ಗುರುವಾರ, ಅಕ್ಟೋಬರ್ 25, 2012


ಎಲೆ ಮರೆ ಕಾಯಿ ೬೨
"ಮತ್ತದೇ ಅಸ್ಪಷ್ಟ ದಾರಿ, ಮತ್ತದೇ  ಸಹ ಸ್ಪರ್ಧಿಗಳು, ಮತ್ತದೇ ಗುರಿ, ಮತ್ತವೇ  ತಂಗುದಾಣಗಳು, ಓಡುತ್ತಿದೇನೆ, ಓಡಬೇಕು, ವಿಶ್ರಮಿಸುವಂತಿಲ್ಲ.  ಇದಷ್ಟೇ  ತಲೆಯಲ್ಲಿ ಇಟ್ಟುಕೊಂಡು ಓಡುತ್ತಿರುವ  ನಾನು  ಯಾರಿಗೆ, ಏತಕ್ಕಾಗಿ  ಓಡುತ್ತಿದೇನೆ  ಎನ್ನುವುದನ್ನು  ವಿವರಿಸಲಾರೆ  ವಿಪರ್ಯಾಸ! ಆದರೆ  ಓಟ  ವ್ಯರ್ಥವೆನಿಸುತ್ತಿಲ್ಲ, ನಾನು ಓಡುತ್ತಲೇ ಇದ್ದೇನೆ, ಇನ್ನು ಅದೆಷ್ಟು ಹೊಸ ತಂಗು ದಾಣ ಗಳಲ್ಲಿ  ವಿಶ್ರಮಿಸಲ್ಲಿದ್ದೇನೋ? ಅಸ್ಪಷ್ಟ, ಅನಿಖರತೆ ... ಉತ್ತರದ  ನಿರಂತರ  ಹುಡುಕಾಟದಲ್ಲಿ  ಮತ್ತೆ ನನ್ನ ಓಟ, ಜತೆಯಲ್ಲಿ  ನೀವು  ಇರುವಿರಲ್ಲ ???"

ಪ್ರತಿ ಬಾರಿ ಎಲೆ ಮರೆ ಕಾಯಿಗಳ ಜೊತೆ ಮಾತುಕತೆ ಬರಹವನ್ನು ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದ ಲೇಖಕರ ಒಂದು ಕವನದಿಂದಲೇ ಶುರು ಮಾಡುವ ವಾಡಿಕೆಯನ್ನು ಪಾಲಿಸುತ್ತಾ ಬಂದಿದ್ದೆ. ಕೆಲವು ಸಾರಿ ಮಾತುಕತೆಗೆ ಬಂದ ಅತಿಥಿಗಳ ಬ್ಲಾಗಿನಲ್ಲಿ ಕವಿತೆಗಳು ಕಾಣದೇ ಇದ್ದಾಗ ಅವರ ಬರಹದಲ್ಲಿನ ಒಂದು ಸಾಲಿನ ಪದಗಳನ್ನೇ ಒಂದರ ಕೆಳಗೊಂದರಂತೆ ಜೋಡಿಸಿಟ್ಟು ಕವನದ ತರಹ ಕಾಣುವಂತೆ ಮಾಡಿ ಕವನದಿಂದಲೇ ಎಲೆ ಮರೆ ಕಾಯಿ ಬರಹವನ್ನು ಶುರು ಮಾಡುತ್ತಿದ್ದ ವಾಡಿಕೆಯನ್ನು ಸದ್ಯ ಮುರಿಯಲಿಲ್ಲ ಎಂದುಕೊಳ್ಳುತ್ತಿದ್ದೆ. ಇವತ್ತಿನ ಅತಿಥಿಯ ಬ್ಲಾಗಿನಲ್ಲಿ ಒಂದು ಕವಿತೆಯೂ ಕಾಣದಿದ್ದಾಗ ಚಂದದ ಬರಹದ ಒಂದೆರಡು ಸಾಲುಗಳ ಪದಗಳನ್ನು ಕವಿತೆಯ ಹಾಗೆ ಜೋಡಿಸದೇ ಆ ಸಾಲುಗಳು ಹೇಗಿದ್ದವೋ ಹಾಗೆ ನಿಮ್ಮ ಮುಂದಿಟ್ಟಿರುವೆ. ಒಮ್ಮೆ ನೋಡಿದರೆ ಮೇಲೆ ಬರೆದಿರುವ "ಮತ್ತದೇ ಅಸ್ಪಷ್ಟ ದಾರಿ, ಮತ್ತದೇ  ಸಹ ಸ್ಪರ್ಧಿಗಳು" ಎಂಬತಹ ಪದಗಳಿರುವ ಸಾಲುಗಳು ಕವಿತೆಯ ಹಾಗೆ ಓದಿಸಿಕೊಳ್ಳುವುದರಿಂದ ಕವಿತೆಯೊಂದಿಗೆ ಶುರುವಾಗುವ ಎಲೆ ಮರೆ ಕಾಯಿ ಲೇಖನದ ವಾಡಿಕೆಯನ್ನು ಈ ಬಾರಿ ಮುರಿದಿದ್ದರೂ ಮುರಿದಂತೆ ಅನಿಸುತ್ತಿಲ್ಲ. ಅಂದ ಹಾಗೆ ಮೇಲಿನ ಚಂದದ ಸಾಲುಗಳು ಕಣ್ಣಿಗೆ ಬಿದ್ದ ಬ್ಲಾಗಿನ ಹೆಸರು ಅಂತರ್ಮುಖಿ..

