಈಗ ಬರೀತಿದಿನಲ್ಲ.. ಇದು ಮನಸು ಅನ್ಲಾ? ಅಥವ ಬುದ್ಧಿ ನಾ?

ಏನೇ ಇರಲಿ ಮನಸಿಗೆ ಅನಿಸಿದ್ದನ್ನು ವ್ಯಕ್ತ ಪಡಿಸೋಕೆ ಇರೋ ಈ ಮುದ್ದಾದ ಭಾಷೆಗೆ.. ಈ ಹಾಳೆಗೆ.. ಈ ಲೇಖನಿಗೆ ನಾನು ಚಿರ-ಋಣಿ.. ಇವಿರಲಿಲ್ಲ ಅಂದರೆ.. ನನ್ನ ಆಂತರಿಕ ಬದುಕನ್ನು ಊಹಿಸಿಕೊಳ್ಳೋದೇ ಅಸಾಧ್ಯ..."

ಎನ್ನುವ ನಮ್ಮ ನಡುವಿನ ಉತ್ತಮ ಯುವ ಲೇಖಕಿಯರಲ್ಲಿ ಮಂಜುಳಾ ಬಬಲಾದಿಯವರೂ ಸಹ ಒಬ್ಬರು. ಅವರ ಜೊತೆ ಹಿಂದೊಮ್ಮೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆ ಸಹೃದಯಿಗಳೇ ಇಗೋ ನಿಮಗಾಗಿ..

ಮಂಜುಳಾ ಬಬಲಾದಿ

"ನಲ್ಮೆಯ ನಟರಾಜ್,
ನಿಮ್ಮ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಆಹ್ವಾನಿಸಿದ್ದಕ್ಕೆ ನಾನು ಅಭಾರಿ. ಈಗ ಬರೆಯಲು ಕೂತರೆ ಏನು ಬರೆಯಬೇಕೆಂಬ ಭಾರಿ ಪ್ರಶ್ನೆ? ಈ ಘಳಿಗೆಯಲ್ಲಿ ನನಗನಿಸಿದ್ದು, ನಿಮ್ಮ ಮುಂದೆ ಅರುಹುತ್ತಿದ್ದೇನೆ ಅಷ್ಟೇ. ನಾನು ಹುಟ್ಟಿದ್ದು ಜಮಖಂಡಿ, ಬೆಳೆದದ್ದು ಕರ್ನಾಟಕ (ಬ್ಯಾಂಕ್ ಉದ್ಯೋಗಿಯಾಗಿದ್ದ ನಮ್ಮ ತಂದೆ ಜೊತೆ ಊರೂರು ಸುತ್ತಿದ್ದು), ಕೊನೆಗೆ ಕಾಲೇಜು ದಿನಗಳಿಂದ ನಮ್ಮದಾಗಿಸಿಕೊಂಡ ಊರು ಧಾರವಾಡ. ಬದುಕಿನ ಅಚ್ಚುಗಳು ನನಗಾಗಿ ಮೊದಲೇ ತಯಾರಾಗಿದ್ದವೇನೋ ಅನ್ನುವ ಥರದಲ್ಲಿ.. ಶಾಲೆಯಲ್ಲಿ ಜಾಣೆಯೆನಿಸಿಕೊಂಡಿದ್ದ ನಾನು ಸರಾಗವಾಗಿ ಬಿ.ಈ. ಓದಿಬಿಟ್ಟೆ. ನನಗೆ ತಿಳಿಯುವ ಮೊದಲೇ ದೊಡ್ಡ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಕೆಲಸ. "ಇದ್ದುದೆಲ್ಲವ ಬಿಟ್ಟು.. " ಎನ್ನುವ ಹಾಗೆ, ಈಗ ಸಾಫ್ಟ್ ವೇರ್  ಡೆವೆಲಪ್‌ಮೆಂಟ್ ಬಿಟ್ಟು ಕಂಟೆಂಟ್ ಡೆವೆಲಪ್ ಮಾಡಲು ತೊಡಗಿದ್ದೇನೆ . ಬದುಕಿನ ಅನಿಶ್ಚಿತತೆಗಳನ್ನು ಪ್ರೀತಿಸುತ್ತ!

