ಗುರುವಾರ, ಆಗಸ್ಟ್ 16, 2012


ಎಲೆ ಮರೆ ಕಾಯಿ 

ನಿದ್ದೆ ಬಾರದೆ ಅಳುವ 
ತೊಟ್ಟಿಲಿನ ಕೂಸನ್ನು 
ಗಂಟೆಗಟ್ಟಲೆ
ತೂಗಿದ್ದೇ, ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!

ಎಲೆ ಮರೆ ಕಾಯಿಗಳ ಜೊತೆ ಮಾತುಕತೆ ಅಂಕಣಕ್ಕೆ ಆಗಾಗ್ಗೆ ಹಿರಿಯರನ್ನು ಕರೆ ತರದಿದ್ದರೆ ಏನೋ ಅಪೂರ್ಣ ಭಾವನೆ ನನ್ನಲ್ಲಿ ಮೂಡುತ್ತದೆ. ಅದಕ್ಕೆ ಸರಳತೆಯಿಂದ ಕೂಡಿದ ಮೇಲಿನ ತರಹದ ಚಂದದ ಸಾಲುಗಳನ್ನು ಬರೆಯುತ್ತಾ ನಮಗೆ ಹೆಚ್ಚು ಹೆಚ್ಚು ಆಪ್ತವಾಗಿಬಿಡುವ ನಮ್ಮ ನಡುವಿನ ಹಿರಿಯರೊಬ್ಬರನು ಈ ಬಾರಿ ಕರೆತಂದಿರುವೆ. ಮೊದಲೊಮ್ಮೆ ಹೇಳಿದ ಹಾಗೆ ವೈದ್ಯರು, ವಕೀಲರು, ಪತ್ರಕರ್ತರು ಮತ್ತು ಪೋಲೀಸರು ನಿತ್ಯ ವಿಧ ವಿಧದ ಜನಗಳನು ಭೇಟಿಯಾಗುತ್ತಾರೆ. ಅವರಲ್ಲಿ ಆ ಭೇಟಿಗಳೆಲ್ಲಾ ಅನುಭವಗಳಾಗಿಬಿಡುತ್ತವೆ. ಅಂತಹ ಅನುಭವಗಳಿಗೆ ಅಕ್ಷರದ ರೂಪ ಕೊಟ್ಟರೆ ಒಂದು ಚಂದದ ಬರಹಗಳ ಸರಮಾಲೆ ರೆಡಿಯಾಗುತ್ತದೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಅಗಾಧವಾದ ಜೀವಾನುಭವವನ್ನು ಹೊಂದಿ ಅವರ ಜೀವಾನುಭವಗಳನ್ನು ಪುಟ್ಟ ಪುಟ್ಟ ತುಣುಕುಗಳ ರೂಪದಲ್ಲಿ ನಮ್ಮೆದುರು ಹರಡಿಟ್ಟಿರುವ ಹಿರಿಯರ ಬ್ಲಾಗಿನ ಹೆಸರು ಕೊಳಲು. ಕೊಳಲಿಗೊಂದಿಗೆ ಹಿರಿಯರೇ ಕೊಟ್ಟಿರುವ ಉಪಶೀರ್ಷಿಕೆ ಕೊಳಲು ಕನ್ನಡದ ಕೊರಳು.. ಅಂದ ಹಾಗೆ ಈ ಹಿರಿಯರನು ಎಲೆ ಮರೆ ಕಾಯಿ ಎನ್ನಲಾಗದು.

ನನ್ನ ಎದೆಯಾಳದಲ್ಲಿ,
ಚುಚ್ಚುತ್ತಿರುವ ಮುಳ್ಳುಗಳೆಲ್ಲ
ಹೂವಾಗಿ ಅರಳಿ,
ಸುಗಂಧ  ಬೀರಲಿ ಸುತ್ತ!
ಸಹ್ಯವಾಗಲಿ ಬದುಕು,
ನನಗೂ, ಸರ್ವರಿಗೂ.