"ಬದುಕು ಒಂದು ಖಾಲಿ ಕ್ಯಾನ್ವಾಸ್ ಹಾಳೆಯಂತೆ! ಬೆಳಗ್ಗೆ ಎದ್ದು ಬ್ರಷ್ ಮಾಡಲು ಹೋದಾಗ ಖಾಲಿಯಾದ ಟೂಥ್ ಪೇಸ್ಟ್ ಟ್ಯೂಬ್ ಕಂಡು ಏನೇನೋ ವಿಚಾರಧಾರೆಗಳ ಸಂಚಲನ. ಎಲ್ಲ ಖಾಲಿಯಾದ ವಸ್ತುಗಳು replace ಆಗುತ್ತಲೇ ಇರುತ್ತವೆ. ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳು, ಮಹಡಿ ಮೇಲಿನ syntax, ಯಾವುದೇ ಆಗಿರಲಿ ಖಾಲಿಯಾದಾಗಲೆಲ್ಲಾ ಅವುಗಳನ್ನು ಪುನಃ replace ಮಾಡಲಾಗುತ್ತದೆ. replace ಆದ ವಸ್ತುಗಳು ಒಂದು ದಿನ ಖಾಲಿಯಾಗುತ್ತ  ಹೋಗುತ್ತವೆ. ಇದನ್ನು ಗಮನಿಸದೆ ದಿನ ಕಳೆಯುವ ನಾವುಗಳು ದೈಹಿಕವಾಗಿ (ಕೆಲವೊಮ್ಮೆ ಮಾನಸಿಕವಾಗಿ ) ಖಾಲಿಯಾಗುತ್ತ ಹೋಗುತ್ತೇವೆ. ಎಂಥ ವಿಚಿತ್ರವಿದು?"