ಚಿಕ್ಕವಳಿದ್ದಾಗಿಂದ ಬರೆಯುವ ಗೀಳು, ಓದುವು ಹುಚ್ಚು.. ಆದರೆ ಅದು ನನ್ನಲ್ಲಿರುವ ಪ್ರತಿಭೆ ಎಂದು ನಾನೆಂದೂ ಗುರುತಿಸಲೇ ಇಲ್ಲ! ಹೀಗೆ ಮನಸಿನ ಸಂತೋಷಕ್ಕೆ ಕೆಲವೊಮ್ಮೆ, ಸಮಾಧಾನಕ್ಕೆ ಮಗದೊಮ್ಮೆ, ಬರೆಯುತ್ತಲೇ ಹೋದೆ.. ಹಲವಾರು ಬಾರಿ ಅದನ್ನು ಹಂಚಿಕೊಳ್ಳುವ ಗೋಜಿಗೂ ಹೋಗದೇ.. ನಂತರ ಪರಿಚಯವಾದದು ಬ್ಲಾಗ್ ಪ್ರಪಂಚ.. ಬರಹಗಳಿಂದ ಚಿರಪರಿಚಿತರಾಗಿದ್ದ ಹಲವರು, ವೈಯಕ್ತಿಕವಾಗಿ ಪರಿಚಯವಾಗಲೇ ಇಲ್ಲ.. (ಫೇಸ್‍ಬುಕ್ ಬಂದ ಮೇಲೆ ಎಲ್ಲ ಬದಲಾಯಿತು.. ನನಗೆ ಖುಶಿಯಾಗುವ ತೆರದಲ್ಲಿ ನನಗೆ ಇಂತಹವರ ಬರಹವೇ ಇಷ್ಟ ಅಂತ ಹೇಳುವುದು ಕಷ್ಟ.. ಮನಸಿಗೆ ಹತ್ತಿರವಾಗುವಂಥ ಎಲ್ಲವನ್ನೂ ನಾ ಓದುತ್ತೇನೆ.. ’ಕೆ.ಎಸ್. ನಿಸಾರ್ ಅಹ್ಮದ್’ ಅವರ ಕವನಗಳು ನನಗೆ ಹಲವಾರು ಬಾರಿ ಸ್ಫೂರ್ತಿ ನೀಡಿವೆ.. ಹೀಗೇ ಸಾಗಿದೆ ಬರಹ, ಓದು, ಬದುಕು ಮತ್ತು ಕನಸು.. ಎಲ್ಲ ಉದಯೋನ್ಮುಖ ಬರಹಗಾರರಿಗಿರುವಂತೆ, ಜನ-ಮನಕ್ಕೆ ಹತ್ತಿರವಾಗುವಂಥ ಕವನ ಸಂಕಲನವೊಂದನ್ನು ಹೊರ ತರಬೇಕೆನ್ನುವುದು ಕನಸು.. (ಅಥವಾ ಕನಸಿನ ಆರಂಭವೆನ್ನಲೇ? ) ಅದು ಇಷ್ಟೇ ಸಮಯದಲ್ಲಿ ನನಸಾಗಬೇಕು ಎಂಬ ಹಟವೂ ನನಗಿಲ್ಲ.. ’ಕಾಲ ಕೂಡಿ ಬಂದಾಗ’ ಖಂಡಿತ ಕನಸುಗಳು ಈಡೇರುವವು ಎಂದು ಬಲವಾಗಿ ನಂಬುವವಳು ನಾನು."

ಎಂದು ಮಾತು ಮುಗಿಸಿದ ಮಂಜುಳಾರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಮಂಜುಳಾರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಓದಿ ಗೆಳೆಯರೇ..
http://bhava-darpana.blogspot.in/

ಮಂಜುಳಾರವರ ಒಂದೆರಡು ಕವನಗಳನ್ನು ಈ ಕೆಳಗೆ ನೀಡಿರುವೆ.. ಮನಸ್ಸಿಟ್ಟು ಓದಿಕೊಳ್ಳಿ ಗೆಳೆಯರೇ..

ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸಿ
ಭಾವನೆಗಳ ಮುತ್ತನಿಟ್ಟು
ಕಲ್ಪನೆಗಳ ಆಟಿಕೆ ನೀಡಿ
ಪ್ರೀತಿಯ ಅಕ್ಕರೆಗರೆದು
ಮಂದಹಾಸವ ಉಡುಗೊರೆ
ನೀಡಿದ ನಿನಗೆ
ನನ್ನ ಹೃತ್ಪೂರ್ವಕ ನಮನ
ನಿನಗಾಗಿ ನನ್ನ ಈ ಪುಟ್ಟ ಕವನ
*****

ಮನಸೊಂದು ಕುಡಿಯೊಡೆದ
ಮಧುರ ದಿನ
ಕನಸೊಂದು ಕಣ್ಬಿಟ್ಟ
ಮಧುರ ಕ್ಷಣ
ತನುವಲ್ಲಿ ತನುವರಳಿ
ಭುವಿಗೆ ಮರಳಿದ ದಿನ...

ಆ ಮನಸು ಮಡಿಲಾಗಿ
ಈ ಮನಸು ಮಗುವಾಗಿ
ಮನಸೆಲ್ಲ ನಗುವಾಗಿ
ನಕ್ಕು-ನಗಿಸಿದ ದಿನ
ಅತ್ತು-ಅಳಿಸಿದ ದಿನ

ಒಡಲ ಒಗಟು ಜೀವವಾದ ದಿನ
ಜೀವ ನಂಟು ಉಸಿರು ಪಡೆದ ದಿನ
ಕತ್ತಲಿಂದ ಬೆಳಕಿಗೆ ಕಣ್ಬಿಟ್ಟ ದಿನ
ಹೊಚ್ಚ ಹೊಸ ಬದುಕ ತೆರೆದಿಟ್ಟ ದಿನ

ನವ ಜೀವಕೆ ನಾಂದಿಯಾದ
ಆ ಸೋಜಿಗದ ದಿನ
ಪ್ರತಿ ವರುಷ ಮರಳುವುದು
ನೆನಪುಗಳ ನಗೆ ಚೆಲ್ಲಿ
ಮತ್ತೆ ಮರೆಯಾಗುವುದು
ಈ ಜನುಮ ದಿನ!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು





ಶುಕ್ರವಾರ, ನವೆಂಬರ್ 9, 2012


ಎಲೆ ಮರೆ ಕಾಯಿ ೬೪ 

ಒಮ್ಮೆ ನಿರ್ದೇಶಕರಿಂದ ಬರಹಗಾರನ ಹುದ್ದೆಗೆ ಕರೆ ಬಂದಿತ್ತು. 
ನಾನು ಸಮಯಕ್ಕೆ ಸರಿಯಾಗಿ ಕರೆದ ಜಾಗಕ್ಕೆ ಹೋಗಿದ್ದೆ.
ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಹೋದ ನನಗೆ 
ಮೊದಲ ಸರಳ ಪ್ರಶ್ನೆ "ನಿಮ್ಮ ಬರವಣೆಗೆ ನಾನು ಕಂಡಿಲ್ಲ, ಏನಾದರೂ ಬರೆದು ತೋರಿಸುತ್ತೀರಾ?" ಅಂತ ಒಂದು ಹಾಳೆ, ಪೆನ್ನು ಮುಂದಿಟ್ಟರು.
ಏನು ತೋಚಲಿಲ್ಲ.
ಕೊನೆಗೆ,
"ಬರವಣೆಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಅಂತ ಬರೆದು ಎದ್ದು ನಿಂತೆ.