ತಣ್ಣಗೆ ಒಳಗೇ ಕೊರೆಯುವ  
ನೋವಿನ ಮಂಜು ಕರಗಿ,
ನೀರಾಗಿ, ಆವಿಯಾಗಿ
ಕಾಣದಂತಾಗಸಕ್ಕೇರಿ,
ಮಳೆ ಸುರಿಯಲಿ,
ತಂಪೆರೆಯಲಿ ----!

ಇಂತಹ ಚಂದದ ಭಾವನೆಗಳು ಎಲ್ಲರಲೂ ಮೂಡುವುದಿಲ್ಲ. ಬದುಕಿನ ವಿಸ್ತಾರವನು ತಮ್ಮದೇ ಬದುಕಿನಲೂ, ಇತರರ ಬದುಕಿನಲೂ, ಬರಹದಲೂ ನೋಡಿದಾಗ ನಮ್ಮೊಳಗೆ ಒಬ್ಬ ಜೀವನಮುಖಿ ಸುಮ್ಮನೆ ಹುಟ್ಟಿ ಬಿಡುತ್ತಾನೆ. ಹೆಚ್ಚು ಸಲ ಆ ಜೀವನಮುಖಿಯ ಮಾತುಗಳು ಕೇಳುಗರಿಗೂ, ಬರಹಗಳು ಓದುಗರಿಗೂ ತುಂಬಾ ಹತ್ತಿರವಾಗಿಬಿಡುತ್ತವೆ. ಅಂತಹ ಜೀವನಮುಖಿ ಬರಹಗಳು ಈ ಹಿರಿಯರದು ಎನ್ನಬಹುದು. ಒಂದೆಡೆ ವೈದ್ಯರಾಗಿ ವೃತ್ತಿಯಲ್ಲಿ ನಿರತರಾಗಿದ್ದು, ಮತ್ತೊಂದೆಡೆ ಸಮಯ ಸಿಕ್ಕಾಗಲೆಲ್ಲಾ ಪುಸ್ತಕಗಳ ಮೇಲೂ ಬ್ಲಾಗುಗಳ ಮೇಲೂ ಕಣ್ಣಾಡಿಸುವ ಇವರು ಒಬ್ಬ ಅಧ್ಬುತ ಓದುಗರು. ಇತರರ ಬರಹಗಳನ್ನು ಅದರಲ್ಲೂ ಕಿರಿಯರ ಬರಹಗಳನ್ನು ಎಳೆ ನಿಂಬೆ ಕಾಯಿಗಳ ಬರಹಗಳೆಂದು ಹಿರಿಯರೆನಿಸಿಕೊಂಡವರು ಓದಲು ಹಿಂದೆ ಮುಂದೆ ನೋಡುವ ಕಾಲ ಇದು. ಅಚ್ಚರಿಯೆಂದರೆ ಕಿರಿಯರ ಬದುಕಿನ ಮೇಲೂ ಬರಹದ ಮೇಲೂ ಕಣ್ಣಾಡಿಸದಿದ್ದರೆ ಹಿರಿಯರು ಏನನ್ನೋ ಸುಮ್ಮನೆ ಕಳೆದುಕೊಳ್ಳುತ್ತಾರೆ ಎನ್ನಬಹುದು. ಬೇರೆ ಹಿರಿಯರಿಗೆ ಹೋಲಿಸಿದರೆ ಈ ಹಿರಿಯರು ವಾರದಲ್ಲಿ ಕಡಿಮೆ ಎಂದರೂ ಎರಡು ಡಜನ್ ಬ್ಲಾಗುಗಳಿಗೆ ಭೇಟಿ ನೀಡುತ್ತಾರೆ. ಬ್ಲಾಗುಗಳು ತಮ್ಮ ಸಮ ವಯಸ್ಕರದೇ ಇರಬಹುದು ಕಿರಿಯ ಬರಹಗಾರರದೇ ಇರಬಹುದು ಸದ್ದಿಲ್ಲದೆ ಓದಿ ಬಿಟ್ಟಿರುತ್ತಾರೆ. ಅದಕ್ಕೆ ಸಾಕ್ಷಿ ಅವರ ಬ್ಲಾಗಿನಲಿ ಅವರು ಭೇಟಿಕೊಟ್ಟ ಬ್ಲಾಗುಗಳ ಪಟ್ಟಿ.

"ನಾನು ಬ್ಲಾಗ್ ಶುರು ಮಾಡಿದ್ದು 2010 february ಯಲ್ಲಿ. ನನಗೆ ಬ್ಲಾಗ್ ಲೋಕದ ಪರಿಚಯವೇ ಇರಲಿಲ್ಲ.. ನನ್ನ ಆತ್ಮೀಯ ಸ್ನೇಹಿತ ನಾರಾಯಣ ಭಟ್ಟರ ಸ್ನೇಹ ಪೂರ್ವಕ ಒತ್ತಾಸೆ ಇಲ್ಲದಿದ್ದರೆ ನಾನು ಬ್ಲಾಗ್ ಶುರು ಮಾಡುತ್ತಿರಲಿಲ್ಲ. ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಬ್ಲಾಗ್ ಶುರು ಮಾಡಿಕೊಟ್ಟವರು ನನ್ನ ಪತ್ನಿ ಪದ್ಮ ಮತ್ತು ಮಗಳು ಪಲ್ಲವಿ. ನನಗೆ ಮೊದ ಮೊದಲು ಟೈಪ್ ಮಾಡಲೂ ಬರುತ್ತಿರಲಿಲ್ಲ. ತನ್ನೆಲ್ಲಾ ಮನೆ ಕೆಲಸದ ನಡುವೆ ನನ್ನ ಕಿರಿಕಿರಿಯನ್ನೂ ಸಹಿಸಿಕೊಂಡು ಸುಮಾರು ಬರಹಗಳನ್ನು ಬ್ಲಾಗಿಸಿದ ನನ್ನ ಅರ್ಧಾಂಗಿಗೆ ನನ್ನ ನಮನಗಳು. ಇನ್ನು, ಕಾಣದ ನನ್ನಲ್ಲಿ ಇಷ್ಟೊಂದು ಸ್ನೇಹ, ಪ್ರೀತಿ ಅಭಿಮಾನಗಳನ್ನು ತೋರಿಸಿ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ ಎಲ್ಲಾ ಸಹಬ್ಲಾಗಿಗರಿಗೂ ಅನಂತ ವಂದನೆಗಳು."

ಎಂದು ತಮ್ಮ ಬ್ಲಾಗಿನ 75 ನೇ ಪ್ರಕಟಣೆಯಡಿ ಈ ಹಿರಿಯರು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಇವರ ಬ್ಲಾಗಿನಲಿ ಕವಿತೆ, ಲಘು ಲೇಖನ, ಹಾಸ್ಯ ಲೇಖನಗಳಿಂದ ಹಿಡಿದು ತಾವು ಓದಿದ ಪುಸ್ತಕಗಳ ಮೇಲಿನ ಪ್ರೀತಿಯ ಮಾತುಗಳು ಸಹ ಇವೆ. ಅಂದ ಹಾಗೆ ಇವತ್ತಿನ ಎಲೆ ಮರೆ ಕಾಯಿಗಳ ಮಾತುಕತೆಯ ವಿಶೇಷ ಅತಿಥಿ ಯಾರು ಎಂದು ನಿಮಗೆ ತಿಳಿದಿದೆ ಎಂದುಕೊಳ್ಳುವೆ. ತಿಳಿಯದಿದ್ದರೆ ಖಂಡಿತಾ ನಿಮಗೆ ಕುತೂಹಲ ಇದ್ದೇ ಇರುತ್ತದೆ. ಕೊಳಲು ಬ್ಲಾಗಿನ ಒಡೆಯರಾದ ಡಾ. ಡಿ. ಟಿ. ಕೃಷ್ಣ ಮೂರ್ತಿ ಸರ್ ಈ ದಿನದ ವಿಶೇಷ ಅತಿಥಿ. ಡಾ. ಡಿಟಿಕೆ ಅವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಡಾ. ಡಿ. ಟಿ. ಕೃಷ್ಣ ಮೂರ್ತಿ 

"ಹುಟ್ಟಿದ್ದು ದಾವಣಗೆರೆಯಲ್ಲಿ. 1953 ರಲ್ಲಿ. ಸಧ್ಯಕ್ಕೆ, ಕರ್ನಾಟಕದ ಪ್ರಸಿದ್ಧ ತಾಣವಾದ ಜೋಗ ಜಲಪಾದದಿಂದ ಐದು ಕಿ.ಮಿ.ದೂರದ ಕಾರ್ಗಲ್ ಎಂಬ ಪುಟ್ಟ ಊರಿನಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಆಸ್ಪತ್ರೆಯಲ್ಲಿ ಏಳು ವರ್ಷ ಗಳಿಂದ ಉಪ ವೈದ್ಯಕೀಯ ಅಧೀಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಐದು ಕಿ.ಮಿ.ದೂರದಲ್ಲಿ ಲಿಂಗನ ಮಕ್ಕಿ ಅಣೆ ಕಟ್ಟಿದೆ. ಸುಮಾರು ಮೂವತ್ತೈದು ವರ್ಷಗಳ ವೃತ್ತಿ ಸಮಾಧಾನ ತಂದಿದೆ. ಮುಂದಿನ ವರ್ಷ ನಿವೃತ್ತಿ. ವೃತ್ತಿ ಜೀವನದ ಹಲವಾರು ಘಟನೆಗಳನ್ನೂ ನನ್ನ ಬ್ಲಾಗ್ 'ಕೊಳಲು'ನಲ್ಲಿ ಹಂಚಿಕೊಂಡಿದ್ದೇನೆ. ಎರಡು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದರಿಂದ ಕನ್ನಡದ ಬಗ್ಗೆ ವಿಶೇಷ ಆಸಕ್ತಿ. ಮೊದಲಿಂದಲೂ ಮಂಕು ತಿಮ್ಮನ ಕಗ್ಗ ಓದುತ್ತಿದ್ದೇನೆ (ಸುಮಾರು ನಲವತ್ತು ವರ್ಷಗಳಿಂದ). ರತ್ನನ ಪದಗಳು ಮತ್ತೊಂದು ಹುಚ್ಚು ಹಿಡಿಸಿದ ಪುಸ್ತಕ.

ಮೊದಲ ಪದ್ಯ ಬರೆದ ಪ್ರಸಂಗ ವಿಶಿಷ್ಟವಾಗಿದೆ. ಸುಮಾರು ಇಪ್ಪತ್ತೆರಡು ವರ್ಷಗಳ ಕೆಳಗೆ ಸುಮಾರು ಹತ್ತು ಗಂಟೆ ಸಮಯ.ಆಸ್ಪತ್ರೆಗೆ ಹೊರಡುವ ಗಡಿಬಿಡಿಯಲ್ಲಿದ್ದೆ. ಪಕ್ಕದ ಮನೆಯ ಏಳನೇ ತರಗತಿಯ ಹುಡುಗಿಯೊಬ್ಬಳು, ಕುಟುಂಬ ಯೋಜನೆಯ ಬಗ್ಗೆ ಪದ್ಯವನ್ನು ಬರೆದುಕೊಂಡು ಬರಲು ಶಾಲೆಯಲ್ಲಿ ಹೇಳಿದ್ದಾರೆಂದೂ, ಬರೆದುಕೊಂಡು ಹೋಗದಿದ್ದರೆ ಶಾಲೆಯಲ್ಲಿ ಹೊಡಿಯುತ್ತಾರೆಂದೂ, ಅಳುತ್ತಾ ಹೇಳಿದಳು. ಸರಿ, ಅದೇನು ಸ್ಫೂರ್ತಿ ಬಂತೋ! ತಕ್ಷಣವೇ ಮೂರು ಚರಣಗಳ ಪದ್ಯವನ್ನು ಬರೆದುಕೊಟ್ಟೆ! ನಾನೂ ಕವನಗಳನ್ನು ಬರೆಯಬಲ್ಲೆ ಎಂದು ಆಗ ಅರಿವಾಯಿತು. ಅಲ್ಲಿಂದ ಸುಮಾರು ಕವನಗಳನ್ನು ಬರೆದಿದ್ದೇನೆ. ಹಲವಾರು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮೊದಲಿಂದಲೂ ಚಿತ್ರಕಲೆ, ನಾಟಕ, ಹಾಡುಗಾರಿಕೆ ಮತ್ತು ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ವಿಶೇಷ ಆಸಕ್ತಿ. ನಿಸ್ಸಾರ್ ಅಹ್ಮದ್, ಶಿವರುದ್ರಪ್ಪ, ಕುವೆಂಪು, ಲಕ್ಸ್ಮಿನಾರಾಯಣ ಭಟ್ಟ, ಕಣವಿ, ಕಂಬಾರ, ಸಿದ್ದಯ್ಯ ಪುರಾಣಿಕರ ಕವನಗಳು ಇಷ್ಟ. ವಸುಧೇಂದ್ರರ ಬರವಣಿಗೆ ಇಷ್ಟ. ಕನ್ನಡದ ಹಲವಾರು ಬ್ಲಾಗುಗಳು ಚೆನ್ನಾಗಿವೆ. ನಾವು ಹಾಕಿದ ಬ್ಲಾಗ್ ಗಿಡಗಳು ಒಣಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕೆಲಸ. ಬ್ಲಾಗ್ ಲೋಕ ಹಲವಾರು ಸ್ನೇಹಿತರನ್ನು ಕೊಟ್ಟಿದೆ. ಅದಕ್ಕೆ ನಾನು ಚಿರ ಋಣಿ. ಆಧ್ಯಾತ್ಮಿಕತೆಯ ಬಗ್ಗೆಯೂ ಆಸಕ್ತಿ. DEEPAK CHOPRA,DR.WYENE DYER,EKHARDT TOLLE,ನೆಚ್ಚಿನ ಲೇಖಕರು. ಇಷ್ಟು ಮಾಹಿತಿ ಸಾಕೆಂದು ಕೊಂಡಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು. ನಮಸ್ಕಾರ."

ಎಂದು ಮಾತು ಮುಗಿಸಿದ ಡಾ.ಕೃಷ್ಣ ಮೂರ್ತಿ ಸರ್ ಅವರ ಮಾತುಗಳು ನಿಮಗೆ ಇಷ್ಟವಾಯಿತು ಅಲ್ಲವೇ ಸಹೃದಯಿಗಳೇ.. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಒಮ್ಮೆ ಭೇಟಿ ಕೊಡಿ. ನಿಮಗೆ ಖಂಡಿತಾ ಅವರ ಬ್ಲಾಗ್ ಇಷ್ಟವಾಗುವುದು..
http://dtkmurthy.blogspot.in/

ಡಾ.ಕೃಷ್ಣ ಮೂರ್ತಿ ಸರ್ ಅವರ ಹಾಸ್ಯವೊಂದರ ತುಣುಕು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ  ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ  ಸೇರಬೇಕು!
******

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

6 ಕಾಮೆಂಟ್‌ಗಳು:

  1. ನಟರಾಜು ಅವರೇ,ಇವತ್ತು ನಮ್ಮ ನೆಚ್ಚಿನ ಡಾಕ್ಟರ್ ಸರ್ ಬಗ್ಗೆ ಬರೆದಿರುವುದು ನಿಜಕ್ಕೂ ಸಂತೋಷದ ವಿಷಯ....ಅವರ ಜೊತೆ ಕೆಲ ಸಮಯ ಕಳೆದರೆ ಸಾಕು,ಅವರಿಂದ ತುಂಬ ವಿಷಯ ತಿಳಿಯಬಹುದು..ಒಂದು ರೀತಿಯ ಜ್ಞಾನ ಭಂಡಾರ ಅವರು....ಮತ್ತು ಅವರ ಉತ್ಸಾಹಕ್ಕೆ Hats off...

    ಪ್ರತ್ಯುತ್ತರಅಳಿಸಿ
  2. ನಲ್ಮೆಯ ಮಿತ್ರ ನಟರಾಜು;ನಿಮ್ಮ ಪ್ರೀತಿಪೂರಕ ಮತ್ತು ಅಭಿಮಾನ ಪೂರಕ ಲೇಖನಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು.ಬ್ಲಾಗಿನ ಬಗ್ಗೆಯೇ,ಬ್ಲಾಗಿನಲ್ಲಿ ಎಷ್ಟು ಚೆಂದದ ಲೇಖನಗಳನ್ನು ಬರೆಯಬಹುದು ಎನ್ನುವುದಕ್ಕೆ ನಿಮ್ಮ ಬ್ಲಾಗೊಂದು ಉದಾಹರಣೆ.ನಿಮ್ಮೆಲ್ಲರ ಸ್ನೇಹಕ್ಕೆ,ಪ್ರೀತಿಗೆ,ಪ್ರೋತ್ಸಾಹಕ್ಕೆ ನಾನು ಚಿರ ಋಣಿ.ನಮ್ಮೆಲ್ಲರ ಬ್ಲಾಗ್ ಗೆಳೆತನ ಮತ್ತಷ್ಟು ಗಟ್ಟಿಯಾಗಲಿ.ಎಲ್ಲರೂ ನೀರೆರೆದು ಬ್ಲಾಗ್ ಗಿಡಗಳನ್ನು ಪೋಷಿಸೋಣ.ಎಲ್ಲರ ಬ್ಲಾಗ್ ಗಳೂ ಸದಾ ಹಸಿರಾಗಿ ನಳ ನಳಿಸುತ್ತಿರಲಿ.ಎಲ್ಲರನ್ನೂ ನಲಿಸುತ್ತಿರಲಿ.ನಮಸ್ಕಾರ.

    ಪ್ರತ್ಯುತ್ತರಅಳಿಸಿ
  3. ತುಂಬಾ ತುಂಬಾ ಖುಷಿಯಾದ ವಿಚಾರ ... ಡಾಕ್ಟರ್ ಸರ್.. ನಿಮ್ಮಲ್ಲಿನ ಹಾಸ್ಯಪ್ರಜ್ಞೆ ತುಂಬಾ ವಿಶೇಷವಾದದ್ದು , ಅದು ನಿಮ್ಮ ಬರಹಗಳಲ್ಲಿ ಗೋಚರಿಸುತ್ತದೆ.. ಕೆಲವೊಮ್ಮೆ ವಿಚಾರಗಳು ಗೊಂದಲ ಅನ್ನಿಸಿದರೂ ಸಹ ಅದಕ್ಕೆ ಸೂಕ್ತವಾದ ಮಾಹಿತಿ ಹುಡುಕಿ ಅರ್ಥ ಮಾಡಿಕೊಳ್ಳುತ್ತೇವೆ .. ಮತ್ತು ಈ ಬ್ಲಾಗ್ ಜಗತ್ತಿನಿಂದಾಗಿ ಲೇಖಕ ಮತ್ತು ಓದುಗರ ನೇರ ಸಂಪರ್ಕದಿಂದ ವಿಚಾರದಲ್ಲಿ ಹೆಚ್ಚಿನ ಸ್ಪಷ್ಟತೆಗಳನ್ನು ಗುರುತಿಸುವ ಅವಕಾಶಗಳು ಹೆಚ್ಚುತ್ತ ಹೆಚ್ಚುತ್ತ , ಸಾಹಿತ್ಯ ಲೋಕದ ಬೆಳವಣಿಗೆಗೆ ಅದು ತುಂಬಾ ಉಪಯುಕ್ತವಾಗುತ್ತಿದೆ..
    ನಿಮ್ಮ ಪರಿಚಯ , ನಮ್ಮ ಗೆಳೆಯರ ಎಲೆಮರೆಕಾಯಿಯಲ್ಲಿ ಕಂಡು ಬಹಳಾ ಇಷ್ಟವಾಯಿತು ..
    ಹಾಗೂ ಇದಕ್ಕೆ ನಟರಾಜು ಅವರಿಗೆ ಹೃತ್ಪೂರ್ವಕ ವಂದನೆಗಳು ..
    ಮತ್ತು ಆಗಾಗ ಶಿವಮೊಗ್ಗ , ಸಾಗರ ಹೊಗಿಬರುತ್ತಿರುತ್ತೇವೆ .. ನಿಮ್ಮೂರಿಗೂ ಬಂದು ನಿಮ್ಮನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇವೆ .. ಮತ್ತು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇವೆ .. :)
    " ಓಂ ಶ್ರೀ ಗಣೇಶಾಯ ನಮಃ "

    ಪ್ರತ್ಯುತ್ತರಅಳಿಸಿ
  4. ಮರಗಳ ಎಲೆಯ ಹಿಂದೆ ನಿಂತು...ಪ್ರತಿಯೊಂದು ಬ್ಲಾಗ್ ಗಳನ್ನೂ ವಿವರಿಸುತ್ತ, ಪರಿಚಯಿಸುತ್ತಾ, ಎಲ್ಲರಿಗೂ ತಿಳಿಯುವಂತೆ ಆ ಬ್ಲಾಗಿನ ಅಂತರಾತ್ಮವನ್ನು ವಿವರಿಸುವುದು ಸುಲಭದ ಮಾತಲ್ಲ...ಪ್ರತಿಯೊಂದು ಬ್ಲಾಗ್ ಕೂಡ ವಿಶೇಷವಿರುತ್ತದೆ...ಅದನ್ನು ಅರಿತು, ತಿಳಿದು ಪರಿಚಯಿಸುತ್ತಿರುವ ನಟರಾಜು ಸರ್ ಅವರ ಪ್ರಯತ್ನ ಬಲು ದೊಡ್ಡದು...ನಾನು ನನ್ನದು ಎನ್ನುವ ಈ ಲೋಕದಲ್ಲಿ ನಾವು ನಮ್ಮವರು ಎನ್ನುವ ಭಾವ ಬಲು ದೊಡ್ಡದು..ಆ ದೊಡ್ಡ ಮನಸಿನ ಒಡೆಯ ನಟರಾಜು ಸರ್ ಗೆ ಪ್ರೀತಿಯ ನಮಸ್ಕಾರಗಳು...

    ವೈದ್ಯರು ಎಂದರೆ ಬರಿ ನಾಡಿ ನೋಡುವುದು, ರಕ್ತದ ಒತ್ತಡ ನೋಡುವುದು, ಹೃದಯ ಪರೀಕ್ಷೆ ಮಾಡುವುದು...ಇದು ಸರ್ವೇ ಸಾಮಾನ್ಯ...
    .ನಾಡಿ ಮಿಡಿತವನ್ನು ಮಿದಿಯುತ್ತಾರೆ..ಭಾವನೆಗಳನ್ನು ರಕ್ತದಲ್ಲಿ ಸೇರಿಸುತ್ತಾರೆ..ಹೃದಯ ಒಳ್ಳೆಯ ಆಶಯಗಳಿಂದ ಮಿಡಿಯುವಂತೆ ನೋಡಿಕೊಳ್ಳುತ್ತಾರೆ..ತಮ್ಮ ಅನುಭವಾಮೃತಗಳಿಂದ... ನಮ್ಮ ಡಾಕ್ಟ್ರು...ಅವರ ಬ್ಲಾಗಿನ ಹೆಸರು ಕೊಳಲು...ಕೊಳಲು ಸಂಗೀತದ ವಾದ್ಯಗಳಲ್ಲೇ ಅತಿ ಸರಳ..ಆದ್ರೆ ಸುಮಧುರ ವಾದ್ಯ...ನಮ್ಮ ಡಾಕ್ಟ್ರ ಲೇಖನಗಳು ಹಾಗೆಯೇ...ಸರಳ..ಆದ್ರೆ ಅರ್ಥಗರ್ಭಿತ..ಪ್ರತಿಯೊಂದು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನುಭವಗಳು...ಡಾಕ್ಟ್ರೆ ನಿಮ್ಮ ಲೇಖನಗಳಿಗೆ ನನ್ನ ನಮಸ್ಕಾರಗಳು...

    ಪ್ರತ್ಯುತ್ತರಅಳಿಸಿ
  5. ಎಲೆ ಮರೆ ಕಾಯಿ ಅಂಕಣಕ್ಕೆ ಈಗ ಕಳೆ ಕಟ್ಟಿತು.

    ಬ್ಲಾಗ್ ಲೋಕದ ಚಕ್ರವರ್ತಿ ಕೊಳಲು ಬ್ಲಾಗ್ ಎಂದು ನಾನು ಸದಾ ಹೇಳುತ್ತಿರುತ್ತೇನೆ.

    ಪುಟ್ಟ ಪುತ್ತ ಬರಹಗಳು ಮತ್ತು ಮನಸ್ಸಿಗೆ ತಟ್ಟುವ ಕವನಗಳು ಡಾ|| ಡಿಟಿಕೆಯವರ ಹೆಗ್ಗಳಿಕೆ.

    ವೈದ್ಯಕೀಯ, ಆದ್ಯಾತ್ಮಿಕ, ಮನೋ ವಿಕಸನ, ಸಾಹಿತ್ಯ ಪುನರಾವಲೋಕನ, ಕಿವಿ ಮಾತು ಹೀಗೆ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ಪುಟ್ಟ ಬರಹಗಳಲ್ಲೇ ಬೃಹದ್ ಅರ್ಥವ್ಯಾಪ್ತಿಯನ್ನು ಕಟ್ಟಿಕೊಡುವುದು ಅವರ ವೈಶಿಷ್ಟ್ಯ.

    ಬಿದ್ದು ಬಿದ್ದು ನಗಬಲ್ಲ ಹಾಸ್ಯವನ್ನು ಹೇಗೆ ಬರೆದುಕೊಡ ಬಲ್ಲರೋ ಹಾಗೇಯೆ ಅವರು ನಮಗಾಗಿ ಅತ್ಯಂತ ಆಳವಾದ ವಿಚಾರಗಳನ್ನು ಮನಮುಟ್ಟುವಂತೆ ಸರಳ ವಾಗಿ ಬರೆದುಕೊಟ್ಟಿದ್ದಾರೆ.

    ಧ್ಯಾನವನ್ನು ಹೇಗೆ, ರೂಢಿಸಿಕೊಳ್ಳಬೇಕು, ಮನಸ್ಸನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಳ್ಳ ಬೇಕು ಎನ್ನುವುದು ಅವರ ಬರಹಗಳಿಂದ ನಾವು ಸುಲಭವಾಗಿ ಕಲಿಯಬಹುದು.

    ಮಿತ್ರರನ್ನು ಹುರುದುಂಬಿಸುವ, ಬ್ಲಾಗ್ ಬರಹಗಳನ್ನು ಪ್ರೋತ್ಸಾಹಿಸುವ ಮತ್ತು ಅಮಿತ ಪುಸ್ತಕ ಪ್ರೇಮಿಯಾಗಿರುವ ಕೃಷ್ಣಮೂರ್ತಿಗಳು ನಿಜವಾದ ’ಸುರಸುಂದರಾಂಗ’.

    ಸ್ವತಃ ಉತ್ತಮ ವಾಕ್ಪಟು ಹಾಗೂ ಅಪ್ರತಿಮ ಗಾಯಕರಾಗಿರುವ ಈ ನಮ್ಮ ಕಿ.ಮೂ.ಗಂ ವೈದ್ಯರು ನಮ್ಮ ಜೊತೆಗೆ ಇರುವುದೇ ಸೌಭಾಗ್ಯ.



    ಪ್ರತ್ಯುತ್ತರಅಳಿಸಿ