ಹೆಚ್ಚಿನವರಲ್ಲಿ ಬರಹಗಾರ ಹುಟ್ಟುವುದೇ ಕಾಲೇಜಿಗೆ ಸೇರಿದ ಮೇಲೆ. ಅಂದರೆ ಹದಿನೇಳು ಹದಿನೆಂಟು ವರ್ಷ ವಯಸ್ಸಿನಲ್ಲಿ. ಅವರ ಬರಹ ಕಾಲೇಜಿನ ದಿನಗಳಲ್ಲಿ ನಿರಂತರವಾಗಿದ್ದರೆ ಪಿಯುಸಿ ಮುಗಿಸಿ ಡಿಗ್ರಿಯ ಕೊನೆಯ ವರ್ಷಕ್ಕೆ ಬರುತ್ತಿದ್ದಂತೆ ಅವರೊಳಗಿನ ಬರಹಗಾರನ ಬರಹಗಳಿಗೆ ಒಂದು ಪಕ್ವತೆ ಬಂದುಬಿಡುತ್ತದೆ. ಪ್ರೇಮ, ಪ್ರಯಣದಂತಹ ನವಿರಾದ ಭಾವಗಳು ಬದುಕಿನ ಸಿದ್ದಾಂತಗಳ ರೂಪು ಪಡೆಯುವುದೇ ಆ ವಯಸ್ಸಿನಲ್ಲಿ ಎನ್ನಬಹುದು. ಬರಹಗಾರನ ಬದುಕಿನ ಆ ಕಾಲಘಟ್ಟ ಅವನ ಬರಹದ ಬದುಕಿನ ಬುನಾದಿ ಸಹ ಎನ್ನಬಹುದು. ಕಾಲೇಜಿನ ದಿನಗಳು ಕಳೆಯುತ್ತಿದ್ದಂತೆ ಬರಹದ ದಿನಗಳು ಕಳೆದು ಹೋದಂತೆ ಅನಿಸಿ ಒಬ್ಬ ವ್ಯಕ್ತಿಯೊಳಗಿನ ಬರಹಗಾರ ಒಮ್ಮೊಮ್ಮೆ ಸದ್ದಿಲ್ಲದೆ ಮಾಯವಾದರೂ, 18 ರಿಂದ 22 ನೇ ವಯಸ್ಸಿನಲ್ಲಿ  ಬರಹಗಾರನಾಗಿ ತನಗೆ ತಾನೇ ಹಾಕಿಕೊಂಡಿರುವ ಬರಹದ ಬುನಾದಿಯ ಮೇಲೆ ತಳಹದಿಯ ಮೇಲೆ ಮುಂದೊಂದು ದಿನ ಒಬ್ಬ ಬರಹಗಾರ ಚಂದದ ಬರಹದ ಮಹಲ್ಲೊಂದನ್ನು ಕಟ್ಟಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ 18 ರಿಂದ 22 ನೇ ವಯಸ್ಸಿನ ಕಾಲಘಟ್ಟವಿದೆಯೆಲ್ಲಾ ಅದು ಬರಹಗಾರನ ಬದುಕಿನ ಬಹು ಮುಖ್ಯ ಪರ್ವ ಎನ್ನಬಹುದು. ಆ ವಯಸ್ಸಿನಲ್ಲಿ ಮೂಡುವ ಬರಹಗಳಲ್ಲಿರುವ ಒಂದು ನವಿರಾದ ಭಾವಗಳು ಬದುಕಿನ ಬಗೆಗಿನ ವಿಧ ವಿಧವಾದ ದೃಷ್ಟಿಕೋನಗಳು ಮೇಲಿನ ಬರಹದಲ್ಲಿ ಎದ್ದು ಕಾಣುತ್ತಿದೆಯಲ್ಲವೇ ಸಹೃದಯಿಗಳೇ...

"ಸಾವು ನಿಶ್ಚಿತ! ಎಲ್ಲರಿಗು ಬಂದೆ ಬರುತ್ತೆ, ಕೆಲವರ ಬದುಕಿನಲ್ಲಿ, ಅಪಘಾತವಾಗಿ, ಆತ್ಮಹತೆಯಾಗಿ, ಕಾಯಿಲೆ ಯಾಗಿ, ವಯಸ್ಸಾಗಿ, ವ್ಯಸನಿಯಾಗಿ, ಇನ್ಯಾವುದೋ ರೂಪದಲ್ಲಿ ಬರಬಹುದು, ತಾಯಿ ಗರ್ಭ ಕೋಶದಿಂದ ಹೊರಬರುವ ಮೊದಲೇ ಅದೆಷ್ಟೋ ಜೀವಗಳು ಕಣ್ಮುಚ್ಚಿಕೊಂಡಿರುತ್ತವೆ, ಇವೆಲ್ಲವನ್ನೂ ನೋಡಿ, , you are lucky enough to see the different colours of life for twenty long years! ಅಲ್ವಾ? ಸಾವು   inevitable ಡೆವಿಲ್, ನಾವದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ, ಆದರೆ ಬದುಕುವುದು, ಪ್ರತಿಕ್ಷಣವನ್ನು ಅನುಭವಿಸುವುದು ನಮ್ಮ ಕೈಲಿದೆ. ಸಾವಿಗೂ ನಮ್ಮ ಜೀವನ ಪ್ರೀತಿ ಕಂಡು ಹೆದರಿಕೆ ಆಗೋ ಹಾಗೆ ಇರೋ ಕೆಲವೇ ದಿವಸಗಳನ್ನು ಬದುಕಿ ಬಿಡಬೇಕು."