ಆ ಬರಹಗಾರ ಬರೆದ ಕೊನೆಯ ಸಾಲು ಯಾಕೋ ನನ್ನ ಮನದಲ್ಲಿ ಅಚ್ಚಳಿಯದೆ ನಿಂತುಬಿಟ್ಟಿದೆ. ಸೂಪರ್ ಸಾಲು ಅಂತಾರಲ್ಲ ಅಂತಹ ಸಾಲು ಅದು. ನಾನು ಸಂತೆಯ ಮಧ್ಯೆ ಕುಳಿತರೂ ಬರೆಯಬಲ್ಲೆ ಎಂದು ಕೆಲವರು ವಾದ ಮಾಡಬಹುದು. ಒಬ್ಬ ಚಿತ್ರಕಾರ ಖಾಲಿ ಹಾಳೆಯ ಮೇಲೆ ತನ್ನ ಪೆನ್ಸಿಲ್ ನಿಂದಲೋ, ಕುಂಚದಿಂದಲೋ, ಚಿತ್ರ ಮೂಡಿಸಿ ಬಣ್ಣ ತುಂಬುವಾಗ ಅವನ ಕಲೆಯನ್ನು ನೋಡುವ ಕಂಗಳು ಬೆರಗುಗಣ್ಣಿನಿಂದ ತದೇಕ ಚಿತ್ತದಿಂದ ನೋಡಲು ಶುರು ಮಾಡಿದರೂ ತನ್ನ ಧ್ಯಾನಕ್ಕೆ ಧಕ್ಕೆ ಬರದಂತೆ ಅವನು ಚಿತ್ರವೊಂದನು ಬಿಡಿಸಿಬಿಡಬಲ್ಲ. ಆದರೆ ಬರಹಗಾರನಿಗೆ ಸಂತೆಯಲ್ಲಿ ಕುಳಿತರೂ ಒಂದು ಏಕಾಂತ ಬೇಕಾಗುತ್ತೆ. ಪರಕಾಯ ಪ್ರವೇಶ ಅಂತಾರಲ್ಲ ಅಂತಹ ಸ್ಥಿತಿಯನ್ನು ಎಲ್ಲರೂ ಪೂರ್ತಿಯಾಗಿ ತಲುಪದೇ ಇದ್ದರೂ ತಮ್ಮದೇ ಒಂದು ಏಕಾಂತವನ್ನು ಸೃಷ್ಟಿಸಿಕೊಂಡ ಲೇಖಕರು ಅಚ್ಚರಿಗಳನ್ನು ಸೃಷ್ಟಿಸಬಲ್ಲರು. ಆ ಏಕಾಂತ ಎಷ್ಟು ಹೊತ್ತು ಸಿಗುತ್ತೆ, ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ, ಅಂತಹ ಏಕಾಂತ ಮತ್ತೆ ಮತ್ತೆ ಸಿಗುತ್ತಾ ಅನ್ನುವುದರ ಮೇಲೆ ಜೊತೆಗೆ ಬರಹಗಾರನ ಆಸಕ್ತಿಯ ಮೇಲೆ ಬರವಣಿಗೆ ಸಹ ಬೆಳೆದು ನಿಲ್ಲುತ್ತೆ. ಪ್ರಣಯವೂ ಹಾಗೆಯೇ ಯಾರೋ ಬಂದು ಬಿಡುವರು ಎನ್ನುವ ಭಯದಿಂದ ಕೂಡಿದ ಪ್ರಣಯಕ್ಕೂ ಆ ಭಯದಿಂದ ಮುಕ್ತವಾದ ಪ್ರಣಯಕ್ಕೂ ತನ್ನದೇ ಆದ ಸಂಭ್ರಮವಿರುತ್ತದೆ. ಹೀಗೆ  ಪ್ರಣಯ ಮತ್ತು ಬರವಣಿಗೆಯನ್ನು ಒಂದನ್ನೊಂದನ್ನು ಹೋಲಿಸಿ ನೋಡಿದರೆ ಕೆಲವರಿಗೆ ತಪ್ಪಾಗಿ ಕಾಣುತ್ತದೇನೋ ಆದರೂ ನಮ್ಮ ಈ ಗೆಳೆಯ ಬರೆದ "ಬರವಣಿಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಎಂಬುದು ಸತ್ಯ ಎಂದನಿಸುತ್ತದೆ. ಅಂದ ಹಾಗೆ "ಬರವಣಿಗೆ ಒಂದು ಪ್ರಣಯದಂತೆ" ಎಂಬ ಸಾಲು ಕಣ್ಣಿಗೆ ಬಿದ್ದಿದ್ದು "ಮನಸು ಮುಕ್ತ ಮಾತು" ಎಂಬ ಬ್ಲಾಗಿನಲ್ಲಿ.

