ಶುಕ್ರವಾರ, ಜನವರಿ 11, 2013


ಎಲೆ ಮರೆ ಕಾಯಿ ೭೦
ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು 
ಕಾಣಬಾರದೆಂದು ಕಣ್ಮುಚ್ಚಬೇಡ
ಭ್ರಮೆಯ ಕವಚ ಸುರಕ್ಷವೆಂದು
ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ
ಕಾಲಲೊದ್ದಾದರೂ ಒಮ್ಮೆ ನೋಡು
ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು

ಪ್ರೀತಿ ಕುರಿತ ಮೇಲಿನ ಚಂದದ ಸಾಲುಗಳು ಅನುಭಾವಶರಧಿ ಎಂಬ ಬ್ಲಾಗಿನಲ್ಲಿ ಕಣ್ಣಿಗೆ ಬಿದ್ದಾಗ "ಅಬ್ಬಾ! ಎಂಥಾ ಸಾಲುಗಳು" ಎನಿಸಿತ್ತು. ಕಾವ್ಯಧಾರೆಯಲ್ಲೇ ನಿತ್ಯ ಮುಳುಗೇಳುವ ಕವಿಯ ಹಾಗೆ ಕಾಣುವ ಈ ಬರಹದ ಸೃಷ್ಟಿಕರ್ತಳ ಪದಪಯೋಗ, ಭಾವನೆಗಳ ಹೊರ ಹರಿವು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಕಾವ್ಯಲೋಕದಲ್ಲಿ ಕಂಡುಕೊಂಡ ಲೋಕ ನಮಗೆ ಖಂಡಿತಾ ಕಾಣಲಾರದು ಎನಿಸಿಬಿಡುತ್ತದೆ. ಕವಿತೆ ಬರೆಯುತ್ತಾ ಬರೆಯುತ್ತಾ ಈ ಲೋಕದಿಂದ ಮತ್ತೊಂದು ಲೋಕಕ್ಕೆ ಹೋಗಿ ಅಲ್ಲಿ ವಿಹರಿಸುತ್ತಾ ಆ ಲೋಕದ ಸೌಂದರ್ಯವನ್ನು ಸವಿಯುತ್ತಾ ನಮಗೂ ಕಾವ್ಯರೂಪದಲ್ಲಿ ಅವರ ಅನುಭವಗಳ ಮಾಲೆಗಳನ್ನು ಕಟ್ಟಿಕೊಡುವ ಇಂತಹ ಕವಿಗಳಿಗೆ ನಮನಗಳು. "ಭಾವಗಳ ಅನುಭವಿಸಿ ..... ಅನುಭವವ ಅನುಭಾವವಾಗಿಸಿದ ಅನುಭಾವಶರಧಿ" ಎಂದು ತಮ್ಮ ಬ್ಲಾಗಿಗೊಂದು ವ್ಯಾಖ್ಯಾನ ನೀಡಿರುವ ಈ ಕವಿಯತ್ರಿಯ ಕವನಗಳು ಸುಂದರ ಅನುಭಾವ ಉಳ್ಳ ಸಾಲುಗಳು.

"ನಾಲ್ಕು ಗೋಡೆಗಳ ನಡುವೆ ಕಡಿಮೆಯೆಂದರೆ ಸುಮಾರು ಹತ್ತು ಹದಿನೈದು ವರ್ಷ ನಾವು ಶೈಕ್ಷಣಿಕವಾಗಿ ಕಲಿಯುವುದು, ಪದವೀಧರರಾಗುವುದು, ಎಂದು ಯಾವುದನ್ನು ಹೇಳುತ್ತೇವೋ ಅದು ಕಲಿಯುವ ಪ್ರಕ್ರಿಯೆಯನ್ನು ಕಲಿಯಲಿಕ್ಕೆ ಮಾತ್ರ ಎಂದು ನನ್ನ ಭಾವನೆಯೂ ಹೌದು, ಅನುಭವವೂ ಹೌದು. ಅದರೊಳಗಿನ ವಸ್ತುವಿಷಯದ ಮುಖಾಂತರಕ್ಕಿಂತ ಹೆಚ್ಚು ಅದನ್ನು ಅಭ್ಯಸಿಸಿದ ರೀತಿ, ಬೇಕಾದ ಶ್ರದ್ಧೆ, ಸಾಧನೆಗೆ ಇರಬೇಕಾದ ಬದ್ಧತೆ, ಪರಿಶ್ರಮದ ಗುಟ್ಟು, ಮತ್ತು ಸೋಲುಗೆಲುವಿನ ರುಚಿ-ಇವುಗಳ ಮೂಲಕ ಮುಂದಿನ ಜೀವನಕ್ಕೆ ಸಹಾಯ ಒದಗುವುದೆಂದು ನನ್ನ ಭಾವನೆ."

ಎನ್ನುವ ಕವಯತ್ರಿಯ ಗದ್ಯ ಪ್ರಯೋಗವೂ ಭಾವನೆಗಳಿಂದ ತುಂಬಿ ತುಳುಕುತ್ತಿವೆ ಅನಿಸಿಬಿಡುತ್ತದೆ. ಅದಕ್ಕೇ ಸಾಕ್ಷಿ ಮೇಲಿನ ಸಾಲುಗಳು.

ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.
ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,
ಬದಲಾಗುವುದು, ಹಿಂತೆಗೆಯುವುದು- ಈಗಾಗದು.

ಎಂದು ಬರೆಯುವ ಕವಯತ್ರಿ ಅನುರಾಧ ಪಿ ಸಾಮಗ ಅವರನ್ನು ಎಲೆ ಮರೆ ಕಾಯಿ ಎನ್ನಲಾಗದು. ಗದ್ಯಕ್ಕಿಂತ ಹೆಚ್ಚು ಪದ್ಯಗಳನ್ನು ಬರೆಯಲು ಇಚ್ಚಿಸುವ ಈ ಕವಯತ್ರಿ ಚಂದದ ಗದ್ಯಗಳನ್ನೂ ಸಹ ಬರೆಯಬಲ್ಲರು. ಇವರ ಗದ್ಯ ಪದ್ಯಗಳ ಪಯಣ ಹೀಗೆಯೇ ಸಾಗುತ್ತಿರಲಿ. ನನ್ನ ಬಗ್ಗೆ ಎಂದು ತಮ್ಮ ಬ್ಲಾಗಿನಲ್ಲಿ "ನಾನೊಬ್ಬ ಮನುಷ್ಯಳು. ಅದಕ್ಕಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ." ಎಂದು ಬರೆದುಕೊಂಡಿರುವ ಇವರು ಮನುಷ್ಯರೇನೋ ಸರಿ ಆದರೆ ಕವಿತೆಗಳ ಬರೆಯುವ ಇವರು ನಮ್ಮ ಪಾಲಿಗೆ ಕವಯತ್ರಿ. ಸಹೃದಯಿಗಳೇ.. ಅನುರಾಧ ಮೇಡಂ ರವರ ಬಗ್ಗೆ ಅವರದೇ ಮಾತುಗಳು ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಇಗೋ ನಿಮಗಾಗಿ..
ಅನುರಾಧ ಪಿ. ಸಾಮಗ