ಇಪ್ಪತ್ತು ವರ್ಷ ವಯಸ್ಸಿಗೆ ಇಷ್ಟೊಂದು ಫಿಲಾಸಫಿಯುಳ್ಳ ಸಾಲುಗಳನ್ನು ಯಾರು ಬರೆದಿದ್ದು ಎಂದು ಅಚ್ಚರಿಪಡಬೇಡಿ.. ಯಾವುದೋ ಒಂದು ಪುಟ್ಟ ಘಟನೆಯನ್ನೋ ಇಲ್ಲ ತನ್ನ ಭಾವವನ್ನೋ ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತೋ ಇಲ್ಲ ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುತ್ತಲೋ ನಮಗೆ ವಿವರಿಸಿ ಹೇಳುವ ಕಲೆ ಬಲ್ಲ ಒಬ್ಬ ಚಂದದ ಯುವ ಬರಹಗಾರ್ತಿ ಇಂದಿನ ನಮ್ಮ ಎಲೆ ಮರೆ ಕಾಯಿ ಅತಿಥಿ.. ಇವತ್ತಿನ ಅತಿಥಿಯ ಹೆಸರು ಅಶ್ವಿನಿ ದಾಸರೆ.. ಮುಂದೊಂದು ದಿನ ಚಂದದ ಬರಹಗಾರ್ತಿಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಅಶ್ವಿನಿಯವರೊಂದಿಗೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಅಶ್ವಿನಿ ದಾಸರೆ

"ಅಶ್ವಿನಿ ದಾಸರೆ...ಊರು ಧಾರವಾಡ, ನಮ್ಮದು ಸಂಸ್ಕೃತಿಯ ನಗರಿ ಎಂದೇ ಖ್ಯಾತವಾದ ಊರು, ಇಲ್ಲಿ ಯಾರೇ ಬಂದು ಕಲ್ಲು ಎಸೆದರೂ ಅದು ಹೋಗಿ ಒಬ್ಬ ಸಾಹಿತಿಗೆ ತಗಲುತ್ತದೆ ಎಂಬ ಮಾತೊಂದಿದೆ, ಬೇಂದ್ರೆ, ಚನ್ನವೀರ ಕಣವಿ, ವಿ.ಕೃ. ಗೋಕಾಕ, ಗಿರೀಶ್ ಕಾರ್ನಾಡ್ ಮುಂತಾದ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಧಾರವಾಡದ ಕೊಡುಗೆ ಅಪಾರವಾದದ್ದು. ನಾನು ಈಗ ಸಧ್ಯ ಬೆಂಗಳೂರಿನಲ್ಲಿ ಎಂಟೆಕ್ ವ್ಯಾಸಾಂಗ ಮಾಡುತ್ತಿದ್ದೇನೆ, ನನ್ನ ಕ್ಷೇತ್ರ ತಂತ್ರಜ್ನ್ಯಾನ ಆದರೂ ನನ್ನ ನೆಚ್ಚಿನ ಕ್ಷೇತ್ರ ಸಾಹಿತ್ಯ ಹಾಗೂ ಸಂಗೀತ. ಅಪ್ಪ ಕೂಡ ಉತ್ತಮ ಬರಹಗಾರರು ಆದರೆ ಅವರ ಬರವಣಿಗೆ ನಮ್ಮ ಪರಿವಾರಕ್ಕೆ ಮಾತ್ರ ಸೀಮಿತ ವಾಗಿದ್ದು, ಹಿಂದೂ ಪತ್ರಿಕೆಯಲ್ಲಿ ಅವಗೋ ಇವಾಗೋ ಒಮ್ಮೆ ಅವರ ಲೇಖನಗಳು ಪ್ರಕಟವಾಗುತ್ತವೆ. ಚಿಕ್ಕಂದಿನಿಂದ ಅಪ್ಪ ಓದುತ್ತಿರುವ ಅನೇಕ ಪುಸ್ತಕಗಳನ್ನು ಸುಮ್ಮನೆ ಗಮನಿಸುತ್ತಿದೆ, ಓದಬೇಕು ಅಂತ ಅನಿಸಿದರು ಅರ್ಥವಾಗದ ವಯಸ್ಸದು.. ಆದರೂ ಪಟ್ಟು ಬಿಡದೆ ನಾನು ೫ ನೆ ತರಗತಿಯಲ್ಲಿರುವಾಗಲೇ ಗೃಹಭಂಗ ಓದಿದೆ, ಪೂರ್ಣ ಪ್ರಮಾಣದಲ್ಲಿ ಅರ್ಥವಾಗಿತ್ತೋ ಇಲ್ಲೋ ಸರಿಯಾಗಿ ನೆನಪಿಲ್ಲ ಆವಾಗಿಂದ ಬಿಟ್ಟು ಬಿಡದೆ ಭೈರಪ್ಪನವರ ಎಲ್ಲ ಕಾದಂಬರಿಗಳನ್ನ ಓದಲು ಶುರು ಮಾಡಿದೆ.