ಒಂದು ಮಾಯಾಲೋಕದಲ್ಲಿ ಒಂದಷ್ಟು ಹೊತ್ತು ಇದ್ದು ನಂತರ ಎದ್ದು ಹೋಗುವ ಕೋಟ್ಯಾಂತರ ಮನುಷ್ಯರಲ್ಲಿ ನಾವು ಸಹ ಒಬ್ಬರು ಎನ್ನಬಹುದು. ಆ ಮಾಯಾಲೋಕ ಇಂದು ಪ್ರಪಂಚದ ಮೂಲೆ ಮೂಲೆಗೂ ಹರಡಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗದು. ಆ ಮಾಯಾಲೋಕದಲ್ಲೇ ಕೆಲವರು ತಮಗೆ ಮನಸ್ಸಿಗೆ ಬಂದದ್ದನ್ನು ಬರೆಯುತ್ತಾರೆ ಹಾಗೆ ಬರೆದುದ್ದನ್ನು ತಮ್ಮ ಗೆಳೆಯರೊಡನೆ ಹಂಚಿಕೊಳ್ಳುತ್ತಾರೆ. ತರಾವರಿ ವಿಷಯ ವಸ್ತುಗಳುಳ್ಳ ಕತೆ, ಕವನ, ಲೇಖನ, ಫಿಲಾಸಫಿ ಇತ್ಯಾದಿಗಳ ಕುರಿತು ಈ ಮಾಯಾಲೋಕದಲ್ಲಿ ಬರೆಯುವವರು ಇದ್ದರೂ ಆ ಮಾಯಲೋಕವನ್ನೇ ಕುರಿತು ಬರೆಯುವವರು ಕಡಿಮೆ. ಆ ಮಾಯಾ ಲೋಕ ಯಾವುದು ಎಂದು ತಮಗೆ ತಿಳಿದಿದೆ ಎಂದುಕೊಳ್ಳುವೆ. ಹೌದು ಮಾಯಾಲೋಕವಾದ ಫೇಸ್ ಬುಕ್ ನಲ್ಲಿ ಬರೆಯುವವರು ಜಾಸ್ತಿ. ಆದರೆ ಫೇಸ್ ಬುಕ್ ಕುರಿತು ಬರೆದವರು ಕಮ್ಮಿ. ಫೇಸ್ ಬುಕ್ ಕುರಿತು ಒಂದು ಚಂದದ ಕವನ ಈ ಗೆಳೆಯನ ಬ್ಲಾಗಿನಲ್ಲಿ ಸಿಕ್ಕಾಗ ಯಾಕೋ ಒಂತರಾ ಖುಷಿಯಾಯಿತು.  

ಭೌತಿಕ ಅಸ್ತಿತ್ವ ಇರದ 
ಕೃತಕ ಕುತೂಹಲ ಜನಕ.
ನಮ್ಮ ಖಾಸಗಿ ಬದುಕಿನ 
ಪ್ರಾಯೋಜಕ. 
ನಾವು ಉಸಿರಾಡಿದ ಕ್ಷಣವನ್ನೂ  
ಬಣ್ಣ ಬಡೆಯುವ ತಾಣ    

ಲೈಕು, ಕಾಮ್ಮೆಂಟು 
ಗಳಿಸುವ ಗಂಭೀರ ಸ್ಪರ್ದೆ,
ಇವತ್ತಿನ ಗಳಿಕೆ ಇಷ್ಟು, ನಿನ್ನದೆಷ್ಟು....?
ಎಂಬ ಬಿಸಿನೆಸ್ಸಿನ ಮರ್ಯಾದೆ.