"ಎಲೆ ಮರೆ ಕಾಯಿ ಅಂಕಣಕ್ಕಾಗಿ ನಿಮ್ಮ ವಿವರಗಳನ್ನು ಕೊಡಿ ಎಂದು ಸಹೋದರ ನಸೀಮ ಅವರು ಕೇಳಿದಾಗ ನನಗೆ ಮೊದಲು ಅನ್ನಿಸಿದ್ದು- ಎಲೆಮರೆಯದ್ದೇನೋ ಹೌದು, ಆದರೆ ನನ್ನ ವ್ಯಕ್ತಿತ್ವ ಅಥವಾ ಬರವಣಿಗೆಯ ಕ್ಷೇತ್ರದಲ್ಲಿ ನಾನು ಕಾಯಿಯ ಘಟ್ಟ ತಲುಪಿದ್ದು ಹೌದಾ...? ಹೊರಬರಲಿರುವ ನನ್ನ ಅಂಬೆಗಾಲಿನ ಕವನಸಂಕಲನಕ್ಕೆ ನಾನು ಯೋಚಿಸಿರುವ ಹೆಸರು ’ಮೊಗ್ಗು ಮಾತಾಡಿತು’ ಅಂತ.. ಅಂದರೆ ನಾನಿನ್ನೂ ಮೊಗ್ಗು, ಮಾತಾಡುವ ಹಂತಕ್ಕಷ್ಟೇ ತಲುಪಿದ್ದೇನೆ, ಅರಳಿ ಹೂವಾಗಿ ಕಾಯಾಗುವ ಕ್ಷಣ ಇನ್ನೂ ತುಂಬಾ ದೂರ ಇದೆ ಅನ್ನುವುದೇ ನನ್ನ ಅನಿಸಿಕೆ. ಆ ದಾಕ್ಷಿಣ್ಯದಿಂದಲೇ ಸ್ವಪರಿಚಯ ಮಾಡಿಕೊಳ್ಳುತ್ತಿದ್ದೇನೆ.

ಉಡುಪಿ ಜಿಲ್ಲೆಯ ಕಾಪುವಿನ ಒಂದು ಸಣ್ಣ ಹಳ್ಳಿ, ಉಳಿಯಾರು ನನ್ನೂರು, ಮಾತೃಭಾಷೆ ತುಳು. ಅಪ್ಪ ಶ್ರೀ ಯು. ಅನಂತಕೃಷ್ಣ ಭಟ್ ರವರು ಭಾರತೀಯ ಜೀವನ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು, ಅಮ್ಮ ಶ್ರೀಮತಿ ಗಾಯತ್ರಿ ಭಟ್, ನನಗೆ ಇಬ್ಬರು ತಂಗಿಯರು. ಕರಾವಳಿಯ ಅದರಲ್ಲೂ ನಮ್ಮೂರಿನ ಪ್ರಕೃತಿ ಸೌಂದರ್ಯ ನಾನು ಜೀವನದಲ್ಲಿ ಅತ್ಯಂತ ಹೆಚ್ಚು ಆಸ್ವಾದಿಸಿದ ವಿಷಯ. ಭೋರ್ಗರೆಯುತ್ತ ದಡ ಮುಟ್ಟಲು ಹವಣಿಸಿ ಬರುವ ಮತ್ತು ದಡ ಮುಟ್ಟಿದ ಕ್ಷಣ ತಟ್ಟನೆ ಶಾಂತವಾಗುವ ಸಾಗರದ ಅಲೆಗಳು, ಮಳೆಗಾಲದಲ್ಲಿ ಗದ್ದೆಬಯಲನ್ನೆಲ್ಲ ಆವರಿಸಿ ಹರಿವ ಕೆಂಬಣ್ಣದ ಅಗಾಧ ನೀರಿನ ಹರಿವು (ತುಳುವಿನ "ಬೊಳ್ಳ" ) ಅತ್ಯಂತ ಪ್ರೀತಿಪಾತ್ರ ಮತ್ತು ಆಸಕ್ತಿ ಕೆರಳಿಸಿದ ಬಾಲ್ಯದ ಅಂಗಗಳು. ನೀರು ಪ್ರತಿ ಘಟ್ಟದಲ್ಲೂ ಒಂದಲ್ಲ ಒಂದು ತರ ಹೋಲಿಕೆಯಾಗಿ, ಮಾದರಿಯಾಗಿ, ಪಾಠವಾಗಿ... ಹೀಗೆ ಹಲವು ರೂಪದಲ್ಲಿ ನನ್ನ ಯೋಚನೆಯ ಅವಿಭಾಜ್ಯ ಭಾಗವಾಗಿರುವುದು ಸಮುದ್ರತಟದಲ್ಲಿ ಕಳೆದ ಬಾಲ್ಯದ ಪರಿಣಾಮ ಅನ್ನಿಸುತ್ತದೆ. ಈಗ ನೆಲೆಸಿರುವುದು ಮೈಸೂರು, ಪತಿ ಪ್ರಶಾಂತ್ ಸಾಮಗರವರು ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪನಿಯಲ್ಲಿ ಇಂಜಿನಿಯರ್ ಹಾಗೂ ಮಗಳು ಅರ್ಪಿತಾ ಮೂರನೆಯ ತರಗತಿಯ ವಿದ್ಯಾರ್ಥಿನಿ.

ಒಂದನೇ ತರಗತಿ ಮತ್ತು ಹತ್ತನೇ ತರಗತಿಯನ್ನು ಕಾರಣಾಂತರಗಳಿಂದ ಉಡುಪಿಯ ಸಂತ ಸಿಸಿಲಿ ಕಾನ್ವೆಂಟ್ ನಲ್ಲಿ ಓದಿದೆ, ಉಳಿದ ಮಧ್ಯದ ಭಾಗ ಕರಂದಾಡಿಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಪುವಿನ ಮಹಾದೇವಿ ಪ್ರೌಢ ಶಾಲೆಯಲ್ಲಿ ಓದಿದೆ. ಈ ಮಧ್ಯಭಾಗದಲ್ಲಿಯೇ ನನ್ನ ವ್ಯಕ್ತಿತ್ವದೊಳಕ್ಕೆ ಬರವಣಿಗೆ, ಅಭಿನಯ ಮತ್ತು ಹಾಡುವಿಕೆ ಸೇರ್ಪಡೆಯಾದದ್ದು. ಅಳಿದವರಲ್ಲಿ ಉಳಿದವನೇ ಗೌಡ ಎಂಬಂತೆ ಆ ಹಳ್ಳಿಯ ವಾತಾವರಣದಲ್ಲಿ ನಾನು ಮಾಡಿದ ಪ್ರತಿಯೊಂದು ಪಠ್ಯ ಹಾಗೂ ಪಾಠ್ಯೇತರ ಚಟುವಟಿಕೆಗಳಿಗೆ ಸಿಗಬೇಕಾದ್ದಕ್ಕಿಂತ ಹೆಚ್ಚೇ ಪ್ರಶಂಸೆ ಸಿಕ್ಕಿ ಬಹುಶಃ ಆ ಪ್ರೋತ್ಸಾಹವೇ ನನ್ನನ್ನು ಇಂದಿಗೂ ಮುನ್ನಡೆಸುತ್ತಿರುವುದು. ಅಪ್ಪ ಹಲವಾರು ಭಕ್ತಿಗೀತೆಗಳು ಮತ್ತು ತತ್ವಪದಗಳನ್ನು ರಚಿಸಿರುತ್ತಾರೆ, ಹಾಗಾಗಿ ಅವರಿಂದ ರಕ್ತಗತವಾಗಿ ಬರವಣಿಗೆಯೆಡೆಗೆ ಒಲವು ನನ್ನಲ್ಲಿ ಬಂದಿದೆ, ಮತ್ತು ದೇವರ ಅನುಗ್ರಹದಿಂದ ಇತ್ತೀಚೆಗೆ ಬರೆಯುವ ಕಡೆಗಿನ ದಾಹ ತುಸು ಜಾಸ್ತಿಯಾಗಿದೆ. ನಾನು ಓದಿದ್ದು ಬಿ. ಎಸ್. ಸಿ., ಹಿಂದಿಯನ್ನು ಎರಡನೇ ಐಚ್ಚಿಕ ಭಾಷಾವಿಷಯವಾಗಿರಿಸಿಕೊಂಡು, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದೊಂದಿಗೆ. ಪಠ್ಯ ವಿಷಯವಾಗಿ ಕನ್ನಡದ ಓದು ಹತ್ತನೇ ತರಗತಿಗೆ ಕೊನೆಗೊಂಡಿದ್ದು ಈಗ ಅದನ್ನು ಕನ್ನಡ ಎಮ್. ಎ.(ಮೊದಲನೇ ವರ್ಷ ಮುಗಿಯಿತು) ಮಾಡುವ ಮೂಲಕ ಮುಂದುವರೆಸುತ್ತಿದ್ದೇನೆ.

ಸಾಹಿತ್ಯಕೃಷಿಯ ಬಗ್ಗೆ ತಿಳಿಸಿ ಅಂದಿದ್ದಾರೆ, ನಟರಾಜ್ ಅವರು. ನಾನು ಸಾಹಿತ್ಯಿಕವಾಗಿ ಹೆಚ್ಚೇನೂ ಓದಿಕೊಂಡಿಲ್ಲ. ಸಣ್ಣವಯಸ್ಸಿನಲ್ಲಿ ಚಂದಮಾಮ, ಬಾಲಮಿತ್ರಗಳ ಜೊತೆ ಸುಧಾ, ಪ್ರಜಾಮತ, ತುಷಾರ, ಮಲ್ಲಿಗೆಯಂಥ ಪುಸ್ತಕಗಳ ಓದು ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಕದ್ದುಮುಚ್ಚಿ ಕಾದಂಬರಿಗಳನ್ನು ಓದಿದ್ದೂ ಇದೆ. ಅದರಲ್ಲೂ ನವೋದಯ ಕವಿಗಳಾದ ಕುವೆಂಪು, ಬೇಂದ್ರೆ, ಕೆ ಎಸ್ ನ, ಎನ್ ಎಸ್ ಎಲ್, ಜಿ ಎಸ್ ಎಸ್ ರವರೇ ಮೊದಲಾದ ಕವಿಗಳ ಕವನಗಳನ್ನು ಓದಿ ಮೊದಲು ಬರೆಯಲಿಕ್ಕೆ ಶುರು ಮಾಡಿದ್ದು ಅದೇ ಪ್ರಾಸಬದ್ಧ, ಗೇಯತೆಯ ಗುಣವುಳ್ಳ ಮಾತ್ರಾಬದ್ಧತೆಯ ಕವನಗಳನ್ನು. ಹತ್ತನೇ ವರ್ಷದಲ್ಲಿ ಮೊದಲ ಕವನ "ಅಜ್ಜನಗಡ್ಡ" ಬರೆದಿದ್ದೆ. ಆಮೇಲೆ ಕಾಲೇಜುದಿನಗಳಲ್ಲೂ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು) ಸ್ವಲ್ಪ ಬರೆದಿದ್ದೆ. ಇತ್ತೀಚೆಗೆ ಬಿ. ಎಸ್. ಎನ್. ಎಲ್. ನ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಿಂದ ಐಚ್ಚಿಕನಿವೃತ್ತಿ ಪಡೆದ ನಂತರ ಪುನಃ ಬರೆಯಲು ಶುರು ಮಾಡುವಾಗ ಬಹುಶಃ ನವ್ಯದ ಮಾದರಿಯಲ್ಲಿ ಬರೆಯಲು ಆರಂಭಿಸಿದ್ದೇನೆ. ಪ್ರಾಸತ್ಯಾಗವೇ ಮೊದಲಾದ ಸಡಿಲಿಕೆಗಳು ರಚನೆಯಲ್ಲಿ ಕಟ್ಟುಪಾಡುಗಳಿಲ್ಲದ ಮುಕ್ತತೆಗೆ ಹಾದಿಯಾಗುವ ಮತ್ತು ವಸ್ತುವಿನ ಗೋಪ್ಯತೆ ಕಾಯ್ದುಕೊಳ್ಳುವ ಮೂಲಕ ರಚನೆಗಳನ್ನು ಸ್ವಲ್ಪ ಮಟ್ಟಿಗೆ ಕ್ಲಿಷ್ಟವಾಗಿಸುವ ಶೈಲಿ ನವ್ಯದ್ದು. ಸಾಧ್ಯವಾದಷ್ಟು ಅದನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ. ತೊದಲುನುಡಿಯನ್ನೂ ಆಸ್ಥೆಯಿಂದ ಆಲಿಸಿ ಮೆಚ್ಚುವುದು ನಮ್ಮ ತೀರಾ ಹತ್ತಿರದ ಅನುಬಂಧಗಳಿಗಷ್ಟೇ ಸಾಧ್ಯ. ಅಂಥ ಓದುಗವರ್ಗ ಇಲ್ಲಿ ಎಫ್. ಬಿ. ಮತ್ತು ಕನ್ನಡ ಬ್ಲಾಗ್ನಲ್ಲಿ ನನಗೆ ಸಿಕ್ಕಿ ಅವರೆಲ್ಲರ ಮೆಚ್ಚುಗೆಯಿಂದ, ಪ್ರೋತ್ಸಾಹದಿಂದ ಮುನ್ನಡೆಯುತ್ತಿದ್ದೇನೆ. ನನ್ನ ಬ್ಲಾಗ್ ಅನುಭಾವಶರಧಿಯಲ್ಲಿ (http://bhaavasharadhi.blogspot.com)
ಎಲ್ಲ ಬರಹಗಳನ್ನು ಒತ್ತಟ್ಟಿಗೆ ಸೇರಿಸಿಟ್ಟಿದ್ದೇನೆ.

ಇನ್ನು ಬರವಣಿಗೆಯ ಮುಂದಿನ ಕನಸಿನ ಬಗ್ಗೆ ..... ಬರವಣಿಗೆಗೇ ಅಂತ ಪ್ರತ್ಯೇಕವಾಗಿ ನಾನು ಕನಸು ಹೆಣೆದಿಲ್ಲ, ಬರೆಯುವ ಮುಂಚಿನಿಂದಲೂ ಇದ್ದ, ಈಗಲೂ ಇರುವ ಕನಸು ಒಂದೇ... ಇತರರನ್ನು ನೋಯಿಸದೇ ಬದುಕಬೇಕು, ಪ್ರತಿಕ್ಷಣವನ್ನೂ ಮಾನವನಾಗಿ ಹುಟ್ಟಿಸಿದ ವಿಧಿಗೆ ಕೃತಜ್ಞತಾಪೂರ್ವಕವಾಗಿ, ಸಂತೋಷದಿಂದ ಕಳೆಯುವ ಮುಕ್ತವಾದ ಸರಳಜೀವನ ನನ್ನದಾಗಬೇಕು, ಆ ನಿಟ್ಟಿನಲ್ಲಿ ಮುಂದಿರುವ ಗಳಿಗೆಗೆ ಒದಗಬೇಕು ಅದನ್ನು ಒದಗಿಸಿಕೊಳ್ಳಬೇಕು- ಅಷ್ಟೇ. ಯೋಚಿಸಿದ್ದನ್ನೇ ಆಡುವ ಹಾಗೂ ಆಡಿದಂತೆ ಬದುಕುವ, ನಾನು ತುಂಬಾ ಪ್ರೀತಿಸುವ ಜೀವನರೀತಿ ನನ್ನದು, ಕಲಿತು ಬಂದದ್ದಲ್ಲ ಸಹಜವಾಗಿ ಬಂದದ್ದು. ಅದರಿಂದ ಹಾನಿಗೊಳಗಾದರೂ ಅದನ್ನು ಕೈಬಿಡದೆ ಕೊನೆಯತನಕ ಬಾಳುವ ಕನಸೂ ಇದೆ.

ಬಹುಶಃ ನನ್ನ ಬಗ್ಗೆ ಇಷ್ಟೇ ಹೇಳಲಿಕ್ಕಿರುವುದು... ಈ ಮೂಲಕ ನಟರಾಜು ಮತ್ತು ಉಳಿದ ಎಲ್ಲಾ ಇಲ್ಲಿನ ಸನ್ಮಿತ್ರರಿಗೆ ನನ್ನಂಥ ಎಲ್ಲಾ ಕಿರಿಯ ಬರಹಗಾರನ್ನು ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಮನಸಾರೆ ನಮನಗಳನ್ನು, ಕೃತಜ್ಞತೆಗಳನ್ನು ತಿಳಿಸುತ್ತೇನೆ."

ಎಂದು ಮಾತು ಮುಗಿಸಿದ ಅನುರಾಧ ಮೇಡಂ ರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗ್ ಲಿಂಕನ್ನು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ. ಅವರ ಬ್ಲಾಗ್ ಅನುಭಾವಶರಧಿ'ಯಲ್ಲಿ ನೀವು ಒಂದಷ್ಟು ವಿಹರಿಸಿ ಖುಷಿಪಡಿ..

ಅನುರಾಧ ಮೇಡಂ ರವರ ಒಂದೆರಡು ಕವನಗಳ ತುಣುಕುಗಳ ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಉತ್ತರವಿಲ್ಲವೆಂದಲ್ಲ, ದನಿಯಿಲ್ಲ.... 
ನಗಲಾರೆ, ನಗುವಿಲ್ಲವೆಂದಲ್ಲ, ಮೊಗವಿಲ್ಲ...
ಆಡಲಾರೆ, ಮಾತಿಲ್ಲವೆಂದಲ್ಲ, ಬಾಯಿಲ್ಲ....
ಅಳಲಾರೆ, ನೋವಿಲ್ಲವೆಂದಲ್ಲ, ಕಣ್ಣೀರಿಲ್ಲ...

ನಿನ್ನೆಡೆಗೇ ಹೊರಟದ್ದು, ತಲುಪಲಾಗಲಿಲ್ಲ...
ಕಾಲಿಲ್ಲವೆಂದಲ್ಲ, ದಾರಿಯಿಲ್ಲ....
ನೀನಂದದ್ದು ಕೇಳಿಸಿತು, ಅರಗಲಿಲ್ಲ,
ಮೆಚ್ಚಿಲ್ಲವೆಂದಲ್ಲ, ಕೆಚ್ಚಿಲ್ಲ.... 
ಲೋಕದಲಿದಕಿಂತ ಬೇರಿಲ್ಲ ಉಸಿರೇ..
ಹಾರಲೆಳಸುವ ರೆಕ್ಕೆ, 
ಹಾಡಲೆಳಸುವ ನಾಲಿಗೆ,
ತುಂಡಾಗುವುದು.. ಮತ್ತು....
ಸತ್ಯ ಅಲ್ಲೆಲ್ಲ ಸೋಲುವುದು 
*****
ನನಗೆ ತಾಗಲೆಂದೇ ನೀ ಕಳಿಸಿದ್ದು
ಬಂದು ತಲುಪಿದೆ, ಧನ್ಯವಾದಗಳು.
ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ, 
ನನ್ನ ತಲುಪಿದಾಗ ಬಿಸಿಯಿರಲಿಲ್ಲ.
ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,
ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.
ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,
ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.
ಕೋಪಿಸಿಕೊಂಡಾದರೂ ಸರಿ, ಜೀವವೆ
ನೆನೆಯುತಿರು, ತೊರೆಯದಿರು,
ತೊರೆದು, ಮರೆಯದಿರು.
*****
ಕಾಯುತಿದ್ದ ಕಾದ ಭೂಮಿಯ ಮೇಲೆ 
ಹಲಕಾಲದ ನಂತರ ಬಿದ್ದ ಕೆಲವೇ
ತುಂತುರು ಮಳೆಹನಿ
ಮಣ್ಣಿನೊಳ ಹೊಕ್ಕು ಕೂತಿದ್ದ
ವಾಸನೆಯ ಹೆಕ್ಕಿ ತಂದು 
ಹಿತವಾದ ಪರಿಮಳವಾಗಿಸಿದವು
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :)

ಮಂಗಳವಾರ, ಜನವರಿ 1, 2013


ಎಲೆ ಮರೆ ಕಾಯಿ ೬೯
ಮೆಚ್ಕಂಡ್ ಮದ್ವಾತರೆ
ವರ್ಷ ತುಂಬಂಗಿಲ್ಲ
ಕಚ್ಚಾಡ್ಕಂಡ್ ದೂರಾತಾರೆ..!

ದಿನ್ವಿಡೀ ದುಡಿತರೆ
ಹೊಟ್ತುಂಬ ತಿನ್ನಕ್ಕಿಲ್ಲ
ಮೈ ತುಂಬ ತ್ವಡಾಕಿಲ್ಲ....!

ಯೋನ್ ಇಲ್ದಿದ್ರೂ ಅವಾಗ್ ನೆಮ್ದಿತ್ತು ಕನ
ಈಗ್ ನೋಡ್ರೆ ನಂಬ್ಕೂ ಇಲ್ಲ ನೆಮ್ದೂ ಇಲ್ಲ ಅಲ್ವೇನಾ..?!?

ಮೇಲಿನ ಆಡು ಭಾಷೆಯ ಸೊಗಡನ್ನು ತನ್ನೊಳಗೆ ತುಂಬಿಕೊಂಡು ಇಂತಹ ಕವಿತೆಗಳು ಎದುರು ನಿಂತಾಗ ಅಚ್ಚರಿಯಿಂದ ಈ ಕವಿ ಗೆಳೆಯನ ಕವಿತೆಗಳನ್ನು ಓದಿಕೊಂಡಿದ್ದೇನೆ. ಮಯಾಸ ಅನ್ನೋ ಹೆಸರಿನಲ್ಲಿ ಈ ಕವಿತೆಗಳು ಮೊದಲ ಬಾರಿಗೆ ನನ್ನ ಕಣ್ಣಿಗೆ ಬಿದ್ದಾಗ ದೇವನೂರ ಮಹಾದೇವರ "ಅಮಾಸ" ಜ್ಞಾಪಕಕ್ಕೆ ಬಂದಿದ್ದ. ದೇವನೂರ ಮಹಾದೇವರ ಬರಹದ ಶೈಲಿಯನ್ನು ಅನುಸರಿಸುವ ಪ್ರಯತ್ನ ಈ ಗೆಳೆಯನದೇ ಎಂದು ನಾನಂದುಕೊಂಡು ಇವರ ಕವಿತೆಗಳನ್ನು ಓದತೊಡಗಿದಾಗ ನಮ್ಮ ಮಯಾಸರಿಗೆ ಅವರದೇ ಆದ ಶೈಲಿ ಇದೆ ಎನಿಸಿತು. ಈ ಗೆಳೆಯನ ಪ್ರತಿ ಕವಿತೆಗಳನ್ನು ನೋಡಿದಾಗ ಸದ್ದಿಲ್ಲದೆ ಕಣ್ಮರೆಯಾಗುತ್ತಿರುವ ನಮ್ಮ ಊರುಗಳ ಸಂಸ್ಕೃತಿ, ಅಲ್ಲಿಯ ಜನರ ಭಾಷೆ, ಅವರ ಮುಗ್ಧತೆ ಕಣ್ಣ ಮುಂದೆ ಬಂದಂತಾಗುತ್ತದೆ. ಮೊದಲೊಮ್ಮೆ ಹೇಳಿದಂತೆ ಒಂದು ಪೀಳಿಗೆಯ ಬರಹಗಾರರು ನಮಗೆ ತಮ್ಮ ಬಾಲ್ಯದ ಯೌವನದ ದಿನಗಳ ಬದುಕುಗಳನ್ನು ನಮಗೆ ನೆನಪುಗಳ ಹಾಗೆ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಅವರ ಮುಂದಿನ ಪೀಳಿಗೆಯ ಬರಹಗಾರರು ಸಹ ತಮ್ಮ ನೆಲದ ಸಂಸ್ಕೃತಿಯ ಸೊಗಡನ್ನು ತಮ್ಮ ಬರಹಗಳಲ್ಲಿ ಬರೆಯುತ್ತಾ ಹೋದರೆ ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಬರಹದ ರೂಪದಲ್ಲಾದರೂ ಸಿಗುತ್ತವೆ. ಮಯಾಸನ ಕವಿತೆಗಳ ಓದಿದಾಗ ಪ್ರತೀ ಬರಹಗಾರ ತನ್ನ ಸುತ್ತ ಮುತ್ತಲ ಪರಿಸರದ ಚಿತ್ರಣವನ್ನು ತನ್ನ ಸಂಸ್ಕೃತಿಯನ್ನು ತನ್ನ ಬರಹಗಳಲ್ಲಿ ಈ ರೀತಿ ಚಂದವಾಗಿ ಕಟ್ಟಿಕೊಟ್ಟರೆ ಅದೆಷ್ಟು ಚಂದವಿರುತ್ತದೆ ಎನಿಸಿತ್ತದೆ. ಮಯಾಸನ ಪ್ರತೀ ಕವಿತೆಯೂ ಅವರ ಸರಣಿ ನೆನಪುಗಳ ಆಗರವನ್ನೇ ನಮ್ಮ ಮುಂದೆ ತೆರೆದಿಡುತ್ತಾ ಹೋಗುವುದು ನಿಜಕ್ಕೂ ಅನನ್ಯ..

ಮಳೆ ಜ್ವತಿಗೆ ಗಾಳಿ ಬಂದ್ರೆ
ಅಣ್ಬೆ ಏಳ್ತಾವೆ...!

ಬಿಸಿಲು ಮಳೆ ಒಟ್ಟಿಗ್ ಹೂದ್ರೆ
ಬಿಲ್ದೊಳ್ಗಿನ್ ಹಾವು ಈಚಿಗ್ ಬತ್ತಾದೆ..!

ಸಿಡ್ಲು ಜ್ವತಿಗೆ ಗುಡುಗ್ ಬಂದ್ರೆ
ಹಾಲೇಡಿ ಗದ್ದೆ ಬದೀಗೆ ಬತ್ತವೆ..!

ಬಿಸಿಲ್ ಮುಗ್ದು ಟಿಸಿಲ್ ಹೊಡ್ದ್ರೆ
ಬಿದ್ರು ಮಣ್ಕೆಲಿ ಕಳ್ಲೆ ಸಿಗ್ತಾವೆ..!

ಇಟ್ಗೆ ಗುಂಡಿಗೆ ನೀರ್ ತುಂಬ್ಸಿ
ಹೊಳಿಳ್ದ್ರೆ- ಮಳ್ಳಿ ಮೀನ್ ಸಿಗ್ತಾವೆ..!

ಅಬ್ಬಾ..! ಮಲ್ನಾಡೊಳ್ಗೆ
ಎಲ್ಲಾ ಐತೆ...ನಾನಿಲ್ಲ ಕನ..!?!

ಮೇಲಿನ ಸಾಲುಗಳ ಓದುತ್ತಿದ್ದಂತೆ ಮಯಾಸ ಏನ್ ಸೂಪರ್ ಆಗಿ ಬರೆದಿದ್ದಾರೆ ಅನಿಸುತ್ತಲ್ವಾ? ಅಣಬೆ ನೋಡಿ ಅದೆಷ್ಟು ವರ್ಷ ಆಗಿ ಹೋಯಿತು ಅಂದುಕೊಳ್ತಾ ಹಳೆಯ ನೆನಪುಗಳಿಗೆ ನಾವು ಜಾರಿದರೆ ಹಳ್ಳ ಕೊಳ್ಳಗಳ ಮೀನು, ಎಂದೋ ಎದುರಾಗಿದ್ದ ಹಾವುಗಳು, ಗೆಡ್ಡೆ ಗೆಣಸು ಬೆಟ್ಟ ಗುಡ್ಡ ಏನೆಲ್ಲಾ ಕಣ್ಣ ಮುಂದೆ ಬಂದು ನಿಂತು ಬಿಡುತ್ತವೆ. ನಮ್ಮ ಸಂಸ್ಕೃತಿಗಳು ಒಬ್ಬ ಪ್ರೇಯಸಿಯ ಹಾಗೆ ನಮ್ಮನ್ನು ಕಾಡಲು ಶುರು ಮಾಡದ ಹೊರತು ಆ ಸಂಸ್ಕೃತಿ ಕುರಿತ ಬರಹಗಳು ನಮ್ಮ ಬರಹಗಳಲ್ಲಿ ಎಂದಿಗೂ ಕಾಣಿಸಿಕೊಳ್ಳಲಾರವು. ಹಾಗೆ ಪ್ರೇಯಸಿಯ ಹಾಗೆ ಕಾಡಲು ತೊಡಗಿದ ನಮ್ಮ ಸಂಸ್ಕೃತಿಯ ನೆನಪುಗಳು ಇನ್ನಿಲ್ಲದಂತೆ ಚಂದವಾಗಿ ಬರೆಸಿಕೊಳ್ಳುತ್ತವೆ. ಅಂತಹ ಚಂದವಾಗಿ ಕಾಡಿಸಿಕೊಂಡು ಮೂಡಿದ ಬರಹಗಳು ಸದಾ ಕಾಲ ನೆನಪುಗಳಲ್ಲಿ ಉಳಿಯುವಂತ ಬರಹಗಳಾಗಿ ಹೊಮ್ಮಿಬಿಡುತ್ತವೆ. ನೀವು ಏನೇ ಹೇಳಿ ನಮ್ಮ ಭಾಷೆಗೆ ಸಂಸ್ಕೃತಿಗೆ ಅದರದೇ ಆದ ವೈಶಿಷ್ಟ್ಯತೆ ಇದೆ. ನಮ್ಮ ಭಾಷೆಯನ್ನು ಉಳಿಸಬೇಕು ಅಂತ ಎಷ್ಟೇ ಹೋರಾಟಗಳು ನಡೆದರೂ ಮಯಾಸ ನಂತಹ ಕವಿಗಳು ತಮ್ಮ ಬರಹಗಳಲ್ಲಿ ನಮ್ಮ ಸಂಸ್ಕೃತಿಯನ್ನು ಸದ್ದಿಲ್ಲದೆ ತಮ್ಮದೇ ರೀತಿಯಲ್ಲಿ ಉಳಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಬೆಳವಣಿಗೆ ನಿಜಕ್ಕೂ ಆರೋಗ್ಯಕರ. ಮಯಾಸ ರಂತಹ ಕವಿಗಳ ಬರಹಗಳು ಹೆಚ್ಚು ಹೆಚ್ಚು ಜನರನ್ನು ತಲುಪಬೇಕು. ಪ್ರಶಸ್ತಿ ಪುರಸ್ಕಾರಗಳು ಇಂತಹ ಚಂದದ ಕವಿಗೆ ಸಿಗಬೇಕು.

ಬಯಸಿದ್ನ
ಪಡ್ಕಾಬ್ಯಾಕಾ...?
ಬುಟ್ಬುಡ್ಬ್ಯಾಕಾ..?
ಪಡ್ಕಂಡ್ರೆ ಹೆಂಗ್ ಸಂಬಾಳ್ಸೋದು..?
ಬುಟ್ಬುಟ್ರೆ ಹೆಂಗ್ ತಡ್ಕಳ್ಳೋದು..?
ಇಂತವ್ ನೂರ್ ಪ್ರಶ್ನೆ ಮೂಡ್ತವೆ ಕನ
ಯೋನ್ ಮಾಡ್ಲಿ..???
ಉತ್ರುವೇ ಸಿಗಬಾರ್ದು ಅನ್ಕಂಡೀವ್ನಿ ಕನ...!!!

ಪ್ರತಿ ಬಾರಿ ಮಯಾಸ ಇಂತಹ ಕವಿತೆಗಳನ್ನು ಬರೆದು ನಮ್ಮ ಎದುರಿಗೆ ಇಟ್ಟಾಗ ಇವರ ನೆನಪಿನ ಶಕ್ತಿಗೆ, ತನ್ನ ನೆಲದ ಭಾಷೆಯ ಮೇಲಿರುವ ಇವರ ಪ್ರೀತಿಗೆ ಹ್ಯಾಟ್ಸ್ ಆಫ್ ಹೇಳಬೇಕು ಎನಿಸುತ್ತೆ. ಪತ್ರಿಕಾ ರಂಗದಲ್ಲಿ ಅಪಾರ ಅನುಭವ ಹೊಂದಿರುವ ಮಯಾಸ ಖಂಡಿತಾ ಎಲೆ ಮರೆ ಕಾಯಿಯಲ್ಲ. ಅಂದ ಹಾಗೆ ಮಯಾಸನ ನಿಜವಾದ ಹೆಸರು ಜ್ಞಾನೇಂದ್ರ ಕುಮಾರ್. ಮಯಾಸನ ಕವಿತೆಗಳು ನಮಗೆ ಎಷ್ಟು ಆಪ್ತವಾದಂತೆ ಕಾಣುತ್ತವೆಯೋ ಅಷ್ಟೇ ಆಪ್ತ ಅವರ ಮಾತುಗಳು.. ಇಗೋ ಮಯಾಸರ ಜೊತೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆಯ ತುಣುಕುಗಳು ನಿಮಗಾಗಿ..

 ಜ್ಞಾನೇಂದ್ರ ಕುಮಾರ್ ಪಿ.ಬಿ. (ಮಯಾಸ)

"ಮಲೆನಾಡ ಮಡಿಲು ಕಾಫಿ ಏಲಕ್ಕಿಯ ತವರೂರು ಹೇಮಾವತಿ ನದಿ ತೀರದ ಸಕಲೆಶಪುರ ತಾಲ್ಲಕೂಕಿನ ಹೆತ್ತೂರು ಹೋಬಳಿಯ ವಣಗೂರು ಅಂಚೆಯ ಬಿಸಲೆ ಅಭಯಾರಣ್ಯದ ತಪ್ಪಲಿನ ಕುಗ್ರಾಮ 'ಪಟ್ಲ' ನನ್ನ ಹುಟ್ಟೂರು. ತಂದೆ ಪಿ. ಸಿ ಬಸವಯ್ಯ ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಸೀನಿಯರ್ ಹೆಲ್ತ್ ಇನ್ಸ್ ಫೆಕ್ಟರ್ ಆಗಿದ್ದವರಾದರೂ ಕಡುಬಡತನದ ರುಚಿ ಕಂಡವರು. ತಂದೆ ಚಿಕ್ಕವಯಸ್ಸಿನಿಂದಲೂ ಸವರ್ಣೀಯರ ಶೋಷಣೆಯ ವಿರುದ್ದ ಸ್ವಾಭಿಮಾನದ ನ್ಯಾಯಬದ್ದ ಹೋರಾಟ ನಡೆಸಿಕೊಂಡೇ ಬಂದವರಾದ್ದರಿಂದ 1980 ರ ದಲಿತ ಸಂಘಟನೆ ಉಛ್ರಾಯ ಘಟ್ಟದಲಿದ್ದವೇಳೆ. ನೌಕರಿಯ ನಡುವೆಯೂ ದಸಂಸ ದಲ್ಲಿ ಸಕ್ರೀಯರಾಗಿದ್ದರ ಪರಿಣಾಮ ನಾನು 15 ನೇ ವಯಸ್ಸಿಗೆ ದಸಂಸ ಮುಖೇನ ವಿಧ್ಯಾರ್ಥಿ ದೆಸೆಯಲ್ಲೇ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡೆ. ಸಾಮಾನ್ಯರ ನಡುವೆ ಸಾಮಾನ್ಯವಾಗಿ ಬೆರೆಯುವ..ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ದ ಸಿಡಿಮಿಡಿಗೊಳ್ಳತೊಡಗಿದೆ. ಅಪ್ಪನ ಓದು ಮತ್ತು ಬರವಣಿಗೆಯ ಹವ್ಯಾಸ ಓದು ಮತ್ತು ಬರವಣಿಗೆಗೆ ಆಕರ್ಷಿಸಿತಾದರೂ ಅಪ್ಪ ಓದುತಿದ್ದ ಲೆನಿನ್ನು..ಕಾರ್ಲ್ ಮಾರ್ಕ್ಷ್..ಭಗತ್ ಸಿಂಗ್ ಅಜಾದ್ ಚಂದ್ರಶೇಖರ್ ಅಂಬೇಡ್ಕರ್..ಬಸವಣ್ಣ..ಕುವೆಂಪು ತೇಜಸ್ವಿ...ಯಾವುದೂ ಅರ್ಥವಾಗುತ್ತಿರಲಿಲ್ಲ...

ಅಪ್ಪನ ಓದೆಂಬ ಭಯಕ್ಕೆ ಮನೆಯಲಿರುತಿದ್ದ 'ಲಂಕೇಶ್' ಕೈಗೆತ್ತಿಕೊಂಡು ಕೂರುತಿದ್ದೆ..ಪದೇ ಪದೇ ನೀಲು ಪಧ್ಯಗಳ ಮೇಲೆ ಕಣ್ಣಾಯಿಸುತಿದ್ದೆ. ಕಾಲೇಜಿಗೆ ಬರುವಷ್ಟರಲ್ಲಿ ಹನಿಕವಿತೆಗಳ ಬರೆವ ಪ್ರಯತ್ನಪಟ್ಟೆ...ಈ ನಡುವೆ ಜೀವದ ಗೆಳೆಯ ನನ್ನೂರಿನ ದಿನೇಶ್ ಕುಮಾರ್ ಎಸ್. ಸಿ. ಸಂವಹನ ವೇದಿಕೆ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ಕ್ರಿಯಾಶೀಲನಾಗಿದ್ದು ಆಗಾಗ್ಗೆ ಆಯೋಜಿಸುವ ಸಾಹಿತ್ಯ ಸಮಾರಂಭಗಳಿಗೆ ಕರೆದೊಯ್ಯಲು ಆರಂಬಿಸಿದಾಗ ಸಾಹಿಯ್ಯದ ಮಜಲುಗಳ ಪರಿಚಯವಾಗತೊಡಗಿತು ಸಂವಾದಗಳಲ್ಲಿ ಭಾಗವಹಿಸೋದು ಕವಿಗೋಷ್ಟಿಗೋಸ್ಕರ ಕವಿತೆ ಬರೆಯೋದು..ವಾಚಿಸೋದು ಹಿಂಗೆ ಶುರುವಾದ ಸಾಹಿತ್ಯ ಕೃಷಿ...ಬಿಎ ಪದವೀಧರನಾದ ನನ್ನಲ್ಲಿ ಸಾಂಸ್ಕೃತಿಕ ಅಭಿರುಚಿಗಳನ್ನು ಪರಿಚಯಿಸತೊಡಗಿತು. ಗೆಳೆಯ ದಿನೇಶ್ ಆದಿನಗಳಲ್ಲೇ ಹವ್ಯಾಸಿ ಪತ್ರಕರ್ತ. ಈತನ ಸಹವಾಸದಿಂದ ಇಂದು ಪತ್ರಿಕಾವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ವಾರಪತ್ರಿಕೆ..ದಿನಪತ್ರಿಕೆಗಳಲ್ಲಿ ವರದಿಗಾರಿಕೆ ಮಾಡಿದ್ದೇನೆ. ಹಾಲಿ ರಕ್ಷಣಾವೇದಿಕೆ ಮುಖವಾಣಿ 'ಕರವೇ ನಲ್ನುಡಿ' ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದಾನೆ. ಓದುವ ಛಾಳಿಯಿದೆ. ತೋಚಿದಕ್ಕೆ ಬಣ್ಣ ಕಟ್ಟಿ ಗೀಚುತ್ತೇನೆ.

ನಂಗೆ ಎರಡ್ ಹೆಸ್ರು. ಮನೆಲಿ ಮಹೇಶ ಅಂತ್ ಕರೆಯೋರು. ಇಸ್ಕೂಲಲ್ಲಿ ಜ್ಞಾನೇಂದ್ರ ಕುಮಾರ್ ಪಿ.ಬಿ. ಅಂತ ಕರ್ಯೋರು. ಪಿ.ಬಿ. ಒಂದ್ ದಶಕದ ಕೆಳ್ಗೆ ನಾನೇ ಪ.ಬ ಮಾಡ್ಕಂಡೆ. ಮೂರ್ ದಶಕದ ಕೆಳ್ಗೆ ನನ್ ವಾರಗೆಯವರು ಸರಿಯಾಗಿ ಉಚ್ಚಾರ ಮಾಡಕ್ಕಾಗದೆ....ನನ್ನುನ್ನ ಮಯಾಸ ಅಂತ ಕರ್ಯೋರು....ಹಂಗಾಗಿ ಮಯಾಸ ಹೆಸರಲ್ಲಿ ಏನಾರ ಬರೆದ್ರೆ ಅದುನ್ನ ಮಡಗಕ್ಕೆ ಒಂದ್ ಕಣಜಬೇಕಲ್ಲ ಅದ್ಕೆ ಈ ಜೋಕಾಲಿ ಕಣಜ. ಬುದ್ವಂತ್ರು ಓದೋ ಚನಾಗಿರೋದ್ನಓದ್ತೀನಿ. ವ್ಯಾಕರಣ ಪಾಕರಣ ಗೊತ್ತಿಲ್ಲ ತೋಚಿದನ್ನ ಗೀಚಾಕೋ ಛಾಳಿ ಇದೆ. ಗುಂಪಲ್ಲಿ ಪಸಂದಾಗ್ ಹಾಡ್ತೀನಿ ರಾಗ ವಸಿ ದೊಡ್ದು. ಸುಮಾರಿಕೆ ಬಡಿಯಕ್ಕೆ ಬರುತ್ತೆ. ನನ್ನೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ 'ಪಟ್ಲ' ಹಳ್ಳಿಲುಟ್ಟಿರು ಪ್ಯಾಟೆಲೆ ಬೆಳದಿರೋದು. ಸದ್ಯಕ್ಕೆ ಕೆಟ್ಟು ಬೆಂಗಳೂರ್ ಪಟ್ಣ ಸೇರೀವ್ನಿ. ಅಮಾಯಕನೂ ಮುಗ್ಧನೂ ಆದ ನನಗೆ ನಿಮ್ಮಂತ ನಾಕ್ ಜನ ಸಿಕ್ಕವ್ರೆ. ಸುಳ್ಳೇಳಿರೂ ಗೊತ್ತಾಗದ ಹೆಂಡತಿ ಜೊತೆಗವ್ಳೆ. ಈಗ್ ತಾನೆ ಪಿಳಿಪಿಳಿ ಕಣ್ ಬಿಡ್ತಾ ಇರೋ ಎಂಡ್ ಮಕ್ಕಳಿವೆ. ಮರೆತ ಹುಡ್ಗೀರ್ ಹೆಸರು ಒಂದು ನೆನಪಿಲ್ಲ.

ಗಣ-ಮಾತ್ರೆಗಳು..ಛಂದಸ್ಸುಗಳು ತದ್ಭವ ತತ್ಸಮಗಳ ಹಂಗಿಲ್ಲದೇ ಆಡುಭಾಷೆಯಲ್ಲಿ ಯಥಾವಥ್ ಪಧ್ಯಬರೀಬೇಕು ಅನಿಸ್ತು. ಬರ್ಯೋಕೆ ಆರಂಭಿಸಿದೆ. ಅವನೆಲ್ಲಾ ಒಂದೆಡೆ ಕಲೆಹಾಕಬೇಕು ಅನಿಸ್ತು' ಜೆಕೆ ಜೋಕಾಲಿ ನರ್ಕೆ ಮನೆ ಅಂತ ಒಂದ್ ಬ್ಲಾಗ್ ಮಾಡಿದೆ. ಸರಳತೆ ಮತ್ತು ಸಹಜತೆ ನನಗೆ ಇಷ್ಟ. ಆದುನಿಕ ಭರಾಟೆ ನಡುವೆ ಕಳೆದೋದೆ ಅನಿಸುತ್ತೆ.ಆಗೆಲ್ಲ ಹಳೆದಿಗಳ ಮೆಲುಕು ಹಾಕ್ತೇನೆ. ಬಂದ ಭಾವನೆಗೆ ಮಯಾಸ ಜೀವ ತುಂಬ್ತಾನೆ. ನನಗಿಷ್ಟ ಆಗೋಹಾಗೆ ಬರೆಯೋ ಪ್ರಯತ್ನದಲ್ಲಿದ್ದೇನೆ."

ಎಂದು ಮಾತು ಮುಗಿಸಿದ ಗೆಳೆಯ ಮಯಾಸ "ಜಾಸ್ತಿ ಅನಿಸಿದ್ದನ್ನ ಮುಲಾಜಿಲ್ಲದೆ ಕಿತ್ತೆಸಿರಿ ಸಾ...ಯಾವ್ದಾರ ಬಿಟ್ಟೀನಿ ಅಂದ್ರ ಒಂದ್ ಪೋನ್ ಹಚ್ಚಿ ಆಪ್ ದ ರೆಕಾರ್ಡ್ ಕೂಡ ಹ್ಯೋಳ್ತೀನಿ ನನ್ ಜೀವನದಲ್ಲಂತು ಮಜಬೂತ್ ಕತೆಗಳಿವೆ. ಹೋರಟಕ್ಕೋಸ್ಕರ 23 ಕೇಸು ಅನುಭವಿಸಿದ್ದೀನಿ. ನಂದು ಹಿಂಗೆ ಅಂತ ಕ್ಯಾರೆಕ್ಟರ್ ಇಲ್ಲ ಸಾ..ನನ್ ಮನ್ಸಿಗೆ ಹಿಡ್ಸೋದೆಲ್ಲಾ ಮಾಡ್ತೀನಿ. ಸಖತ್ ಸ್ವಾಭಿಮಾನಿ..ನಿಯತ್ತು ಅಂತ ಮಾತ್ರ ಅನ್ಕಂಡೀವ್ನಿ." ಅಂತ ಥೇಟ್ ಹಳ್ಳಿ ಹೈದನ ತರಹ ಮಾತನಾಡುವಾಗ ಅವರ ಮಾತುಗಳನ್ನು ಇನ್ನಷ್ಟು ಹೊತ್ತು ಕೇಳಿಸಿಕೊಳ್ಳಬೇಕು ಅನಿಸುತ್ತೆ. ಏನು ಮಾಡೋದು ಇಲ್ಲಿ ಹೆಚ್ಚು ಮಾತನಾಡಲಾಗದು. ಆ ಕಾರಣದಿಂದ ಅವರ ಮಾತುಗಳನ್ನೆಲ್ಲಾ ಅವರ ಬ್ಲಾಗಿನಲ್ಲೇ ಕೇಳಿಸಿಕೊಳ್ಳೋಣ..

ಮಯಾಸ ಅವರ "ಜೆ ಕೆ ಜೋಕಾಲಿ" ಎಂಬ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ. ಸಮಯವಿದ್ದಾಗ ತಪ್ಪದೇ ಕಣ್ಣಾಡಿಸಿ..
http://jkjokaali.blogspot.in/

ಮಯಾಸ ಅವರ ಒಂದೆರಡು ಸೂಪರ್ ತುಣುಕುಗಳು ನಿಮಗಾಗಿ...

ಇಬ್ರೂ ಸೇರ್ಕಂಡೆ
ಒಪ್ಕಂಡೆ ಪಿರೂತಿ ಮಾಡಿದ್ವಿ
ನನ್ ಮರ್ತ್ ನೀ-
ಗಟ್ಮುಟ್ಟಾಗ್ ಗುಂಡ್ಕಲ್ ಇದ್ದಂಗಿದ್ದೀ
ಮತ್ ನಾ ಯಾಕ್ 
ಕಣ್ಣೀರಾಕಂಡ್ ಗೋಳಾಡ್ಕಂಡ್
ಕಾಲ ತಳ್ಲೀ ಮಾರಾಗಿತ್ತಿ
ನಗ್ಸೋರ್ ಸಿಕ್ಕೇ ಸಿಗ್ತಾರ
ನಕ್ಕಂಡ್ ನಕ್ಕಂಡೆ
ಕಾಲಕಳಿತೀನ್ ಬುಡತ್ಲೆಗೆ...!
*****
ಕವ್ಲಿ ನೀರಲ್ ಕೈ ತೊಕ್ಕಂದ್
ಗದ್ದೆ ಬದೀಲ್ಕುಂತು
ಬುತ್ತಿ ಬಿಡಿಸ್ಕಂಡು
ಬಾಳೆಲೆ ಹರ್ಡ್ಕಂಡ್ ಬಡಿಸ್ಕಂಡ್
ಬಾರ್ಸೋ ಮಜ ಪ್ಲೇಟ್ ಮೀಲ್ಸಲಿಲ್ಲ ಕನ..!

ಸೌದೆವಲೀಲಿ, ಮಣ್ಣಿನ್ಮಡ್ಕೆಲಿ
ಮುಳ್ ಹೊಡ್ಸಿದ್ ಒಳ್ಕಲಲ್ಲಿ
ಕಾರಕಡ್ದು , ರುಬ್ ಮಾಡ್ತಿದ್
ಸೊಪ್ಸಾರಿನ್ಗಮ ಮಿಕ್ಸಿ, ಗ್ರೈಂಡರ್
ಬಳ್ಸಮಾಡ್ರೆ ಗಮ್ಗುಡಲ್ಲ ಕನ...!
*****
ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))