ಓದು ನಿರಂತರ ಇದ್ದೆ ಇತ್ತು, ಆದರೆ ಯಾವಾಗಲಾದರು ಬರೆಯವ ಪ್ರಯತ್ನ ಏನು ಮಾಡಿರಲಿಲ್ಲ, ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ, ಮತ್ತೆ ಮೀಸಲಾತಿಯ ಮೇಲೆ ಪಿಯುಸಿ ಪ್ರವೇಶಕ್ಕೂ ಕೆಲ ನಿಯಮ ರೂಪಿಸಲು ಮುಂದಾಗಿದ್ದ ಸರ್ಕಾರದ ವಿರುದ್ಧ ವಿಜಯ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿ ವಾಚಕರ ವಿಜಯ ಅಂಕಣದಲ್ಲಿ ನನ್ನ ಪತ್ರ ಪ್ರಕಟವಾಗಿತ್ತು, ಅದಾದ ನಂತರ ಶಿಕ್ಷಕರ ದಿನಾಚರಣೆ ಅಂಗವಾಗಿ, ಮತ್ತೆ ಭೈರಪ್ಪನವರ ಕವಲು ಕುರಿತಾಗಿ ಚರ್ಚೆ ಅಂಕಣದಲ್ಲಿ ಪ್ರಕಟವಾದವು... ಪ್ರತಿ ಬಾರಿ ಬರೆದ ಲೇಖನಗಳು ಪ್ರಕಟವಾಗೊವರೆಗೂ ಕಾಯುವಷ್ಟು ಸಹನೆ ಇಲ್ಲದಿದ್ದರಿಂದ, ಬರೆಯೋದನ್ನ ನಿಲ್ಲ್ಲಿಸಿದ್ದೆ, ಹೀಗೆ ಒಂದು ದಿನ ಶ್ರೀವತ್ಸ ಜೋಷಿಯವರು ಫೇಸ್ ಬುಕ್ಕಿನಲ್ಲಿ ಸಿಕ್ಕಾಗ, ಬ್ಲಾಗ್ ಶುರು ಮಾಡುವಂತೆ ಸೂಚಿಸಿದರು, ಮೊದಲಿಗೆ ಆ ಬಗ್ಗೆ ಅಷ್ಟೇನೂ ಆಸಕ್ತಿ ತೋರದ ನಾನು ಆಮೇಲೆ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಪ್ರಯತ್ನಿಸಿದೆ...ಮೊದಲಿಗೆ ಇಂಗ್ಲಿಷ್ನಲ್ಲಿ ಒಂದೆರಡು ಲೇಖನಗಳನ್ನು ಬರೆದೆ, ಆಮೇಲೆ ಯಾರೋ ಸ್ನೇಹಿತರು ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದರು, ನಂತರ ಕನ್ನಡದಲ್ಲಿ ಬರೆದ ಲೇಖನಗಳನ್ನು ಮೆಚ್ಚಿ ಪ್ರಕಾಶ್ ಹೆಗ್ಡೆ ಯವರು buzz ಮಾಡಿ, ಅವರ ಅನೇಕ ಫಾಲ್ಲೋವರ್ಸ್ಗಳಿಗೆ ನನ್ನ ಬ್ಲಾಗ್ ಪರಿಚಯಿಸಿ ಕೊಟ್ಟರು, ತದ ನಂತರ ಸಂಪಾದಕೀಯ ಬ್ಲಾಗ್ನಲ್ಲಿ ನಿರಂತರ ಚರ್ಚೆಯ ಕೇಂದ್ರ ಬಿಂದುವಾಗಿ ನಾನು ಹಾಕುತ್ತಿದ್ದ ಕಾಮೆಂಟ್ಸ್ ಗಳನ್ನೂ ನೋಡಿ ನನ್ನ ಬ್ಲಾಗ್ ಗೆ ಬಂದ ಸ್ನೇಹಿತರು ಅನೇಕ, ಹೀಗೆ ನನ್ನ ಬ್ಲಾಗ್ ಬೆಳೆದ ರೀತಿ.