ಹೀಗೆ ಚಂದದ ಸಾಲುಗಳನ್ನು ಬರೆಯುತ್ತಲೇ ಸಾಹಿತ್ಯ ಕೃಷಿಯನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಿರುವ ಗೆಳೆಯ ವಿಜಯ್ ಕುಮಾರ್ ಹೂಗಾರ್ ಅವರು ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿ.. ಕತೆ ಕವನಗಳ ಜೊತೆಗೆ ಪುಟ್ಟ ಪುಟ್ಟ ಚುಟುಕಗಳ ಮೇಲೂ ಹೆಚ್ಚು ಒಲವುಳ್ಳ ಗೆಳೆಯನ ಪರಿಚಯವನ್ನು ಓದುವ ಮೊದಲು ಈ ಕೆಳಗೆ ನೀಡಿರುವ ಅವರ ಕವನವೊಂದರ ಸಾಲುಗಳನ್ನು ಓದಿಕೊಂಡು ಅವರ ಪರಿಚಯವನ್ನು ಓದಿಕೊಳ್ಳಿ.. :))

ಕಾರಣ ಇಲ್ಲದ ಪ್ರೀತಿ,
ಅದು ನನ್ನ ಗುರುತಿನ ಚೀಟಿ.... 
ಈ ನನ್ನ ನೆಮ್ಮದಿ ಕಂಡು,
ಆ ಚಂದಿರ ಹೊಡೆಯಲಿ ಸೀಟಿ.....:-) 

ವಿಜಯಕುಮಾರ್ ಹೂಗಾರ್

"ಪ್ರಿಯ ನಟರಾಜು ಅವರೇ, ಪರಿಚಯ ನೀಡುವಷ್ಟು ಬರಹಗಾರನೆನಲ್ಲ. ದಯವಿಟ್ಟು ನನ್ನ ಪರಿಚಯ ಒಬ್ಬ ಬರಹಗಾರನಾಗಿ ಸ್ವೀಕರಿಸದೆ,ಗೆಳೆಯನಾಗಿ ಸ್ವೀಕರಿಸಿ. ಬೀದರ್ ಜಿಲ್ಲೆಯ ಬಸವ ಕಲ್ಯಾಣ್ ತಾಲೂಕಿನ ಬಟಗೇರಾ ಗ್ರಾಮದಲ್ಲಿ ನನ್ನ ಬೇರು. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾದ್ದರಿಂದ ಊರಿಂದೂರಿಗೆ ಸುತ್ತಿ, ಏಳೂರು ನೀರು ಕುಡಿದು ಸದ್ಯಕ್ಕೆ ಗುಲ್ಬರ್ಗದಲ್ಲಿ ಮನೆ :-) ಪ್ರತಿ ಊರಿನಲ್ಲೋ ಒಂದೊಂದು ನೆನಪಿನ ಗಂಟು ಕಟ್ಟಿ ಮುಂದಿನೂರಿಗೆ ಸಾಗೋದು ನನ್ ಕೆಲಸ. ಬೀದಿಯಲ್ಲಿ ಹರಿದ ಭಿತ್ತಿ ಚಿತ್ರಗಳಂತೆ ಬಣ್ಣ ಕಳೆದುಕೊಂಡ ಬದುಕಿಗೆ, ಬಣ್ಣ ಹಚ್ಚೋದು ಕಲಿಸಿ, ಕೆಲಸ ಕೊಡಿಸಿದ್ದು ಬೆಂಗಳೂರು. ಊರಿಗೂ ಒಂದು ಜೀವ ಇರತ್ತೆ ಅಂತ ಕಂಡಿದ್ದು ಬಹುಶ ಇದೆ ಬೆಂಗಳೂರಲ್ಲಿ.ಇಲ್ಲಿ ಉಸಿರಾಡೋದೇ ಒಂದು ಖುಷಿ. ಬೆಂಗಳೂರಿನಲ್ಲಿ ತುಂಬಾ ಇಷ್ಟಾನೂಇಷ್ಟಗಳಲ್ಲಿ ವರನಟ ಡಾ. ರಾಜಕುಮಾರ್ ಪ್ರತಿಮೆಗಳು, ಕಟೌಟ್ ಗಳನ್ನ ಆಸೆಯಿಂದ ನೋಡೋದು, ಮೆಜೆಸ್ಟಿಕ್ ತಲೆಯಮೇಲೆ ನಿಂತು ಅಜ್ಞಾತ ಹೆಜ್ಜೆಗಳು ನೋಡೋದು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ. ಕೆಲಸ ಸೇರಿದ ಮೊದಲ ದಿನದಿಂದಲೂ ಕೆಲಸದಲ್ಲಿ ಖುಷಿ ಹುಡುಕಲು ಯತ್ನಿಸುತ್ತಿದ್ದೇನೆ.

ಸಮಯ ಸಿಕ್ಕಾಗ ಕನ್ನಡ ಸಾಹಿತ್ಯ ಓದೋದು.ತಲೆ ಕೆಟ್ಟಾಗ ಏನಾದ್ರು ಬರೆಯೋದು :-) ಬರವಣಿಗೆಗೆ ನಾನು ತುಂಬಾ ಹೊಸಬ. ಸುಮಾರು ಒಂದು ವರ್ಷದ ಹಿಂದೆ ಬರೆಯುವದಕ್ಕೆ ಶುರು ಮಾಡಿರಬಹುದು. ಎಡೆಬಿಡದೆ ತುಂಬಾ ಕಾಡುವ ವಿಷಯಗಳನ್ನ, ಸಂಗತಿಗಳನ್ನ ಬರವಣಿಗೆಯಿಂದ ತಣಿಸಿಕೊಳ್ಳುತ್ತೇನೆ. ನನ್ನ ಮುಂದಿನ ಎಲ್ಲಾ ಕೆಲಸಗಳು ಸ್ಥಗಿತವಾಗುವಷ್ಟು ಕಾಡಿದಾಗ ಮಾತ್ರ ಪೆನ್ನು ಕೈಗೆ ಹಿಡಿಯುತ್ತೇನೆ. ಸೋತು ಹಣ್ಣಾಗಿ ಬೇಜಾರಾಗಿ ಕುಳಿತಿರುವಾಗ ಒಮ್ಮೆ ಗೆಳೆಯರ ಬಲವಂತದಿಂದ ಹೊಗೆನಕಲ ಫಾಲ್ಸ್ ಗೆ ಹೋಗಿದ್ದೆ. ಅಲ್ಲಾದ ನನ್ನ ಮನಸಿನ ಬದಲಾವಣೆ, ನೋವಿಗೆ ಮುಕ್ತಿ ಸಿಕ್ಕ ರೀತಿಯ ಬಗ್ಗೆ ಒಂದು ಪ್ರವಾಸ ಕಥನದ ತರಹ ಬರೆದಿದ್ದು ನನ್ನ ಮೊದಲ ಬರಹ. ಅಲ್ಲಿಂದ ಒಂದೆರೆಡು ಕಥೆಯನ್ನ ಬರೆಯುವದಕ್ಕೆ ಆರಂಭಿಸಿದೆ. ಕೆಲಸದ ಒತ್ತಡದಲ್ಲಿ ಕಥೆ ಬರೆಯುವದಕ್ಕೆ ಸಮಯ ಕೊಡುವದು ಕಷ್ಟವಾಗುತ್ತ ಬಂತು, ಅದಕ್ಕೆ ಶಾರ್ಟ್ ಆಗಿ ಕವನ ಬರೆಯುವದಕ್ಕೆ ಶುರುಮಾಡಿದೆ.

ಜಗತ್ತಿನ ಶ್ರೇಷ್ಠ ಸಿನಿಮಾ ಓದೋದು,ನೋಡೋದು ಇಷ್ಟ. ಪುಟ್ಟಣ್ಣ ಕಣಗಾಲ್, ಕ್ರಿಸ್ಟೋಫರ್ ನೋಲನ್, ಅಕಿರಾ ಕುರಸವ ನೆಚ್ಚಿನ ನಿರ್ದೇಶಕರು. ಜಯಂತ್ ಕಾಯ್ಕಿಣಿ ನನ್ನ ನೆಚ್ಚಿನ ಲೇಖಕ. ಅವರ ಕಥಾಸಂಕಲನಗಳು ನನಗೆ ಗುರು ಸಮಾನ. ಅವರ ಕಥೆಗಳು ಸ್ಪಷ್ಟವಾಗಿ ಕಲ್ಪಿಸುವಷ್ಟು ನನ್ನನ್ನು ಆವರಿಸುತ್ತವೆ. ಅಲ್ಲಿನ ಪಾತ್ರಗಳು ಯಾವುದೋ ಒಂದು ಲೋಕಕ್ಕೆ ಕರೆದೊಯ್ದು ವಾಪಸ್ಸು ಬರುವ ದಾರಿ ಹೇಳದೆ ಮಾಯವಾಗುವಷ್ಟು ಕಾಡುತ್ತವೆ. ಇಲ್ಲಿಯವರೆಗೂ ನನಗೆ ತುಂಬಾ ಕೇಳಲ್ಪಟ್ಟಿರುವ ಪ್ರಶ್ನೆಯೆಂದರೆ 'tell about youself?'. ಎಲ್ಲಾ ಇಂಟರ್ವ್ಯೂ ಅಲ್ಲೂ ಇದು ಕಾಮನ್ ಪ್ರಶ್ನೆ. ಪ್ರತಿಸಲ ಮುಖ ಕೆಡಿಸಿಕೊಂಡೆ ಉತ್ತರಿಸಿದ ನನಗೆ ಇಂದು ಮೊದಲ ಬಾರಿಗೆ ನನ್ನ ಬಗ್ಗೆ ಹೇಳುವದಕ್ಕೆ ಖುಷಿಯಾಗುತ್ತಿದೆ.
ನನ್ನ ಬಗ್ಗೆ ನನಗೇ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ನಿಮ್ಮ ಈ 'ಪ್ರಶ್ನೆ'ಗೆ ನಾನು ಚಿರ ಋಣಿ.

ಒಲುಮೆಯಿಂದ
ವಿಜಯಕುಮಾರ್ ಹೂಗಾರ್."

ಎಂದು ಮಾತು ಮುಗಿಸಿದ ಗೆಳೆಯ ವಿಜಯ್ ಬರೀ ಒಂದು ವರ್ಷದಿಂದ ತಮ್ಮ ಬರವಣಿಗೆಯನ್ನು ಶುರು ಮಾಡಿದ್ದಾರೆ ಎಂದರೆ ನಂಬಲಾಗದು. ಯಾಕೆಂದರೆ ಅವರ ಬರಹಗಳಲ್ಲಿರುವ ಪ್ರಬುದ್ಧತೆ ಎದ್ದು ಕಾಣುತ್ತೆ. ಅಂದ ಹಾಗೆ ಗೆಳೆಯ ವಿಜಯ್ ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://mukta-viji.blogspot.in/

ವಿಜಯ್ ಅವರ ಒಂದೆರಡು ಕವನಗಳ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ನೀ ಮುಟ್ಟಿ 
ಹೋದ ನೆಲಕ್ಕಿಂದು 
ಬಿಗುಮಾನ.
ಸೋಕಿದ ಮನಕ್ಕೆಲ್ಲ 
ಬಹುಮಾನ.
ನೆರಳು ತಾಗಿದ 
ಜಾಗಕ್ಕೆಲ್ಲ ಹೊಸ 
ಜೀವದಾನ.
*****
ಮಾನ್ಯ ಚಂದಿರನಿಗೊಂದು
ವಿನಮ್ರ ಮನವಿ

ನನ್ನಾಕೆಯ ಹಿಂಬಾಲಿಸಬೇಡ,
ಅವಳ ಏಕಾಂತ ಕದಿಯಲು
ಯತ್ನಿಸಬೇಡ,
ಹೀಗೊಮ್ಮೆ ಯತ್ನಿಸಿ 
ನನ್ನ ಏಕಾಂತ 
ಕಳೆದು ಕೊಂಡಿರುವೆ,
ವ್ಯರ್ಥ ಪ್ರಯತ್ನಕ್ಕೆ ಬಲಿಯಾಗಬೇಡ
ಸೂರ್ಯನ ಆಸ್ಥಾನಕ್ಕೆ ಕವಿಯಾಗಬೇಡ.
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))