ಪತ್ರಕರ್ತೆ ಯಾಗಬೇಕು ಎಂದು ಕನಸು ಕಂಡು ಕಡೆಗೆ ಇಂಜಿನಿಯರಿಂಗ್ ಓದೋ ಹಾಗಾಗಿ, ಕಡೆಗೆ ಈಗ ಎಂಟೆಕ್ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿರುವ ನನಗೆ, ತೇಜಸ್ವಿ, ನೆಚ್ಚಿನ ಲೇಖಕ, ಪತ್ರಕರ್ತೆಯಾಗುವ ಕನಸು ಕಂಡ ನಂಗೆ ಈಗ, ಆ ಕ್ಷೇತ್ರದಲ್ಲಾಗುತ್ತಿರುವ ಅನಾಹುತಕಾರಿ ಬೆಳವಣಿಗೆಗಳನ್ನು ಕಂಡು ಬೇಜಾರಾಗಿದೆ, ನಾನು ಹೀಗೆ ನನ್ನ ಹವ್ಯಾಸವಾಗಿ ಲೇಖನಗಳನ್ನು ಬರೆದು ಕೊಂಡು, ಇರ ಬಯಸುತ್ತೇನೆ. ಬರೆದದೆಲ್ಲವು ಓದಲು ಸಮಯವಿಲ್ಲ ನಿಜ ಆದರೆ, ನಿಜವಾಗಿಯೂ ಒಂದು ಚೆಂದದ ಲೇಖನ ಬರೆದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅನೇಕ ಓದುಗರಿಗೆ ನಾನು ಚಿರ ಋಣಿ . ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಮೆಚ್ಹುಗೆ ನನಗೆ ಸದಾ ಸ್ಫೂರ್ತಿ :)

ನನ್ನ ಬಗ್ಗೆ ಹೆಚ್ಚಿನದೇನೂ ಹೇಳುವಂಥದಿಲ್ಲ, ಸಾಮಾನ್ಯ ಹುಡುಗಿಯಂತೆ, ಕಂಗಳ ತುಂಬ ಕನಸು ಕಟ್ಟಿಕೊಂಡು, ಏನಾದರೂ ವಿಶಿಷ್ಟ ಅಭಿರುಚಿಯಿಂದ ದಿನವು ಹೊಸದನ್ನು ಕಲಿಯುವ ತವಕದಲ್ಲಿರುವ ನನಗೆ ನನ್ನ ಪಾಲಕರೇ ಮೊದಲ ಶಕ್ತಿ, ನನ್ನ ಪ್ರತಿ ಬೆಳವಣಿಗೆಯನ್ನು ಮೊದಲ ಯಶಸ್ಸು ಎನ್ನುವಂತೆ ಪ್ರೋತ್ಸಾಹಿಸುವ, ಪ್ರತಿ ಸೋಲಿನಲ್ಲು ನನ್ನ ಧೈರ್ಯ, ಆತ್ಮ ಸ್ಥೈರ್ಯ, ಹಾಗೂ ನನ್ನ ಪ್ರೇರಣೆ ಆಗಿರುವ ನನ್ನ ಅಪ್ಪ-ಅಮ್ಮ ನನ್ನ ಪಾಲಿಗೆ ಜೀವಂತ ದೈವಿ ಸ್ವರೂಪರು. ಅವರ ಮಗಳಾಗಿ ಹುಟ್ಟಿರುವುದು ನನ್ನ ಅದೃಷ್ಟ :)

ಕನ್ನಡ ಬ್ಲಾಗ್ ನ ಎಲ್ಲ ಕನ್ನಡ ಪ್ರೇಮಿಗಳಿಗೆ, ಮತ್ತು ಬ್ಲಾಗಿಗರಿಗೆ ಒಂದು ಉತ್ತಮ ವೇದಿಕೆಯಾಗಿದ್ದು, ನಟರಾಜು ಅವರು ಎಲೆ ಮರೆ ಕಾಯಿಗಳನ್ನು ಪರಿಚಯಿಸುವ ನಿರಂತರ ಪ್ರಯತ್ನದಲ್ಲಿರುವುದು ಶ್ಲಾಘನೀಯ. ನಿಮ್ಮ ಪ್ರಯತ್ನ ಹೀಗೆ ಜಾರಿಯಲ್ಲಿರಲಿ ಸರ್.
ಪ್ರೀತಿಯಿಂದ,
ಅಶ್ವಿನಿ ದಾಸರೆ"

ಎಂದು ಮಾತು ಮುಗಿಸಿದ ಅಶ್ವಿನಿಯವರ ಮಾತುಗಳು ನಿಮಗೆ ಇಷ್ಟವಾಯಿತೆಂದು ನಾನು ಭಾವಿಸುತ್ತೇನೆ.. ಅವರ ಬರಹಗಳಿರುವ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ..ನಿಮಗೆ ಅವರ ಬ್ಲಾಗ್ ಇಷ್ಟವಾಗಬಹುದು. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ ಫ್ರೆಂಡ್ಸ್..
http://antarmukhi-ashu.blogspot.in/

ಅಶ್ವಿನಿಯವರ ಬರಹಗಳ ಕುರಿತು ಅವರ ಬ್ಲಾಗಿನಲ್ಲಿ ಕಂಡು ಬಂದ ಓದುಗರ ಒಂದೆರಡು ಪ್ರತಿಕ್ರಿಯೆಗಳು ಇಗೋ ನಿಮಗಾಗಿ..

ಬರಿ, ಆದರೆ ಬರವಣಿಗೆ ಬಯಸುವ ಏಕಾಗ್ರತೆಯನ್ನು ಸಾಧಿಸಲು ಯತ್ನಿಸು. ಏನು ಬರೆಯಬೇಕೆಂಬುದನ್ನು ಕೊಂಚ ಧ್ಯಾನಿಸಿ ಮನಸಿನಲ್ಲೇ ಅದಕ್ಕೊಂದು ರೂಪ ಕೊಟ್ಟು ಅಕ್ಷರಗಳಿಗಿಳಿಸಿದಾಗ ಅದಕ್ಕೊಂದು ಬೇರೆಯದೇ ಆದ ಶಕ್ತಿ ಇರುತ್ತದೆ.-ಅಶೋಕ್ ಶೆಟ್ಟರ್

ನಿಮ್ಮ ಉಳಿದ ಬರಹಗಳನ್ನೂ ಓದುವ ಆಸೆ,
ಆದರೆ ಸಮಯ ಓಡುತ್ತಿದೆ, ಓದಗೊಡದಂತೆ
ನಾನು ನಾನಾಗೇ ಓಡುವಾಗ ಓದೀಯೇನು... -ರಘುನಂದನ ಕೆ. ಹೆಗಡೆ

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು

2 ಕಾಮೆಂಟ್‌ಗಳು: