ಶನಿವಾರ, ಡಿಸೆಂಬರ್ 22, 2012


ಎಲೆ ಮರೆ ಕಾಯಿ ೬೮
ಕೆಲವು ಹಿರಿಯರ ಮುಂದೆ ಯಾಕೋ ಮೌನ ವಹಿಸಬೇಕು ಎನಿಸುತ್ತೆ. ಯಾಕೆಂದರೆ ಅವರ ಜೀವನದ ಅನುಭವಗಳ ಎದುರು ನಾವು ತುಂಬಾ ತುಂಬಾ ಚಿಕ್ಕವರು. ಅಂತಹ ಜೀವನದ ಅನುಭವವುಳ್ಳ ಹಿರಿಯರು ಮಾತನಾಡುವಾಗ ಅವರು ಮಾತುಗಳನ್ನು ಶ್ರದ್ಧೆಯಿಂದ ಕೇಳಬೇಕು ಎನಿಸುತ್ತದೆಯೇ ಹೊರತು ಮಧ್ಯೆ ಮಾತನಾಡಬೇಕು ಎನಿಸುವುದಿಲ್ಲ. ಈ ದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಹಿರಿಯರ ಮಾತುಗಳನ್ನು ಕೇಳಿದಾಗ ನಾನು ಮೌನಕ್ಕೆ ಶರಣಾದೆ. ಅವರ ಮಾತುಗಳನ್ನು ಕೇಳಿ ನನ್ನ ಹಾಗೆ ಮೌನಕ್ಕೆ ಶರಣಾಗುವ ಸರದಿ ನಿಮ್ಮದೂ ಸಹ ಆಗಲಿ.. ಇವತ್ತಿನ ಎಲೆ ಮರೆ ಕಾಯಿ ಅಂಕಣಕ್ಕೆ ವಿಶೇಷ ಅತಿಥಿಯಾಗಿ ಬಂದಿರುವ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಇಗೋ ನಿಮಗಾಗಿ...

ಪಾರ್ಥಸಾರಥಿ ನರಸಿಂಗರಾವ್

-ಪ್ರಿಯ ನಟರಾಜುರವರೆ
’ಎಲೆ ಮರೆಕಾಯಿಗಳ ಜೊತೆ ಮಾತುಕತೆ ಅಂಕಣಕ್ಕಾಗಿ ನಿಮ್ಮ ಕಿರು ಪರಿಚಯವೊಂದನು ದಯಮಾಡಿ ಮೆಸೇಜ್ ಮಾಡಿ.” ಎಂಬ ನಿಮ್ಮ ಕೋರಿಕೆ ನನಗೆ ಸ್ವಲ್ಪ ಗೊಂದಲ ಮೂಡಿಸಿತು. ಯಾರ ಕಣ್ಣಿಗೂ ಬೀಳದಂತೆ ಇದ್ದು ಸಮಾಜಕ್ಕೆ ಉಪಯೋಗಿಯಾಗಿರುವರನ್ನು ಎಲೆಮರೆ ಕಾಯಿ ಅನ್ನುವರೇನೊ. ನಾನು ಎಲ್ಲರಿಗೆ ಪರಿಚಯ ಮಾಡಿಕೊಡುವಂತ ದೊಡ್ಡ ಸಾಧನೆಯೇನು ಮಾಡಿಲ್ಲ ಎನ್ನುವ ಭಾವ ಒಮ್ಮೆ, ’ನನಗೆ ಅದೆಲ್ಲ ಇಷ್ಟವಿಲ್ಲ’ ಎಂದು ಹೇಳಿದರೆ ಅಹಂಕಾರವಾಗುವದೇನೊ ಎಂಬ ಭಾವ ಮತ್ತೊಮ್ಮೆ , ಈ ದ್ವಂದ್ವದಲ್ಲಿಯೆ ನಿಮ್ಮ ಆತ್ಮೀಯ ಕೋರಿಕೆ ಸ್ವೀಕರಿಸಿದೆ.

ಕತೆ ಕವನ ಕಾದಂಬರಿ ಇವೆಲ್ಲ ಚಿಕ್ಕ ವಯಸ್ಸಿನಲ್ಲಿಂದಲೆ ಪ್ರಾರಂಬವಾದ ಹುಚ್ಚು. ಚಂದಮಾಮದ ’ಭೇತಾಳ’ ವಾಗಲಿ ಸುಧಾ ಪತ್ರಿಕೆಯ ’ಡಾಬು’ ವಾಗಲಿ ನನಗೆ ಅಚ್ಚುಮೆಚ್ಚೆ ಆಗಿತ್ತು. ಏನನ್ನು ಓದಬೇಕೆಂಬ ಕಲ್ಪನೆ ಇಲ್ಲದೆ ಸಿಕ್ಕಿದ್ದನೆಲ್ಲ ಓದುತ್ತಿದ್ದ ನನ್ನ ಓದನ್ನು ಸರಿ ದಾರಿಗೆ ತಿರುಗಿಸಿದವರು ನಮ್ಮ ತಂದೆಯೆ. ಒಮ್ಮೆ ಜಿಂದೆನಂಜುಂಡಸ್ವಾಮಿಯವರ ’ಜಂಟಿ ಪ್ರೇಯಸಿ’ ಪುಸ್ತಕವನ್ನು ಓದುತ್ತಿದ್ದಾಗ ಇಣುಕಿ ನೋಡಿದವರು, ’ನಿನಗೆ ಓದಲೆ ಬೇಕೆಂಬ ಆಸಕ್ತಿ ಇದ್ದಲ್ಲಿ ಸಾಕಷ್ಟು ಇದೆ ಓದು ’ ಎಂದು ಹಲವು ವಿಷಯ ತಿಳಿಸಿ, ಅವರು ’ಮೂಕಜ್ಜಿಯ ಕನಸು’ ಪುಸ್ತಕ ತಂದು ಕೊಟ್ಟಾಗ ನಾನಿನ್ನು ಏಳನೆ ತರಗತಿ. ಆಗ ಪ್ರಾರಂಬವಾದ ಓದು ಕನ್ನಡದ ಬಹುತೇಕ ಎಲ್ಲ ಸಾಹಿತಿಗಳ ಬರಹಗಳನ್ನು ಓದುವಂತೆ ಮಾಡಿತು. ಬೈರಪ್ಪ, ಕಾರಂತ, ಎಂ.ಕೆ. ಇಂದಿರ, ತರಾಸು, ಅನಾಕೃ, ಬೀಚಿ, ಟಿ.ಕೆ.ರಾಮರಾವ್ ಎಲ್ಲರು ನನ್ನ ಸುತ್ತಲು ಸುತ್ತುತ್ತಿದ್ದರು. ಕಡೆಗೆ ಅಂಗಡಿಯಲ್ಲಿ ಕಡ್ಲೆಕಾಯಿ ಕಟ್ಟಿಕೊಟ್ಟರೆ , ತಿನ್ನುತ್ತ ಕಡ್ಲೆಕಾಯಿ ಕಟ್ಟಿದ್ದ ಆ ಪೇಪರಿನ ತುಂಡಿನಲ್ಲಿ ಏನಿದೆ ಎಂದು ಓದುವ ಅಕ್ಷರದಾಹ.....ಹಹ್ಹಹ್ಹ,,

ಹುಟ್ಟಿದ್ದು ತುಮಕೂರು ಜಿಲ್ಲೆಯಾದರು, ತಂದೆಯವರು ಉಪಾದ್ಯಾಯ ವೃತ್ತಿಯಲ್ಲಿದ್ದು ತುಮಕೂರು, ಹಾಸನ, ಚಿಕ್ಕಮಂಗಳೂರು,ಬೆಂಗಳೂರಿನ ಜಿಲ್ಲೆಯ ಹಲವು ಸ್ಥಳ ಸುತ್ತುವಂತಾಗಿತ್ತು. ಹಾಗಾಗಿ ನನಗೆ ಕರ್ನಾಟಕದ ಯಾವುದೆ ಸ್ಥಳವು ಪ್ರಿಯವೆ. ಕೆಲಸಕ್ಕೆ ಸೇರಿ ಕನಕಪುರದಲ್ಲಿ ಎಂಟು ವರ್ಷ ಕಳೆದು, ಬೆಂಗಳೂರಿನಲ್ಲಿ ನೆಲೆಸಿರುವೆ. ಪತ್ನಿ ಹಾಗು ಒಬ್ಬಳು ಮಗಳು ಇರುವ ಪುಟ್ಟ ಸಂಸಾರ.
ಸಾಹಿತ್ಯದ ಪ್ರಾಕಾರದಲ್ಲಿ ಏನನ್ನಾದರು ಬರೆಯಬಲ್ಲೆ ಎಂದು ಯಾವ ಕನಸು ಕಂಡಿರಲಿಲ್ಲ. ಎರಡು ವರ್ಷದ ಕೆಳಗೆ ತಮ್ಮನ ಮಗಳು ದೆವ್ವದ ಕತೆ ಹೇಳಿ ಎಂದು ದುಂಬಾಲು ಬಿದ್ದಾಗ, ಸುಮ್ಮನೆ ಅಂತರ್ಜಾಲದಲ್ಲಿ ಹುಡುಕಿದೆ. ಆಗ ಕಣ್ಣಿಗೆ ಬಿದ್ದಿದ್ದು ’ಸಂಪದ’ ತಾಣ. ಅಲ್ಲಿಯವರೆಗು ಅಂತರ್ಜಾಲದಲ್ಲಿ ಕನ್ನಡ ಅಕ್ಷರವಿರಬಹುದು ಎಂಬ ಕಲ್ಪನೆಯು ಇರದಿದ್ದ ನನಗೆ ಸಂತಸವೆನಿಸಿ, ಅಲ್ಲಿ ಏನಾದರು ಬರೆಯುವ ಕುತೂಹಲ ಮೂಡಿತು. ಹಾಗೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿ ಕೊಂಡಿರುವ ಹಲವು ಸಹೃದಯಿಗಳ ಪರಿಚಯವಾಯಿತು. ’ಸಂಪದದಲ್ಲಿ’ ಸುಮ್ಮನೆ ಬರೆಯುತ್ತ ಹೋದೆ,

ನಾನು ಬರೆದುದ್ದನ್ನೆಲ್ಲ ಓದಿ ಬೆನ್ನು ತಟ್ಟಲು ಹಲವರಿದ್ದರು. ತಪ್ಪು ತಿದ್ದಿದವರು ಇದ್ದರು. ಸಣ್ಣಕತೆಗಳ ರಚನೆಯಲ್ಲಿ ಹೆಚ್ಚು ಆಸಕ್ತಿ . ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯಸೇವೆ ನಡೆಸುತ್ತಿರುವ ಹತ್ತು ಹಲವು ಗೆಳೆಯರ ನಡುವೆ ನಾನೊಬ್ಬ , ಇನ್ನು ತಪ್ಪು ಹೆಜ್ಜೆ ಇಡುತ್ತಿರುವ ’ಶಿಶು’ ಎಂದೆ ನನ್ನ ಭಾವನೆ. ಸಾಹಿತ್ಯ ಸೇವೆ , ಕನ್ನಡಸೇವೆ ಅನ್ನುವದೆಲ್ಲ ದೊಡ್ಡ ಪದಗಳು, ನನ್ನೊಳಗಿನ ಏನನ್ನೊ ತೃಪ್ತಿಪಡಿಸಲು, ನನ್ನೊಳಗೆ ಹುಟ್ಟುವ ಭಾವನೆಗಳನ್ನು ಹೊರಹಾಕಲು ಇದೊಂದು ಮಾರ್ಗವಷ್ಟೆ.

ನನ್ನದೊಂದು ‘ಕರಿಗಿರಿ’ ಎಂಬ ಅಂತರ್ಜಾಲಪುಟವಿದೆ , ಸಣ್ಣಕತೆಗಳಿಗಷ್ಟೆ ಹೆಚ್ಚು ಒತ್ತುಕೊಟ್ಟಿರುವ ಪುಟವದು , ಆಸಕ್ತಿ ಇರುವವರು ಬೇಟಿಕೊಡಬಹುದು www.narvangala.blogspot.in

ನಾನು ಬರೆದ ಕವನಗಳಲ್ಲಿ ನನಗೆ ಅಚ್ಚುಮೆಚ್ಚು :ಮನೆ ಎಂದರೆ ಅದು ಬರಿ ಮನೆಯಲ್ಲ (೨೦೧೧) , ತರಕಾರಿ ಹುಡುಗಿ ಮತ್ತು ನಾನು (೨೦೧೨) ನನ್ನ ಬಾಲ್ಯದ ಗೆಳತಿ (೨೦೧೧)
ಹಾಗೆ ಕತೆಗಳಲ್ಲಿ ನಾನು ಇಷ್ಟಪಟ್ಟಿದ್ದು ವಿಕ್ಷಿಪ್ತ(೨೦೧೦) ಪ್ರಮಥಿನಿ (೨೦೧೦) ಲೌಕಿಕ ಅಲೌಕಿಕ (೨೦೧೧) ದೂರತೀರದ ಕರೆ (೨೦೧೨)

ತಮ್ಮ ವಿನಯದ ಮಾತುಗಳಿಂದಲೆ, ನಮ್ಮೊಳಗೆ ಹಿರಿತನ ತುಂಬುವ ಮಾತಿನ ಜಾಣ ನಟರಾಜುರವರಿಗೆ, ಅಭಿನಂದಿಸುತ್ತ
ಎಲ್ಲ ಸಾಹಿತ್ಯ ಪ್ರೇಮಿಗಳಿಗು ವಂದನೆಗಳನ್ನು ಅರ್ಪಿಸಲು ಈ ಅವಕಾಶ ಬಳಸಿಕೊಳ್ಳುತ್ತ
ನಮಸ್ಕಾರಗಳೊಡನೆ
ಪಾರ್ಥಸಾರಥಿ"

ಎಂದು ಚಂದವಾಗಿ ಮಾತನಾಡಿದ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ.. ಅವರು ತಿಳಿಸಿದ ಅವರ "ಕರಿಗಿರಿ" ಬ್ಲಾಗಿಗೆ ಭೇಟಿ ನೀಡಿ ಅವರ ಬರಹಗಳನ್ನು ಓದಿ ಆಹ್ವಾದಿಸಿ..

ಪಾರ್ಥಸಾರಥಿ ಸರ್ ಅವರ ಬ್ಲಾಗಿನಿಂದ ಆಯ್ದ ಒಂದೆರಡು ಕವನಗಳ ತುಣುಕುಗಳನ್ನು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಅಮ್ಮ  ಕೈಯ ತೋರಿ ಹೇಳಿದಳು
'ಅಲ್ಲಿ ಹೋಗಿ ತಾ'
ಎಡವುತ್ತ ನಡೆದು ಹೋದೆ
"ಏನು ಬೇಕು ಪುಟ್ಟಾ?"
ಕೇಳಿದಳು ಅವಳು
ತರಕಾರಿ ಮಾರುವವಳು
"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ
"ಅಯ್ಯೊ ನನ್ನ ಬಂಗಾರ"
ಉಲಿದಳು ಆಕೆ ಜೊತೆಗೆ ಒಂದು ಸೇಬು
'ತಿನ್ನು ಪುಟ್ಟು' ಎಂದು
*****

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲು
ಆದರೆ
ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತು

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು
*****

ಶುಭವಾಗಲಿ

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಡಿಸೆಂಬರ್ 13, 2012


ಎಲೆ ಮರೆ ಕಾಯಿ ೬೭
ಬದುಕಿನ ಕಾಲಘಟ್ಟದಲ್ಲಿ ಒಂದಷ್ಟು ದಿನಗಳಿರುತ್ತವೆ. ಏನಾದರು ಸಾಧಿಸಲೇಬೇಕು ಎಂಬ ಹಂಬಲದಿಂದ ಕಷ್ಟಪಡುತ್ತಲೇ ಯಶಸ್ಸಿನತ್ತ ದೃಷ್ಟಿ ನೆಟ್ಟು ಧ್ಯಾನಿಸುವ ಕನಸು ಕಾಣುವ ದಿನಗಳವು. ಅಂತಹ ಧ್ಯಾನಕ್ಕೆ ಕುಳಿತವರು ತಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು ಎಂದುಕೊಳ್ಳುತ್ತಲೇ ತಮ್ಮ ಬದುಕನ್ನು ಚಂದವಾಗಿ ಕಟ್ಟುತ್ತಾರೆ ಎನ್ನುವುದಕ್ಕಿಂತ ತಮ್ಮ ಮಕ್ಕಳಿಗೆ ಭವಿಷ್ಯವೊಂದನ್ನು ಕಟ್ಟಿಕೊಡುತ್ತಾರೆ ಎನ್ನಬಹುದು. ಬಡತನದ ದಿನಗಳನ್ನು ಕಳೆದು ತನ್ನ ಆರ್ಥಿಕ ಮಟ್ಟವನ್ನು ಉತ್ತಮ ಸ್ಥಿತಿಗೆ ತಂದುಕೊಂಡಿರುವ ಪ್ರತಿಯೊಬ್ಬರ ಒಳಗೂ ತಾವೇ ಬರೆದಿಟ್ಟುಕೊಂಡ ಡೈರಿಗಳಂತೆ ಕಾಣುವ ಮನದ ಮಾತುಗಳು ಸಾವಿರವಿರುತ್ತವೆ. ಎಂದಾದರು ಅಂತಹವರನ್ನು ಮಾತಿಗೆ ಎಳೆದರೆ ತಾವು ಕಷ್ಟಪಟ್ಟು ಉತ್ತಮ ಸ್ಥಿತಿಗೆ ಬೆಳೆದು ಬಂದ ದಿನಗಳನ್ನು ಅವರು ನೆನೆಸಿಕೊಳ್ಳುವಾಗ ಅವರ ಬಗ್ಗೆ ನಮಗೆ ಹೆಮ್ಮೆ ಹಾಗು ಗೌರವ ಮೂಡಿಬಿಡುತ್ತದೆ. ಇವತ್ತು ಓದಿಗೆ ಸಿಕ್ಕಿದ ಚಿನ್ಮಯಧಾರೆ ಎಂಬ ಬ್ಲಾಗಿನ ಲೇಖನವೊಂದರಲ್ಲಿ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿಕೊಂಡಿರುವ ಗೆಳೆಯ ಚಿನ್ಮಯ್ ಅವರ ಮನದ ಈ ಕೆಳಗಿನ ಮಾತುಗಳು ತುಂಬಾ ಇಷ್ಟವಾದವು...

"ಸಂಜೆ ಅಪರೂಪಕ್ಕೊಮ್ಮೆ ಸುತ್ತಾಡಲು ಹೋಗುತ್ತಿದ್ದ ನಾವು ಎಲ್ಲರಂತೆ ಹೊರಗಡೆ ಏನಾದರು ತಿನ್ನೋಣ ಅಂದುಕೊಂಡಾಗಲೆಲ್ಲ ಕೂಡಿಸಿ, ಕಳೆದು, ಗುಣಿಸಿ, ಬಾಗಿಸಿ ಕೊನೆಗೆ ಚಹಾ ಕುಡಿಯೋಣ ಎಂಬ ಒಕ್ಕೊರಲಿನ ತಿರ್ಮಾಣಕ್ಕೆ ಬರುತಿದ್ದೆವು. ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾವನ್ನು ಮೂರು ಜನ ಕುಡಿಯುತ್ತಿದ್ದೆವು ಅಂದರೆ, ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾ ಮೂರು ಜನರ ಪಾಲು..!! ಜೇಬಿನಲ್ಲಿ ಒಂದೊಂದು ರೂಪಾಯಿಗೂ ಘನವಾದ ಬೆಲೆ ಸಂದಾಯವಾಗುವಂಥ ಸಮಯ ಅದು..!!"

ಗೆಳೆಯ ಚಿನ್ಮಯ್ ಅವರ ಚಹಾ ದಿನಗಳ ಕುರಿತ ಮೇಲಿನ ಸಾಲುಗಳನ್ನು ಓದುತ್ತಲೇ ನೆಪೋಲಿಯನ್ ಹಿಲ್ ರವರ "ನಮ್ಮಪ್ಪ ಶ್ರೀಮಂತನಾಗಲು ಬಯಸಿರಲಿಲ್ಲ ಆದ್ದರಿಂದ ನಾವು ಬಡವರಾಗಿದ್ದೆವು" ಎಂಬ ಸಾಲೊಂದು ನೆನಪಾಯಿತು. ನಮ್ಮಪ್ಪ ಬಡವನಾಗಿದ್ದ ನಾವು ಬಡವರಾಗಿ ಉಳಿಯಬಾರದು ಎಂಬ ಕಿಚ್ಚು ನಮ್ಮಲ್ಲಿ ಹುಟ್ಟಿದ ದಿನವಲ್ಲವೇ ನಾವು ಯಶಸ್ಸಿನತ್ತ ಪಯಣ ಬೆಳೆಸುವುದು. ಅಂತಹ ಯಶಸ್ಸಿನತ್ತ ಪಯಣ ಬೆಳೆಸಿದ ದಿನಗಳ ಕುರಿತು ಗೆಳೆಯ ಚಿನ್ಮಯ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿರುವುದು ಖುಷಿಯ ವಿಚಾರ..

ನನ್ನ ಮುಗ್ಧ ಗೆಳತಿಗೆ          
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..

ಕವಿತೆ, ಚುಟುಕಗಳನ್ನು ಬರೆಯುವ ಕವಿ ಕಾಲಾಂತರದಲ್ಲಿ ಓದುಗರ ಓದುವ ರುಚಿಯನ್ನು ಅರ್ಥೈಸಿಕೊಂಡು ತನ್ನ ಕಾವ್ಯ ಕೃಷಿಯಲ್ಲಿ ಬದಲಾವಣೆಯನ್ನು ಹೇಗೆ ಕಂಡುಕೊಳ್ಳುತ್ತಾನೆ ಎನ್ನುವುದಕ್ಕೆ ಈ ಕವಿ ಗೆಳೆಯನ ಮೇಲಿನ ಸಾಲುಗಳು ಉತ್ತಮ ಉದಾಹರಣೆ.. ಚುಟುಕಗಳಲ್ಲೇ ತಮ್ಮನ್ನು ಗುರುತಿಸಿಕೊಳ್ಳಲು ತೊಡಗಿರುವ ಕವಿಗಳ ಸಂಖ್ಯೆ ದಿನ ದಿನಕ್ಕೆ ಅದರಲ್ಲೂ ಫೇಸ್ ಬುಕ್ ತಾಣದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉಳಿದವರಿಗಿಂತ ವಿಭಿನ್ನವಾಗಿ ನಿಲ್ಲುವುದು ಕಷ್ಟದ ಕೆಲಸ.. ಆ ವಿಭಿನ್ನತೆ ನಮ್ಮ ಬರಹಗಳಲ್ಲಿ ಕಂಡ ದಿನ ಜನ ಮೆಚ್ಚುಗೆ ತಾನಾಗಿಯೇ ಸಿಕ್ಕಿಬಿಡುತ್ತದೆ ಎನ್ನಬಹುದು. ಗೆಳೆಯ ಚಿನ್ಮಯ್, ತಮ್ಮ ವೃತ್ತಿಯ ನಿಮಿತ್ತ ವಿವಿಧ ಜಾಗಗಳನ್ನು ಸುತ್ತಿ ಬಂದವರು. ಅವರು ಚುಟುಕ ಮತ್ತು ಕಾವ್ಯಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರ ಹೊರತು ತಮ್ಮ ಬದುಕಿನ ಅನುಭವಗಳ ದಾಖಲಿಸುವ ಪ್ರಯತ್ನ ಮಾಡಿಲ್ಲ. ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಲು ತೊಡಗಿದರೆ ಅವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಬದುಕನ್ನು ತಮ್ಮ ಬರಹಗಳಲ್ಲಿ ಕಟ್ಟಿಕೊಡಬಲ್ಲರು. ಇತ್ತೀಚೆಗಷ್ಟೇ ಗುಜರಾತ್ ನಿಂದ ಮತ್ತೆ ಕರ್ನಾಟಕಕ್ಕೆ ಬಂದಿರುವ ಅವರ ಬರಹಗಳಲ್ಲಿ ಗುಜರಾತ್ ಕುರಿತ ಅವರ ಅನುಭವ ಲೇಖನಗಳು ಹೊರ ಬರಲಿ ಎಂದು ಆಶಿಸುತ್ತಾ ಚಿನ್ಮಯ್ ರವರ ಕಿರು ಪರಿಚಯ ಎಲೆ ಮರೆ ಕಾಯಿಗಾಗಿ ಗೆಳೆಯರೇ ಇಗೋ ನಿಮ್ಮ ಮುಂದೆ..

[Image1075.jpg]
ಚಿನ್ಮಯ್ ಮಠಪತಿ

"ಮಾತೆ ಭುವನೇಶ್ವರಿ ಮತ್ತು ಸಹೃದಯಿ ಕನ್ನಡ ಕವಿ ಹೃದಯಗಳಿಗೆ ನಮಿಸುತ್ತಾ…
ಮೊದಲನೆಯದಾಗಿ ಕನ್ನಡ ಬ್ಲಾಗ್ ಮುಖಾಂತರ ಯುವ ಬರಹಗಾರರನ್ನು ನಾಡಿಗೆ “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದ ಮೂಲಕ ಪರಿಚಯಿಸುತ್ತಿರುವ ಸಹೃದಯಿ ಅಂಕಣಕಾರ ಮತ್ತು ಯುವ ಕವಿ ಮಿತ್ರರಾದ ನಟರಾಜು ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಟರಾಜು ಅವರಿಂದ ನಿಮ್ಮ ಬ್ಲಾಗ್ ಮತ್ತ ನಿಮ್ಮ ಕುರಿತು “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದಲಿ ಪರಿಚಯಿಸಲು ಇಚ್ಚಿಸಿದ್ದೇನೆ ಆದ್ದರಿಂದ ನಿಮ್ಮ ಸ್ವ ಪರಿಚಯವನ್ನು ಕಳುಯಿಸಿ ಕೊಡಿ ಎಂದು ಸಂದೇಶ ಬಂದಾಗ, ಆ ಸಂದೇಶವನು ನೋಡಿ ನನಗೆ ಸಂತಸಕ್ಕಿಂತ ಅಶ್ಛರ್ಯವೇ ದ್ವಿಗುಣವಾಗಿ ಕಾಡಿತು. ಕಾರಣಗಳು ಸಾವಿರಾರು, ನನ್ನಂಥ ಪುಟ್ಟ ಬರಹಗಾರನಿಗೆ ಇಂತಹ ಮಾನ್ಯತೆ ನಿಜವಾಗಲೂ ದೊಡ್ಡದಾದ ಬಿರುದು ಬಹುಮಾನಕ್ಕಿಂತಲೂ ಮಿಗಿಲಾದದ್ದು. ಅವರ ಪ್ರೀತಿತುಂಬಿದ ಮನವಿಯನ್ನು ಸಂಕೋಚದಿಂದಲೆ ಒಪ್ಪಿಕೊಂಡು ನನ್ನ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಹುಟ್ಟಿದ್ದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ತಲ್ಲೂರು ಎಂಬ ಪುಟ್ಟ ಗ್ರಾಮದಲಿ. ತಂದೆ ಶ್ರೀ. ಸಿದ್ದಯ್ಯ ಮತ್ತು ತಾಯಿ ಶ್ರಿಮತಿ.ಗುರುಸಿದ್ದಮ್ಮ. ನನ್ನ ಹುಟ್ಟೂರೆಂದರೆ ನನಗೆ ಅತೀವ ಪ್ರೀತಿ ಮತ್ತು ಅಭಿಮಾನ ಕೂಡ. ಸುತ್ತಲೂ ನಾಲ್ಕು ಕಡೆಗಳಿಂದ ಹಸುರಿನ ಬೆಟ್ಟಗಳ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ನನ್ನ ಹುಟ್ಟೂರಲಿ ದೇಸಾಯಿ ಒಡೆತನದ ಒಂದು ಸುಂದರ ಅರಮನೆ (ವಾಡೆ) ಇದೆ. ಆ ಕಾರಣಕ್ಕಾಗಿ ಕನ್ನಡದ ಹಲವಾರು ಚಲನ ಚಿತ್ರಗಳು ನನ್ನೂರಲ್ಲಿ ಚಿತ್ರಿಕರಣಗೊಂಡಿವೆ. ಕಾರಣಾಂತರಗಳಿಂದ ನಮ್ಮೂರಲ್ಲಿ ನಾನು ಇದುವರೆಗೂ ಜೀವನ ಕಳೆದದ್ದು ಕೇವಲ ಎರಡು ವರ್ಷ. ಧಾರವಾಡದಲ್ಲಿ ನನ್ನ ಸಹೋದರ ನೆಲೆಸಿರುವುದರಿಂದ ಸಧ್ಯಕ್ಕೆ ಸಾಹಿತ್ಯ ನಗರಿ ಧಾರವಾಡ ನನ್ನೂರಾಗಿ ಹೋಗಿದೆ. ಅಂದ ಹಾಗೆ ನಾನು ಓದಿದ್ದು ಎಂ.ಎಸ್.ಸಿ ನರ್ಸಿಂಗ್. ನನ್ನ ಓದು ಉದ್ಯೋಗ ಮತ್ತು ಸಾಹಿತ್ಯಾಸಕ್ತಿಗೂ ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಕೊಂಡರು ತಪ್ಪಿಲ್ಲ.

ಮಾತೃ ಭಾಷೆ ಕನ್ನಡ ನನ್ನೆದೆಯಾಳಕ್ಕೆ ಇಳಿದು ನನ್ನ ಉಸಿರಾಗಿದ್ದು ನನ್ನ ಬಾಲ್ಯದ ದಿನಗಳಲಿ. ಮೂಲತಃ ಕನ್ನಡ ಮಾದ್ಯಮದಲಿ ಹತ್ತನೆಯ ತರಗತಿವರೆಗೆ ಓದಿದ ನಾನು, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಕನ್ನಡದ ಸಾಹಿತ್ಯ ಪ್ರಕಾರಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಂಡೆ. ಅದರಲ್ಲಿ ಪ್ರಥಮ ಭಾಷೆ ಕನ್ನಡ ವಿಷಯ ನನ್ನ ಅಚ್ಚು ಮೆಚ್ಚಿನ ವಿಷಯವಾಗಿತ್ತು. ನಾನು ಎಂಟನೆಯ ತರಗತಿಯಲ್ಲಿದ್ದಾಗ ಸಾಕ್ಷರತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತಹ ಒಂದು ಪುಟ್ಟ ನಾಟಕವನ್ನು ಬರೆದು ನನ್ನ ಸ್ನೇಹಿತರೊಡಗೂಡಿ ಹಳ್ಳಿಯಲಿ ನಾಟಕವಾಡಿದ್ದೆ. ತದನಂತರ ಜೀವನದ ಒಂದಿಷ್ಟು ಅಹಿತಕರ ತಿರುವುಗಳಲ್ಲಿ ನನ್ನ ಬದುಕಿನ ಮುಕ್ಕಾಲು ಭಾಗ ಸೆವೆಸಿದ ಕಾರಣ ಹೃದಯ ಗೂಡಲ್ಲಿ ಕನ್ನಡ ತಾಯಿನ ನುಡಿ ಸೇವೆಯ ವಾಂಛೆ ಸಂಘರ್ಷದ ಬದುಕಿನಲಿ ಕನಸಾಗಿಯೇ ಉಳಿದು ಹೋಗಿತ್ತು. ನನ್ನ ಎಂ.ಎಸ್.ಸಿ ಓದು ಮುಗಿದ ನಂತರ ಜೀವನಕೆ ಒಂದು ನೆಲೆ ಸಿಕ್ಕಿತು.ಇತ್ತೀಚಿನ ಆರೆಂಟು ತಿಂಗಳುಗಳಿಂದ ನನ್ನ “ಚಿನ್ಮಯಧಾರೆ”ಯಲಿ ನನ್ನ ಪುಟ್ಟ ಕಥೆ, ಕವನ, ಚುಟುಕುಗಳ ಮುಖಾಂತರ ಅಕ್ಷರ ಕಲಿಸಿಕೊಟ್ಟ ಕನ್ನಡಮ್ಮನ ಸೇವೆಯಲಿ ತೊಡಗಿದ್ದೇನೆ.

ಇನ್ನು ಕನ್ನಡ ಬ್ಲಾಗುಗಳೆಂದರೆ ಅವು ಆಧುನಿಕ ಸಾಹಿತ್ಯ ಲೋಕದ ಆವಿಷ್ಕಾರಗಳು. ಇದ್ದಲ್ಲಿಯೇ ಸಾಹಿತ್ಯಾಮೃತವನ್ನು ನೀಡುವ ಅಕ್ಷ(ರ)ಯ ಪಾತ್ರೆಗಳು.

ಕೊನೆಯದಾಗಿ ನನ್ನೆಲ್ಲ ಗೌರವಾನ್ವಿತ ಹಿರಿಯ ಬರಹಗಾರರಲ್ಲಿ ನನ್ನ ವಿನಮ್ರ ವಿನಂತಿ. ನಿಮ್ಮ ಅನುಭವಧಾರೆಯಿಂದ ನನ್ನಂತಹ ಯುವ ಬರಹಗಾರರನ್ನು ತಿದ್ದಿ ತೀಡಿ ಅವರನ್ನು ನಿಮ್ಮಂತೆಯೇ ಒಬ್ಬ ಪಕ್ವ ಬರಹಗಾರನನ್ನಾಗಿಸಿ. ನಾನು ಸಹ ನಿಮ್ಮ ಸಲಹೆ ಸೂಚನೆಗಳಿಗೆ ತಲೆಬಾಗಿ ಇನ್ನು ಒಂದಿಷ್ಟು ಸಮಾಜಮುಖಿ ಸಾಹಿತ್ಯವನ್ನು ಮಾತೃ ಭಾಷೆ ಕನ್ನಡಮ್ಮನ ಅಕ್ಷರ ರೂಪದಲ್ಲಿ ಓದು ಮುಕ್ಕಾಲಾಗಿಸಿಕೊಂಡು ಬರಹ ಒಕ್ಕಾಲಾಗಿಸಿಕೊಂಡು ಅಳಿಲು ಸೇವೆ ನೀಡುವೆ.ಶುಭಕಾಮನೆಗಳೊಂದಿಗೆ."

ಎಂದು ಚಂದದ ಮಾತನಾಡಿದ ಗೆಳೆಯ ಚಿನ್ಮಯ್ ರವರ ಕನ್ನಡ ಪ್ರೇಮಕ್ಕೆ ನಮನಗಳು..
ಸಹೃದಯಿ ಗೆಳೆಯರೇ, ಗೆಳೆಯ ಚಿನ್ಮಯ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಕಣ್ಣಾಡಿಸಿ..
http://chinmayadhare.blogspot.in/

ಚಿನ್ಮಯ್ ರವರ ಚಂದದ ಒಂದೆರಡು ಚುಟುಕಗಳು ಇಗೋ ನಿಮಗಾಗಿ.. ಖುಷಿಯಿಂದ ಓದಿಕೊಳ್ಳಿ..

ಪ್ರೀತಿಯ ಪರೀಕ್ಷೆಯಲಿ
ಇಬ್ಬರೂ ನಕಲು ಮಾಡಿಯೇ
ಉತ್ತೀರ್ಣರಾದೆವು…
ಈಗ ನಕಲು ಪ್ರೀತಿಯಿಂದ
ಜೀವನವೇ ನಕಲು ನಕಲು.
*****
ಅಳಿದು ಹೋಗುತ್ತಿರುವ
ಮನುಜ ಸಂಬಂಧಗಳ
ಮೂರ್ತಿಯ ಮಾಡಿ
ಗುಡಿಯ ಕಟ್ಟಬೇಕು,
ದೇವರೆಂಬ ಭಯದಿ
ಕಠೋರ ಹೃದಯಗಳು
ತಲೆಬಾಗಿ ನಮಿಸ ಬಹುದು..!!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಡಿಸೆಂಬರ್ 6, 2012


ಎಲೆ ಮರೆ ಕಾಯಿ 
ವರ ಸಿಕ್ಕಿದ ಭ್ರಮೆಯಲ್ಲಿ 
ಜಗವ ಮರೆತವಳು 
ನಶೆಯ ಮತ್ತಲ್ಲಿ
ಹರೆಯದ ಕೊಳ ಈಜಿದವಳು 

ಅವನೋ ಕೊಡವಿಕೊಂಡು ಎದ್ದನು 
ಇವಳು ಎಡವಿ ಬಿದ್ದಳು 
ನಿಲ್ಲೆಂದರೆ ಅಂವ ಕೇಳ 
ಬಾರದಿರೆಂದರೆ ಬಸಿರು ಕೇಳ 

ಇಂತಹ ಕವಿತೆಯನ್ನು ಹೆಣ್ಣೊಬ್ಬಳಷ್ಟೇ ಚಂದವಾಗಿ ಕಟ್ಟಿಕೊಡಬಲ್ಲಳು. ಅವಿವಾಹಿತ ಹೆಣ್ಣನ್ನು ಬೆಡ್ ರೂಮಿನ ಹಾಸಿಗೆಯ ಮೇಲಷ್ಟೇ ಕಾಣುವ ಗಂಡಿಗೆ  ಅವಳ ಜೊತೆ ಸುಖಿಸಿ ಎದ್ದ ನಂತರದ ಪರಿಣಾಮಗಳ ಅರಿವು ಎಷ್ಟಿರುತ್ತದೋ ಏನೋ ತಿಳಿಯದು. ಅವಳ ಜೊತೆ ಸುಖಿಸುವ ಮುನ್ನ ಒಂದು ಕ್ಷಣ ಆಸ್ಪತ್ರೆಯ ಬೆಡ್ ಮೇಲೆ ಆ ಹೆಣ್ಣನ್ನು ಊಹಿಸಿಕೊಂಡರಷ್ಟೇ ಆ ಕ್ಷಣದ ಹೆಣ್ಣು ಗಂಡಿನ ನೋವು, ಹತಾಶೆ, ಅಸಹಾಯಕತನ, ಭಯವನ್ನು ಅವನು ಕಾಣಲು ಸಾಧ್ಯ. ಆ ಭಯ ಇಬ್ಬರಲ್ಲೂ ಮೂಡಿದ್ದೇ ಆದರೆ ಅಂತಹ ಸ್ಥಿತಿ ಬಾರದಿರಲಿ ಎಂದು ಕೆಲವರು ತಮ್ಮ ಆಸೆಗಳನ್ನು ನಿಗ್ರಹಿಸಿದರೆ ಮತ್ತೆ ಕೆಲವರು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಸುಖಿಸಿಬಿಡಬಹುದು ಅಥವಾ ಇನ್ನೂ ಕೆಲವರು ಯಾವ ಕ್ರಮಗಳನ್ನು ಅನುಸರಿಸದೆ ಅದೃಷ್ಟ ಕೈ ಕೊಟ್ಟರೆ ಸಮಸ್ಯೆಯಲ್ಲಿ ಸಿಲುಕಬಹುದು. ಮೇಲಿನ ಕವಿತೆಯ ಸಾಲುಗಳನ್ನು ಓದುತ್ತಲೇ ಹೆಣ್ಣಿನ ಒಳ ತುಮುಲ ಯಾಕೋ ಮನಸಿನ ಒಳಗೆ ಬಂದು ನಿಂತಂತಾಯಿತು. ಅದರ ಜೊತೆಗೆ ಹಿರಿಯ ಕವಿ ದೊಡ್ಡ ರಂಗೇ ಗೌಡರು ಬರೆದ "ಪ್ರೀತಿ ಪ್ರೇಮ ನಡೆಯೋ ವೇಳೆ ತಪ್ಪೋದಿಲ್ಲ ರಾಸಲೀಲೆ.. ಕದ್ದು ಮುಚ್ಚಿ ನಡೆಸೋ ವೇಳೆ ಮನಸ್ಸಿನಲ್ಲಿ ತೂಗುಯ್ಯಾಲೆ" ಎಂಬ ಸಾಲುಗಳೂ ಸಹ ನೆನಪಾದವು.

"ಸ್ವಲ್ಪ ದಿನದಿಂದ ಬಹಳನೇ ಬಾಬಜ್ಜನ ನೆನಪು....ಸಿಕ್ಕಾಪಟ್ಟೆ ಅನ್ನುವಷ್ಟು ಜಾಸ್ತಿಯಾಗಿತ್ತು...ಅಜ್ಜನ ಗುಳಿ ಬಿದ್ದ ಕೆನ್ನೆ ಹಿಂಡಿ, ಜೋಬಲ್ಲಿನ ಎಂಟಾಣೆ ರಸಗುಲ್ಲಕ್ಕೆ ಆಸೆಯಾಗಿತ್ತು....ಜಗಳ ಕಾದು ಸೋಲಿಸಬೇಕೆನಿಸಿತ್ತು... ಮುದ್ದಿನ ಅಜ್ಜನ ಬಳಿ ಆಟವಾಡಬೇಕೆನ್ನುವ ಹುಮ್ಮಸ್ಸು.. ಹಮ್ಮು ಬಿಮ್ಮಿಲ್ಲದ ಅಜ್ಜ ಎಂದರೆ ಅದೇನೋ ಅದಮ್ಯ ಅಕ್ಕರೆ.."

ಮೇಲಿನ ಚಂದದ ಸಾಲುಗಳ ಬರೆದ ಇಂತಹ ಲೇಖಕಿ ಸಹೋದರಿಯರ ಬರಹಗಳನ್ನು ಓದಿದಾಗ ಹೀಗೆ ಅನಿಸುತ್ತೆ. ನಾವು ಪ್ರಪಂಚವನ್ನು ಸುತ್ತುತ್ತೇವೆ ಆದರೆ ಅವರು ನಮ್ಮಷ್ಟು ಪ್ರಪಂಚ ಸುತ್ತುವುದಿಲ್ಲ. ಬದಲಿಗೆ ತಾವು ಇದ್ದಲ್ಲಿಯೇ ಪ್ರಪಂಚವೊಂದನ್ನು ಕಾಣುತ್ತಾರೆ ಇಲ್ಲ ಪ್ರಪಂಚವೊಂದನ್ನು ಕಟ್ಟುತ್ತಾರೆ. ಅವರು ಕಟ್ಟುವ ಪ್ರಪಂಚದಲ್ಲಿ ಅಜ್ಜಿ ತಾತ ಅಪ್ಪ ಅಮ್ಮ ಮನೆ ಮಕ್ಕಳು ಕೈದೋಟ ಅಡುಗೆ ಊಟ ಆಟೋಟ ಇಂತಹ ಪುಟ್ಟ ಪುಟ್ಟ ಸಂಗತಿಗಳಿಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಅದನ್ನು ಮೀರಿದ ಪ್ರಪಂಚವನ್ನು ಅವರು ಕಟ್ಟುವುದಾದರೆ ಅದು ತಾವಷ್ಟೇ ಬಿಡುವಿನ ವೇಳೆಯಲ್ಲಿ ವಿಹರಿಸಲು ಕಟ್ಟಿಕೊಳ್ಳುವ ಪ್ರಪಂಚ. ಅದು ಅವರ ಪಾಲಿಗೆ ತಮ್ಮನ್ನೋ ತಮ್ಮ ಮಕ್ಕಳನ್ನೋ ಕಿನ್ನರಿಯರಂತೆ ಊಹಿಸಿಕೊಂಡು ಖುಷಿಪಡುವ ಒಂದು ಕಲ್ಪನಾ ಲೋಕ. ಅಂತಹ ಖುಷಿಯ ಪ್ರಪಂಚವನ್ನು ನಮ್ಮ ಬರಹಗಳಲ್ಲಿ ನಾವೇಕೆ ಕಟ್ಟಿಕೊಡಲು ವಿಫಲರಾಗುತ್ತೇವೆ ಎಂದು ಪದೇ ಪದೇ ಅನಿಸುತ್ತದೆ. ತನ್ನ ಅಜ್ಜನ ಕುರಿತು ಪುಟ್ಟ ಮಗುವಿನಂತೆ ಈ ಸಹೋದರಿ ಬರೆದ ಸಾಲುಗಳ ನೋಡಿ ಯಾಕೋ ಹಾಗೆ ಅನಿಸಿತು.

ಇಬ್ಬರಿಗೂ ಗೊತ್ತಿತ್ತು
ಒಬ್ಬರಿಗೊಬ್ಬರು ದಕ್ಕುವುದಿಲ್ಲವೆಂದು
ಆದರೂ ಅದ್ಯಾವ ಮಾಯೆ ಆವರಿಸಿತ್ತು..?
ಗೊತ್ತಿದ್ದೂ ಮಾಡಿದ ತಪ್ಪಿಗೆ ಶಿಕ್ಷೆ ಇಷ್ಟು ಘೋರವಾಗಿರುತ್ತಾ?
ಅಷ್ಟಕ್ಕೂ ಅದು ತಪ್ಪಾ?
ಇಬ್ಬರೂ ಬೆನ್ನು ಮಾಡಿ ಹೊರಟಿದ್ದಾರೆ...
ಅವಳಿಗೆ ಅವನಿಲ್ಲ..
ಅವನಿಗೆ ಅವಳಿಲ್ಲ..
ಯಾತನೆ ಬಾಳೆಲ್ಲ.. :'(

ಹೀಗೆ ಅಧ್ಬುತವಾಗಿ ಬರೆಯುವ ನಿಜಕ್ಕೂ ಎಲೆ ಮರೆ ಕಾಯಿ ಎನ್ನಬಹುದಾದ ಪ್ರತಿಭೆ ಸುಷ್ಮಾ ಮೂಡುಬಿದಿರೆ. ಸಹೋದರಿ ಸುಷ್ಮಾ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಈ ವಾರದ ಎಲೆ ಮರೆ ಕಾಯಿಯಲ್ಲಿ ಸಹೃದಯಿಗಳೇ ಇಗೋ ನಿಮಗಾಗಿ..

ಸುಷ್ಮಾ ಮೂಡುಬಿದಿರೆ

"ಹೆಸರು ಸುಷ್ಮಾ ಮೂಡುಬಿದಿರೆ.. ಊರು ಜೈನಕಾಶಿ ಎಂದೇ ಪ್ರಖ್ಯಾತವಾದ ಮೂಡಬಿದಿರೆ.

ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ... ದ್ವೀತಿಯ ಪಿಯುಸಿ ವರೆಗಿನ ವ್ಯಾಸಂಗವೂ ಅಲ್ಲೇ...ಸದ್ಯ ಪದವಿ ಶಿಕ್ಷಣ, ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜ್ ನಲ್ಲಿ. ಊರೆಂದರೆ ಅದಮ್ಯ ಮೋಹ, ಪ್ರೀತಿ.. ಜೀವನದ ಏಳುಬೀಳು ಅಲ್ಲಿಂದ ಇಲ್ಲಿಗೆ ಎಳೆದುಕೊಂಡು ಬಂದಿದ್ದರೂ ಊರಿನೆಡಗಿನ ಸೆಳೆತ ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ.. ಇಲ್ಲಿನ ಕಾಂಕ್ರಿಟ್ ಕಾಡು ನಮ್ಮೂರಿನ ಹಸುರಿನ ಸೊಬಗಿಗೆ ಸಮಾನಾಗಿ ನಿಲ್ಲುವುದೇ ಇಲ್ಲಾ.. ಇದು ಹೊಟ್ಟೆ ಪಾಡಾದರೆ, ಅದು ಜೀವನಾಡಿ..  ಅಮ್ಮ,ಅಪ್ಪ ತಮ್ಮಂದಿರೆಡೆಗೆ ನಿಲ್ಲದ ತುಡಿತ.. ಇಂತಿಪ್ಪ ಭಾವನೆಯ ನನಗೆ ನಟಣ್ಣನ "ಬಿಟ್ಟು ಬಂದ ಮಣ್ಣಿಗೂ ಮಡಿಲಿಗೂ ಮರಳುವುದು ಸುಲಭವಲ್ಲ..." ಈ ಮಾತು fb ನಲ್ಲಿ ಓದಿದಾಗಿನಿಂದ ಬಹಳ ಕಾಡುತ್ತದೆ..

ಬರವಣಿಗೆ ಹೇಗೆ ಆರಂಭವಾಯಿತು ಎನ್ನುವುದರ ಬಗ್ಗೆ ನನಗಿನ್ನೂ ಸ್ಪಷ್ಟ ಅರಿವಿಲ್ಲ..ಮೊದಲು ಬರೆದ ಕವನ, ಕತೆಯ ನೆನಪೂ ನನಗಿಲ್ಲ..ಅದನ್ನೆಲ್ಲಾ ಜೋಡಿಸಿಟ್ಟುಕೊಳ್ಳಬೇಕೆನ್ನುವ ಜ್ಞಾನವೂ ಇರಲಿಲ್ಲ.. ಓದುವ ಹುಚ್ಚು ಅಪ್ಪ ಅಮ್ಮ ಮತ್ತು ಅಜ್ಜನ ಬಳುವಳಿ.. ಬಾಲ್ಯದಲ್ಲಿ ನೋಡುತ್ತಿದ್ದ ಶಕ್ತಿಮಾನ್, ಆರ್ಯಮನ್, ಶಕಲಕ ಬೂಮ್ ಬೂಮ್ ಧಾರಾವಾಹಿಗಳು, ತುಂತುರು, ಬಾಲಮಂಗಳದ ಮಾಮಿ ಕಾಲಂ, ಡಿಂಗ,ಶಕ್ತಿಮದ್ದು ಗಳು ಕಾಲ್ಪನಿಕ ಶಕ್ತಿಯನ್ನು ವಿಸ್ತರಿಸಿದ್ದಿರಬೇಕು..ನನ್ನ ಅಮ್ಮ ನಾ ಬರೆದ ಪ್ರತಿಯೊಂದಕ್ಕೂ ಮೊದಲ ಓದುಗಿ..ಅಮ್ಮನ ಬೆಂಬಲವೇ ನನ್ನ ಶಕ್ತಿ .ಅಮ್ಮನ ಪ್ರೋತ್ಸಾಹ ವಿಲ್ಲದೆ ಯಾವುದೂ ಸಾಧ್ಯವಾಗುತ್ತಿರಲಿಲ್ಲ..ನನ್ನನ್ನು ಅವಳು ಅಣಿಗೊಳಿಸುತ್ತಿದ್ದ ರೀತಿಯೇ ನನ್ನ ವ್ಯಕ್ತಿತ್ವಕ್ಕೆ ಕಾರಣ. ಅಮ್ಮನೊಂದಿಗೆ ಸಾಥ್ ನೀಡುತ್ತಿದ್ದ ಅಜ್ಜ, ಮಾವ.. ನನ್ನ ಕುಟುಂಬಕ್ಕೆ ನನ್ನ ಮೊದಲ ಥ್ಯಾಂಕ್ಸ್..

ನಾನು, ನನ್ನ ಪ್ರಾಥಮಿಕ ಶಾಲಾ ಹಂತದಲ್ಲೇ ಬಹಳಷ್ಟು ಕಾದಂಬರಿಗಳನ್ನು ಓದಿ ಮುಗಿಸಿದ್ದು..ಮುಖ್ಯವಾಗಿ ಅಮ್ಮನಿಷ್ಟದ ಪ್ರಕಾರವಾದ ಸಾಮಾಜಿಕ ಕಾದಂಬರಿಗಳು(ಅಮ್ಮನ ವಿರೋಧದ ನಡುವೆಯೂ ಓದಿ ಬಿಟ್ಟಿದ್ದೆ..) ಮೂರನೇಯ ತರಗತಿಯಲ್ಲಿ ಇದ್ದಾಗ ಸಣ್ಣ ಪುಟ್ಟ ಚುಟುಕುಗಳನ್ನು ನನ್ನದೇ ಆದ ದಾಟಿಯಲ್ಲಿ ಎದ್ದೆ-ಬಿದ್ದೆ-ಒದ್ದೆ ಮುಂತಾದ ಪ್ರಾಸಗಳನ್ನು ಉಪಯೋಗಿಸಿ ಬರೆಯುತ್ತಿದ್ದೆ. 5ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಪ್ರತಿಭಾಕಾರಂಜಿಯ ಕತೆ ಹೇಳುವ ಸ್ಪರ್ಧೆಗೆ ಸ್ವಂತವಾಗಿ ಕತೆ ರಚಿಸಿ, ಸಭೆಗೆ ಪ್ರಸ್ತುತ ಪಡಿಸಿ ಬಹುಮಾನ ಪಡೆದಿದ್ದೆ.ಅದಕ್ಕೆ ಕಾರಣವಾಗಿದ್ದು ನಳಿನಿ ಟೀಚರ್. ಅಲ್ಲಿಂದ ಸಣ್ಣ ಪುಟ್ಟ ಕತೆ ಬರೆಯುವ ಹವ್ಯಾಸ ಆರಂಭವಾಯಿತು.. ಹೈ ಸ್ಕೂಲ್ ಜೀವನ ನನ್ನ ಜೀವನದ ಬಹು ಮುಖ್ಯ ತಿರುವು. ಅಲ್ಲೇ ನಾನು ಮುನಿರಾಜ್ ಸರ್ ಅಂತಹ ಗುರುಗಳನ್ನು ಪಡೆದ್ದಿದ್ದು. ನಿತೇಶ್ ಸರ್ ಅಂತಹ ಸ್ನೇಹಜೀವಿ ಶಿಕ್ಷಕರನ್ನು ಪಡೆದಿದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಭಾಗವಹಿಸಲು ಮುಖ್ಯ ಪ್ರೇರಕ ಶಕ್ತಿಯೇ ಅವರುಗಳು. ಚರ್ಚಾ ಸ್ಪರ್ಧೆ, ಭಾಷಣ, ಪ್ರಬಂಧ, ನಾಟಕ ಹೀಗೆ ಭಾಗವಹಿಸುತ್ತಿದ್ದೆ. ನಾನು ಓದಿದ ಪುಸ್ತಕಗಳಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ್ದು ಆ ಕಾಲಘಟ್ಟದಲ್ಲೇ..ನೆಹರು ಪರದೆ ಸರಿಯಿತು,ಗಾಂಧಿ ಮತ್ತು ಗೋಡ್ಸೆ, ಸಾವರ್ಕರ್, ಭಗತ್ ಸಿಂಗ್, ಬದುಕಲು ಕಲಿಯಿರಿ...ಹೀಗೆ ಪುಸ್ತಕಗಳ ಪಟ್ಟಿ ಬೆಳೆಯುತ್ತದೆ..

ಇದಾದ ಮೇಲೆ ಬ್ಲಾಗಿನಂಗಳ ಮತ್ತು ಮುಖಪುಟ ನನ್ನಮೇಲೆ ಪ್ರೋತ್ಸಾಹದ ಸುರಿಮಳೆಯನ್ನೇ ಸುರಿಸಿದೆ.. ನಾ ಬರೆದ ಲೇಖನ,ಕವಿತೆಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಪ್ರೋತ್ಸಾಹ ನೀಡಿದೆ, ತಪ್ಪಾದಾಗ ತಿದ್ದಿದೆ. ಎಲ್ಲೊ ಇದ್ದು ತನ್ನ ಪಾಡಿಗೆ ತಾನು ಆತ್ಮ ಸಂತೋಷಕ್ಕಾಗಿ ಬರೆಯುತ್ತಿದವಳನ್ನು ಜಗತ್ತಿನ ಮುಂದೆ ತಂದು ನಿಲ್ಲಿಸಿದೆ..ಬ್ಲಾಗ್ ಬಂಧುಗಳ ಸಹೃದಯತೆಗೆ ಹೇಗೆ ಥ್ಯಾಂಕ್ಸ್ ಹೇಳಲಿ? ಮೌನರಾಗ ಮತ್ತು ಕನಸು ಕಂಗಳ ತುಂಬಾ.. ಎನ್ನುವ 2 ಬ್ಲಾಗ್ ಗಳನ್ನು ಎರಡು ವರುಷಗಳಿಂದ ನಡೆಸುತ್ತಾ ಬಂದಿದ್ದೇನೆ. ಬರೆದಿದ್ದು, ಓದಿದ್ದು ತೀರಾ ಕಡಿಮೆ..ಆ ನಿಟ್ಟಿನಲ್ಲಿ ನಾನಿನ್ನೂ ಬಹಳ ಚಿಕ್ಕವಳು. ಕನಸು ಕಂಗಳ ತುಂಬಾ ಬಣ್ಣದ ಕನಸುಗಳಿವೆ. ನನಸಾಗಲು ನನ್ನ ಶ್ರಮ, ನಿಮ್ಮ ಆಶೀರ್ವಾದ, ದೈವ ಕೃಪೆ ಅತ್ಯಗತ್ಯ. ಬ್ಲಾಗ್ ನಲ್ಲಿ ಆರಂಭದ ದಿನಗಳಿಂದಲೂ ಪ್ರೋತ್ಸಾಹಿಸುತ್ತಾ ಬಂದ ರವಿ ಮೂರ್ನಡ್ ಸರ್, ಅಜಾದ್ ಸರ್, ಗೌಡ್ರು, ಶಶೀ, ಸುರೇಖಾ, ಬದರಿ ಸರ್, ಅಣ್ಣ ಮಂಜು, ಗೆಳೆಯ ವಿನಯ್ ಯಿಂದ ಹಿಡಿದು ಇತ್ತೀಚಿನ ಸಂಧ್ಯಾ, ಚಿನ್ಮಯ್ ಮತ್ತು ಹೆಸರಿಸಲಾಗದ ಅಷ್ಟೂ ಜನಕ್ಕೂ ನನ್ನ ಕೋಟಿ ಕೋಟಿ ನಮನಗಳು..
ಮಾತುಕತೆಗೆ ಕರೆದು ಎಲೆಮರೆಕಾಯಿಯಲ್ಲಿ ನನಗೂ ಒಂದು ಜಾಗ ನೀಡಿದ್ದಕ್ಕೆ ಸಹೋದರ ನಟರಾಜ್ ಅವರಿಗೂ ಧನ್ಯವಾದ..

ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ.. ತಪ್ಪು ಒಪ್ಪು ತಿಳಿಯದೇ ಅಂಜಿಕೆ ಅಳುಕಿನಿಂದಲೇ ನನ್ನ ಪರಿಚಯ ಮಾಡಿಕ್ಕೊಟ್ಟಿದ್ದೇನೆ ಇಷ್ಟವಾದರೆ ಒಪ್ಪಿಸಿಕ್ಕೊಳ್ಳಿ, ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳಿ...
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ,
ಸುಷ್ಮಾ ಮೂಡುಬಿದಿರೆ."

ಎಂದು ಚಂದವಾಗಿ ತನ್ನ ಪರಿಚಯ ಮಾಡಿಕೊಂಡ ಸುಷ್ಮಾರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಸಹೃದಯಿಗಳೇ.. ಸುಷ್ಮಾರವರ ಬ್ಲಾಗುಗಳ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಅವರ ಬ್ಲಾಗುಗಳ ಮೇಲೆ ಒಮ್ಮೆ ಕಣ್ಣಾಡಿಸಿ..
http://mounaraaga-suvi.blogspot.in/
http://kanasukangalathumbaa.blogspot.in/

ಸುಷ್ಮಾರವರ ಬರಹದ ಮತ್ತೊಂದು ಚಂದದ ತುಣುಕು ಇಗೋ ನಿಮಗಾಗಿ..

"ಮದುವೆ ಎನ್ನುವುದೊಂದು ಆಗುವುದಕ್ಕಿಂತ ಮುಂಚೆ ನಾವು ಹುಡುಗಿಯರು  ತೀರಾ ಭಿನ್ನವಾಗಿ ಯೋಚಿಸುತ್ತಿರುತ್ತೇವೆ...ಗಂಡುಬೀರಿ, ಬಜಾರಿ ಅನಿಸಿಕೊಂಡದಾರೂ ಗಂಡು ಮಕ್ಕಳಿಗೆ ನಾವು ಸಮ ಎನ್ನುವುದನ್ನ ಸಾಬೀತು ಮಾಡ ಹೊರಡುತ್ತೇವೆ...ಜಿದ್ದಿಗೆ ಬಿದ್ದಾದರೂ ಪೈಪೋಟಿ ನೀಡುತ್ತೇವೆ...ಮದುವೆ, ಮನೆ, ಗಂಡ, ಮಕ್ಕಳು...ಥತ್, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲೇ ಮಾಡಿರೋ ವ್ಯವಸ್ಥೆ ಎಂದು ತಾಸುಗಟ್ಟಲೆ ಗೆಳತಿಯರ ಮಧ್ಯ  ಭಾಷಣ ಬಿಗಿದಿರುತ್ತೇವೆ... ಇಷ್ಟಾದರೂ ಮನೆಯಲ್ಲಿ ಹಿಡಿದು ಮದುವೆ ಮಾಡೇ ಮಾಡುತ್ತಾರೆ...ಸರಿ ಮದುವೆಯಾಗಿತ್ತಲ್ಲ ಮಕ್ಕಳಂತೂ ಸದ್ಯದ ವಿಚಾರ ಅಲ್ಲಾ...ಎರಡು-ಮೂರು  ವರ್ಷ ಗ್ಯಾಪ್ ಇರಲಿ ಎಂದುಕೊಳ್ಳುತ್ತಲೇ ಮಡಿಲು ತುಂಬಿರುತ್ತದೆ...ಇಲ್ಲಿಯ ತನಕ 'ನಾವೂ ಗಂಡಿನ ಹಾಗೆ' ಅಂದುಕೊಂಡ ಮುಖವಾಡ ಕಳಚುವುದು ಈಗಲೇ...ಇದು ಅಮ್ಮನಾಗುವ ಖುಷಿ...ಹೆಣ್ತನ, ತಾಯ್ತನ ಜಾಗೃತವಾಗುವ ಹೊತ್ತು.. ಪೂರ್ತಿಯಾಗಿ ಮಾತೃ ಭಾವವನ್ನು ಆಸ್ವಾದಿಸುವ ಹೊತ್ತು.. ಗಂಡಾಗಿ ಇಂತಹ ಆನಂದ ಪಡೆಯಲು ಸಾದ್ಯವೇ ಎಂದೆಣಿಸುವಾಗ ಬಜಾರಿ ಕಳೆದು ಹೋಗುತ್ತಾಳೆ.. ಮೊಗ್ಗು ಅರಳುವ ಸಮಯದ ನಾವಿನ್ಯ ಭಾವದ ಹೆಣ್ಣು ಮೈದಳೆಯುತ್ತಾಳೆ.."

ಮತ್ತೆ ಸಿಗೋಣ

ಇತಿ
ನಿಮ್ಮ ಪ್ರೀತಿಯ
ನಟರಾಜು :))





ಸೋಮವಾರ, ನವೆಂಬರ್ 19, 2012

ಎಲೆ ಮರೆ ಕಾಯಿ 

ಖಾಲಿ ಹಾಳೆಯ ಮೇಲೆ
ಕಸಿವಿಸಿಯ ಮಸಿಯ ಹಸಿ
ಭಾವಗಳ ವಿಶ್ರಾಮಕೆ
ಬಿಳಿ ಹಾಳೆಯ ಹಾಸಿಗೆ

ಆಂತರ್ಯದ ತೊಟ್ಟಿಲು
ಲೇಖನಿಯ ಮಸಿಯ ಬಟ್ಟಲು
ಅದ್ದಿ-ಬಸಿದು ಬರೆಯುತಿರುವೆ
ಅಂತರಾಳ ಮುಟ್ಟಲು..

ಮೇಲಿನ ಸಾಲುಗಳನ್ನು ಓದುತ್ತಿದ್ದಂತೆ ಹಿರಿಯ ಲೇಖಕರಾದ ಗುಲ್ಜಾರ್ ರವರು ಸಂದರ್ಶನವೊಂದರಲ್ಲಿ ಹೇಳಿದ್ದ "ನಮ್ಮ ದುಃಖ, ದುಗುಡ, ದುಮ್ಮಾನಗಳ ಹೀರಿಕೊಳ್ಳುವ ಶಕ್ತಿ ಬರವಣಿಗೆಗೆ ಇದೆ" ಎನ್ನುವಂತಹ ಮಾತು ನೆನಪಾಯಿತು. ಕಷ್ಟ ಬಂದಾಗ ಎಲ್ಲರಿದ್ದರೂ ಯಾರೂ ಇಲ್ಲದಂತಹ ಭಾವ ನಮ್ಮನ್ನು ಒಮ್ಮೊಮ್ಮೆ ಆವರಿಸಿಬಿಡುತ್ತದೆ. ಆಗ ಯಾಕೋ ಯಾರೊಡನೆಯೂ ಮಾತು ಬೇಕೆನಿಸುವುದಿಲ್ಲ. ಯಾರನ್ನು ನೋಡಲು ಸಹ ಮನಸ್ಸು ಇಚ್ಚಿಸುವುದಿಲ್ಲ. ದುಃಖ ನಮ್ಮೊಳಗೆ ಮಡುಗಟ್ಟುತ್ತಾ ಹೋಗುತ್ತದೆ. ಕೆಲವರು ಹತ್ತಿರ ಎನಿಸಿಕೊಂಡವರ ಜೊತೆ ಒಂದಷ್ಟು ಮನದ ದುಗುಡಗಳನ್ನು ಹಂಚಿಕೊಂಡರೂ ನಾವು ಹಗುರಾಗುತ್ತೇವೋ ಏನೋ ಗೊತ್ತಿಲ್ಲ. ಆದರೆ ಡೈರಿಯೊಂದನ್ನು ಬರೆದಿಡುವ ಅಭ್ಯಾಸವಿದ್ದರೆ ಖಂಡಿತಾ ನಾವು ಬರೆದು ಬರೆದು ಹಗುರವಾಗಬಹುದು. ಒಬ್ಬ ಆತ್ಮೀಯ ಗೆಳೆಯನಿಗಿಂತ ಎತ್ತರದ ಸ್ಥಾನದಲ್ಲಿ ನಮ್ಮ ಡೈರಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ನೋವಿನಿಂದ ಹೊರ ಬರಬೇಕು ಎಂದರೆ ನಾವು ಮಾತನಾಡುವುದಕ್ಕಿಂತ ಹೆಚ್ಚು ಬರೆಯಬೇಕು ಎನಿಸಿದ್ದು ಭಾವ ದರ್ಪಣ ಎಂಬ ಚಂದದ ಬ್ಲಾಗಿನಲ್ಲಿ ಮೇಲಿನ ಕವಿತೆಯ ಸಾಲುಗಳನ್ನು ಕಂಡಾಗ..

ಭಾವ ದರ್ಪಣದ ಒಡತಿಯ ಲೇಖನಗಳ ಕುರಿತಾಗಲಿ, ಕವಿತೆಗಳ ಕುರಿತಾಗಲಿ ಮಾತನಾಡಲು ಯಾಕೋ ನನ್ನಲ್ಲಿ ಶಕ್ತಿ ಇಲ್ಲ. ಅವರ ಬರವಣಿಗೆಯ ತುಣುಕೊಂದನ್ನು ಈ ಕೆಳಗೆ ನೀಡಿರುವೆ.. ನೀವೇ ಮನಸ್ಸಿಟ್ಟು ಓದಿಕೊಳ್ಳಿ..

"ಇಂದು ಸಂಜೆ ಏನೋ ಅಳುಕು ಮನದಲ್ಲಿ.. ಏನು ಅಂತ ಗೊತ್ತಿಲ್ಲ.. ಅರ್ಥಾನೂ ಆಗ್ತಿಲ್ಲ.. ಯಾವುದೋ ನೋವಿನ ಎಳೆ.. ಏನೋ ತಳಮಳ..

ಕತ್ತಲಲ್ಲಿ ಏನೋ ತಡಕಾಡುತ್ತಿರೋ ಅನುಭವ..ಒಂದೊಂದು ಸಲ ಬದುಕೇ ಕತ್ತಲಲ್ಲಿ ಗೊತ್ತಿರದ ವಸ್ತುವಿಗಾಗಿ ತಡಕಾಡುವುದೇನೊ ಅನ್ನೋ ಭಾವನೆ.. ಈ ಮನಸು, ಅದರ ಅಸ್ತಿತ್ವ ಅದರ ಆಳ.. ಅದರ ನಿರೀಕ್ಷೆ.. ಅದರ ತಳಮಳ ಎಲ್ಲ ನೋಡಿದರೆ.. ನನಗೆ ನಾನೇ ಅಪರಿಚಿತಳು ಅನಿಸುತ್ತೆ..ಅಂಥದರಲ್ಲಿ ಇನ್ನೊಂದು ಮನಸು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುತ್ತೆ ಈ ಮುಗ್ಢ ಮೂರ್ಖ ಮನಸು..ಎಷ್ಟು ಗೊಂದಲಮಯ ಅಲ್ವಾ??  ದಿನದ ರಭಸದ ಜಂಜಾಟಗಳಲಿ.. ಹೊರ-ಪ್ರಪಂಚದ ಸೊಗಸು ಸವಿಯುವ ಗದ್ದಲದಲ್ಲಿ.. ದಿನ-ನಿತ್ಯದ ಕೆಲಸದ ಭರಾಟೆಯಲ್ಲಿ.. ಮೆಲ್ಲನೆ ಇಣುಕಿ ನೋಡುತ್ತೆ ಮನ.. ಇದ್ದರೂ ಇಲ್ಲದಂತಿರೋ ಇದು.. ಒಂದೊದು ಸಲ ಇಲ್ಲದ ತಲ್ಲಣ ಹುಟ್ಟಿಸುತ್ತೆ.. ಮನಸು ಅನ್ನೊದೇ ಇಲ್ಲದಿದ್ರೆ..?! ಅದರಿಂದಾಗೋ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆನೇ ಪುಟಗಟ್ಟಲೇ ಬರೀಬಹುದೇನೋ.. ಈ ಮನಸು ಮತ್ತೆ ಬುಧ್ಧಿ ಒಟ್ಟಿಗೆ ಕೆಲಸ ಮಾಡೊ ರೀತಿ ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತೆ.. ಒಂದು ಸಲ ಮನಸಿಗೆ ಬುದ್ಧಿ ಇಷ್ಟ ಆಗಲ್ಲ ಇನ್ನೊಂದು ಸಲ ಬುದ್ಧಿಗೆ ಮನಸು ಇಷ್ಟ ಆಗಲ್ಲ.. ಮತ್ತೊಮ್ಮೆ ಎರಡೂ ಗೆಳೆಯರು.. ಈಗ ಬರೀತಿದಿನಲ್ಲ.. ಇದು ಮನಸು ಅನ್ಲಾ? ಅಥವ ಬುದ್ಧಿ ನಾ?

ಏನೇ ಇರಲಿ ಮನಸಿಗೆ ಅನಿಸಿದ್ದನ್ನು ವ್ಯಕ್ತ ಪಡಿಸೋಕೆ ಇರೋ ಈ ಮುದ್ದಾದ ಭಾಷೆಗೆ.. ಈ ಹಾಳೆಗೆ.. ಈ ಲೇಖನಿಗೆ ನಾನು ಚಿರ-ಋಣಿ.. ಇವಿರಲಿಲ್ಲ ಅಂದರೆ.. ನನ್ನ ಆಂತರಿಕ ಬದುಕನ್ನು ಊಹಿಸಿಕೊಳ್ಳೋದೇ ಅಸಾಧ್ಯ..."

ಎನ್ನುವ ನಮ್ಮ ನಡುವಿನ ಉತ್ತಮ ಯುವ ಲೇಖಕಿಯರಲ್ಲಿ ಮಂಜುಳಾ ಬಬಲಾದಿಯವರೂ ಸಹ ಒಬ್ಬರು. ಅವರ ಜೊತೆ ಹಿಂದೊಮ್ಮೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆ ಸಹೃದಯಿಗಳೇ ಇಗೋ ನಿಮಗಾಗಿ..

ಮಂಜುಳಾ ಬಬಲಾದಿ

"ನಲ್ಮೆಯ ನಟರಾಜ್,
ನಿಮ್ಮ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಆಹ್ವಾನಿಸಿದ್ದಕ್ಕೆ ನಾನು ಅಭಾರಿ. ಈಗ ಬರೆಯಲು ಕೂತರೆ ಏನು ಬರೆಯಬೇಕೆಂಬ ಭಾರಿ ಪ್ರಶ್ನೆ? ಈ ಘಳಿಗೆಯಲ್ಲಿ ನನಗನಿಸಿದ್ದು, ನಿಮ್ಮ ಮುಂದೆ ಅರುಹುತ್ತಿದ್ದೇನೆ ಅಷ್ಟೇ. ನಾನು ಹುಟ್ಟಿದ್ದು ಜಮಖಂಡಿ, ಬೆಳೆದದ್ದು ಕರ್ನಾಟಕ (ಬ್ಯಾಂಕ್ ಉದ್ಯೋಗಿಯಾಗಿದ್ದ ನಮ್ಮ ತಂದೆ ಜೊತೆ ಊರೂರು ಸುತ್ತಿದ್ದು), ಕೊನೆಗೆ ಕಾಲೇಜು ದಿನಗಳಿಂದ ನಮ್ಮದಾಗಿಸಿಕೊಂಡ ಊರು ಧಾರವಾಡ. ಬದುಕಿನ ಅಚ್ಚುಗಳು ನನಗಾಗಿ ಮೊದಲೇ ತಯಾರಾಗಿದ್ದವೇನೋ ಅನ್ನುವ ಥರದಲ್ಲಿ.. ಶಾಲೆಯಲ್ಲಿ ಜಾಣೆಯೆನಿಸಿಕೊಂಡಿದ್ದ ನಾನು ಸರಾಗವಾಗಿ ಬಿ.ಈ. ಓದಿಬಿಟ್ಟೆ. ನನಗೆ ತಿಳಿಯುವ ಮೊದಲೇ ದೊಡ್ಡ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಕೆಲಸ. "ಇದ್ದುದೆಲ್ಲವ ಬಿಟ್ಟು.. " ಎನ್ನುವ ಹಾಗೆ, ಈಗ ಸಾಫ್ಟ್ ವೇರ್  ಡೆವೆಲಪ್‌ಮೆಂಟ್ ಬಿಟ್ಟು ಕಂಟೆಂಟ್ ಡೆವೆಲಪ್ ಮಾಡಲು ತೊಡಗಿದ್ದೇನೆ . ಬದುಕಿನ ಅನಿಶ್ಚಿತತೆಗಳನ್ನು ಪ್ರೀತಿಸುತ್ತ!

ಚಿಕ್ಕವಳಿದ್ದಾಗಿಂದ ಬರೆಯುವ ಗೀಳು, ಓದುವು ಹುಚ್ಚು.. ಆದರೆ ಅದು ನನ್ನಲ್ಲಿರುವ ಪ್ರತಿಭೆ ಎಂದು ನಾನೆಂದೂ ಗುರುತಿಸಲೇ ಇಲ್ಲ! ಹೀಗೆ ಮನಸಿನ ಸಂತೋಷಕ್ಕೆ ಕೆಲವೊಮ್ಮೆ, ಸಮಾಧಾನಕ್ಕೆ ಮಗದೊಮ್ಮೆ, ಬರೆಯುತ್ತಲೇ ಹೋದೆ.. ಹಲವಾರು ಬಾರಿ ಅದನ್ನು ಹಂಚಿಕೊಳ್ಳುವ ಗೋಜಿಗೂ ಹೋಗದೇ.. ನಂತರ ಪರಿಚಯವಾದದು ಬ್ಲಾಗ್ ಪ್ರಪಂಚ.. ಬರಹಗಳಿಂದ ಚಿರಪರಿಚಿತರಾಗಿದ್ದ ಹಲವರು, ವೈಯಕ್ತಿಕವಾಗಿ ಪರಿಚಯವಾಗಲೇ ಇಲ್ಲ.. (ಫೇಸ್‍ಬುಕ್ ಬಂದ ಮೇಲೆ ಎಲ್ಲ ಬದಲಾಯಿತು.. ನನಗೆ ಖುಶಿಯಾಗುವ ತೆರದಲ್ಲಿ ನನಗೆ ಇಂತಹವರ ಬರಹವೇ ಇಷ್ಟ ಅಂತ ಹೇಳುವುದು ಕಷ್ಟ.. ಮನಸಿಗೆ ಹತ್ತಿರವಾಗುವಂಥ ಎಲ್ಲವನ್ನೂ ನಾ ಓದುತ್ತೇನೆ.. ’ಕೆ.ಎಸ್. ನಿಸಾರ್ ಅಹ್ಮದ್’ ಅವರ ಕವನಗಳು ನನಗೆ ಹಲವಾರು ಬಾರಿ ಸ್ಫೂರ್ತಿ ನೀಡಿವೆ.. ಹೀಗೇ ಸಾಗಿದೆ ಬರಹ, ಓದು, ಬದುಕು ಮತ್ತು ಕನಸು.. ಎಲ್ಲ ಉದಯೋನ್ಮುಖ ಬರಹಗಾರರಿಗಿರುವಂತೆ, ಜನ-ಮನಕ್ಕೆ ಹತ್ತಿರವಾಗುವಂಥ ಕವನ ಸಂಕಲನವೊಂದನ್ನು ಹೊರ ತರಬೇಕೆನ್ನುವುದು ಕನಸು.. (ಅಥವಾ ಕನಸಿನ ಆರಂಭವೆನ್ನಲೇ? ) ಅದು ಇಷ್ಟೇ ಸಮಯದಲ್ಲಿ ನನಸಾಗಬೇಕು ಎಂಬ ಹಟವೂ ನನಗಿಲ್ಲ.. ’ಕಾಲ ಕೂಡಿ ಬಂದಾಗ’ ಖಂಡಿತ ಕನಸುಗಳು ಈಡೇರುವವು ಎಂದು ಬಲವಾಗಿ ನಂಬುವವಳು ನಾನು."

ಎಂದು ಮಾತು ಮುಗಿಸಿದ ಮಂಜುಳಾರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಮಂಜುಳಾರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಓದಿ ಗೆಳೆಯರೇ..
http://bhava-darpana.blogspot.in/

ಮಂಜುಳಾರವರ ಒಂದೆರಡು ಕವನಗಳನ್ನು ಈ ಕೆಳಗೆ ನೀಡಿರುವೆ.. ಮನಸ್ಸಿಟ್ಟು ಓದಿಕೊಳ್ಳಿ ಗೆಳೆಯರೇ..

ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸಿ
ಭಾವನೆಗಳ ಮುತ್ತನಿಟ್ಟು
ಕಲ್ಪನೆಗಳ ಆಟಿಕೆ ನೀಡಿ
ಪ್ರೀತಿಯ ಅಕ್ಕರೆಗರೆದು
ಮಂದಹಾಸವ ಉಡುಗೊರೆ
ನೀಡಿದ ನಿನಗೆ
ನನ್ನ ಹೃತ್ಪೂರ್ವಕ ನಮನ
ನಿನಗಾಗಿ ನನ್ನ ಈ ಪುಟ್ಟ ಕವನ
*****

ಮನಸೊಂದು ಕುಡಿಯೊಡೆದ
ಮಧುರ ದಿನ
ಕನಸೊಂದು ಕಣ್ಬಿಟ್ಟ
ಮಧುರ ಕ್ಷಣ
ತನುವಲ್ಲಿ ತನುವರಳಿ
ಭುವಿಗೆ ಮರಳಿದ ದಿನ...

ಆ ಮನಸು ಮಡಿಲಾಗಿ
ಈ ಮನಸು ಮಗುವಾಗಿ
ಮನಸೆಲ್ಲ ನಗುವಾಗಿ
ನಕ್ಕು-ನಗಿಸಿದ ದಿನ
ಅತ್ತು-ಅಳಿಸಿದ ದಿನ

ಒಡಲ ಒಗಟು ಜೀವವಾದ ದಿನ
ಜೀವ ನಂಟು ಉಸಿರು ಪಡೆದ ದಿನ
ಕತ್ತಲಿಂದ ಬೆಳಕಿಗೆ ಕಣ್ಬಿಟ್ಟ ದಿನ
ಹೊಚ್ಚ ಹೊಸ ಬದುಕ ತೆರೆದಿಟ್ಟ ದಿನ

ನವ ಜೀವಕೆ ನಾಂದಿಯಾದ
ಆ ಸೋಜಿಗದ ದಿನ
ಪ್ರತಿ ವರುಷ ಮರಳುವುದು
ನೆನಪುಗಳ ನಗೆ ಚೆಲ್ಲಿ
ಮತ್ತೆ ಮರೆಯಾಗುವುದು
ಈ ಜನುಮ ದಿನ!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು





ಶುಕ್ರವಾರ, ನವೆಂಬರ್ 9, 2012


ಎಲೆ ಮರೆ ಕಾಯಿ ೬೪ 

ಒಮ್ಮೆ ನಿರ್ದೇಶಕರಿಂದ ಬರಹಗಾರನ ಹುದ್ದೆಗೆ ಕರೆ ಬಂದಿತ್ತು. 
ನಾನು ಸಮಯಕ್ಕೆ ಸರಿಯಾಗಿ ಕರೆದ ಜಾಗಕ್ಕೆ ಹೋಗಿದ್ದೆ.
ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಹೋದ ನನಗೆ 
ಮೊದಲ ಸರಳ ಪ್ರಶ್ನೆ "ನಿಮ್ಮ ಬರವಣೆಗೆ ನಾನು ಕಂಡಿಲ್ಲ, ಏನಾದರೂ ಬರೆದು ತೋರಿಸುತ್ತೀರಾ?" ಅಂತ ಒಂದು ಹಾಳೆ, ಪೆನ್ನು ಮುಂದಿಟ್ಟರು.
ಏನು ತೋಚಲಿಲ್ಲ.
ಕೊನೆಗೆ,
"ಬರವಣೆಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಅಂತ ಬರೆದು ಎದ್ದು ನಿಂತೆ.

ಆ ಬರಹಗಾರ ಬರೆದ ಕೊನೆಯ ಸಾಲು ಯಾಕೋ ನನ್ನ ಮನದಲ್ಲಿ ಅಚ್ಚಳಿಯದೆ ನಿಂತುಬಿಟ್ಟಿದೆ. ಸೂಪರ್ ಸಾಲು ಅಂತಾರಲ್ಲ ಅಂತಹ ಸಾಲು ಅದು. ನಾನು ಸಂತೆಯ ಮಧ್ಯೆ ಕುಳಿತರೂ ಬರೆಯಬಲ್ಲೆ ಎಂದು ಕೆಲವರು ವಾದ ಮಾಡಬಹುದು. ಒಬ್ಬ ಚಿತ್ರಕಾರ ಖಾಲಿ ಹಾಳೆಯ ಮೇಲೆ ತನ್ನ ಪೆನ್ಸಿಲ್ ನಿಂದಲೋ, ಕುಂಚದಿಂದಲೋ, ಚಿತ್ರ ಮೂಡಿಸಿ ಬಣ್ಣ ತುಂಬುವಾಗ ಅವನ ಕಲೆಯನ್ನು ನೋಡುವ ಕಂಗಳು ಬೆರಗುಗಣ್ಣಿನಿಂದ ತದೇಕ ಚಿತ್ತದಿಂದ ನೋಡಲು ಶುರು ಮಾಡಿದರೂ ತನ್ನ ಧ್ಯಾನಕ್ಕೆ ಧಕ್ಕೆ ಬರದಂತೆ ಅವನು ಚಿತ್ರವೊಂದನು ಬಿಡಿಸಿಬಿಡಬಲ್ಲ. ಆದರೆ ಬರಹಗಾರನಿಗೆ ಸಂತೆಯಲ್ಲಿ ಕುಳಿತರೂ ಒಂದು ಏಕಾಂತ ಬೇಕಾಗುತ್ತೆ. ಪರಕಾಯ ಪ್ರವೇಶ ಅಂತಾರಲ್ಲ ಅಂತಹ ಸ್ಥಿತಿಯನ್ನು ಎಲ್ಲರೂ ಪೂರ್ತಿಯಾಗಿ ತಲುಪದೇ ಇದ್ದರೂ ತಮ್ಮದೇ ಒಂದು ಏಕಾಂತವನ್ನು ಸೃಷ್ಟಿಸಿಕೊಂಡ ಲೇಖಕರು ಅಚ್ಚರಿಗಳನ್ನು ಸೃಷ್ಟಿಸಬಲ್ಲರು. ಆ ಏಕಾಂತ ಎಷ್ಟು ಹೊತ್ತು ಸಿಗುತ್ತೆ, ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ, ಅಂತಹ ಏಕಾಂತ ಮತ್ತೆ ಮತ್ತೆ ಸಿಗುತ್ತಾ ಅನ್ನುವುದರ ಮೇಲೆ ಜೊತೆಗೆ ಬರಹಗಾರನ ಆಸಕ್ತಿಯ ಮೇಲೆ ಬರವಣಿಗೆ ಸಹ ಬೆಳೆದು ನಿಲ್ಲುತ್ತೆ. ಪ್ರಣಯವೂ ಹಾಗೆಯೇ ಯಾರೋ ಬಂದು ಬಿಡುವರು ಎನ್ನುವ ಭಯದಿಂದ ಕೂಡಿದ ಪ್ರಣಯಕ್ಕೂ ಆ ಭಯದಿಂದ ಮುಕ್ತವಾದ ಪ್ರಣಯಕ್ಕೂ ತನ್ನದೇ ಆದ ಸಂಭ್ರಮವಿರುತ್ತದೆ. ಹೀಗೆ  ಪ್ರಣಯ ಮತ್ತು ಬರವಣಿಗೆಯನ್ನು ಒಂದನ್ನೊಂದನ್ನು ಹೋಲಿಸಿ ನೋಡಿದರೆ ಕೆಲವರಿಗೆ ತಪ್ಪಾಗಿ ಕಾಣುತ್ತದೇನೋ ಆದರೂ ನಮ್ಮ ಈ ಗೆಳೆಯ ಬರೆದ "ಬರವಣಿಗೆ ಒಂದು ಪ್ರಣಯದಂತೆ, ಅದನ್ನ ಅನ್ಯರ ಎದುರು ಮಾಡಲಾಗುವದಿಲ್ಲ" ಎಂಬುದು ಸತ್ಯ ಎಂದನಿಸುತ್ತದೆ. ಅಂದ ಹಾಗೆ "ಬರವಣಿಗೆ ಒಂದು ಪ್ರಣಯದಂತೆ" ಎಂಬ ಸಾಲು ಕಣ್ಣಿಗೆ ಬಿದ್ದಿದ್ದು "ಮನಸು ಮುಕ್ತ ಮಾತು" ಎಂಬ ಬ್ಲಾಗಿನಲ್ಲಿ.

ಒಂದು ಮಾಯಾಲೋಕದಲ್ಲಿ ಒಂದಷ್ಟು ಹೊತ್ತು ಇದ್ದು ನಂತರ ಎದ್ದು ಹೋಗುವ ಕೋಟ್ಯಾಂತರ ಮನುಷ್ಯರಲ್ಲಿ ನಾವು ಸಹ ಒಬ್ಬರು ಎನ್ನಬಹುದು. ಆ ಮಾಯಾಲೋಕ ಇಂದು ಪ್ರಪಂಚದ ಮೂಲೆ ಮೂಲೆಗೂ ಹರಡಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗದು. ಆ ಮಾಯಾಲೋಕದಲ್ಲೇ ಕೆಲವರು ತಮಗೆ ಮನಸ್ಸಿಗೆ ಬಂದದ್ದನ್ನು ಬರೆಯುತ್ತಾರೆ ಹಾಗೆ ಬರೆದುದ್ದನ್ನು ತಮ್ಮ ಗೆಳೆಯರೊಡನೆ ಹಂಚಿಕೊಳ್ಳುತ್ತಾರೆ. ತರಾವರಿ ವಿಷಯ ವಸ್ತುಗಳುಳ್ಳ ಕತೆ, ಕವನ, ಲೇಖನ, ಫಿಲಾಸಫಿ ಇತ್ಯಾದಿಗಳ ಕುರಿತು ಈ ಮಾಯಾಲೋಕದಲ್ಲಿ ಬರೆಯುವವರು ಇದ್ದರೂ ಆ ಮಾಯಲೋಕವನ್ನೇ ಕುರಿತು ಬರೆಯುವವರು ಕಡಿಮೆ. ಆ ಮಾಯಾ ಲೋಕ ಯಾವುದು ಎಂದು ತಮಗೆ ತಿಳಿದಿದೆ ಎಂದುಕೊಳ್ಳುವೆ. ಹೌದು ಮಾಯಾಲೋಕವಾದ ಫೇಸ್ ಬುಕ್ ನಲ್ಲಿ ಬರೆಯುವವರು ಜಾಸ್ತಿ. ಆದರೆ ಫೇಸ್ ಬುಕ್ ಕುರಿತು ಬರೆದವರು ಕಮ್ಮಿ. ಫೇಸ್ ಬುಕ್ ಕುರಿತು ಒಂದು ಚಂದದ ಕವನ ಈ ಗೆಳೆಯನ ಬ್ಲಾಗಿನಲ್ಲಿ ಸಿಕ್ಕಾಗ ಯಾಕೋ ಒಂತರಾ ಖುಷಿಯಾಯಿತು.  

ಭೌತಿಕ ಅಸ್ತಿತ್ವ ಇರದ 
ಕೃತಕ ಕುತೂಹಲ ಜನಕ.
ನಮ್ಮ ಖಾಸಗಿ ಬದುಕಿನ 
ಪ್ರಾಯೋಜಕ. 
ನಾವು ಉಸಿರಾಡಿದ ಕ್ಷಣವನ್ನೂ  
ಬಣ್ಣ ಬಡೆಯುವ ತಾಣ    

ಲೈಕು, ಕಾಮ್ಮೆಂಟು 
ಗಳಿಸುವ ಗಂಭೀರ ಸ್ಪರ್ದೆ,
ಇವತ್ತಿನ ಗಳಿಕೆ ಇಷ್ಟು, ನಿನ್ನದೆಷ್ಟು....?
ಎಂಬ ಬಿಸಿನೆಸ್ಸಿನ ಮರ್ಯಾದೆ.

ಹೀಗೆ ಚಂದದ ಸಾಲುಗಳನ್ನು ಬರೆಯುತ್ತಲೇ ಸಾಹಿತ್ಯ ಕೃಷಿಯನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಿರುವ ಗೆಳೆಯ ವಿಜಯ್ ಕುಮಾರ್ ಹೂಗಾರ್ ಅವರು ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿ.. ಕತೆ ಕವನಗಳ ಜೊತೆಗೆ ಪುಟ್ಟ ಪುಟ್ಟ ಚುಟುಕಗಳ ಮೇಲೂ ಹೆಚ್ಚು ಒಲವುಳ್ಳ ಗೆಳೆಯನ ಪರಿಚಯವನ್ನು ಓದುವ ಮೊದಲು ಈ ಕೆಳಗೆ ನೀಡಿರುವ ಅವರ ಕವನವೊಂದರ ಸಾಲುಗಳನ್ನು ಓದಿಕೊಂಡು ಅವರ ಪರಿಚಯವನ್ನು ಓದಿಕೊಳ್ಳಿ.. :))

ಕಾರಣ ಇಲ್ಲದ ಪ್ರೀತಿ,
ಅದು ನನ್ನ ಗುರುತಿನ ಚೀಟಿ.... 
ಈ ನನ್ನ ನೆಮ್ಮದಿ ಕಂಡು,
ಆ ಚಂದಿರ ಹೊಡೆಯಲಿ ಸೀಟಿ.....:-) 

ವಿಜಯಕುಮಾರ್ ಹೂಗಾರ್

"ಪ್ರಿಯ ನಟರಾಜು ಅವರೇ, ಪರಿಚಯ ನೀಡುವಷ್ಟು ಬರಹಗಾರನೆನಲ್ಲ. ದಯವಿಟ್ಟು ನನ್ನ ಪರಿಚಯ ಒಬ್ಬ ಬರಹಗಾರನಾಗಿ ಸ್ವೀಕರಿಸದೆ,ಗೆಳೆಯನಾಗಿ ಸ್ವೀಕರಿಸಿ. ಬೀದರ್ ಜಿಲ್ಲೆಯ ಬಸವ ಕಲ್ಯಾಣ್ ತಾಲೂಕಿನ ಬಟಗೇರಾ ಗ್ರಾಮದಲ್ಲಿ ನನ್ನ ಬೇರು. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾದ್ದರಿಂದ ಊರಿಂದೂರಿಗೆ ಸುತ್ತಿ, ಏಳೂರು ನೀರು ಕುಡಿದು ಸದ್ಯಕ್ಕೆ ಗುಲ್ಬರ್ಗದಲ್ಲಿ ಮನೆ :-) ಪ್ರತಿ ಊರಿನಲ್ಲೋ ಒಂದೊಂದು ನೆನಪಿನ ಗಂಟು ಕಟ್ಟಿ ಮುಂದಿನೂರಿಗೆ ಸಾಗೋದು ನನ್ ಕೆಲಸ. ಬೀದಿಯಲ್ಲಿ ಹರಿದ ಭಿತ್ತಿ ಚಿತ್ರಗಳಂತೆ ಬಣ್ಣ ಕಳೆದುಕೊಂಡ ಬದುಕಿಗೆ, ಬಣ್ಣ ಹಚ್ಚೋದು ಕಲಿಸಿ, ಕೆಲಸ ಕೊಡಿಸಿದ್ದು ಬೆಂಗಳೂರು. ಊರಿಗೂ ಒಂದು ಜೀವ ಇರತ್ತೆ ಅಂತ ಕಂಡಿದ್ದು ಬಹುಶ ಇದೆ ಬೆಂಗಳೂರಲ್ಲಿ.ಇಲ್ಲಿ ಉಸಿರಾಡೋದೇ ಒಂದು ಖುಷಿ. ಬೆಂಗಳೂರಿನಲ್ಲಿ ತುಂಬಾ ಇಷ್ಟಾನೂಇಷ್ಟಗಳಲ್ಲಿ ವರನಟ ಡಾ. ರಾಜಕುಮಾರ್ ಪ್ರತಿಮೆಗಳು, ಕಟೌಟ್ ಗಳನ್ನ ಆಸೆಯಿಂದ ನೋಡೋದು, ಮೆಜೆಸ್ಟಿಕ್ ತಲೆಯಮೇಲೆ ನಿಂತು ಅಜ್ಞಾತ ಹೆಜ್ಜೆಗಳು ನೋಡೋದು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ. ಕೆಲಸ ಸೇರಿದ ಮೊದಲ ದಿನದಿಂದಲೂ ಕೆಲಸದಲ್ಲಿ ಖುಷಿ ಹುಡುಕಲು ಯತ್ನಿಸುತ್ತಿದ್ದೇನೆ.

ಸಮಯ ಸಿಕ್ಕಾಗ ಕನ್ನಡ ಸಾಹಿತ್ಯ ಓದೋದು.ತಲೆ ಕೆಟ್ಟಾಗ ಏನಾದ್ರು ಬರೆಯೋದು :-) ಬರವಣಿಗೆಗೆ ನಾನು ತುಂಬಾ ಹೊಸಬ. ಸುಮಾರು ಒಂದು ವರ್ಷದ ಹಿಂದೆ ಬರೆಯುವದಕ್ಕೆ ಶುರು ಮಾಡಿರಬಹುದು. ಎಡೆಬಿಡದೆ ತುಂಬಾ ಕಾಡುವ ವಿಷಯಗಳನ್ನ, ಸಂಗತಿಗಳನ್ನ ಬರವಣಿಗೆಯಿಂದ ತಣಿಸಿಕೊಳ್ಳುತ್ತೇನೆ. ನನ್ನ ಮುಂದಿನ ಎಲ್ಲಾ ಕೆಲಸಗಳು ಸ್ಥಗಿತವಾಗುವಷ್ಟು ಕಾಡಿದಾಗ ಮಾತ್ರ ಪೆನ್ನು ಕೈಗೆ ಹಿಡಿಯುತ್ತೇನೆ. ಸೋತು ಹಣ್ಣಾಗಿ ಬೇಜಾರಾಗಿ ಕುಳಿತಿರುವಾಗ ಒಮ್ಮೆ ಗೆಳೆಯರ ಬಲವಂತದಿಂದ ಹೊಗೆನಕಲ ಫಾಲ್ಸ್ ಗೆ ಹೋಗಿದ್ದೆ. ಅಲ್ಲಾದ ನನ್ನ ಮನಸಿನ ಬದಲಾವಣೆ, ನೋವಿಗೆ ಮುಕ್ತಿ ಸಿಕ್ಕ ರೀತಿಯ ಬಗ್ಗೆ ಒಂದು ಪ್ರವಾಸ ಕಥನದ ತರಹ ಬರೆದಿದ್ದು ನನ್ನ ಮೊದಲ ಬರಹ. ಅಲ್ಲಿಂದ ಒಂದೆರೆಡು ಕಥೆಯನ್ನ ಬರೆಯುವದಕ್ಕೆ ಆರಂಭಿಸಿದೆ. ಕೆಲಸದ ಒತ್ತಡದಲ್ಲಿ ಕಥೆ ಬರೆಯುವದಕ್ಕೆ ಸಮಯ ಕೊಡುವದು ಕಷ್ಟವಾಗುತ್ತ ಬಂತು, ಅದಕ್ಕೆ ಶಾರ್ಟ್ ಆಗಿ ಕವನ ಬರೆಯುವದಕ್ಕೆ ಶುರುಮಾಡಿದೆ.

ಜಗತ್ತಿನ ಶ್ರೇಷ್ಠ ಸಿನಿಮಾ ಓದೋದು,ನೋಡೋದು ಇಷ್ಟ. ಪುಟ್ಟಣ್ಣ ಕಣಗಾಲ್, ಕ್ರಿಸ್ಟೋಫರ್ ನೋಲನ್, ಅಕಿರಾ ಕುರಸವ ನೆಚ್ಚಿನ ನಿರ್ದೇಶಕರು. ಜಯಂತ್ ಕಾಯ್ಕಿಣಿ ನನ್ನ ನೆಚ್ಚಿನ ಲೇಖಕ. ಅವರ ಕಥಾಸಂಕಲನಗಳು ನನಗೆ ಗುರು ಸಮಾನ. ಅವರ ಕಥೆಗಳು ಸ್ಪಷ್ಟವಾಗಿ ಕಲ್ಪಿಸುವಷ್ಟು ನನ್ನನ್ನು ಆವರಿಸುತ್ತವೆ. ಅಲ್ಲಿನ ಪಾತ್ರಗಳು ಯಾವುದೋ ಒಂದು ಲೋಕಕ್ಕೆ ಕರೆದೊಯ್ದು ವಾಪಸ್ಸು ಬರುವ ದಾರಿ ಹೇಳದೆ ಮಾಯವಾಗುವಷ್ಟು ಕಾಡುತ್ತವೆ. ಇಲ್ಲಿಯವರೆಗೂ ನನಗೆ ತುಂಬಾ ಕೇಳಲ್ಪಟ್ಟಿರುವ ಪ್ರಶ್ನೆಯೆಂದರೆ 'tell about youself?'. ಎಲ್ಲಾ ಇಂಟರ್ವ್ಯೂ ಅಲ್ಲೂ ಇದು ಕಾಮನ್ ಪ್ರಶ್ನೆ. ಪ್ರತಿಸಲ ಮುಖ ಕೆಡಿಸಿಕೊಂಡೆ ಉತ್ತರಿಸಿದ ನನಗೆ ಇಂದು ಮೊದಲ ಬಾರಿಗೆ ನನ್ನ ಬಗ್ಗೆ ಹೇಳುವದಕ್ಕೆ ಖುಷಿಯಾಗುತ್ತಿದೆ.
ನನ್ನ ಬಗ್ಗೆ ನನಗೇ ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.ನಿಮ್ಮ ಈ 'ಪ್ರಶ್ನೆ'ಗೆ ನಾನು ಚಿರ ಋಣಿ.

ಒಲುಮೆಯಿಂದ
ವಿಜಯಕುಮಾರ್ ಹೂಗಾರ್."

ಎಂದು ಮಾತು ಮುಗಿಸಿದ ಗೆಳೆಯ ವಿಜಯ್ ಬರೀ ಒಂದು ವರ್ಷದಿಂದ ತಮ್ಮ ಬರವಣಿಗೆಯನ್ನು ಶುರು ಮಾಡಿದ್ದಾರೆ ಎಂದರೆ ನಂಬಲಾಗದು. ಯಾಕೆಂದರೆ ಅವರ ಬರಹಗಳಲ್ಲಿರುವ ಪ್ರಬುದ್ಧತೆ ಎದ್ದು ಕಾಣುತ್ತೆ. ಅಂದ ಹಾಗೆ ಗೆಳೆಯ ವಿಜಯ್ ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://mukta-viji.blogspot.in/

ವಿಜಯ್ ಅವರ ಒಂದೆರಡು ಕವನಗಳ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ನೀ ಮುಟ್ಟಿ 
ಹೋದ ನೆಲಕ್ಕಿಂದು 
ಬಿಗುಮಾನ.
ಸೋಕಿದ ಮನಕ್ಕೆಲ್ಲ 
ಬಹುಮಾನ.
ನೆರಳು ತಾಗಿದ 
ಜಾಗಕ್ಕೆಲ್ಲ ಹೊಸ 
ಜೀವದಾನ.
*****
ಮಾನ್ಯ ಚಂದಿರನಿಗೊಂದು
ವಿನಮ್ರ ಮನವಿ

ನನ್ನಾಕೆಯ ಹಿಂಬಾಲಿಸಬೇಡ,
ಅವಳ ಏಕಾಂತ ಕದಿಯಲು
ಯತ್ನಿಸಬೇಡ,
ಹೀಗೊಮ್ಮೆ ಯತ್ನಿಸಿ 
ನನ್ನ ಏಕಾಂತ 
ಕಳೆದು ಕೊಂಡಿರುವೆ,
ವ್ಯರ್ಥ ಪ್ರಯತ್ನಕ್ಕೆ ಬಲಿಯಾಗಬೇಡ
ಸೂರ್ಯನ ಆಸ್ಥಾನಕ್ಕೆ ಕವಿಯಾಗಬೇಡ.
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಶುಕ್ರವಾರ, ನವೆಂಬರ್ 2, 2012


ಎಲೆ ಮರೆ ಕಾಯಿ 
"ನಾನು ನಂದು ಅನ್ನೋ ಸ್ವಾರ್ಥ ಬಿಟ್ಟು ನಿಂಗೆ ಕೆಟ್ಟದಾದ್ರೂ ಪರವಾಗಿಲ್ಲ ಬೇರೆಯವರಿಗೆ ಒಳ್ಳೆಯದಾಗಲಿ ಅನ್ನೋ ಒಳ್ಳೆ ಮನಸಿಟ್ಟು ಬೇರೆಯವರನ್ನ ನೋಡು. ವಿಕಾರವಾಗಿರೋದು ನನ್ನ ಮುಖ ಅಲ್ಲ ನಿನ್ನ ಮನಸ್ಸು. ಕೆಟ್ಟ ಮನಸಿಟ್ಟು ನೋಡುದ್ರೆ ಎಲ್ಲಾ ವಿಕಾರವಾಗೆ ಕಾಣ್ಸುತ್ತೆ. ಒಳ್ಳೆ ಮನಸಿಟ್ಟು ನೋಡು ಎಲ್ಲಾ ಸುಂದರವಾಗೇ ಕಾಣ್ಸುತ್ತೆ Idiot."

"ಈ open world ನಲ್ಲಿ ಕೆಟ್ಟ ಮನಸ್ಸು, ಮೋಸ,  ಸ್ವಾರ್ಥಗಳಿಂದ ಮನುಷ್ಯರು ಹೊಡೆದಾಡ್ತಾರೆ. ಅದೇ underworld ನಲ್ಲಿ ಮಚ್ಚು ಕತ್ತಿಗಳಿಂದ ಹೊಡೆದಾಡ್ತಾರೆ. ಆ  ಮಾನಸಿಕ ಯುದ್ದಕ್ಕಿಂತ ಈ ದೈಹಿಕ ಯುದ್ದಾನೆ ಮೇಲು."

ಮೇಲಿನ ಸಂಭಾಷಣೆಯ ಸಾಲುಗಳು ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ "ಜನ ಚೇಂಜ್ ಕೇಳ್ತಾರೆ" ಅನ್ನೋ ಡೈಲಾಗ್ ನಿಮಗೆ ಖಂಡಿತಾ ನೆನಪಿರುತ್ತದೆ. ಹೌದು ನಮ್ಮ ಕನ್ನಡದ ಕುವರ ಉಪ್ಪಿಯವರ ಡೈಲಾಗ್ ಗಳು ಇವು. ಗೊತ್ತು ಗುರಿ ಇಲ್ಲದ ಯಾರೋ ಅನ್ಯ ಭಾಷೆಯ ನಿರ್ದೇಶಕರುಗಳ ಚಿತ್ರಗಳ ನೋಡಿ ಅವರಿಗೆ ಸಿಕ್ಕಾಪಟ್ಟೆ ಮರ್ಯಾದೆ ನೀಡೋ ನಾವು ನಮ್ಮದೇ ಕನ್ನಡದ ಪ್ರತಿಭೆಗಳನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತೇವೆ. ನಮ್ಮ ಕನ್ನಡದ ಪ್ರತಿಭೆಗಳನ್ನು ಪ್ರಮೋಟ್ ಮಾಡಲು, ಅವರ ಕುರಿತು ಒಳ್ಳೆಯ ಮಾತನಾಡಲು ಹಿಂಜರಿದು ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬೊಬ್ಬಿಡುತ್ತೇವೆ. ಒಂದೆರಡು ಹಿಟ್ ಚಿತ್ರಗಳನ್ನಷ್ಟೇ ನೀಡಿರುವ ನಿರ್ದೇಶಕರುಗಳಿಗೆ ಗ್ರೇಟ್ ಡೈರೆಕ್ಟರ್ ಅನ್ನೋ ಪಟ್ಟ ಕೊಡುವ ನಾವು ಹತ್ತಾರು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕನಿಗೆ ಅವನ ಮಾತು ಒರಟು ಅನ್ನೋ ಕಾರಣಕ್ಕೆ ಬೇರೆಯದೇ ಹಣೆಪಟ್ಟೆ ಕಟ್ಟುಬಿಡುತ್ತೇವೆ.  ಉಪ್ಪಿ ಎಂದರೆ ಕೆಲವರಿಗೆ ಕನ್ನಡದ ಹೀರೋ ಎಂದಷ್ಟೇ ಗೊತ್ತಿದೆ. ಆದರೆ ಉಪ್ಪಿ, ಉತ್ತಮ ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಎಂಬ ವಿಷಯ ಎಷ್ಟು ಜನಕ್ಕೆ ಗೊತ್ತೋ ಗೊತ್ತಿಲ್ಲವೋ ತಿಳಿಯದು. ಉಪ್ಪಿಯ ಒಬ್ಬ ದೊಡ್ಡ ಅಭಿಮಾನಿಯಾಗಿ ತನ್ನ "ಉಪೇಂದ್ರ ಎಂಬ MODERN ವೇದಾಂತಿ !!" ಎಂಬ ಲೇಖನವೊಂದರಲ್ಲಿ ಉಪ್ಪಿಯ ಚಿತ್ರಗಳ ಸಂಭಾಷಣೆಯೊಂದಿಗೆ ಲೇಖನವನ್ನು ಶುರು ಮಾಡಿ ಉಪ್ಪಿಯನ್ನು ಚೆನ್ನಾಗಿ ವಿಶ್ಲೇಷಿಸಿರುವ ಗೆಳೆಯನ ಬ್ಲಾಗಿನ ಹೆಸರು ಅಂತರಂಗದ ಉವಾಚ.

ನಮ್ಮ ಮಾತುಗಳು ಬೆರೆತುಹೋದರೆ
ಮೂಡಿರುವ ಕುತೂಹಲ ಕಡಿಮೆಯಾಗಬಹುದು
ಮೌನದ ಮಜಾ ಮರೆಯಾಗಬಹುದು
ಅವಿತಿರುವ ಭಾವನೆಗಳಿಗೆ ಅರ್ಥ ಬಂದುಬಿಡಬಹುದು
ಆದರೆ,
ಈ ಮೌನ ಸಂಭಾಷಣೆ ಸಾಕಾಗಿದೆ ಗೆಳತಿ

ಮೇಲಿನ ಚಂದದ ಸಾಲುಗಳ ಬರೆದಿರುವ ಈ ಗೆಳೆಯ ಹೇಳುವಂತೆ ತಾನು ವೃತ್ತಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸದಲ್ಲಿದ್ದರೂ ಸಾಕಷ್ಟು ಪ್ರವೃತ್ತಿಗಳಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲದಿಂದ ಮನಸ್ಸಿಗೆ ತೋಚಿದ್ದನ್ನು  ಬ್ಲಾಗಿನಲ್ಲಿ ನೀರಾಳವಾಗಿ ಗೀಚಬಹುದು ಎಂಬ ಧೈರ್ಯದಿಂದ ಈ ಬ್ಲಾಗ್ ಮಾಡಿದ್ದಾರಂತೆ. ತನ್ನ ಪಿಯುಸಿ ಮತ್ತು ಇಂಜಿನಿಯರಿಂಗ್ ದಿನಗಳ ಕವಿತೆಗಳನ್ನು ಒಂದೆಡೆ ತನ್ನ ಬ್ಲಾಗಿನಲ್ಲಿ ಹಾಕಿರುವ ಗೆಳೆಯ ತಾನು ಭಾವುಕ ಎಂದು ಹೇಳಿಕೊಳ್ಳುತ್ತಲೇ ತನ್ನ ಸರಳ ಶೈಲಿಯಿಂದ ನಮ್ಮ ಮನ ಸೆಳೆಯುತ್ತಾರೆ. ಬ್ಲಾಗ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಒಂದು ಕಲೆ. ಅಂತರ್ಜಾಲ ತಾಣದಲ್ಲಿ ತನ್ನ ಬ್ಲಾಗ್ ಲಿಂಕ್ ಅನ್ನು ಆಗಾಗ ಹಂಚಿಕೊಳ್ಳುವುದರ ಮೂಲಕ ಹೆಚ್ಚು ಹೆಚ್ಚು ಜನಗಳಿಗೆ ನಮ್ಮ ಬರಹಗಳು ತಲುಪಲು ಅನುಕೂಲವಾಗುತ್ತದೆ. ನಮ್ಮ ಲೇಖನಗಳನ್ನು ನಾವೇ ಇತರರೊಡನೆ ಹಂಚಿಕೊಳ್ಳದಿದ್ದರೆ ನಮ್ಮ ಬರಹಗಳು ಮತ್ತು ನಾವು ಎಲೆ ಮರೆ ಕಾಯಿಯಾಗಿಯೇ ಉಳಿದುಬಿಡುತ್ತೇವೆ. ಯಾವುದೋ ಕೆಲಸದ ಒತ್ತಡದಲ್ಲಿ ಇಲ್ಲವೇ ಪ್ರೋತ್ಸಾಹದ ಕೊರತೆಯಿಂದ ಬರಹಗಳನ್ನು ಬರೆಯುವುದನ್ನೇ ನಿಲ್ಲಿಸಿಬಿಡುವ ಅಪಾಯ ಬರಹಗಾರನಿಗೆ ಇರುತ್ತದೆ. ಅಂತಹ ಅಪಾಯಗಳಿಂದ ಈ ಗೆಳೆಯ ಪಾರಾಗಿ ತನ್ನ ಸಾಹಿತ್ಯ ಕೃಷಿಯಲ್ಲಿ ಇನ್ನೂ ಈ ಗೆಳೆಯ ಹೆಚ್ಚು ತೊಡಗಲಿ ಎಂಬುದು ಈ ಲೇಖನದ ಆಶಯ. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಉಪ ಶೀರ್ಷಿಕೆ ಎಲೆ ಮರೆ ಕಾಯಿ. ಈ ಎಲೆ ಮರೆ ಕಾಯಿ ಎಲೆ ಮರೆಯಲ್ಲೇ ಉಳಿಯದಿರಲಿ.. ಪಕ್ವವಾಗಿ ಹಣ್ಣಾಗಲಿ..

ಬರೆಯ ಹೊರಟರೇ ಬರೀ 
ಪ್ರಣಯದ ಕಲರವಗಳು 
ಮುಗಿಯದ ಪ್ರೇಮ ಪಲ್ಲವಿಗಳು 
ಹಿತ ನೀಡೋ ಚರಣಗಳು 
ಹಾಡಬೇಕಷ್ಟೇ, ಶೃತಿ ತಪ್ಪದೆ 
ಕೇಳುಗರ ಕಿವಿ ತಣಿಸಲು..!!!

ಎಂದು ಹಾಡುವ ಇಚ್ಚೆ ತೋರಿದ್ದ ಗೆಳೆಯ ಯಾಕೋ ತುಂಬಾ ಮೌನವಹಿಸಿದ ಹಾಗೆ ಕಾಣುತ್ತೆ. ಮೇಲೆ ಹೇಳಿದ ಹಾಗೆ ತನ್ನ ಬ್ಲಾಗಿನಲ್ಲಿ ಹೆಚ್ಚು ಲೇಖನಗಳನ್ನಾಗಲಿ ಕವನಗಳನ್ನಾಗಲಿ ಈ ಗೆಳೆಯ ಹಾಕಿಕೊಳ್ಳದಿದ್ದರೂ ಇವರ ಬರವಣಿಗೆಯಲ್ಲಿ ಒಂದು ಪ್ರಬುದ್ಧತೆ ಇದೆ ಎಂಬುದು ಎದ್ದು ಕಾಣುತ್ತದೆ. ಇವರಿಂದ ಮತ್ತಷ್ಟು ಲೇಖನಗಳು ಬರಹಗಳು ಕವನಗಳು ಬರಲಿ ಎಂದು ಹಾರೈಸುತ್ತಾ ಇವತ್ತಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿಯಾಗಿರುವ ಪ್ರದೀಪ್ ಲಿಂಗರಾಜಶೆಟ್ಟಿಯವರ ಕಿರು ಪರಿಚಯ ಅವರದೇ ಮಾತಿನಲ್ಲಿ ಗೆಳೆಯರೇ ಇಗೋ ನಿಮಗಾಗಿ..

ಪ್ರದೀಪ್ ಲಿಂಗರಾಜಶೆಟ್ಟಿ

"ನನ್ನ ಹೆಸರು ಪ್ರದೀಪ್ ಲಿಂಗರಾಜಶೆಟ್ಟಿ. ಹುಟ್ಟಿದ್ದು ತುಮಕೂರು ಜಿಲ್ಲೆಯ ಚೇಳೂರು ಎಂಬ ಗ್ರಾಮದಲ್ಲಿ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ನನ್ನ ಪ್ರೌಢ ಶಿಕ್ಷಣ. ಪಿ.ಯು.ಸಿ. ಹಾಗೂ ಇಂಜಿನಿಯರಿಂಗ್ ಗಾಗಿ ಆಶ್ರಯಿಸಿದ್ದು ತುಮಕೂರನ್ನು. ಸುಮಾರು 4 ವರ್ಷಗಳಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಸಾಹಿತ್ಯದಲ್ಲಿ ತೊಡಗಿಕೊಳ್ಳಲು ಆಸಕ್ತಿ ಚಿಗುರಿತಾದರೂ, ಬರೆಯಲು ಶುರುವಿಟ್ಟಿದ್ದು ಪಿ.ಯು.ಸಿ. ಓದುವಾಗ. ನನ್ನ ಹಾಸ್ಟೆಲ್ ರೂಮ್ ಮೇಟ್ ಆಗಿದ್ದ ನಟರಾಜು ಎಂಬುವವರು ಬರೆಯುತಿದ್ದ ಕವನಗಳು ನಾನೂ ಸಾಹಿತ್ಯದಲ್ಲಿ ತೊಡಗಿಕೊಳ್ಳಲು ಪ್ರೇರೆಪಿಸಿದವು.

ನನಗೆ ಕನ್ನಡ ಸಾಹಿತ್ಯದ ಎಲ್ಲ ದಿಗ್ಗಜರ ರಚನೆಗಳು ಇಷ್ಟವಾಗುತ್ತವೆ. ಒಬ್ಬೊಬ್ಬ ಸಾಹಿತಿಯೂ ಒಂದೊದು ವಿಚಾರಕ್ಕೆ, ಅವರ ರಚನೆಯ ಶೈಲಿಗೆ ನನಗೆ ತುಂಬಾ ಇಷ್ಟವಾಗುತ್ತಾರೆ. ಹೆಚ್ಚು ಓದುವುದು ಆತ್ಮಕಥೆಗಳನ್ನು. ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ಸಾಹಿತ್ಯ ರಚನೆಯಲ್ಲಿ ವಿಜ್ಞಾನವನ್ನ ಅಳವಡಿಸಿಕೊಂಡಲ್ಲಿ ನಮ್ಮ ಕನ್ನಡ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿ, ಗುಣಮಟ್ಟದ್ದಾಗಿ ಹೊರಬರುತ್ತೆ ಎಂಬುದನ್ನು ಬಲವಾಗಿ ನಂಬುವವನು ನಾನು. ಕಾರಂತರ ವೈವಿಧ್ಯಮಯ ಬದುಕು ನನ್ನನ್ನು ಯಾವಾಗಲೂ ಬೆರಗುಗೊಳಿಸುತ್ತೆ. ಕನ್ನಡ ನನ್ನ ಮಾತೃ ಭಾಷೆ, ಮಾತನಾಡುವಾಗ, ಕನ್ನಡ ಓದುವಾಗ ಯಾವುದೇ ಭಾಷೆ ನೀಡದ ಸುಖವನ್ನು ಇದರಿಂದ ನಾನು ಪಡೆದಿದ್ದೇನೆ.

ಕನ್ನಡದಲ್ಲಿ ಬೇಕಾದಷ್ಟು ಸಾಹಿತ್ಯ ಪ್ರಕಾರಗಳಿವೆ. ದಿಗ್ಗಜರುಗಳು ರಚಿಸಿದ ಶ್ರೀಮಂತ ಸಾಹಿತ್ಯವಿದೆ. ಇದಕ್ಕೆ ಸಾಕ್ಷಿ ಭಾರತದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಗೌರವ. ಅವುಗಳೆಲ್ಲವುಗಳ ಅಧ್ಯಯನ, ತಿಳಿಯದಿರುವವರಿಗೆ ಸಣ್ಣ ಮಾರ್ಗದರ್ಶನ ನನ್ನ ಕನಸು.
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್"

ಅತಿ ಚಿಕ್ಕದಾಗಿ ಚೊಕ್ಕವಾಗಿ ತನ್ನ ಪರಿಚಯ ಮಾಡಿಕೊಂಡ ಗೆಳೆಯ ಪ್ರದೀಪ್ ರವರ ಪರಿಚಯ ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಪ್ರದೀಪ್ ರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ ಅವರ ಬ್ಲಾಗಿನ ಮೇಲೆ ಸಮಯವಿದ್ದಾಗ ಕಣ್ಣಾಡಿಸಿ..
http://antharangadaaavaacha.blogspot.in/

ಗೆಳೆಯ ಪ್ರದೀಪ್ ರವರ ಬರಹಗಳ ಒಂದೆರಡು ತುಣುಕುಗಳನ್ನು ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ....

ಅಮ್ಮನ ಅಕ್ಕರೆಯ ಮಡಿಲಿನಲ್ಲಿ ಮಲಗಿ ಪಡೆದ ಸುಖ, ಅಪ್ಪನ ಜೊತೆ ತೊಡಗಿ ಮುಳುಗಿಹೋದ ಸ್ನೇಹಭರಿತ ಚರ್ಚೆಗಳು ನೀಡೋ ತಿಳುವಳಿಕೆ, ಒಡಹುಟ್ಟಿದವರೊಡನೆ ಕಿತ್ತಾಡಿ, ಗುದ್ದಾಡಿ ಹಲವನ್ನ ನಮ್ಮದಾಗಿಸಿಕೊಂಡ ಕ್ಷಣಗಳು, ನೆರೆಹೊರೆಯವರಲ್ಲಿ ಬೆರೆತುಹೊದಾಗ ಎಲ್ಲರೂ ನಮ್ಮವರು ಎಂದು ಮೂಡುವ ಭಾವನೆಗಳು, ಯಾರ ಜೀವನದಲ್ಲಿ ಸಂಭವಿಸುವುದಿಲ್ಲವೋ ಅವರದೊಂದು ಅಪೂರ್ಣ ಜೀವನವೇ ಸರಿ.
*****
ಚದುರಿದ ಮೋಡಗಳು ಒಟ್ಟಾಗುವುದು 
ಇಳೆಗೆ ಮಳೆ ತರಲು ತಾನೇ 
ಋತುಮಾನಕೆ ತಲೆದೂಗಿ ಎಲೆಗಳುದುರುವುದು
ಹೊಸ ಚಿಗುರು ಬಯಸಿ ತಾನೇ
ಕಲ್ಪನೆಗೆ ನಿಲುಕಿದ ಒಡನಾಡಿ ಸಿಕ್ಕಾಗ
ಮನ ಸೋಲುವುದು ಸಹಜ ತಾನೇ..!!!
*****
ಭಾಷೆ ವಿಶೇಷ ರೂಪ  ತಾಳದು 
ಭಾವನೆಗಳು ಬೆಂಬಲಕ್ಕಿಲ್ಲದಿದ್ದರೆ 
ಭಾವನೆಗಳು ಬರಹವಾಗವು 
ವಿಷಯಗಳು ದೊರಕದಿದ್ದರೆ 
ವಿಷಯಗಳು ತಲುಪುವುದೇ ಇಲ್ಲ 
ಪಕ್ವ ಅನುಭವವಿರದಿದ್ದರೆ 
ಅನುಭವಿಸಿ ಬರೆದ  ಬರಹಕೆ ಬೆಲೆ ಬೆಲೆ ಬಾರದು 
ಆನಂದಿಸುವ, ಆಸ್ವಾದಿಸುವ ಮನಸುಗಳಿರದಿದ್ದರೆ..!!!

ಮತ್ತೆ ಸಿಗೋಣ
ಪ್ರೀತಿಯಿಂದ
ನಟರಾಜು :))

ಗುರುವಾರ, ಅಕ್ಟೋಬರ್ 25, 2012


ಎಲೆ ಮರೆ ಕಾಯಿ ೬೨
"ಮತ್ತದೇ ಅಸ್ಪಷ್ಟ ದಾರಿ, ಮತ್ತದೇ  ಸಹ ಸ್ಪರ್ಧಿಗಳು, ಮತ್ತದೇ ಗುರಿ, ಮತ್ತವೇ  ತಂಗುದಾಣಗಳು, ಓಡುತ್ತಿದೇನೆ, ಓಡಬೇಕು, ವಿಶ್ರಮಿಸುವಂತಿಲ್ಲ.  ಇದಷ್ಟೇ  ತಲೆಯಲ್ಲಿ ಇಟ್ಟುಕೊಂಡು ಓಡುತ್ತಿರುವ  ನಾನು  ಯಾರಿಗೆ, ಏತಕ್ಕಾಗಿ  ಓಡುತ್ತಿದೇನೆ  ಎನ್ನುವುದನ್ನು  ವಿವರಿಸಲಾರೆ  ವಿಪರ್ಯಾಸ! ಆದರೆ  ಓಟ  ವ್ಯರ್ಥವೆನಿಸುತ್ತಿಲ್ಲ, ನಾನು ಓಡುತ್ತಲೇ ಇದ್ದೇನೆ, ಇನ್ನು ಅದೆಷ್ಟು ಹೊಸ ತಂಗು ದಾಣ ಗಳಲ್ಲಿ  ವಿಶ್ರಮಿಸಲ್ಲಿದ್ದೇನೋ? ಅಸ್ಪಷ್ಟ, ಅನಿಖರತೆ ... ಉತ್ತರದ  ನಿರಂತರ  ಹುಡುಕಾಟದಲ್ಲಿ  ಮತ್ತೆ ನನ್ನ ಓಟ, ಜತೆಯಲ್ಲಿ  ನೀವು  ಇರುವಿರಲ್ಲ ???"

ಪ್ರತಿ ಬಾರಿ ಎಲೆ ಮರೆ ಕಾಯಿಗಳ ಜೊತೆ ಮಾತುಕತೆ ಬರಹವನ್ನು ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದ ಲೇಖಕರ ಒಂದು ಕವನದಿಂದಲೇ ಶುರು ಮಾಡುವ ವಾಡಿಕೆಯನ್ನು ಪಾಲಿಸುತ್ತಾ ಬಂದಿದ್ದೆ. ಕೆಲವು ಸಾರಿ ಮಾತುಕತೆಗೆ ಬಂದ ಅತಿಥಿಗಳ ಬ್ಲಾಗಿನಲ್ಲಿ ಕವಿತೆಗಳು ಕಾಣದೇ ಇದ್ದಾಗ ಅವರ ಬರಹದಲ್ಲಿನ ಒಂದು ಸಾಲಿನ ಪದಗಳನ್ನೇ ಒಂದರ ಕೆಳಗೊಂದರಂತೆ ಜೋಡಿಸಿಟ್ಟು ಕವನದ ತರಹ ಕಾಣುವಂತೆ ಮಾಡಿ ಕವನದಿಂದಲೇ ಎಲೆ ಮರೆ ಕಾಯಿ ಬರಹವನ್ನು ಶುರು ಮಾಡುತ್ತಿದ್ದ ವಾಡಿಕೆಯನ್ನು ಸದ್ಯ ಮುರಿಯಲಿಲ್ಲ ಎಂದುಕೊಳ್ಳುತ್ತಿದ್ದೆ. ಇವತ್ತಿನ ಅತಿಥಿಯ ಬ್ಲಾಗಿನಲ್ಲಿ ಒಂದು ಕವಿತೆಯೂ ಕಾಣದಿದ್ದಾಗ ಚಂದದ ಬರಹದ ಒಂದೆರಡು ಸಾಲುಗಳ ಪದಗಳನ್ನು ಕವಿತೆಯ ಹಾಗೆ ಜೋಡಿಸದೇ ಆ ಸಾಲುಗಳು ಹೇಗಿದ್ದವೋ ಹಾಗೆ ನಿಮ್ಮ ಮುಂದಿಟ್ಟಿರುವೆ. ಒಮ್ಮೆ ನೋಡಿದರೆ ಮೇಲೆ ಬರೆದಿರುವ "ಮತ್ತದೇ ಅಸ್ಪಷ್ಟ ದಾರಿ, ಮತ್ತದೇ  ಸಹ ಸ್ಪರ್ಧಿಗಳು" ಎಂಬತಹ ಪದಗಳಿರುವ ಸಾಲುಗಳು ಕವಿತೆಯ ಹಾಗೆ ಓದಿಸಿಕೊಳ್ಳುವುದರಿಂದ ಕವಿತೆಯೊಂದಿಗೆ ಶುರುವಾಗುವ ಎಲೆ ಮರೆ ಕಾಯಿ ಲೇಖನದ ವಾಡಿಕೆಯನ್ನು ಈ ಬಾರಿ ಮುರಿದಿದ್ದರೂ ಮುರಿದಂತೆ ಅನಿಸುತ್ತಿಲ್ಲ. ಅಂದ ಹಾಗೆ ಮೇಲಿನ ಚಂದದ ಸಾಲುಗಳು ಕಣ್ಣಿಗೆ ಬಿದ್ದ ಬ್ಲಾಗಿನ ಹೆಸರು ಅಂತರ್ಮುಖಿ..

"ಬದುಕು ಒಂದು ಖಾಲಿ ಕ್ಯಾನ್ವಾಸ್ ಹಾಳೆಯಂತೆ! ಬೆಳಗ್ಗೆ ಎದ್ದು ಬ್ರಷ್ ಮಾಡಲು ಹೋದಾಗ ಖಾಲಿಯಾದ ಟೂಥ್ ಪೇಸ್ಟ್ ಟ್ಯೂಬ್ ಕಂಡು ಏನೇನೋ ವಿಚಾರಧಾರೆಗಳ ಸಂಚಲನ. ಎಲ್ಲ ಖಾಲಿಯಾದ ವಸ್ತುಗಳು replace ಆಗುತ್ತಲೇ ಇರುತ್ತವೆ. ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳು, ಮಹಡಿ ಮೇಲಿನ syntax, ಯಾವುದೇ ಆಗಿರಲಿ ಖಾಲಿಯಾದಾಗಲೆಲ್ಲಾ ಅವುಗಳನ್ನು ಪುನಃ replace ಮಾಡಲಾಗುತ್ತದೆ. replace ಆದ ವಸ್ತುಗಳು ಒಂದು ದಿನ ಖಾಲಿಯಾಗುತ್ತ  ಹೋಗುತ್ತವೆ. ಇದನ್ನು ಗಮನಿಸದೆ ದಿನ ಕಳೆಯುವ ನಾವುಗಳು ದೈಹಿಕವಾಗಿ (ಕೆಲವೊಮ್ಮೆ ಮಾನಸಿಕವಾಗಿ ) ಖಾಲಿಯಾಗುತ್ತ ಹೋಗುತ್ತೇವೆ. ಎಂಥ ವಿಚಿತ್ರವಿದು?"

ಹೆಚ್ಚಿನವರಲ್ಲಿ ಬರಹಗಾರ ಹುಟ್ಟುವುದೇ ಕಾಲೇಜಿಗೆ ಸೇರಿದ ಮೇಲೆ. ಅಂದರೆ ಹದಿನೇಳು ಹದಿನೆಂಟು ವರ್ಷ ವಯಸ್ಸಿನಲ್ಲಿ. ಅವರ ಬರಹ ಕಾಲೇಜಿನ ದಿನಗಳಲ್ಲಿ ನಿರಂತರವಾಗಿದ್ದರೆ ಪಿಯುಸಿ ಮುಗಿಸಿ ಡಿಗ್ರಿಯ ಕೊನೆಯ ವರ್ಷಕ್ಕೆ ಬರುತ್ತಿದ್ದಂತೆ ಅವರೊಳಗಿನ ಬರಹಗಾರನ ಬರಹಗಳಿಗೆ ಒಂದು ಪಕ್ವತೆ ಬಂದುಬಿಡುತ್ತದೆ. ಪ್ರೇಮ, ಪ್ರಯಣದಂತಹ ನವಿರಾದ ಭಾವಗಳು ಬದುಕಿನ ಸಿದ್ದಾಂತಗಳ ರೂಪು ಪಡೆಯುವುದೇ ಆ ವಯಸ್ಸಿನಲ್ಲಿ ಎನ್ನಬಹುದು. ಬರಹಗಾರನ ಬದುಕಿನ ಆ ಕಾಲಘಟ್ಟ ಅವನ ಬರಹದ ಬದುಕಿನ ಬುನಾದಿ ಸಹ ಎನ್ನಬಹುದು. ಕಾಲೇಜಿನ ದಿನಗಳು ಕಳೆಯುತ್ತಿದ್ದಂತೆ ಬರಹದ ದಿನಗಳು ಕಳೆದು ಹೋದಂತೆ ಅನಿಸಿ ಒಬ್ಬ ವ್ಯಕ್ತಿಯೊಳಗಿನ ಬರಹಗಾರ ಒಮ್ಮೊಮ್ಮೆ ಸದ್ದಿಲ್ಲದೆ ಮಾಯವಾದರೂ, 18 ರಿಂದ 22 ನೇ ವಯಸ್ಸಿನಲ್ಲಿ  ಬರಹಗಾರನಾಗಿ ತನಗೆ ತಾನೇ ಹಾಕಿಕೊಂಡಿರುವ ಬರಹದ ಬುನಾದಿಯ ಮೇಲೆ ತಳಹದಿಯ ಮೇಲೆ ಮುಂದೊಂದು ದಿನ ಒಬ್ಬ ಬರಹಗಾರ ಚಂದದ ಬರಹದ ಮಹಲ್ಲೊಂದನ್ನು ಕಟ್ಟಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ 18 ರಿಂದ 22 ನೇ ವಯಸ್ಸಿನ ಕಾಲಘಟ್ಟವಿದೆಯೆಲ್ಲಾ ಅದು ಬರಹಗಾರನ ಬದುಕಿನ ಬಹು ಮುಖ್ಯ ಪರ್ವ ಎನ್ನಬಹುದು. ಆ ವಯಸ್ಸಿನಲ್ಲಿ ಮೂಡುವ ಬರಹಗಳಲ್ಲಿರುವ ಒಂದು ನವಿರಾದ ಭಾವಗಳು ಬದುಕಿನ ಬಗೆಗಿನ ವಿಧ ವಿಧವಾದ ದೃಷ್ಟಿಕೋನಗಳು ಮೇಲಿನ ಬರಹದಲ್ಲಿ ಎದ್ದು ಕಾಣುತ್ತಿದೆಯಲ್ಲವೇ ಸಹೃದಯಿಗಳೇ...

"ಸಾವು ನಿಶ್ಚಿತ! ಎಲ್ಲರಿಗು ಬಂದೆ ಬರುತ್ತೆ, ಕೆಲವರ ಬದುಕಿನಲ್ಲಿ, ಅಪಘಾತವಾಗಿ, ಆತ್ಮಹತೆಯಾಗಿ, ಕಾಯಿಲೆ ಯಾಗಿ, ವಯಸ್ಸಾಗಿ, ವ್ಯಸನಿಯಾಗಿ, ಇನ್ಯಾವುದೋ ರೂಪದಲ್ಲಿ ಬರಬಹುದು, ತಾಯಿ ಗರ್ಭ ಕೋಶದಿಂದ ಹೊರಬರುವ ಮೊದಲೇ ಅದೆಷ್ಟೋ ಜೀವಗಳು ಕಣ್ಮುಚ್ಚಿಕೊಂಡಿರುತ್ತವೆ, ಇವೆಲ್ಲವನ್ನೂ ನೋಡಿ, , you are lucky enough to see the different colours of life for twenty long years! ಅಲ್ವಾ? ಸಾವು   inevitable ಡೆವಿಲ್, ನಾವದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ, ಆದರೆ ಬದುಕುವುದು, ಪ್ರತಿಕ್ಷಣವನ್ನು ಅನುಭವಿಸುವುದು ನಮ್ಮ ಕೈಲಿದೆ. ಸಾವಿಗೂ ನಮ್ಮ ಜೀವನ ಪ್ರೀತಿ ಕಂಡು ಹೆದರಿಕೆ ಆಗೋ ಹಾಗೆ ಇರೋ ಕೆಲವೇ ದಿವಸಗಳನ್ನು ಬದುಕಿ ಬಿಡಬೇಕು."

ಇಪ್ಪತ್ತು ವರ್ಷ ವಯಸ್ಸಿಗೆ ಇಷ್ಟೊಂದು ಫಿಲಾಸಫಿಯುಳ್ಳ ಸಾಲುಗಳನ್ನು ಯಾರು ಬರೆದಿದ್ದು ಎಂದು ಅಚ್ಚರಿಪಡಬೇಡಿ.. ಯಾವುದೋ ಒಂದು ಪುಟ್ಟ ಘಟನೆಯನ್ನೋ ಇಲ್ಲ ತನ್ನ ಭಾವವನ್ನೋ ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತೋ ಇಲ್ಲ ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುತ್ತಲೋ ನಮಗೆ ವಿವರಿಸಿ ಹೇಳುವ ಕಲೆ ಬಲ್ಲ ಒಬ್ಬ ಚಂದದ ಯುವ ಬರಹಗಾರ್ತಿ ಇಂದಿನ ನಮ್ಮ ಎಲೆ ಮರೆ ಕಾಯಿ ಅತಿಥಿ.. ಇವತ್ತಿನ ಅತಿಥಿಯ ಹೆಸರು ಅಶ್ವಿನಿ ದಾಸರೆ.. ಮುಂದೊಂದು ದಿನ ಚಂದದ ಬರಹಗಾರ್ತಿಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಅಶ್ವಿನಿಯವರೊಂದಿಗೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಅಶ್ವಿನಿ ದಾಸರೆ

"ಅಶ್ವಿನಿ ದಾಸರೆ...ಊರು ಧಾರವಾಡ, ನಮ್ಮದು ಸಂಸ್ಕೃತಿಯ ನಗರಿ ಎಂದೇ ಖ್ಯಾತವಾದ ಊರು, ಇಲ್ಲಿ ಯಾರೇ ಬಂದು ಕಲ್ಲು ಎಸೆದರೂ ಅದು ಹೋಗಿ ಒಬ್ಬ ಸಾಹಿತಿಗೆ ತಗಲುತ್ತದೆ ಎಂಬ ಮಾತೊಂದಿದೆ, ಬೇಂದ್ರೆ, ಚನ್ನವೀರ ಕಣವಿ, ವಿ.ಕೃ. ಗೋಕಾಕ, ಗಿರೀಶ್ ಕಾರ್ನಾಡ್ ಮುಂತಾದ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಧಾರವಾಡದ ಕೊಡುಗೆ ಅಪಾರವಾದದ್ದು. ನಾನು ಈಗ ಸಧ್ಯ ಬೆಂಗಳೂರಿನಲ್ಲಿ ಎಂಟೆಕ್ ವ್ಯಾಸಾಂಗ ಮಾಡುತ್ತಿದ್ದೇನೆ, ನನ್ನ ಕ್ಷೇತ್ರ ತಂತ್ರಜ್ನ್ಯಾನ ಆದರೂ ನನ್ನ ನೆಚ್ಚಿನ ಕ್ಷೇತ್ರ ಸಾಹಿತ್ಯ ಹಾಗೂ ಸಂಗೀತ. ಅಪ್ಪ ಕೂಡ ಉತ್ತಮ ಬರಹಗಾರರು ಆದರೆ ಅವರ ಬರವಣಿಗೆ ನಮ್ಮ ಪರಿವಾರಕ್ಕೆ ಮಾತ್ರ ಸೀಮಿತ ವಾಗಿದ್ದು, ಹಿಂದೂ ಪತ್ರಿಕೆಯಲ್ಲಿ ಅವಗೋ ಇವಾಗೋ ಒಮ್ಮೆ ಅವರ ಲೇಖನಗಳು ಪ್ರಕಟವಾಗುತ್ತವೆ. ಚಿಕ್ಕಂದಿನಿಂದ ಅಪ್ಪ ಓದುತ್ತಿರುವ ಅನೇಕ ಪುಸ್ತಕಗಳನ್ನು ಸುಮ್ಮನೆ ಗಮನಿಸುತ್ತಿದೆ, ಓದಬೇಕು ಅಂತ ಅನಿಸಿದರು ಅರ್ಥವಾಗದ ವಯಸ್ಸದು.. ಆದರೂ ಪಟ್ಟು ಬಿಡದೆ ನಾನು ೫ ನೆ ತರಗತಿಯಲ್ಲಿರುವಾಗಲೇ ಗೃಹಭಂಗ ಓದಿದೆ, ಪೂರ್ಣ ಪ್ರಮಾಣದಲ್ಲಿ ಅರ್ಥವಾಗಿತ್ತೋ ಇಲ್ಲೋ ಸರಿಯಾಗಿ ನೆನಪಿಲ್ಲ ಆವಾಗಿಂದ ಬಿಟ್ಟು ಬಿಡದೆ ಭೈರಪ್ಪನವರ ಎಲ್ಲ ಕಾದಂಬರಿಗಳನ್ನ ಓದಲು ಶುರು ಮಾಡಿದೆ.

ಓದು ನಿರಂತರ ಇದ್ದೆ ಇತ್ತು, ಆದರೆ ಯಾವಾಗಲಾದರು ಬರೆಯವ ಪ್ರಯತ್ನ ಏನು ಮಾಡಿರಲಿಲ್ಲ, ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ, ಮತ್ತೆ ಮೀಸಲಾತಿಯ ಮೇಲೆ ಪಿಯುಸಿ ಪ್ರವೇಶಕ್ಕೂ ಕೆಲ ನಿಯಮ ರೂಪಿಸಲು ಮುಂದಾಗಿದ್ದ ಸರ್ಕಾರದ ವಿರುದ್ಧ ವಿಜಯ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿ ವಾಚಕರ ವಿಜಯ ಅಂಕಣದಲ್ಲಿ ನನ್ನ ಪತ್ರ ಪ್ರಕಟವಾಗಿತ್ತು, ಅದಾದ ನಂತರ ಶಿಕ್ಷಕರ ದಿನಾಚರಣೆ ಅಂಗವಾಗಿ, ಮತ್ತೆ ಭೈರಪ್ಪನವರ ಕವಲು ಕುರಿತಾಗಿ ಚರ್ಚೆ ಅಂಕಣದಲ್ಲಿ ಪ್ರಕಟವಾದವು... ಪ್ರತಿ ಬಾರಿ ಬರೆದ ಲೇಖನಗಳು ಪ್ರಕಟವಾಗೊವರೆಗೂ ಕಾಯುವಷ್ಟು ಸಹನೆ ಇಲ್ಲದಿದ್ದರಿಂದ, ಬರೆಯೋದನ್ನ ನಿಲ್ಲ್ಲಿಸಿದ್ದೆ, ಹೀಗೆ ಒಂದು ದಿನ ಶ್ರೀವತ್ಸ ಜೋಷಿಯವರು ಫೇಸ್ ಬುಕ್ಕಿನಲ್ಲಿ ಸಿಕ್ಕಾಗ, ಬ್ಲಾಗ್ ಶುರು ಮಾಡುವಂತೆ ಸೂಚಿಸಿದರು, ಮೊದಲಿಗೆ ಆ ಬಗ್ಗೆ ಅಷ್ಟೇನೂ ಆಸಕ್ತಿ ತೋರದ ನಾನು ಆಮೇಲೆ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಪ್ರಯತ್ನಿಸಿದೆ...ಮೊದಲಿಗೆ ಇಂಗ್ಲಿಷ್ನಲ್ಲಿ ಒಂದೆರಡು ಲೇಖನಗಳನ್ನು ಬರೆದೆ, ಆಮೇಲೆ ಯಾರೋ ಸ್ನೇಹಿತರು ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದರು, ನಂತರ ಕನ್ನಡದಲ್ಲಿ ಬರೆದ ಲೇಖನಗಳನ್ನು ಮೆಚ್ಚಿ ಪ್ರಕಾಶ್ ಹೆಗ್ಡೆ ಯವರು buzz ಮಾಡಿ, ಅವರ ಅನೇಕ ಫಾಲ್ಲೋವರ್ಸ್ಗಳಿಗೆ ನನ್ನ ಬ್ಲಾಗ್ ಪರಿಚಯಿಸಿ ಕೊಟ್ಟರು, ತದ ನಂತರ ಸಂಪಾದಕೀಯ ಬ್ಲಾಗ್ನಲ್ಲಿ ನಿರಂತರ ಚರ್ಚೆಯ ಕೇಂದ್ರ ಬಿಂದುವಾಗಿ ನಾನು ಹಾಕುತ್ತಿದ್ದ ಕಾಮೆಂಟ್ಸ್ ಗಳನ್ನೂ ನೋಡಿ ನನ್ನ ಬ್ಲಾಗ್ ಗೆ ಬಂದ ಸ್ನೇಹಿತರು ಅನೇಕ, ಹೀಗೆ ನನ್ನ ಬ್ಲಾಗ್ ಬೆಳೆದ ರೀತಿ.

ಪತ್ರಕರ್ತೆ ಯಾಗಬೇಕು ಎಂದು ಕನಸು ಕಂಡು ಕಡೆಗೆ ಇಂಜಿನಿಯರಿಂಗ್ ಓದೋ ಹಾಗಾಗಿ, ಕಡೆಗೆ ಈಗ ಎಂಟೆಕ್ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿರುವ ನನಗೆ, ತೇಜಸ್ವಿ, ನೆಚ್ಚಿನ ಲೇಖಕ, ಪತ್ರಕರ್ತೆಯಾಗುವ ಕನಸು ಕಂಡ ನಂಗೆ ಈಗ, ಆ ಕ್ಷೇತ್ರದಲ್ಲಾಗುತ್ತಿರುವ ಅನಾಹುತಕಾರಿ ಬೆಳವಣಿಗೆಗಳನ್ನು ಕಂಡು ಬೇಜಾರಾಗಿದೆ, ನಾನು ಹೀಗೆ ನನ್ನ ಹವ್ಯಾಸವಾಗಿ ಲೇಖನಗಳನ್ನು ಬರೆದು ಕೊಂಡು, ಇರ ಬಯಸುತ್ತೇನೆ. ಬರೆದದೆಲ್ಲವು ಓದಲು ಸಮಯವಿಲ್ಲ ನಿಜ ಆದರೆ, ನಿಜವಾಗಿಯೂ ಒಂದು ಚೆಂದದ ಲೇಖನ ಬರೆದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅನೇಕ ಓದುಗರಿಗೆ ನಾನು ಚಿರ ಋಣಿ . ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಮೆಚ್ಹುಗೆ ನನಗೆ ಸದಾ ಸ್ಫೂರ್ತಿ :)

ನನ್ನ ಬಗ್ಗೆ ಹೆಚ್ಚಿನದೇನೂ ಹೇಳುವಂಥದಿಲ್ಲ, ಸಾಮಾನ್ಯ ಹುಡುಗಿಯಂತೆ, ಕಂಗಳ ತುಂಬ ಕನಸು ಕಟ್ಟಿಕೊಂಡು, ಏನಾದರೂ ವಿಶಿಷ್ಟ ಅಭಿರುಚಿಯಿಂದ ದಿನವು ಹೊಸದನ್ನು ಕಲಿಯುವ ತವಕದಲ್ಲಿರುವ ನನಗೆ ನನ್ನ ಪಾಲಕರೇ ಮೊದಲ ಶಕ್ತಿ, ನನ್ನ ಪ್ರತಿ ಬೆಳವಣಿಗೆಯನ್ನು ಮೊದಲ ಯಶಸ್ಸು ಎನ್ನುವಂತೆ ಪ್ರೋತ್ಸಾಹಿಸುವ, ಪ್ರತಿ ಸೋಲಿನಲ್ಲು ನನ್ನ ಧೈರ್ಯ, ಆತ್ಮ ಸ್ಥೈರ್ಯ, ಹಾಗೂ ನನ್ನ ಪ್ರೇರಣೆ ಆಗಿರುವ ನನ್ನ ಅಪ್ಪ-ಅಮ್ಮ ನನ್ನ ಪಾಲಿಗೆ ಜೀವಂತ ದೈವಿ ಸ್ವರೂಪರು. ಅವರ ಮಗಳಾಗಿ ಹುಟ್ಟಿರುವುದು ನನ್ನ ಅದೃಷ್ಟ :)

ಕನ್ನಡ ಬ್ಲಾಗ್ ನ ಎಲ್ಲ ಕನ್ನಡ ಪ್ರೇಮಿಗಳಿಗೆ, ಮತ್ತು ಬ್ಲಾಗಿಗರಿಗೆ ಒಂದು ಉತ್ತಮ ವೇದಿಕೆಯಾಗಿದ್ದು, ನಟರಾಜು ಅವರು ಎಲೆ ಮರೆ ಕಾಯಿಗಳನ್ನು ಪರಿಚಯಿಸುವ ನಿರಂತರ ಪ್ರಯತ್ನದಲ್ಲಿರುವುದು ಶ್ಲಾಘನೀಯ. ನಿಮ್ಮ ಪ್ರಯತ್ನ ಹೀಗೆ ಜಾರಿಯಲ್ಲಿರಲಿ ಸರ್.
ಪ್ರೀತಿಯಿಂದ,
ಅಶ್ವಿನಿ ದಾಸರೆ"

ಎಂದು ಮಾತು ಮುಗಿಸಿದ ಅಶ್ವಿನಿಯವರ ಮಾತುಗಳು ನಿಮಗೆ ಇಷ್ಟವಾಯಿತೆಂದು ನಾನು ಭಾವಿಸುತ್ತೇನೆ.. ಅವರ ಬರಹಗಳಿರುವ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ..ನಿಮಗೆ ಅವರ ಬ್ಲಾಗ್ ಇಷ್ಟವಾಗಬಹುದು. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ ಫ್ರೆಂಡ್ಸ್..
http://antarmukhi-ashu.blogspot.in/

ಅಶ್ವಿನಿಯವರ ಬರಹಗಳ ಕುರಿತು ಅವರ ಬ್ಲಾಗಿನಲ್ಲಿ ಕಂಡು ಬಂದ ಓದುಗರ ಒಂದೆರಡು ಪ್ರತಿಕ್ರಿಯೆಗಳು ಇಗೋ ನಿಮಗಾಗಿ..

ಬರಿ, ಆದರೆ ಬರವಣಿಗೆ ಬಯಸುವ ಏಕಾಗ್ರತೆಯನ್ನು ಸಾಧಿಸಲು ಯತ್ನಿಸು. ಏನು ಬರೆಯಬೇಕೆಂಬುದನ್ನು ಕೊಂಚ ಧ್ಯಾನಿಸಿ ಮನಸಿನಲ್ಲೇ ಅದಕ್ಕೊಂದು ರೂಪ ಕೊಟ್ಟು ಅಕ್ಷರಗಳಿಗಿಳಿಸಿದಾಗ ಅದಕ್ಕೊಂದು ಬೇರೆಯದೇ ಆದ ಶಕ್ತಿ ಇರುತ್ತದೆ.-ಅಶೋಕ್ ಶೆಟ್ಟರ್

ನಿಮ್ಮ ಉಳಿದ ಬರಹಗಳನ್ನೂ ಓದುವ ಆಸೆ,
ಆದರೆ ಸಮಯ ಓಡುತ್ತಿದೆ, ಓದಗೊಡದಂತೆ
ನಾನು ನಾನಾಗೇ ಓಡುವಾಗ ಓದೀಯೇನು... -ರಘುನಂದನ ಕೆ. ಹೆಗಡೆ

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು

ಶುಕ್ರವಾರ, ಅಕ್ಟೋಬರ್ 19, 2012


ಎಲೆ ಮರೆ ಕಾಯಿ ೬೧
ಹಳೆಯ ಪತ್ರಗಳನ್ನೆಲ್ಲ
ಸಿಕ್ಕಿಸಿದ್ದ, ತಂತಿಯನ್ನು
ಬಿಸಾಡುವ ಮುನ್ನ
ಒಂದು ಪತ್ರ ಓದಿದೆ
ಬಾವ, ಅಕ್ಕನಿಗೆ ಬರೆದಿದ್ದು
"ನೀನು ನಾಳೆ ಬರದಿದ್ದರೆ
ಅಲ್ಲಿಯೇ ಇರಬಹುದು. ನನ್ನ ಮನೆಯ 
ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ
ನಿನ್ನ ಹೆಣ"
ಅಕ್ಕ ಈಗಿಲ್ಲ
ಬಾವನಿಗೆ ಇನ್ನೊಂದು ಮದುವೆಯಾಗಿದೆ

ಪ್ರೇಮ, ಸಂಸಾರ, ದೇವರು, ರಾಜಕೀಯ ಇವುಗಳ ಸುತ್ತ ಜನ ಗಿರಕಿ ಹೊಡೆಯುವ ಹಾಗೆ ಕೆಲವು ಬರಹಗಾರರ ಲೇಖನಗಳು ಕವಿತೆಗಳು ಇವುಗಳ ಸುತ್ತ ಗಿರಕಿ ಹೊಡೆಯುತ್ತವೆ. ಒಂದು ನಿರ್ದಿಷ್ಟ ಕಕ್ಷೆಯಲ್ಲೇ ಚಲಿಸುವಂತೆ ಆಣತಿ ಪಡೆದವರಂತೆ ಅಂತಹ ಬರಹಗಾರರು ಒಂದು ಪರಿಧಿಯನ್ನು ತಮ್ಮೊಳಗೆ ಕಟ್ಟಿಕೊಂಡು ತಮಗೆ ಗೊತ್ತಿಲ್ಲದೆ ಬಂಧಿತರಾಗಿಬಿಡುತ್ತಾರೆ. ಆ ಗಿರಕಿ ಹೊಡೆಯುವ ಕಕ್ಷೆಗಳು ಚಿಕ್ಕದಾದಷ್ಟು ಅವರ ಕವನಗಳು ಬರಹಗಳು ಏಕತಾನತೆಗೆ ಒಳಗಾಗಿ ಕ್ರಮೇಣ ಓದುಗರಿಗೆ ನೀರಸವೆನಿಸತೊಡಗುತ್ತವೆ. ತಮ್ಮ ಪರಿಧಿಯನ್ನು ಬಿಟ್ಟು ಹೊರ ಹಾರುವ ಸಾಮರ್ಥ್ಯ ಉಳ್ಳವರು ಒಂದು ಕಕ್ಷೆಯಿಂದ ಮತ್ತೊಂದು ಕಕ್ಷೆಗೆ ಜಿಗಿದು ಮತ್ತೊಂದು ಪರಿಧಿ ತಲುಪಿ ಅದರೊಳಗಿನ ಪ್ರಪಂಚವನ್ನು ನಮ್ಮೆದುರಿಗೆ ಬಿಚ್ಚಿಡುತ್ತಾ ಹೋಗುತ್ತಾರೆ. ಬಹುಶಃ ಉತ್ತಮ ಮತ್ತು ಶ್ರೇಷ್ಠ ಎನಿಸುವಂತಹ ವೈವಿಧ್ಯತೆಗಳಿಂದ ಕೂಡಿದ ಬರಹಗಳು ಕವಿತೆಗಳು ಮೂಡುವುದು ಅಂತಹವರಿಂದಲೇ ಎನಿಸುತ್ತೆ. ಶ್ರೇಷ್ಠ ಎನಿಸುವಂತಹುದನ್ನು ಅವರು ಎಲ್ಲಾ ಸಮಯದಲ್ಲೂ ಪದೇ ಪದೇ ಕಟ್ಟುವಲ್ಲಿ ವಿಫಲರಾದರೂ ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳ ಬಲ್ಲವರು ಮಾತ್ರ ಎಲ್ಲೆಡೆ ಸಲ್ಲುತ್ತಲೇ ಹೋಗುತ್ತಾರೆ. ಮೇಲಿನ ಸಾಲುಗಳನ್ನು ಓದುತ್ತಲೇ ಹೀಗೊಂದು ಭಾವನಾ ಲಹರಿಗೆ ನಾನು ಒಳಗಾಗಲು ಕಾರಣಗಳಿವೆ. ಯಾಕೆಂದರೆ ಅಷ್ಟು ಗಂಭೀರವಾದ ಕವಿತೆಯಂತೆ ಕಾಣುವ ಮೇಲಿನ ಮನ ಮುಟ್ಟುವ ಕವಿತೆಯ ಬರೆಯುವ ನಮ್ಮ ಈ ಕವಿ ಸಹೋದರ ಗಂಭೀರವಾದ ಬರಹಗಾರ ಎಂದು ನಾವಂದುಕೊಂಡರೆ ನಮ್ಮ ಊಹೆಯನ್ನು ಸುಳ್ಳು ಮಾಡಲೆಂದು ಈ ಕೆಳಗಿನ ಬರಹದಂತಹ ಬರಹಗಳನ್ನು ಬರೆದುಬಿಡುತ್ತಾರೆ..
"ಭಾನುವಾರ ಬೆಳಗ್ಗೆ ಹತ್ತು ಗಂಟೆಗೆಲ್ಲಾ ಮುದ್ದೆ, ಬಸ್ಸಾರು ಉಂಡು ಟೀ .ವಿ. ಮುಂದೆ ತೂಕಡಿಸುತ್ತಿದ್ದ ಕಿರಿಕ್ ಕಿಸ್ನಮೂರ್ತಿ. ಟೀ .ವಿ ಯಲ್ಲಿ  "ಜುರಾಸಿಕ್ ಪಾರ್ಕ್" ಚಲನ ಚಿತ್ರ ಬರುತ್ತಿತ್ತು. ಕಿರಿಕ್ ಕಿಸ್ನಮೂರ್ತಿಗೆ ಅರೆಬರೆ ಎಚ್ಚರ. ಡೈನೊಸರಸ್ ಬೇಲಿಯಿಂದ ಆಚೆ ಬಂದು ಒಬ್ಬನನ್ನು ತಿಂದು ಹಾಕಿದ ಮೇಲೆ ಮತ್ತೆ ಬರುವ ಸದ್ದು. ಭೂಮಿ ಗಡಗಡ. ನಿಂತ ನೀರು ಅಲ್ಲಾಡುತ್ತಿತ್ತು. "ಡಮ್", "ಡಮ್" ಎನ್ನುವ ಶಬ್ದ, ಡೈನೊಸರಸ್ ಪ್ರತ್ಯಕ್ಷವಾಗಿ  "ಕೀಈಈಈಈಈಈಈಈಈ" ಎಂದು ಕಿರಿಚಿಕೊಳ್ಳುತ್ತಿದೆ, ಎಮ್ಮೆಗಳ ಕೂಗು, ನಾಯಿಗಳ ಬೊಗಳುವಿಕೆ, ನಿಜವಾಗಿ ಮನೆಯಲ್ಲಾ, ಭೂಮಿಯಲ್ಲಾ ನಡುಗಿದ ಹಾಗೆ, ಪ್ರಳಯವೊ, ಭೂಕಂಪವೊ ಆದಂತೆ  ಆಯಿತು. ಕೀರಿಕ್ ಕಿಸ್ನಮೂರ್ತಿಗೆ ಎಚ್ಚರವಾಗಿ ಭಯಗೊಂಡು "ಇದೇನು. ಜುರಾಸಿಕ್ ಪಾರ್ಕ್ ನಲ್ಲಿ ನಾಯಿಗಳು, ಎಮ್ಮೆಗಳೂ ಇಲ್ಲ ಶಬ್ದ ಮಾತ್ರ ಬರ್ತಾ ಇದೆಯಲ್ಲ," ಎಂದು ಕೊಂಡು  ವಾಲ್ಯೂಮ್ ಕಡಿಮೆ ಮಾಡಿದ ಆದರೂ ನಾಯಿಗಳು ಬೊಗಳುತ್ತಲೆ ಇದ್ದವು, ಎಮ್ಮೆಗಳು ಕೂಗುತ್ತಿದ್ದವು." 

ಮೇಲೆ ಕಂಡ ಕವಿತೆಯಲ್ಲಿ ಕಾಣುವ ಈ ಕವಿಯ ಗಂಭೀರ ಭಾವ ಮೇಲಿನ ಸಾಲಿನ ಲೇಖನದಲ್ಲಿ ಕಣ್ಮರೆಯಾದುದು ಹೇಗೆ ಎಂದು ಯೋಚಿಸಿದರೆ, ಒಂದು ಗಂಭೀರ ಭಾವದ ಕಕ್ಷೆಯಿಂದ ಹಾಸ್ಯದ ತುಂಟಾಟದ ಭಾವದ ಕಕ್ಷೆಗೆ ಜಿಗಿಯುವುದು ಈ ಕವಿಗೆ ಬರಹಗಾರನಿಗೆ ನೀರು ಕುಡಿದಷ್ಟೇ ಸಲೀಸು ಅನಿಸುತ್ತೆ.  ನಮ್ಮದೇ ಕನ್ನಡ ಚಿತ್ರರಂಗದಲ್ಲಿ ಒಮ್ಮೆ ಸಾಲು ಸಾಲು ಚಿತ್ರಗಳಲ್ಲಿ ಕಣ್ಣೀರ ಕೋಡಿಯನ್ನು ಹರಿಸುವ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರನಟಿಯೊಬ್ಬರು ತಮ್ಮ ಕಣ್ಣೀರಿನ ಕಕ್ಷೆಯಿಂದ ಜಿಗಿದು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಟಿಸಲು ಕಲಿತಿದ್ದು ಈಗ ಇತಿಹಾಸ. ತನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಒಂದು ಹಣೆಪಟ್ಟಿ ಪಡೆಯದೆ ಕಣ್ಣೀರು ಮತ್ತು ಹಾಸ್ಯ ಎರಡನ್ನೂ ನಿಭಾಯಿಸುವಂತಹ ಪಾತ್ರಗಳನ್ನು ಮಾಡಿದ್ದರೆ ಬಹುಶಃ ಆ ನಟಿ ಜನರ ಮನದಲ್ಲಿ ಇನ್ನೂ ಹೆಚ್ಚು ಕಾಲ ನಿಂತು ಬಿಡುತ್ತಿದ್ದರೇನೋ.. ಹಾಗೆ ನಮ್ಮ ಕವಿ ಸಹೋದರ ತಮ್ಮ ಸಾಹಿತ್ಯ ಕೃಷಿಯ ಮೊದಲ ದಿನಗಳಲ್ಲೇ ಒಂದೆಡೆ ಗಂಭೀರ ಮತ್ತೊಂಡೆಗೆ ಹಾಸ್ಯದ ಶೈಲಿಗಳಲ್ಲಿ ಕವಿತೆ ಮತ್ತು ಬರಹ ಎರಡೂ ಪ್ರಕಾರಗಳಲ್ಲಿ ಕೈಯಾಡಿಸುತ್ತಿದ್ದಾರೆ.  ಈ ಎರಡೂ ಪ್ರಕಾರಗಳು ಇವರಿಗೆ ಒಲಿಯುತ್ತಿರುವುದು ಒಲಿದಿರುವುದು ನಮ್ಮಂತಹ ಓದುಗರಿಗೆ ನಿಜಕ್ಕೂ ಖುಷಿಯ ಸಂಗತಿ.

ಚಿಕ್ಕದಾಗಿ, 
ಕವಿತೆಯಾಗು ಎಂದೆ, 
ಕತೆಯಾಗುತ್ತೇನೆ  ಎಂದಳು,
ಕತೆಯನ್ನು ಇಟ್ಟುಕೊಂಡು ಧಾರವಾಹಿ ಮಾಡುತ್ತಿದ್ದೇನೆ, 
ಕವಿತೆಗೆ ಬೇರೆಯವಳನ್ನು ಹುಡುಕುತ್ತಿದ್ದೇನೆ

ಮೇಲಿನ ಸಾಲುಗಳ ನೋಡಿ ಒಮ್ಮೆ ನಕ್ಕುಬಿಡಬೇಕು ಅನಿಸುತ್ತದಲ್ಲವೇ ಗೆಳೆಯರೇ.. ಹೀಗೆ ಒಮ್ಮೆ ನಗುವನ್ನು ಮತ್ತೊಮ್ಮೆ ಗಂಭೀರ ಮುಖ ಭಾವವನ್ನು ನಮ್ಮಲ್ಲಿ ಉಂಟು ಮೂಡುವಂತೆ ತನ್ನ ಕವಿತೆಗಳಿಗೆ ಹಾಸ್ಯ ಬರಹಗಳಿಗೆ ಆಣತಿಯಿತ್ತು ಕುಳಿತ್ತಲ್ಲಿಯೇ ಕಳ್ಳ ನಗೆ ಬೀರುವ ನಮ್ಮ ನಡುವಿನ ಬರಹಗಾರರ ಹೆಸರು ತುಂಟು ಕೃಷ್ಣ. ಇವರು ಬರೀ ತುಂಟಾಟ ಆಡೋದಿಲ್ಲ ಜೊತೆಗೆ ಕಿರಿಕ್ ಸಹ ಮಾಡುತ್ತಾರೆ. ಅದಕ್ಕೆ ಇವರ ಅಭಿಮಾನಗಳ ಕಣ್ಣಿನಲ್ಲಿ ಇವರು ಕಿರಿಕ್ ಕಿಸ್ನಣ್ಣ, ಈ ವಾರದ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ನಮ್ಮ ಕಿರಿಕ್ ಕಿಸ್ನಣ್ಣ ಅವರ ನಿಜವಾದ ಹೆಸರು ಕೃಷ್ಣಮೂರ್ತಿ.. ಕಿಸ್ನಣ್ಣನೊಡನೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ತುಂಟು ಕೃಷ್ಣ

"ನನ್ನ ಬಗ್ಗೆ ಬರೆದು ಕಳಿಸಿ ಎಂದು ನಟರಾಜ್ ಕೇಳಿದಾಗ ನನಗೆ ತುಂಬಾ ಸಂಕೋಚವಾಯಿತು. ಯಾಕೆಂದರೆ ನಾನು ಬರೆದಿರುವುದು ತುಂಬಾ ಕಡಿಮೆ ಅದರಲ್ಲಿ ಮೆಚ್ಚಿಗೆ ಪಡೆದ ಕವಿತೆಗಳು ಒಂದೋ, ಎರಡೋ, ಆದರೂ ನಟರಾಜ್ ಅವರ ಒತ್ತಾಯಕ್ಕೆ ಬರೆಯುತ್ತಿದ್ದೇನೆ.

ನಾನು ಹುಟ್ಟಿದ್ದು , ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ, ನನ್ನ ತಂದೆ ಸರ್ಕಾರಿ ಶಾಲೆಯ ಉಪಾದ್ಯಾಯರಾಗಿದ್ದರು. ವರ್ಗಾವಣೆ ಆದ ಕಡೆ ಒಬ್ಬರೇ ಹೋಗುತ್ತಿದ್ದರು, ನಮ್ಮಗಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ಕರೆದುಕೊಂಡು ಹೋಗುತ್ತಿರಲಿಲ್ಲ. ಹಾಗಾಗಿ ಅಮ್ಮನೇ ಎಲ್ಲಾ. ನಮ್ಮ ಅಜ್ಜಿಗೆ ಮಧ್ಯಾಹ್ನದ ಸಮಯದಲ್ಲಿ ಅಮ್ಮ ಕಥೆ ಓದುತ್ತಿದ್ದರು. ಅನುಪಮ ನಿರಂಜನ, ಭೈರಪ್ಪ, ಕಾರಂತರು, ತ.ರಾ.ಸು, ತ್ರಿವೇಣಿ, ಎಂ.ಕೆ.ಇಂದಿರಾ, ಕುವೆಂಪು, ಇವರ ಕಥೆ ಗಳನ್ನು ಕೇಳಿ ಆನಂದಿಸುತ್ತಿದ್ದೆ. ಹೈಸ್ಕೂಲು ತಲುಪಿದಾಗ ಪತ್ತೇದಾರಿ ಕಾದಂಬರಿಗಳು, ಟಿ.ಕೆ. ರಾಮರಾವ್, ಎನ್. ನರಸಿಂಹಯ್ಯ ಮುಂತಾದವರು, ಪಾಠ ದಲ್ಲಿ ಬಂದ ಪದ್ಯ, ಕವಿತೆ, ಕಾವ್ಯದ ತುಣುಕು ಬಿಟ್ಟರೆ ಅದರ ತಂಟೆಗೆ ಹೋಗಿರಲಿಲ್ಲ. ಓದು ತುಂಬಾ ಹುಚ್ಚು..

ಫೇಸ್ ಬುಕ್ಕಿನಲ್ಲೇ ಕನ್ನಡವೇ ಸತ್ಯ ಗುಂಪಿನಲ್ಲಿ ನಾನು ಮೊದಲು ಕವಿತೆ ಬರೆದಿದ್ದು. ನನ್ನ ಮೊದಲ ಕವಿತೆ "ಅಮ್ಮ ಸತ್ತಾಗ ಅಳಲಿಲ್ಲ "

ಅಮ್ಮ ಸತ್ತಾಗ ಅಳಲಿಲ್ಲ
ಅವಳನ್ನೆತ್ತಿ ಚಟ್ಟದ ಮೇಲಿಟ್ಟಾಗಲೂ ಅಳಲಿಲ್ಲ
ಹೂಹಾರಗಳನ್ನೆಲ್ಲಾ ಎತ್ತಿ ಎಸೆದಾಗಲೂ ಅಳಲಿಲ್ಲ
ಆದರೆ ಅವಳ ಪ್ರದಕ್ಷಣೆ ಮಾಡಿ
ಪಾದಕ್ಕೆ ನಮಸ್ಕರಿಸುವಾಗ
ಅವಳ ಒಡೆದು ಹೋದ ಪಾದಗಳಿಂದ
ಒಸರಿದ್ದ ರಕ್ತದ ಹನಿಗಳನ್ನು ಕಂಡು
ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ

ಕನ್ನಡ ಬ್ಲಾಗ್, ನಿಲುಮೆ, ಭಾವುಕ ಮನಸ್ಸುಗಳ ವೇದಿಕೆ, ಕಥೆ ಕವನ ಕಾಲಹರಣ, ಮುಂತಾದ ಬ್ಲಾಗುಗಳಲ್ಲಿ ನನ್ನ ಕವಿತೆ ಹಾಕುತ್ತಿದ್ದೆ. ಕಾಗುಣಿತದ ತಪ್ಪುಗಳಿಂದ ಭಯಪಟ್ಟು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ, ಕನ್ನಡ ಬ್ಲಾಗಿನ ಶ್ರೀಯುತ ಪುಷ್ಪರಾಜ್ ಚೌಟ ನನ್ನ ತಪ್ಪುಗಳನ್ನು ತಿದ್ದಿ, ದಾರಿಗೆ ತಂದಿದ್ದಾರೆ, ಕೆಲವೊಮ್ಮೆ ಕಟುವಾಗಿ ಟೀಕಿಸಿದ್ದಾರೆ, ಅವರಿಗೆ ನನ್ನ ವಂದನೆಗಳು. ಅವರಂತೆ ಶ್ರೀಯುತ ಶ್ರೀಯುತ ಮೋಹನ್. ವಿ.ಕೊಳ್ಳೇಗಾಲ, ರವಿ ಮೊರ್ನಾಡ, ರವಿ ತಿರುಮಲೈ ಅಣ್ಣ, ಮುಂತಾದ ಅನೇಕರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರಿಗೆಲ್ಲ ನನ್ನ ಪ್ರಣಾಮಗಳು. ನನ್ನನ್ನು ಮಾತನಾಡಿಸಿ ನನ್ನಲ್ಲಿರುವ ಸಾಹಿತ್ಯದ, ಸ್ನೇಹದ, ಕೀಳರಿಮೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಿದ ತಮಗೂ ಮತ್ತು ಫೇಸ್ ಬುಕ್ಕಿನ ಅನೇಕ ಸ್ನೇಹಿತರಿಗೆ ನನ್ನ ಅನಂತಾನಂತ ಧನ್ಯವಾಧಗಳು. ."

ಎಂದು ಮಾತು ಮುಗಿಸಿದ ನಮ್ಮ ಕಿರಿಕ್ ಕಿಸ್ನಣ್ಣನ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗಿನ ಲಿಂಕ್ ಕೆಳಗೆ ನೀಡಿರುವೆ. ಕಿಸ್ನಣ್ಣ ಹೇಳುವಂತೆ ಟೈಪಿಂಗ್ ಮಾಡುವಾಗ ಅಲ್ಲಲ್ಲಿ ಕಾಗುಣಿತ ದೋಷಗಳಿದ್ದರೆ ಕಿಸ್ನಣ್ಣನನ್ನು ಕ್ಷಮಿಸಿಬಿಡಿ.. :)

ಕಿಸ್ನಣ್ಣನ ಬ್ಲಾಗಿನ ಹೆಸರು ಹಂಸಗೀತೆ..

http://hamasageethe.blogspot.in

ಕಿಸ್ನಣ್ಣನ ಒಂದೆರಡು ಕವಿತೆಯ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ಅಂದು, 
ನನಗೆ ಹೆಸರಿಡುವಾಗ ಅಪ್ಪ ನನಗೆ ಕಿವಿಯಲ್ಲಿ
ಮೂರು ಬಾರಿ ನನ್ನ ಹೆಸರು ಹೇಳಿದ್ದರು
ನನಗೆ ಕೇಳಿರಲಿಲ್ಲ 
ಇಂದು
ಮೃತ ಅಪ್ಪನ ಕಿವಿಯಲ್ಲಿ ನಾನು ಮೂರು ಬಾರಿ
ನಾರಾಯಣ, ಎಂದು ಹೇಳಿದೆ
ಅವರಿಗೂ ಕೇಳಲಿಲ್ಲ
ಅಂದು ಆರಂಭ,
ಇಂದು ಅಂತ್ಯ
*****
ಶಕುಂತಲೆಗೆ, ದುಷ್ಯಂತ ಉಂಗುರ ಕೊಟ್ಟು ಹೇಳಿದ
ನನ್ನನ್ನು ಮರೆಯಬೇಡ. 
ನಾನೂ, ಅವಳಿಗೆ ಉಂಗುರ ಕೊಟ್ಟು ಹೇಳಿದೆ
ನನ್ನನ್ನು ಮರೆತುಬಿಡು. 
ಶಕುಂತಲೆಯ ಉಂಗುರ ಸಿಕ್ಕಿತು ಮೀನಿನ ಹೊಟ್ಟೆಯಲ್ಲಿ
ನನ್ನ ಉಂಗುರ ಸಿಕ್ಕಿತು ಗೆಳೆಯನ  ಬೆರಳಿನಲ್ಲಿ
ದುಷ್ಯಂತನಿಗೆ ಶಕುಂತಲೆಯ ನೆನಪಾಯಿತು
ಮಗನನ್ನು ನೋಡಿ
ನನಗೂ ನನ್ನ ಗೆಳೆಯನಿಗೂ ಜಗಳ ಆಯಿತು
ಅವಳ ಮಗನನ್ನು ನೋಡಿ ....
*****
ಹಳೆಯ ಪತ್ರಗಳನ್ನೆಲ್ಲ
ಸಿಕ್ಕಿಸಿದ್ದ, ತಂತಿಯನ್ನು
ಬಿಸಾಡುವ ಮುನ್ನ
ಒಂದು ಪತ್ರ ಓದಿದೆ
ಬಾವ, ಅಕ್ಕನಿಗೆ ಬರೆದಿದ್ದು
"ನೀನು ನಾಳೆ ಬರದಿದ್ದರೆ
ಅಲ್ಲಿಯೇ ಇರಬಹುದು. ನನ್ನ ಮನೆಯ 
ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ
ನಿನ್ನ ಹೆಣ"
ಅಕ್ಕ ಈಗಿಲ್ಲ
ಬಾವನಿಗೆ ಇನ್ನೊಂದು ಮದುವೆಯಾಗಿದೆ
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಅಕ್ಟೋಬರ್ 11, 2012


ಎಲೆ ಮರೆ ಕಾಯಿ   
ಆನೆ ಅಂದದ ಮೊಗನೆ ಹರಸೆಮ್ಮ ಹೇರಂಬ
ಜಗದೊಳು ಸಕಲವು ನಿನ್ನಿಂದಲಾರಂಭ
ದುರಿತದ ಮೋದಕ ಭಂಜಿಸೊ ಭವಹರ
ಸುಖದೊಳು ಸಲಹೆಮ್ಮ ಶಂಕರಕುವರ

ಕಳೆದ ತಿಂಗಳು ಗಣಪತಿ ಪೂಜೆಯ ಸಮಯದಲ್ಲಿ ನಮ್ಮ ನಡುವಿರುವ ಕವಿ ಸಹೋದರರೊಬ್ಬರ ಈ ಸಾಲುಗಳ ನೋಡಿ ಅವರ ಬ್ಲಾಗಿನ ಮೇಲೆ ಕಣ್ಣು ಆಡಿಸಿದ್ದೆ. ಶ್ರೀ ಕೃಷ್ಣನ ನೂರಾರು ಗೀತೆಗಳು ಎಂಬ ತಲೆ ಬರಹವಿರುವ ಅವರ ಕವಿತೆಗಳ ನೋಡಿ ಅಚ್ಚರಿಯಾಗಿತ್ತು. ನಿಜ ಹೇಳಬೇಕು ಎಂದರೆ ಅವರ ಕವಿತೆಗಳನ್ನು ಅವತ್ತು ಗಣೇಶ ಚತುರ್ಥಿಯ ದಿನವೇ ಮೊದಲು ನೋಡಿದ್ದು. ಬಹುಶಃ ನನ್ನಲ್ಲಿ ಕಂಡೂ ಕಾಣದಂತಿರುವ ನಾಸ್ತಿಕತೆ ಅವರ ಭಕ್ತಿಯ ಗೀತೆಗಳ ಮೇಲೆ ಕಣ್ಣು ಹಾಯಿಸಲು ನಿರಾಕರಿಸಿತ್ತು ಎನಿಸುತ್ತೆ. ಯಾಕೆಂದರೆ ಹೆಚ್ಚು ಸಲ ಪ್ರೇಮಿಗೆ, ಪ್ರೇಮ ಕವಿತೆಯ ಗೀಚುವ ಕವಿಯ ಕಣ್ಣಿಗೆ ದೇವರು ಕಾಣುವುದಿಲ್ಲ. ಆದರೆ ಬನ್ನಿ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ತನ್ನ ಪ್ರೇಮಿ ಕರೆದರೆ ಪ್ರೇಮಿ ಅಥವಾ ಪ್ರೇಮ ಕವಿ ಎಂತಾ ನಾಸ್ತಿಕನೇ ಆದರೂ ತಾನು ಬರಲ್ಲ ಅನ್ನುವುದಿಲ್ಲ. ಪ್ರೇಮಕ್ಕೂ ದೇವರಿಗೂ ಇರುವ ಶಕ್ತಿಯೇ ಅಂತಹುದು. ಎರಡೂ ಒಂದರಲ್ಲಿ ಒಂದು ಮಿಳಿತವಾಗಿವೆ. ಅದಕ್ಕೇ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರೇಮದಲ್ಲಿ ದೈವವನ್ನೂ ದೈವದಲ್ಲಿ ಪ್ರೇಮವನ್ನೂ ಕಾಣಲು ಹಾತೊರೆಯುವುದು. ಆ ತರಹದ ಆತೊರೆಯುವಿಕೆ  ಕೆಲವರಲ್ಲಿ ಪ್ರೇಮ ಅಗಾಧತೆಯನ್ನು ಪಡೆದು ಅಕ್ಷರ ರೂಪದಲ್ಲಿ ಪ್ರೇಮ ಕಾವ್ಯವಾಗಿ ಹೊರ ಹೊಮ್ಮಿದರೆ, ಕೆಲವರಲ್ಲಿ ಭಕ್ತಿ ಅಗಾಧತೆಯನ್ನು ಪಡೆದು ಪ್ರಾರ್ಥನೆಗಳ ರೂಪದಲ್ಲಿ ಹೊರ ಹೊಮ್ಮುತ್ತದೆ. ಅಂತಹ ಭಕ್ತಿಯ ಅಗಾಧತೆಯನ್ನು ತನ್ನೊಳಗೆ ತುಂಬಿಕೊಂಡು ಒಂದು ವಿಭಿನ್ನವಾದ ಕಾವ್ಯ ಕೃಷಿಯಲ್ಲಿ ತೊಡಗಿರುವ ಸಹೋದರನ ಬ್ಲಾಗಿನ ಹೆಸರು ಶ್ರೀನಿವಾಸ ವಿಠ್ಠಲ.

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ಪ್ರೇಮವಿದ್ದೆಡೆ ಪ್ರಯಣವಿದ್ದಂತೆ ಭಕ್ತಿಯಿದ್ದೆಡೆ ಆಧ್ಯಾತ್ಮ ತಂತಾನೆ ಹುಟ್ಟಿಬಿಡುತ್ತದೆ. ಮೇಲಿನ ಸಾಲುಗಳು ಆಧ್ಯಾತ್ಮದ ಸಾಲುಗಳಂತೆ ಕಂಡರೂ ಅವು ಭಕ್ತಿಯ ಪ್ರಭಾವದಿಂದ ಮೂಡಿದ ಸಾಲುಗಳು ಎಂಬಂತೆ ಗೋಚರವಾಗುತ್ತವೆ. ದೇವರುಗಳು ನಮ್ಮ ಮೇಲೆ ಮೂಡಿಸುವ ಪರಿಣಾಮವಾಗಿ ನಾವು ಭಕ್ತರಾಗಿ ಭಕ್ತಿ ಗೀತೆಗಳ ರಚಿಸುವುದು, ದೇವರ ನಾಮ, ವಚನಗಳು, ದಾಸರ ಪದಗಳು, ಭಕ್ತಿ ಗೀತೆಗಳು, ಇವು ಬೀರುವ ಪ್ರಭಾವದಿಂದ ದೇವರ ನಾಮಗಳ ರಚಿಸುವುದು ಎರಡೂ ವಿಭಿನ್ನ ಸ್ವಾದವನ್ನು ಹೊಂದಿರುತ್ತವೆ. ಭಕ್ತಿ ಸ್ವಾಭಾವಿಕವಾಗಿದ್ದು ಹಾಗೆಯೇ ಹರಿದರೆ ಅದು ಬೀರುವ ಪರಿಣಾಮ ಬೇರೆ. ಬೇರೆ ರಚನೆಗಳ ಪ್ರಭಾವದಿಂದ ರಚಿಸಿದ ರಚನೆಗಳು ಬೀರುವ ಪರಿಣಾಮ ಬೇರೆ. ಹಾಗೆಯೇ ರಚಿಸಿದ ರಚನೆಗಳಿಗೆ ಈಗಾಗಲೇ ಸಂಗೀತ ಸಂಯೋಜನೆಗೆ ಒಳಗಾಗಿರುವ ನಮ್ಮ ಭಾಷೆಯ ಅಥವಾ ಬೇರೆ ಭಾಷೆಯ ಗೀತೆಗಳ ದಟ್ಟ ಛಾಯೆ ಕಾಣಬಾರದು. ಹಾಗಾದಾಗ ಮಾತ್ರ ಯಾವುದೇ ಗೀತೆಯಾಗಲಿ, ಭಕ್ತಿ ಗೀತೆಯಾಗಲಿ ತನ್ನ ಸ್ವಂತಿಕೆಯ ಸ್ವಾದದಿಂದ ಜನರಿಗೆ ಹತ್ತಿರವಾಗುವುದು. ನಮ್ಮ ಕವಿ ಸಹೋದರರ ರಚನೆಗಳು ಗೀತೆಗಳಾಗಿವೆ ಎಂದು ಕೇಳಿದ್ದೆ. ಅವರು ಕಳುಹಿಸಿದ ಮೂರ್ನಾಲ್ಕು ಗೀತೆಗಳ ಕೇಳಿದಾಗ ಯಾಕೋ ಈ ಕಿವಿ ಮಾತನ್ನು ಅವರಿಗೆ ಹೇಳಬೇಕು ಅನಿಸಿತು.

ಕತ್ತಲೆಯ ನಂತರ ಬೆಳಕಿದೆ ಗೆಳತಿ
ನಡೆದುಬಿಡು ಇನ್ನೊಂದೇ ಗಾವುದ
ಪೂರ್ವದ ರವಿಯೂರಿಗೆ
ಎದೆಗೂಡಲಿ ನಂಬುಗೆಯ ದೀಪ
ನಂದದಿರಲಿ ಅವನ ಬೇಡಿಕೊ
ಅಂಗೈ ತಡೆಗೋಡೆ ಮಾಡು
ಹಠಮಾರಿ ಗಾಳಿಗೆ

ಇವರು ಬರೀ ಭಕ್ತಿ ಗೀತೆಗಳನ್ನೇ ಬರೆಯುತ್ತಾರ ಎಂದು ನಾವಂದುಕೊಂಡರೆ ತಪ್ಪಾದೀತು. ಯಾಕೆಂದರೆ ಭಕ್ತಿ ಗೀತೆಗಳ ಜೊತೆ ಜೊತೆಗೆ ನಮ್ಮ ಕವಿ ಸಹೋದರ ಚಂದದ ಪ್ರೇಮ ಕವಿತೆ, ಬಂಡಾಯ ಕವಿತೆಗಳನ್ನು ಚಂದವಾಗಿ ರಚಿಸಿದ್ದಾರೆ. ಇಂದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಸಹೋದರ ಎನ್ ಕೃಷ್ಣಮೂರ್ತಿಯವರನ್ನು ಎಲೆ ಮರೆ ಕಾಯಿ ಎಂದರೆ ತಪ್ಪಾದೀತು.. ಆದರೂ ಹಿರಿಯರ ಅನುಭವದ ಮಾತಗಳನ್ನು ಕೇಳೋಣ ಎಂದು ಅವರನ್ನು ವಿಶೇಷ ಅತಿಥಿಯಾಗಿ ಇಲ್ಲಿಗೆ ಕರೆತಂದಿದ್ದೇನೆ. ಕೃಷ್ಣಮೂರ್ತಿಯವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

ಎನ್ ಕೃಷ್ಣಮೂರ್ತಿ ಭದ್ರಾವತಿ

"ನನ್ನೂರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ನೆಲ್ಲೀಗೆರೆ ಹತ್ತಿರದ ತೊರೆಮಾವಿನಕೆರೆ ಗ್ರಾಮ. ಮಳೆ ಬಿದ್ದರೆ ನಮ್ಮ ಹೊಟ್ಟೆ ಒದ್ದೆಯಾಗುವ ಭೂಮಿ. ಅದನ್ನೇ ನಂಬಿದ ವಕ್ಕಲಿಗರ ಮನೆ. ಹೊಟ್ಟೆಪಾಡಿಗಾಗಿ ತಾತ, ತಂದೆ ಇಬ್ಬರೂ ಪೂಜ್ಯ ಹೆಚ್.ಎಲ್.ನಾಗೇಗೌಡರು ಭದ್ರಾವತಿಯ ಕಬ್ಬಿಣದ ಫ್ಯಾಕ್ಟರಿಯಲ್ಲಿ ಕೊಡಿಸಿದ ನೌಕರಿ ನಂಬಿ ಊರು ಬಿಟ್ಟವರು. ನಾನು ಹುಟ್ಟಿದ್ದು, ನನ್ನೂರು ತೊರೆಮಾವಿನಕೆರೆಯ ಎದುರಿನ ಕಾರಬೈಲಿನ ದೊಡ್ಡಪ್ಪ ಪಟೇಲ್ ಗಂಗಾಧರಗೌಡರ ಮನೆಯಲ್ಲಿ. ಬೆಳೆದಿದ್ದು, ಓದಿದ್ದು ಶಿವಮೊಗ ಜಿಲ್ಲೆಯ ಭದ್ರಾವತಿ. ಅಪ್ಪ ಅಟೆಂಡರ್. ಸಣ್ಣ ಸಂಬಳ. ಅಪ್ಪನ ನಂತರ ಏಳು ತಂಗಿಯರು. ಕಿತ್ತುತಿನ್ನುವ ಬಡತನ. ಅದರ ವಿರುದ್ಧ ಹೋರಾಡಲಿಕ್ಕಾಗಿಯೇ ಮನೆಯಲ್ಲಿ ದನ, ಎಮ್ಮೆ, ಕುರಿ ಸಾಕಣೆ. ಹಾಲು ವ್ಯಾಪಾರ, ಗುತ್ತಿಗೆ ಗದ್ದೆ ವ್ಯವಸಾಯ. ಬೇಸಿಗೆ ರಜೆಯಲ್ಲಿ ಹತ್ತಿರದ ರಾಮನಕೊಪ್ಪ ಕಾಡಿನಿಂದ ಸೌದೆ ಹೊರುವ ಅನಿವಾರ್ಯ. ಹರಿದ ಚಡ್ಡಿಯ ಹಿಂದನ್ನು ಪುಸ್ತಕಗಳಿಂದ ಮುಚ್ಚಿಕೊಂಡು, ಎಲ್ಲರಿಗೂ ಮೊದಲೇ ಶಾಲೆಯೊಳಗೆ ಕುಂತು, ಎಲ್ಲರೂ ಹೊರಹೊರಟ ನಂತರ ಕೊಠಡಿಯಿಂದ ಹೊರಬರುತ್ತಿದ್ದನು ನಾನು. ಭದ್ರಾವತಿಯ ಸೈಂಟ್ ಚಾರ್ಲ್ಸ್ ಕನ್ನಡ ಕಾನ್ವೆಂಟ್ನಲ್ಲಿ ಪ್ರಾಥಮಿಕ, ಸಿಲ್ವರ್ ಜ್ಯೂಬಿಲಿ ಸರ್ಕಾರಿ ಹೈಸ್ಕೂಲಿನಲ್ಲಿ ಹತ್ತನೆ ತರಗತಿಯವರೆಗೆ, ಸರ್.ಎಂ.ವಿಶ್ವೇಶ್ವರಾಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ., ನಂತರ ತೆರೆದ ಅಂಚೆಯಲ್ಲಿ ಮಾರುಕಟ್ಟೆ ನಿರ್ವಹಣೆಯ ಸ್ನಾತಕ ಡಿಪ್ಲೋಮ, ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೋಮ ಹಾಗೂ ಸೆಕ್ರೆಟೇರಿಯಲ್ ಪ್ರಾಕ್ಟೀಸ್, ಕನ್ನಡ ಬೆರಳಚ್ಚು.

ಕಾಲೇಜುದಿನಗಳು. ಪ್ರೀತಿ ಬಗೆಗಿನ ಕನವರಿಕೆಯ ಚೈತ್ರಕಾಲ. ಮೊದಲನೆ ಬಿ.ಕಾಂನ ಪಠ್ಯಗಳಿಂದ ಇಂಗ್ಲೀಷ್ ಪದ್ಯವೊಂದನ್ನು ಭಾವಾನುವಾದ ಮಾಡಿದ್ದೆ. ಸಣ್ಣಕತೆಗಳೂ ಜೋಳಿಗೆಯೊಳಗಿದ್ದವು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನವರು ಪ್ರತಿವರ್ಷವೂ ಏರ್ಪಡಿಸುತ್ತಿದ್ದ ದ.ರಾ.ಬೇಂದ್ರೆ ಸ್ಮೃತಿ ಅಂತರಕಾಲೇಜು ಕವನಸ್ಪರ್ಧೆಯಲ್ಲಿ ಭಾಗವಹಿಸಲು, ನನ್ನ ಬಿಡಿಗವನಗಳ ಪ್ರತಿಯನ್ನು ನನಗೆ ಪಾಠಮಾಡುತ್ತಿದ್ದ ಪೂಜ್ಯ ಎಂ.ವಿ.ತಿರುಮಲೇಶ್ ಅವರಲ್ಲಿ ಕೊಟ್ಟೆ. ಅವರು ಅದನ್ನು ತಿರುಗಿಸಿಯೂ ನೋಡಲಿಲ್ಲ. ’ಏನ್ ಓದ್ತಿಯೊ? ಬಿ.ಕಾಂ.. ಹೋಗಿ ಬ್ಯಾಲೆನ್ಸ್ ಶೀಟ್ ಟ್ಯಾಲಿ ಮಾಡು’.. ಅಂದರು. ನಿರಾಶೆಯಾಗಲಿಲ್ಲ. ನನ್ನ ಪುಣ್ಯ. ನನಗೆ ಕನ್ನಡ ಪಾಠಮಾಡುತ್ತಿದ್ದ, ಕಾಲೇಜಿನ ಪ್ರಾಂಶುಪಾಲರಾದ, ಕರ್ನಾಟಕದ ಅಂಬೇಡ್ಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕರಾದ, ಪ್ರೊ.ಬಿ.ಕೃಷ್ಣಪ್ಪನವರಲ್ಲಿಗೆ ಹಸ್ತಪ್ರತಿ ಕೊಟ್ಟೆ. ಆಯ್ಕೆಮಾಡಿ ಸ್ಪರ್ಧೆಗೆ ಕಳುಹಿಸಿದರು. ನನ್ನ ಕವಿತೆ ಸ್ಪರ್ಧೆಯಲ್ಲಿ ಆಯ್ಕೆಯಾಗಿತ್ತು. ಆಯ್ಕೆ ಮಾಡಿದವರು ಶ್ರೀ ಕ.ವೆಂ.ರಾಜಗೋಪಾಲ. ಬಹುಮಾನ ಪಡೆದದ್ದು ರಾಷ್ಟ್ರಕವಿ ಕುವೆಂಪು ಅವರ ಅಮೃತಹಸ್ತಗಳಿಂದ, ಅವರ ಮೈಸೂರಿನ ಮನೆಯಲ್ಲಿ.

ಶಿವಮೊಗ್ಗದವನಾ. ನಮ್ಮ ಜಿಲ್ಲೆಯವನು. ಚೆನ್ನಾಗಿ ಬರೆ ಅಂತ ಅಪ್ಪಿಕೊಂಡರು ರಾಷ್ಟ್ರಕವಿ. ನಾನು ಅವರ ಪಾದಗಳಿಗೆ ಹಣೆಯಿಟ್ಟುಬಿಟ್ಟೆ. ಯಾವ ಸಾಹಿತ್ಯ ಪ್ರಶಸ್ತಿ ಈ ಪುಣ್ಯಕ್ಕಿಂತ ದೊಡ್ಡದು...? ಅಂದು ಕವಿಮಿತ್ರ ಎಸ್.ಮಂಜುನಾಥ ಅವರ ’ಹಕ್ಕಿಪಲ್ಟಿ’ ಕವನ ಸಂಕಲನ ಬಿಡುಗಡೆ. ಕುವೆಂಪುರವರ ಪುಣ್ಯಹಸ್ತಗಳಿಂದ. ಕವಿಮಿತ್ರರಾದ ಅಬ್ದುಲ್ ರಶೀದ್, ಮಮತಾ ಜಿ ಸಾಗರ, ಆರತಿ ಹೆಚ್.ಎನ್., ಜೊತೆಗಿದ್ದರು. ನಂತರ ಆಕಾಶವಾಣಿ, ಭದ್ರಾವತಿಯ ’ಯುವವಾಣಿ’ ಕಾರ್ಯಕ್ರಮದಲ್ಲಿ ನನ್ನ ಮೊದಲ ಕತೆ ’ಚೋಮ ನಕ್ಕ’ ಪ್ರಸಾರವಾಯಿತು. ರೆಕಾರ್ಡಿಂಗಿನ ದಿನ ಜೊತೆಗಿದ್ದವರು ಕನ್ನಡದ ಪ್ರಮುಖ ವಿಮರ್ಶಕರಾದ ಶ್ರೀ ಓ.ಎಲ್.ನಾಗಭೂಷಣ ಅವರು. ’ಕನ್ನಡ ಎಂ.ಎ. ಏನಯ್ಯ? ಚೆನ್ನಾಗಿ ಬರೆದಿದ್ದೀಯ’ ಅಂದ್ರು. ನಂಬಿಕೆ ಬಂತು. ಆಕಾಶವಾಣಿ ಕಾರ್ಯಕ್ರಮಗಳು ನಿರಂತರವಾದವು. ಅಲ್ಲೇ ತಾತ್ಕಾಲಿಕ ನಿರ್ಮಾಣ ಸಹಾಯಕನಾಗಿ ನೌಕರಿ ಕೆಲದಿನಗಳು. ಪ್ರೋತ್ಸಾಹಿಸಿದವರು ಈಗ ದೂರದರ್ಶನದಲ್ಲಿ ಉಪನಿರ್ದೇಶಕರಾಗಿರುವ ಶ್ರೀ ಸಿ.ಎನ್.ರಾಮಚಂದ್ರ ಅವರು. ತರುವಾಯ, ಕರುನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ, ’ತಾಯಿನುಡಿ’ಯಂತಹ ಹೊರನಾಡಿನ ಪತ್ರಿಕೆಗಳಲ್ಲಿ, ಸಂಕ್ರಮಣ, ಶೂದ್ರ ಸಾಹಿತ್ಯಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟವಾದವು. ನನ್ನ ಕವಿತೆ ’ರಾಮಾಯಣ ಗೀತೆ’ಗೆ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಬಹುಮಾನ. ತುಷಾರ ಮಾಸಿಕದ ತಿಂಗಳ ಕವಿತಾ ಸ್ಪರ್ಧೆಯಲ್ಲಿ, ಶ್ರೀ ಜಿ.ಎಸ್.ಸಿದ್ದಲಿಂಗಯ್ಯ, ಶ್ರೀ ಹೆಚ್.ಎಸ್.ವಿ.ಯವರು ನನ್ನ ಕವಿತೆಗಳನ್ನ ಆಯ್ಕೆಮಾಡಿದ ಸಂತಸ ಮರೆಯಲಾರದವು. ಎಲ್ಲರೂ ಕೇಳುತ್ತಿದ್ದಿದೊಂದೆ "ಕನ್ನಡ ಎಂ.ಎ. ಏನಯ್ಯಾ.?"

ಕಾಲೇಜು ಓದಿನ ಜತೆಜತೆಗೆ ಲೋಹಿಯಾ, ಜೆ.ಪಿ., ಸಮಾಜವಾದಿ ವಿಚಾರಗಳನ್ನು ತಲೆಗೆ ತುರುಕಿದವರು ಪ್ರೊ.ಬಿ.ಕೃಷ್ಣಪ್ಪ ಹಾಗೂ ಕತೆಗಾರರಾದ ಭದ್ರಾವತಿಯ ಶ್ರೀ ಎಂ.ಚಂದ್ರಶೇಖರಯ್ಯ. ಪರಿಣಾಮ, ಚಿನ್ನಪ್ಪರೆಡ್ಡಿ ಮತ್ತು ವೆಂಕಟಸ್ವಾಮಿ ಆಯೋಗದ ವರದಿಗಳ ಸಂದರ್ಭದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಚಂದ್ರಗುತ್ತಿಯ ಬೆತ್ತಲೆಸೇವೆ ತಡೆಯಲು ಹೋರಾಟ. ಈಗಿನ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ರಘುನಂದನ್ ಹಾಗೂ ನನ್ನ ನೆರೆಯ ಹೆಣ್ಣುಮಗಳು, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ, ಶ್ರೀಮತಿ ಸಿ.ಮಂಜುಳಾ, ನಾವೆಲ್ಲ ವಿದ್ಯಾರ್ಥಿ ಸಂಘಟನೆಗಳ ಹೋರಾಟಗಾರರು. ಎಂಥಾ ಚಿನ್ನದ ದಿನಗಳವು. ಇಂದು ನಾಯಕರುಗಳ ವೈಯಕ್ತಿಕ ಆಸೆಗಳಿಗೆ ಹರಿದು ಹಂಚಿಹೋಗಿರುವ ಸಂಘಟನೆಗಳನ್ನು ಕಂಡಾಗಲೆಲ್ಲ ಅಯ್ಯೋ ಅನ್ನಿಸುತ್ತೆ.

ಬಾಲ್ಯದಿಂದಲೂ ಓದುವ ಹಸಿವು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಯಾವುದಾದರೂ ಸರಿ. ದಿನಪತ್ರಿಕೆಗಳ ಭಾನುವಾರದ ಸಾಪ್ತಾಹಿಕ ಪುರವಣಿಗಳಲ್ಲಿ ಬರುತ್ತಿದ್ದ ಕವಿತೆಗಳನ್ನ ಆಸಕ್ತಿಯಿಂದ ಓದುತ್ತಿದ್ದೆ...ಏನೋ ಹೊಳೆದಂತೆ.. ಮತ್ತೇನೊ ತಿಳಿದಂತೆ.. ಭದ್ರಾವತಿಯ ಕೇಂದ್ರ ಗ್ರಂಥಾಲಯ ನಿತ್ಯವಾಯಿತು. ಜೇಡ ಹಿಡಿದು ಕಪಾಟಿನೊಳಗಿದ್ದ, ಶ್ರೀರಾಮಾಯಣ ದರ್ಶನಂ, ಬೇಂದ್ರೆಯವರ ಕಾವ್ಯ, ಸು.ರಂ,ಎಕ್ಕುಂಡಿ, ಹೆಚ್.ಎಸ್.ವಿ., ಬಿ.ಆರ್.ಲಕ್ಷ್ಮಣರಾಯರು, ಡುಂಡಿರಾಜ್ ಅವರ ಸಾಹಿತ್ಯವನ್ನು ಓದಿ ಹಸಿವು ಇಂಗಿಸಿಕೊಂಡೆ. ಆಗ ಗ್ರಂಥಾಲಯದ ಪಾಲಕರಾಗಿದ್ದವರು ಶ್ರೀ ಬೆಳಗಲಿಯವರು. ಪುಣ್ಯಾತ್ಮ ಚೆನ್ನಾಗಿರಲಿ.

ಹೊಟ್ಟೆಪಾಡಿಗೆ ಮೊದಮೊದಲು ಬಿ.ಕಾಂ., ಮುಗಿದ ನಂತರ ಓದಿನ ಜೊತೆಗೆ, ಭದ್ರಾವತಿಯಲ್ಲಿ ಅಕೌಂಟ್ಸ ಬರೆಯುತ್ತಿದ್ದೆ. ಆಕಾಶವಾಣಿಯಲ್ಲಿ ತಾತ್ಕಾಲಿಕ ನೌಕರಿ. ಎಲ್.ಐ.ಸಿ.ಯಲ್ಲಿ ತಾತ್ಕಾಲಿಕ ನೌಕರಿ. ಸಣ್ಣ ದುಡಿಮೆಗೆ ಬದುಕು ಅಸಾಧ್ಯ ಅನಿಸಿತು. ನಡುನಡುವೆ ಸರ್ಕಾರಿ ನೌಕರಿ ಪ್ರಯತ್ನ. ಲಿಖಿತ ಪರೀಕ್ಷೆ ಪಾಸು. ಸಂದರ್ಶನದಲ್ಲಿ ನಪಾಸು. ಕಾರಣ ಈಗ ಅರಿವಾಗಿದೆ. ದಾಂಡೇಲಿಯಲ್ಲಿ ಒಂದೆರಡು ವರ್ಷ ದುಡಿದಿದ್ದಾಯ್ತು. ೧೯೯೩ರಲ್ಲಿ ಬೆಂಗಳೂರಿಗೆ ಬಂದುಬಿಟ್ಟೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ೧೬೦೦ ತಿಂಗಳ ಸಂಬಳ. ಸುರಕ್ಷತೆ ಹಾಗೂ ಗುಣಮಟ್ಟ ವಾರ್ಷಿಕ ಸ್ಪರ್ಧೆಗಳಲ್ಲಿ ಬಹುಮಾನಗಳು. ದೆಹಲಿಯ ಭಾರತೀಯ ಕೈಗಾರಿಕೆಗಳ ಮಹಾಮಂಡಳ (ಸಿ.ಐ.ಐ.)ನವರು ಏರ್ಪಡಿಸಿದ್ದ ಗುಣಮಟ್ಟದ ಬಗೆಗಿನ ಸ್ಲೋಗನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮೊದಲ ಬಹುಮಾನ. ೨೦೦೮ರಲ್ಲಿ ಕಂಪನಿಯಿಂದ ಹೊರಬಂದಾಗ ೬೦೦೦೦ ತಿಂಗಳ ಸಂಬಳ. ನಂತರ ೨ ವರ್ಷಗಳು ಬೆಂಗಳೂರಿನ ಕಂಪನಿಯೊಂದರಲ್ಲಿ ’ಮುಖ್ಯನಿರ್ವಹಣಾಧಿಕಾರಿ’ಯಾಗಿ ನೌಕರಿ. ಈಗ ನನ್ನದೇ ಕಂಪನಿ. ಕೈಗಾರಿಕಾ ಮತ್ತು ವಿದ್ಯುತ್ ಯೋಜನೆಗಳಿಗೆ ಮೂಲಸೌಕರ್ಯ ಸೇವೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಸ್ವಂತ ಮನೆ. ಎರಡೊತ್ತಿನ ಊಟ. ಒಬ್ಬಳೇ ಮಡದಿ ನಾಗರತ್ನ. ಮುದ್ದಿನ ಎರಡು ಹೆಣ್ಣುಮಕ್ಕಳು - ಮಾಯಾ ಕೃಷ್ಣಮೂರ್ತಿ, ೯ನೇ ತರಗತಿ ಓದು. ಒಳ್ಳೆಯ ಅಥ್ಲೀಟ್. ಆಟ ಹಾಗೂ ಕ್ರಿಯೇಟಿವ್ ಡ್ರಾಯಿಂಗುಗಳಲ್ಲಿ ಚಿನ್ನದ ಪದಕಗಳನ್ನು ತಂದುಕೊಂಡಿದ್ದಾಳೆ. ಎರಡನೆಯವಳು, ೫ ವರ್ಷದ ಅಮಿಷಾ ರಾಜಿ ಮೂರ್ತಿ. ಸಂಗೀತ ವಿದುಷಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿಯವರ ಸಹೋದರಿ ಶ್ರೀಮತಿ ಸರಿತಾ ಕಟ್ಟಿಯವರಲ್ಲಿ ಹಿಂದೂಸ್ಥಾನಿ ಹಾಡುಗಾರಿಕೆ ಕಲಿಕೆ ಪ್ರಾರಂಭಿಸಿದ್ದಾಳೆ.

ನನ್ನ ಪ್ರಕಾರ, ದಾಸಸಾಹಿತ್ಯಕ್ಕೆ ಈ ತಲೆಮಾರಿನ ಕೊಡುಗೆ ಕಡಿಮೆ. ಆ ನಿಟ್ಟಿನಲ್ಲಿ ಒಂದು ಪ್ರಯತ್ನ ನನ್ನ ಭಕ್ತಿ ಹಾಗೂ ಭಕ್ತಿಭಾವಸಾಹಿತ್ಯ ರಚನೆ. ನಾನು ಭಗವಂತನನ್ನು ನಂಬುತ್ತೇನೆ. ಹಲವಾರು ಪ್ರಸಿದ್ಧ ಹಾಡುಗಾರರು ನನ್ನ ಕೃತಿಗಳನ್ನು ಕರ್ನಾಟಕದಾದ್ಯಂತ ಹಾಡಿದ್ದಾರೆ. ಹಾಡುತ್ತಿದ್ದಾರೆ. ಅವರ ಕೊರಳು ತಣ್ಣಗಿರಲಿ. ಇಲ್ಲಿಯವರೆಗೂ ೨೯೦ಕ್ಕೂ ಮಿಕ್ಕಿ ಕೃತಿಗಳ ರಚನೆ. ೨೦೧೦ರಲ್ಲಿ ’ಶ್ರೀಕೃಷ್ಣ ಗೀತೆಗಳು’ ಎನುವ ೨೩ ರಚನೆಗಳ ಪುಸ್ತಕದ ಬಿಡುಗಡೆಯ ಭಾಗ್ಯ. ನನ್ನ ಗುರುಗಳಾದ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ. ಅವರ ನಿರಂತರ ಪ್ರೋತ್ಸಾಹ. ನನ್ನೆಲ್ಲಾ ವ್ಯವಹಾರಗಳ ಗಡಿಬಿಡಿಯ ನಡುವಿನ ಸಮಯವೇ ’ನನ್ನ ಕವಿಸಮಯ’. ಆಗಲೇ ಮೂಡುವ ಸಾಲುಗಳು ಹಾಡುಗಳಾಗುತ್ತವೆ. ಭಗವಂತನ ಧ್ಯಾನಕ್ಕೆ ನಿಗದಿತ ಸಮಯವಿಲ್ಲ ಅಂದುಕೊಂಡವನು ನಾನು. ನನ್ನ ಪ್ರಕಾರ, ನವೋದಯ, ನವ್ಯ, ದಲಿತ, ಬಂಡಾಯ, ಭಕ್ತಿ, ಭಕ್ತಿ-ಭಾವ ಇನ್ನೆಲ್ಲ ಪ್ರಕಾರದ ಸಾಹಿತ್ಯಗಳು ಸಮಾಜದ ಒಳಿತನ್ನ ಬಯಸುವುದಾದರೆ ಸರ್ವಕಾಲಕ್ಕೂ ಅವು ಸ್ವೀಕೃತಾರ್ಹ.

ಎಲ್ಲಾ ಕನ್ನಡದ ಬ್ಲಾಗುಗಳನ್ನು ಪ್ರವೇಶಿಸಿದ್ದೇನೆ...ಓದಿ ಖುಶಿಗೊಂಡಿದ್ದೇನೆ. ಅಲ್ಲಿ ಚಿಗುರುಗಳಿವೆ...ಅವು ಬೆಳೆಯಲಿ. ಹಿರಿಯರು ಅವುಗಳಿಗೆ ಪ್ರೋತ್ಸಾಹದ ನೀರೆರೆಯುತ್ತಿರಲಿ...’ಕನ್ನಡಬ್ಲಾಗ್’ನ ನಿರ್ವಹಣೆ ಚೆನ್ನಾಗಿದೆ. ಅದರ ಅವಶ್ಯಕತೆಯೂ ಇದೆ. ’ಕನ್ನಡ ಬ್ಲಾಗ್’ನಿಂದಲೇ ಸ್ನೇಹಿತರಾದ ನೀವು, ತಿರುಮಲೈ ರವಿಯವರು, ವಾಜಪೇಯಿ ಸರ್, ಪುಷ್ಪರಾಜ್, ಮೋಹನ್ ಕೊಳ್ಳೆಗಾಲ, ಬದ್ರಿ, ಕೃಷ್ಣಪ್ರಸಾದ್ ಇನ್ನೆಲ್ಲರ ಪರಿಚಯವಾದುದು. ಶುಭವಾಗಲಿ.

ಭದ್ರಾವತಿಯ ರೈಲ್ವೆಕಂಬಿಗಳ ಪಕ್ಕದಲ್ಲಿ ನಿಂತು ಎಮ್ಮೆ, ಹಸು ಕಾಯುತ್ತಿದ್ದ ನನ್ನನ್ನು ಬದುಕು ಬೆಂಗಳೂರಿಗೆ ತಂದು ಬಿಟ್ಟುಬಿಟ್ಟಿದೆ. ಕಷ್ಟದ ದಿನಗಳು ಕಳೆದಿವೆ. ಇನ್ನೊಬ್ಬರ ಕಷ್ಟಕ್ಕೆ ಮಿಡಿವ ಹೃದಯ ಹಾಗೆ ಇದೆ. ಭದ್ರಾವತಿಯಲ್ಲಿ ಓದಿ, ಆಟೋ ಓಡಿಸುತ್ತಿದ್ದ, ವ್ಯರ್ಥಕಾಲ ಕಳೆಯುತ್ತಿದ್ದ ನೆರೆಹೊರೆಯವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವ ಅವಕಾಶ ನನಗೆ ಸಿಕ್ಕು, ಅವರ ಬದುಕು ಬೆಳಕಾಗಿದೆ. ಅವರ ಹಾರೈಕೆಯ ಪುಣ್ಯ ನನ್ನ ಪಾಲಿಗಿದೆ. ಭಗವಂತ ನಾನಿರುವಷ್ಟು ದಿನ ಆ ಹೃದಯವನ್ನು ಹಾಗೆಯೇ ಇಟ್ಟಿರಲಿ. ಈಗ ಬೆಂಗಳೂರಿನ ವಿದ್ಯಾಮಾನ್ಯನಗರದಲ್ಲಿ ವಾಸ. ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷನಾಗಿ, ಜನರ ಸೇವೆ ಮಾಡುವ ಭಾಗ್ಯವನ್ನೂ ಆ ಭಗವಂತ ಕರುಣಿಸಿದ್ದಾನೆ."

ಎಂದು ಮಾತು ಮುಗಿಸಿದ ಸಹೋದರ ಕೃಷ್ಣಮೂರ್ತಿಯವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಸಮಯವಿದ್ದಾಗ ಅವರ ಭಕ್ತಿಯ ರಚನೆಗಳನ್ನು ಆಹ್ವಾದಿಸಿ.. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ..
www.enkrishna.blogspot.com

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಅಕ್ಟೋಬರ್ 4, 2012


ಎಲೆ ಮರೆ ಕಾಯಿ ೫೯

ಗೋರಿ ಕಟ್ಟುವ ಬನ್ನಿ
ನಾ ಮೇಲು ತಾ ಮೇಲೆಂದು
ಹೊಡೆದಾಡಿ ಸಾಯುತಿಹ
ಧರ್ಮಗಳಿಗೆ
ಗೋರಿ ಕಟ್ಟುವ ಬನ್ನಿ........

ಕವಿತೆಗಳಲ್ಲಿ, ಬರಹಗಳಲ್ಲಿ ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೋ, ಸಮಾಜದ ಬದಲಾವಣೆಗೋ ಕರೆ ನೀಡುವುದು ಸುಲಭದ ಕೆಲಸವಲ್ಲ. ನಾವು ನಿತ್ಯ ಯಾವುದ್ಯಾವುದೋ ಮೂಲೆಗಳಿಂದ ಕರೆಗಳನ್ನು ಕೇಳುತ್ತಲೇ ಇರುತ್ತೇವೆ. ದೇಶ, ಭಾಷೆ, ನೆಲ, ಜಲ ಎಲ್ಲದರ ಉಳಿವಿಗಾಗಿ ಕರೆಗಳು ಕೇಳುತ್ತಲೇ ಇರುತ್ತವೆ. ಇಲ್ಲಿ ಹೆಚ್ಚು ಸಲ ಕರೆಯ ಮಹತ್ವವೆಷ್ಟು ಎನ್ನುವುದರ ಬದಲಿಗೆ ಕರೆ ನೀಡಿದವರು ಯಾರು ಎಂಬುದರ ಮೇಲೆಯೇ ಕರೆಯ ಉದ್ದೇಶ ಸಫಲ ಅಥವಾ ವಿಫಲವಾಗುವ ಸಾಧ್ಯತೆಗಳಿರುತ್ತದೆ. ಬದಲಾವಣೆಯ ವಿಷಯ ಬಂದಾಗ ಎಲ್ಲರೂ ತಮ್ಮ ಸಣ್ಣ ಸಣ್ಣ ಗುಂಪುಗಳನ್ನು ಒಗ್ಗೂಡಿಸಿ ದೊಡ್ಡ ಸಮೂಹಗಳನ್ನು ಕಟ್ಟದ ಹೊರತು ಬದಲಾವಣೆ ಒಂದು ಕನಸಾಗಿಯೇ ಉಳಿದುಬಿಡುತ್ತದೆ. ಬದಲಾವಣೆಯ ಗಾಳಿ ಲೇಪಿಸಿಕೊಂಡು ಬಂದ ಕವಿತೆ ಬರಹಗಳು ಕಾಲ ಕ್ರಮೇಣ ಒಂದು ವರ್ಗಕ್ಕೆ ಮೀಸಲಾದಂತೆ ಹಣೆ ಪಟ್ಟಿ ಕಟ್ಟಿಕೊಂಡು ಎದುರು ನಿಂತಾಗ ಮತ್ತೊಂದು ವರ್ಗ ಇರುಸು ಮುರುಸಿಗೆ ಒಳಗಾಗುವುದು ಸಾಮಾನ್ಯ. ಅಂತಹ ಇರುಸು ಮುರುಸುಗಳನ್ನು ಓದುಗರಲ್ಲಿ ಹುಟ್ಟದಂತೆ ಮಾಡಿ ಮಾನವೀಯತೆ, ನೈತಿಕತೆ ತುಂಬಿದ ಸಮಾಜದಂತೆ ಒಂದು ಇಡೀ ಸಮೂಹವನ್ನೇ ಚಿಂತಿಸುವಂತೆ ಮಾಡುವುದು ಕವಿತೆಗಳ ಬರಹಗಳ ಉದ್ದೇಶವಾಗಬೇಕು. ಮೇಲೆ ಕಾಣಿಸಿದ ಕವಿತೆಯ ಸಾಲುಗಳು ಹಾಗೊಂದು ಮಾವನೀಯತೆ ಮೆರೆಯುವ ಆಶಯಗಳನ್ನು ಹೊತ್ತು ಎದುರು ನಿಂತಾಗ ಅದನ್ನು ಬಿಗಿದಪ್ಪುವ ಸಾಹಸವನ್ನು ಎಷ್ಟು ಜನ ಮಾಡುತ್ತಾರೋ ತಿಳಿಯದು. ಅಂದ ಹಾಗೆ ಹೀಗೊಂದು ಯೋಚನಾಲಹರಿಗೆ ನಾಂದಿ ಹಾಡುವಂತೆ ಮಾಡಿದ ಕವಿತೆಯ ಸಾಲುಗಳು ಕಂಡು ಬಂದದ್ದು ಬಿಸಿಲಿಗೆ ಸೆಡ್ಡು ಹೊಡೆದ ಜನಗಳ ನಾಡಿನವ.. ಎಂಬ ಅಡಿ ಬರಹವಿರುವ ಬಯಲ ಹುಡಿ ಎಂಬ ಬ್ಲಾಗಿನಲ್ಲಿ..

ನಾನು ಹುಟ್ಟಿದೊಡನೆ 
ಮೊದಲು ಖುಷಿಯ ಪಟ್ಟವನು
ನನ್ನಪ್ಪ.....
ಅಮ್ಮನಿಗಿಂತ ಮೊದಲು
ಮುತ್ತು ಕೊಟ್ಟವ,
ನನಗೆ ನಡಿಗೆಯ 
ಕಲಿಸಲು ಮೊದಲ
ಗುರುವಾದಾತ...

ಸಿನಿಮಾ ಮತ್ತು ನಾಟಕದ ಲೋಕದಲ್ಲಿ ಕಲಾವಿದರ ಮಕ್ಕಳು ಕಲಾವಿದರಾಗುವ ಸಾಧ್ಯತೆಗಳು ಬಹುಶಃ ಹೆಚ್ಚಿರುತ್ತವೆ. ಯಾಕೆಂದರೆ ತಮ್ಮ ಮಕ್ಕಳು ಸಿನಿಮಾದಲ್ಲಿ ನಾಟಕದಲ್ಲಿ ಅಭಿನಯಿಸುವುದು ಬೇಡ ಎಂಬ ತಡೆಗೋಡೆಗಳನ್ನು ಹೆಚ್ಚು ಜನ ಹಾಕುತ್ತಾರೆ. ಅಚ್ಚರಿಯೆಂದರೆ ಅವರ ಮಕ್ಕಳು ಆ ತಡೆ ಗೋಡೆಯ ಸಂಧಿಯಲ್ಲಿ ವಿಸ್ಮಯ ಪ್ರಪಂಚವನ್ನು ಇಣುಕಿ ನೋಡುತ್ತಲೇ ಒಮ್ಮೆ ಆ ಗೋಡೆಯನ್ನು ಮುರಿದೋ ಇಲ್ಲ ದಾಟಿಯೋ ವಿಸ್ಮಯ ಪ್ರಪಂಚವನ್ನು ಸೇರಿಬಿಡುತ್ತಾರೆ. ಅಂತಹ ಕಲಾವಿದರ ತಂದೆ ತಾಯಿಯರು ಎಷ್ಟೇ ಯಶಸ್ಸು ಗಳಿಸಿದ್ದರೂ ತಾವೂ ಯಶಸ್ಸಿನ ರುಚಿ ನೋಡುವುದು ರಾಜಕೀಯಗಳು ಇಲ್ಲವೆಂದರೆ ತಮ್ಮ ಕಲಾ ಸಾಮರ್ಥ್ಯದಿಂದಲೇ. ಸಾಹಿತ್ಯ ಲೋಕ ಹಾಗಲ್ಲ. ಸಾಹಿತಿಗಳ ಮಕ್ಕಳು ಸಾಹಿತಿಗಳಾಗುವುದು ಬಹುಶಃ ತುಂಬಾ ಕಮ್ಮಿ. ಯಾಕೆಂದರೆ ತಂದೆ ತಾಯಿಗಳು ಸಾಹಿತ್ಯ ಲೋಕದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಅವರ ಬರಹದ ಪ್ರಭಾವಕ್ಕೆ ಒಳಗಾಗದೆ ಈಗಾಗಲೇ ಅವರ ತಂದೆ ತಾಯಿಗಳ ಬರಹದ ಪ್ರಭಾವಕ್ಕೆ ಒಳಗಾಗಿರುವ ಓದುಗರನ್ನು ತಮ್ಮ ಓದುಗರಂತೆ ಮಾಡಿಕೊಳ್ಳುವುದು ತುಂಬಾ ತುಂಬಾ ಕಷ್ಟದ ಕೆಲಸ. ಆ ಕಷ್ಟದ ಕೆಲಸವನ್ನು ಸತತ ಪರಿಶ್ರಮದಿಂದ ಸಾಧಸಿ ತೋರಿಸಿದರು ತುಂಬಾ ವಿರಳ.. ಮೇಲಿನ ಕವಿತೆಯ ಸಾಲುಗಳಿಗೂ ಈ ಟಿಪ್ಪಣಿಗೂ ಏನು ಸಂಬಂಧವೆಂದು ನೀವು ಕೇಳುವ ಮೊದಲು ಸ್ವಲ್ಪ ಸಮಯದಲ್ಲೇ ಈ ಟಿಪ್ಪಣಿಯ ಉದ್ದೇಶ ನಿಮಗೆ ತಿಳಿಯುವುದು..

"ಚಂದ್ರನ ಬೆಳದಿಂಗಳೇ ಅವಳ ಮೈಯ ಬಣ್ಣವಾಗಿತ್ತೋ ಏನೋ!!!! ಮೊಗದ ಮೇಲಿನ ನಗುವು ಹೂವನ್ನೂ ನಾಚಿಸುವಷ್ಟು ಸುಂದರವಾಗಿತ್ತು, ಆಹ್ಹಾ! ಆ ಕಂಗಳಲ್ಲಿ ನಕ್ಷತ್ರಗಳ ಸಮೂಹವೇ ಇತ್ತೇನೋ, ಯಾರೇ ಅವಳ ನೋಡಿದರೂ ಪ್ರೇಮದ ಬಂದೀಖಾನೆಗೆ ಬೀಳದೇ ಇರರು, ಅಷ್ಟು ಸೌಂದರ್ಯವತಿ ನನ್ನ ಮನದರಸಿ......"

ನಾನೊಂದು ಹೂವಾಗುವೆ
ಏಕೆಂದರೆ ನನ್ನ ಹುಡುಗಿಗೆ
ಹೂವೆಂದರೆ ಇಷ್ಟವಂತೆ

ನಾನೊಂದು ಮುಗುಳು ನಗುವಾಗುವೆ
ಏಕೆಂದರೆ ನನ್ನ ಮನದನ್ನೆಗೆ
ನಗುವೆಂದರೆ ಇಷ್ಟವಂತೆ

ಒಂದೆಡೆ ಸಮಾಜವನ್ನು ತಿದ್ದುವ ಪಣ ತೊಟ್ಟ ಕವಿಯಂತೆ ಕಾಣುವ ಈ ಕವಿ ಮತ್ತೊಂದೆಡೆ ಪ್ರೇಮದಲ್ಲಿ ಮಗ್ನನಾಗದಂತೆಯೂ ಭಗ್ನನಾದಂತೆಯೂ ಕಾಣುತ್ತಾ ತನ್ನ ಕವಿತೆ ಬರಹಗಳಿಂದ ನಮ್ಮನ್ನು ಹಿಡಿದಿಡುವ ಈ ಕವಿ ಗೆಳೆಯ ಯಾರು ಎಂದು ನಿಮಗೆ ಬಹುಶಃ ಗೊತ್ತಿರುವುದಿಲ್ಲ. ಮೊನ್ನೆ ಮೊನ್ನೆ ಜನುಮ ದಿನ ಆಚರಿಸಿಕೊಂಡ ಹಿರಿಯ ಲೇಖಕರಾದ ಕುಂ. ವೀರಭದ್ರಪ್ಪ ನವರ ಕಿರಿಯ ಪುತ್ರ ಪ್ರವರ ಕೆ ವಿ ಇಂದಿನ ಎಲೆ ಮರೆ ಕಾಯಿಯ ಅತಿಥಿ. ಫೇಸ್ ಬುಕ್ ನಲ್ಲಿ ಪ್ರವರ ಕೊಟ್ಟೂರು ಎಂದು ಪರಿಚಿತವಾಗಿರುವ ಗೆಳೆಯ ಪ್ರವರನ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಪ್ರವರ ಕೆ ವಿ 

"ಬಯಲ ನಾಡು ಕೊಟ್ಟೂರಿನವ ನಾನು, ಹೆಸರು ಪ್ರವರ. ನನ್ನ ಸುತ್ತಲಿನ ಪರಿಸರ ನನ್ನನ್ನು ಬರೆಯುವಂತೆ ಮಾಡಿತು, ನಾಲ್ಕು ಕಾಸಿಗೋಸ್ಕರ ದಿನವಿಡೀ ದುಡಿಯುವ, ಕನಸುಗಳ ಅರ್ಥವೇ ಗೊತ್ತಿಲ್ಲದೊಂದಿಷ್ಟು ಜನರೂ ಇದ್ದಾರೆ ಹಾಗೆ ಇಂಥಹ ಮುಗ್ಧ ಜನರನ್ನ ಚಪ್ಪಲಿಗಿಂತಲೂ ಕಡೆಯಾಗಿ ನೋಡುವ, ಬಳಸಿಕೊಳ್ಳುವ ಅಧಿಕಾರಶಾಹಿ-ಬಂಡವಾಳಶಾಹಿಗಳೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬರೆಯಲಿಕ್ಕೆ ನನ್ನೊಳಗಿದ್ದ ಅಗಾಧ ಶಕ್ತಿಯೆಂದರೆ ನನ್ನಪ್ಪ, ಎಲ್ಲವನ್ನೂ ಮೆಟ್ಟಿ ನಿಲ್ಲಬೇಕೆಂಬ ಆತನ ಮಾತು......

ಮೊದಲು ಪ್ರೀತಿ-ಪ್ರೇಮದ ಕಡೆ ವಾಲಿದ್ದ ಕವಿತೆಗಳು, ಬರೆಯುತ್ತಾ ಹೋದಂತೆ ಬೇರೆಯೆಡೆಗೇ ಸೇಳೆದಂತಿತ್ತು. ಬರೆಯಲು ಶುರು ಮಾಡಿ ಮೂರು ವರುಷಗಳಾದವು, ಸಧ್ಯ ಎಮ್.ಸಿ.ಎ ಐದನೇ ಸೆಮಿಷ್ಟರ್ ನಲ್ಲಿ ಓದುತಿದ್ದೇನೆ. ಸಾಗಬೇಕಿರುವ ಹಾದಿ ತುಂಬಾ ಇದೆ ಹಾಗೆ ಅದು ನನ್ನನ್ನೇ ಕೆಕ್ಕರಿಸಿಕೊಂಡು ನೋಡಿದಂತೆ ಅನಿಸುತ್ತದೆ.

ಮೊದಲ ಕವನ

ನನ್ನ ಜನರಿವರು

ನನ್ನ ಕವಿತೆಗೆ ಎಣ್ಣೆ
ಎರೆದು ಹಣತೆ ಹಚ್ಚಿದವರು
ನನ್ನ ಜನ
ಜಾತಿ ಮತ ಕುಲವೇನೆಂದು
ತಿಳಿದಿಲ್ಲ
ತಿಳಿದಿರುವುದೊಂದೆ ಬಾಳಬೇಕೆಂಬ.........

ನೀರು ಕಾಣದೆ ಬಯಲು
ಬರಡಾಗಿರಲು ಜಾಲಿ ಗಿಡಗಳು
ಹಸಿರ ತೋರಿಸಿ ನಗುತಲಿವೆ
ಇದೆ ನಗುವ ನನ್ನ ಜನ
ನನಗೆ ಕಲಿಸಿದ್ದು.......

ಸುರಿದ ಬೆವರಿನ ನಾತ
ಆರುವ ಯಾವುದೇ ಸುಳಿವಿಲ್ಲ.
ಕಷ್ಟದಲ್ಲಿಳಿದ ಉಪ್ಪು ಬೆವರಿನಂತವರು
ನನ್ನ ಜನಗಳು ಕಪ್ಪು ಮಣ್ಣಿನಂತವರು
ಸುರಿದಷ್ಟು ತಂಪು... ಬೆಳೆದಷ್ಟು ಹರವು...

ಹಾಕಿರುವ ಕೆರಗಳು ಸವೆದು
ಸಣಕಲಾದರೂ ಬಿಡಲೊಲ್ಲದ ನನ್ನ ಜನ
ಜೀವನದ ಮೇಲಿನ ಆಸೆಯನು
ನನಗೆ ಕಲಿಸಿದ್ದು.....

ಹೊಟ್ಟೆ ತುಂಬಲಾರದ ಊಟ
ಉಂಡರೂ ಸರಿಯೇ ಪ್ರೀತಿ
ಸ್ನೇಹವ ಉಂಡು ಒಂದೊಮ್ಮೆ
ಡೇಗಿದರೆ......

ಕನಸಿಲ್ಲದ ಊರಿಗೆ ನಿದ್ರೆಯ ಪಯಣ
ಇಂಥವರು ನನ್ನ ಜನ
ಜೀವನದ ಪಾಠವ ಹೇಳಿಕೊಟ್ಟವರು.

ಉಳಿದಂತೆ ನನ್ನ ನೆಚ್ಚಿನ ಕವನಗಳ ಲಿಂಕನ್ನು ನಿಮಗೆ ಕಳಿಸಿರುತ್ತೇನೆ...... ಧನ್ಯವಾದಗಳು ಗೆಳೆಯ"

ಗೆಳೆಯ ಪ್ರವರನ ಮಾತು ತುಂಬಾ ತುಂಬಾ ಚಿಕ್ಕದಾಯಿತು ಎಂದುಕೊಳ್ಳುತ್ತಿದ್ದಂತೆ "ನಟಣ್ಣ ಹೇಳೋಕೆ ಜಾಸ್ತಿ ಇಲ್ವೇನೊ ಅನ್ನಿಸ್ತಿದೆ.... ಬೇಂದ್ರೆ ಕವನ ಸ್ಪರ್ಧೆಯಲ್ಲೂ ಎರಡು ಬಾರಿ ನನ್ನ ಕವನಗಳು ಸೆಲೆಕ್ಟ್ ಆಗಿದ್ವು...... ಬಂಡಾಯದ ಕಡೆ ಒಲವು" ಎಂದು ಹೇಳುತ್ತಾ ಮುಗಿಸಿದ ಅವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಹಿರಿಯ ಲೇಖಕರ ಮಗನಾಗಿದ್ದರೂ ತನ್ನ ಬರಹಗಳಿಂದ ತನ್ನದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತಿರುವ ಈ ಗೆಳೆಯನಿಗೆ ಶುಭವಾಗಲಿ. ಈ ಗೆಳೆಯ ಉತ್ತಮ ಛಾಯಾಗ್ರಾಹಕ ಸಹ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಗೆಳೆಯ ಪ್ರವರನ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಅಲ್ಲಿ ಅವರ ಕವಿತೆ, ಲೇಖನಗಳ ಜೊತೆ ಜೊತೆಗೆ ಅವರ ಕಾಲೇಜಿನ ದಿನಗಳ ವಿಡೀಯೋಗಳು ಮತ್ತು ಅವರದೇ ಕೈಯಿಂದ ಮೂಡಿರುವ ಪೆನ್ನು ಪೆನ್ಸಿಲ್ ನಿಂದ ಬರೆದ ಚಂದದ ಚಿತ್ರಗಳಿವೆ. ಕವಿತೆಗಳ ಓದಿ, ಚಿತ್ರಗಳ ವಿಡಿಯೋಗಳ ನೋಡಿ ಖುಷಿ ಪಡಿ..

http://kumveepravara.blogspot.in/

ಪ್ರವರ ಅವರ ಕವಿತೆಗಳ ಒಂದೆರಡು ಕವಿತೆಗಳ ಕೆಲವು ಸಾಲುಗಳು ಈ ಕೆಳಗಿನಂತಿವೆ.. ಖುಷಿಯಿಂದ ಓದಿಕೊಳ್ಳಿ..

ಏಕೆ,
ಮೊನ್ನೆ ಕೆರೆ ಏರಿಯ ಮೇಲೆ
ಬರುವೆನೆಂದು ಏಕೆ ಬರಲಿಲ್ಲ?
ಏನಾದರು ಮನೆಯಲ್ಲಿ
ತೊಂದರೆಯಾಯ್ತೆ?
ಅಥವಾ
ನಾನೆ ಮರೆತುಹೋದೆನೆ
*****
ನಿನ್ನ ನಗುವ ಕಂಡ 
ಮಾರನೇ ದಿನ
ಮನಸು ಹೊಚ್ಚ ಹೊಸತಂತಾಗಿದೆ
ಮುಂಗಾರಿನ ಮೊದಲ ಮಳೆಗೆ
ಘಮಗುಡುವ ಮಣ್ಣಿನಂತೆ.....
ಮಳೆಯ ಸ್ಪರ್ಷಕೆ
ಮೊಗವ ಅರಳಿಸಿ ನಗುವ
ಹಸಿರ ಚಿಗುರ ಎಲೆಯ ಮೇಲಿನ 
ಹನಿಗಳಂತೆ....
*****
ನಿನ್ನ ಕೆಂಪ್ ತುಟಿ ನೋಡಿದಾಗ್ಲೆಲ್ಲಾ
ಗುಲಾಬಿ ಹೂವ ನೆನಪಾಗ್ತೈತಿ
ದುಂಬಿ ಬಂದು ಅದರ್ ಮ್ಯಾಲೆ ಕುಂತಾಗ
ನಿನ್ನ ತುಟಿಗೆ ನೋವಾತೇನ ಅನಸ್ತೈತಿ
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :)))

ಗುರುವಾರ, ಸೆಪ್ಟೆಂಬರ್ 27, 2012


ಎಲೆ ಮರೆ ಕಾಯಿ  ೫೮
ತಂದೆ ತಾಯಿಯರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು? 

ಕೆಲವರು ಬೆಳಿಗ್ಗೆ ಎದ್ದು ರೆಡಿಯಾಗಿ ಮೈಗೆ ಬಟ್ಟೆಯನ್ನು ಹೊಟ್ಟೆಗೆ ತಿಂಡಿಯನ್ನು ಆತುರಾತುರವಾಗಿ ತುರುಕಿ ಹೊರಟರೆಂದರೆ ಮತ್ತೆ ರಾತ್ರಿಯವರೆಗೂ ಮನೆಯ ಕಡೆ ಮುಖ ಮಾಡುವುದಿರಲಿ ಮನೆಯಲ್ಲಿರುವ ಮಡದಿಗೋ ಮಕ್ಕಳಿಗೋ ಒಂದು ಫೋನ್ ಸಹ ಮಾಡುವುದಿಲ್ಲ. ರಾತ್ರಿ ಮನೆಗೆ ಬಂತೆಂದರೆ ಮತ್ತೆ ಆಫೀಸಿನ ಟೆನ್ಷನ್ ಗಳನ್ನು ತಲೆಯಲ್ಲಿ ತುಂಬಿಕೊಂಡು ದುಡಿದಿದ್ದಕ್ಕಿಂತ ಹೆಚ್ಚು ದಣಿದು ಮತ್ತೆ ಬೆಳಿಗ್ಗೆ ಎದ್ದು ಆಫೀಸಿಗೆ ಓಡಿಬಿಡುವ ಯೋಚನೆಯಲ್ಲೇ ನಿದ್ದೆಗೆ ಜಾರಿಬಿಡುತ್ತಾರೆ. ಆಫೀಸಿಗೆ ಹೋದ ಮೇಲೆ ಒಂದೇ ಒಂದು ಸಲ ಫೋನ್ ಮಾಡಿ ಊಟ ಮಾಡಿದೆಯಾ ಏನ್ ಮಾಡ್ತಾ ಇದ್ದೀಯ ಎಂದು ಪ್ರೀತಿಯಿಂದ ಮಾತನಾಡಿಸಿದರೆ ಸಾಕು, ಮನೆಗೆ ಬಂದ ಮೇಲೆ ಕಾಫಿಯನ್ನೋ, ಚಹಾವನ್ನೋ ಹೀರುತ್ತಾ ಒಂದಷ್ಟು ಹೊತ್ತು ಜೊತೆಯಲ್ಲಿ ಸಮಯ ಕಳೆದರೆ ಸಾಕು ಎಂದುಕೊಳ್ಳುತ್ತಾ ಇಂತಹ ಸಣ್ಣ ಪುಟ್ಟ ಆಸೆಗಳ ಮನದಲ್ಲಿ ತುಂಬಿಕೊಂಡು, ಅಂತಹ ಆಸೆಗಳು ನಿರಾಸೆಯಾದಾಗ ಇಂತಹವನನ್ನು ಕಟ್ಟಿಕೊಂಡು ತಪ್ಪು ಮಾಡಿದೆ ಎಂದು ಬೈದುಕೊಂಡು ಬದುಕುವ ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ಅಸಂಖ್ಯ. ಅಂತಹವರಲ್ಲಿ ಅನೇಕರ ಪಾಲಿಗೆ ತನ್ನ ಸಂಗಾತಿಯ ಜೊತೆಯಲ್ಲಿ ಊಟ ಮಾಡೋದು, ರಸ್ತೆಯಲ್ಲಿ ಕೈ ಕೈ ಹಿಡಿದು ನಡೆಯುವುದು ಸಹ ಒಂದು ಕನಸಾಗಿರುತ್ತದೆ. ಇದಕ್ಕೆ ವಿರುದ್ಧವೆಂಬಂತೆ ಮನೆಗೆ ಬೇಕಾಗಿರುವುದು ಹಣ, ತನ್ನ ಆಫೀಸ್ ತನ್ನ ಸರ್ವಸ್ವ, ಹೆಣ್ಣು ಬಯಸುವುದು ಚಿನ್ನ, ಬೆಳ್ಳಿ, ರೇಶ್ಮೆ ಸೀರೆ ಎಂದು ತಪ್ಪಾಗಿ ತಿಳಿದುಕೊಂಡವರಂತೆ ದಿನ ನಿತ್ಯದ ಖರ್ಚಿಗೆಂದು, ಹಬ್ಬ ಹರಿದಿನಗಳಲಿ ಶಾಪಿಂಗ್ ಗೆ ಎಂದು ಒಂದಷ್ಟು ದುಡ್ಡು ಕೊಟ್ಟು ಬಾಳ ಸಂಗಾತಿ ಎನಿಸಿಕೊಂಡವನಾದ ತನ್ನ ಕರ್ತವ್ಯ ಮುಗಿಯಿತು ಎಂದುಕೊಳ್ಳುವವರು ಕೊನೆಗೆ ಮನೆಯಲ್ಲಿ ಜಗಳಗಳಾದ ತತ್ವಜ್ಞಾನಿಗಳಂತೆ ಹೆಣ್ಣನ್ನು ಅರ್ಥಮಾಡಿಕೊಳ್ಳೋದು ಕಷ್ಟ ಎಂದುಬಿಡುತ್ತಾರೆ. ಯಾರೂ ಬಯ್ಯುಕೋಬೇಡಿ. :))  ಇಂತಹ ಸೂಕ್ಷ್ಮ ವಿಚಾರ ಮೇಲ್ನೋಟಕ್ಕೆ ಚರ್ಚಾಸ್ಪದ ವಿಷಯವಾಗಿ ಕಂಡರೂ ಒಮ್ಮೆ ಚಿಂತಿಸಬೇಕಾದ ವಿಷಯ ಕೂಡ ಆಗಿರುತ್ತದೆ. ಮೇಲಿನ ಕವಿತೆಯ ಸಾಲನ್ನು ಓದುತ್ತಲೇ ಹೀಗೊಂದು ಭಾವನಾಲಹರಿ ಹರಿಯುತ್ತಾ ಹೋಯಿತು. ಅಂದ ಹಾಗೆ ಈ ಕವಿತೆ ನನ್ನ ಕಣ್ಣಿಗೆ ಬಿದ್ದದ್ದು ಭಾವಪ್ರಿಯ ಎಂಬ ಬ್ಲಾಗಿನಲ್ಲಿ..

ಯಾಕೋ ಇಂದಿಂದು ಕನಸುಗಳದೇ ಕಾರುಬಾರು 
ಇರುಳ ತೋಳಲಿ ನಿದ್ದೆಗೆ ಜಾರುತಲಿ 
ಲಗ್ಗೆ ಇಡುವವು ಮುಖಗಳು ಸಾವಿರಾರು ..

ಮುಖ ಪರಿಚಯವೇ ಇಲ್ಲದ ಮುಖಗಳು 
ನಸು ನಕ್ಕು ಶೂನ್ಯದಡೆಗೆ ಜಾರಿದರು 
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು 

ಇಂತಹ ಚಂದದ ಸಾಲುಗಳ ಈ ಕವಿ ಗೆಳೆಯ ನಮ್ಮ ಮುಂದೆ ಇಟ್ಟಾಗ ಎಷ್ಟೊಂದು ಮುಖಗಳು ಸುಮ್ಮನೆ ಕಣ್ಣ ಮುಂದೆ ಬಂದು ಹೋದಂತೆ ಭಾಸವಾಗುತ್ತದೆ. ಈ ಕವಿ ಗೆಳೆಯ ಮೊದಲಿಗೆ ಒಬ್ಬ ಒಳ್ಳೆಯ ಓದುಗ ಎನ್ನಬಹುದು. ತಾನು ಓದುವ ಪ್ರತಿ ಕವನ ಮತ್ತ ಬರಹಗಳಿಗೆ ಮೆಚ್ಚುಗೆಯ ಟಿಪ್ಪಣಿ ಬರೆಯುವುದ ಕಂಡರೆ ಇವರಲ್ಲಿರುವ ಓದುಗನಿಗೆ ಒಂದು ಸಲಾಮು ಹೊಡೆಯಬೇಕು ಎನಿಸುತ್ತದೆ. ಇವರ ಕವನಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅವು ಪ್ರಬುದ್ದತೆ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ ಎಂದೆನಿಸಿದರೂ ಬರೆಯುತ್ತ ಬರೆಯುತ್ತಲೇ ಚಂದದ ಕವಿಯಾಗುವತ್ತ ಹೆಜ್ಜೆಯಿಟ್ಟಿರುವ ಈ ಕವಿ ಗೆಳೆಯನ ಕವಿತೆಗಳು ಪಕ್ವತೆಯತ್ತ ಹೊರಳುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಎದ್ದು ಕಾಣುತ್ತವೆ ಸಹ. ಈ ಗೆಳೆಯನ ಒಳಗೆ ಉತ್ತರ ಕರ್ನಾಟಕದ ದೇಶೀ ಸೊಗಡು ಸುಮ್ಮನೆ ಮರೆ ಮಾಚಿ ಕುಳಿತಿದೆ ಎನಿಸುತ್ತದೆ. ಧಾರವಾಡದ ಭಾಷೆಯ ಗಮ್ಮತ್ತನ್ನು ಕವಿತೆಗಳ ಬರಹಗಳ ರೂಪದಲ್ಲಿ ನಮಗೆ ನೀಡುವಂತೆ ಈ ಗೆಳೆಯನಿಗೆ ಒಂದು ಮನವಿ. ಅವರು ಉತ್ತರ ಕರ್ನಾಟಕದ ಕನ್ನಡದಲ್ಲಿ ಬರೆದಿರೋ ಒಂದು ಮುದ್ದಾದ ಸರಳ ಕವಿತೆಯ ಸಾಲು ಇಗೋ ನಿಮಗಾಗಿ...

ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು

ಇಷ್ಟವಾಯಿತಾ ಸಹೃದಯಿಗಳೇ ಈ ಗೆಳೆಯನ ಕವಿತೆಯ ಸಾಲುಗಳು. ಕನ್ನಡ, ಇಂಗ್ಲೀಷ್, ಹಿಂದಿ ಈ ಮೂರೂ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡುವ ಸಾಹಸ ಮಾಡತ್ತಿರುವ ಈ ಗೆಳೆಯ ತನ್ನ ವಿಷಯ ವಸ್ತುಗಳ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿ ಎಂದು ಹಾರೈಸುತ್ತಾ ಇವತ್ತಿನ ಎಲೆ ಮರೆ ಕಾಯಿಯ ವಿಶೇಷ ಅತಿಥಿ ಸುನಿಲ್ ರಾಮಕೃಷ್ಣ ಅಗಡಿ ಚಿಕ್ಕದಾಗಿ ಹೇಳಬೇಕೆಂದರೆ ಸುನಿಲ್ ಅಗಡಿಯವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

ಸುನಿಲ್ ರಾಮಕೃಷ್ಣ ಅಗಡಿ

"ನನ್ನ ಹುಟ್ಟು ಊರು "ಧಾರವಾಡ " ಪ್ರಖ್ಯಾತ ಕವಿಗಳಾದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಹುಟ್ಟಿ, ಬೆಳೆದ, ಕವನಗಳ ರಚಿಸಿದ ನೆಲ. ಹವಾಮಾನ ಅನುಕೂಲಕರವಾಗಿದ್ದು ಯಾವಾಗಲು ಹಸಿರು ವನಸಿರಿಯಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿಯ ಬಾಬು ಸಿಂಗ್ ಪೇಡ ಅಥವಾ ಧಾರವಾಡ ಲೈನ್ ಬಜಾರ್ ಪೇಡ ಜಗತ್ ಪ್ರಖ್ಯಾತಿಯನ್ನು ಪಡೆದಿದೆ. ಧಾರವಾಡ ಭಾರತೀಯ ಸಂಸ್ಕೃತಿ ಬಿಂಬಿಸುವ ಸಾಹಿತ್ಯ, ಶಾಸ್ತ್ರಿಯ ಸಂಗೀತ ಹಾಗು ವಿದ್ಯಾಭ್ಯಾಸಕ್ಕೆ ಖ್ಯಾತಿಯನ್ನು ಪಡೆದ ಕರ್ನಾಟಕ ವಿಶ್ವವಿದ್ಯಾನಿಲಯ ಒಳಗೊಂಡಿದೆ. ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತೆ ಮುಂತಾದವರು ಹೋರಾಡಿದ ಐತಿಹಾಸಿಕತೆ ನಮ್ಮ ಈ ನಾಡಿಗಿದೆ.

ನಾನು ಚಿಕ್ಕವನಿದ್ದಾಗಿನಿಂದಲೂ ಕನ್ನಡ ಬರೆಯುವುದಲ್ಲಿ ಸ್ವಲ್ಪ ಮಂದ ಸ್ವಭಾವ, ಹೀಗೊಂದು ರೂಢಿಯನ್ನು ಬೆಳೆಸಿಕೊಳ್ಳುತ್ತೇನೆ ಎಂದೂ ನಂಬಿರಲಿಲ್ಲ, ಇರಲಿ ನನ್ನ ಕವನಗಳ ಬರಿಯುವ ಹವ್ಯಾಸ ಶುರುವಾಗಿದ್ದು ೨೨-೦೩-೨೦೦೨ ರಿಂದ, ನಾನು ಅಭಿಯಂತರ ಪದವಿಯ ಅಭಾಸ ಮಾಡುತ್ತಿರುವಾಗ. ಸಹಜವಾಗಿಯೇ ನನ್ನ ಜೀವನದಲ್ಲಿ ಬಂದು ಹೋಗುವ ವಿಷಯಗಳ ಮೇಲೆ, ವ್ಯಕ್ತಿಗಳ ಮೇಲೆ, ನಿಸರ್ಗದ ಮೇಲೆ, ನನ್ನ ಅಚ್ಚುಮೆಚ್ಚಿನ ಸ್ನೇಹಿತರ ಮೇಲೆ ಅವರ ಸ್ವಭಾವಗಳನ್ನ ಗಣನೆಗೆ ತೆಗೆದುಕೊಂಡು ಬರೆಯಲಾರಂಬಿಸಿದೆ. ಹೂವುಗಳು ಎಂದರೆ ನನಗೆ ತುಂಬಾನೇ ಇಷ್ಟ. ನಾನು ಬರೆದ ಮೊದಲ ಕವನ,

"ಹೂವ ನನ್ನ ಜೀವ "
ಚೈತ್ರದ ಮುಂಜಾವಿನಲ್ಲಿ ಅರಳಿ,
ಇಬ್ಬನಿಯ ಹನಿಗಳ ಚೆಲ್ಲಿ,
ತಿಳಿಯ ಕಂಪನ್ನು ಸೂಸುತ,
ಎಳೆಯ ಬಿಸಿಲಲ್ಲಿ ನಗುತ್ತ,
ನೋಡುಗರ ಮನಸನ್ನು ಸೆಳೆಯುತ್ತಾ...
ಈ ಸೊಬಗನ್ನು ಕಂಡ ನಾನೇ ಧನ್ಯ ..!

ಹಬ್ಬದ ಸಂದರ್ಭದಲ್ಲಿ ಬರೆದ ಒಂದು ಕವನವು "ರಾಯಚೂರು ವಾಣಿ " ೨೦೦೨ ದೀಪಾವಳಿಯ ವಿಶೇಷಾಂಕದಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಆ ಕವನ ಈ ಕೆಳಗಿನಂತಿದೆ ..

" ದೀಪಾವಳಿ "
ಮತ್ತೆ ಬಂತು ದೀಪಾವಳಿ
ಜೀವನದ ಕತ್ತಲನ್ನು ಓಡಿಸುತ್ತಾ
ಜನರ ಭಾಗ್ಯ ಬೆಳಗಿಸುತ್ತ
ಎಲ್ಲೆಲ್ಲೂ ಸಂತೋಷದ ಅಲೆ ಎಬ್ಬಿಸುತ್ತ....ಬಂತು ದೀಪಾವಳಿ.
ಮತ್ತೆ ಬಂತು ದೀಪಾವಳಿ

ತುಂಬುತ್ತ ರಂಗು ರಂಗಿನ ಹೋಳಿ
ಬೀದಿಯಲೆಲ್ಲಾ ಪಟಾಕಿಗಳ ಹಾವಳಿ
ಹರಡುತ್ತಾ ಸಂಭ್ರಮದ ಧೂಳಿ ...ಬಂತು ದೀಪಾವಳಿ
ಮತ್ತೆ ಬಂತು ದೀಪಾವಳಿ

ಬಡವನ ಮನೆಯಲ್ಲಿ ಮಣ್ಣಿನ ಹಣತೆ
ಸಿರಿವಂತನ ಅರಮನೆಯಲ್ಲಿ ಬೆಳ್ಳಿಯ ಹಣತೆ
ಯಾವ ಹಣತೆಯಾದರೇನು ಎಲ್ಲದರಲ್ಲೂ ದೀಪದ ಬೆಳಕೇ ...ಬಂತು ದೀಪಾವಳಿ
ಮತ್ತೆ ಬಂತು ದೀಪಾವಳಿ

ಎಲ್ಲೆಲ್ಲಾ ಚೆಲ್ಲುತ್ತ ಬೆಳಕು
ಕಿನ್ನರಲ್ಲಿ ಹುಟ್ಟಿಸುತ್ತಾ ನಡುಕು
ಎಲ್ಲರ ಮುಖದಲ್ಲಿ ನಗೆಯ ಹೊಳಪು
ಎಲ್ಲೆಲ್ಲೂ ಚಿಮ್ಮುತ್ತ ಆನಂದದ ಹೊನಲು .

ಹೀಗೆ ಬರೆಯುತ್ತಾ ಬರೆಯುತ್ತಾ ಹೆಚ್ಚು ಹೆಚ್ಚೆಚ್ಚು ಬರೆಯುತ್ತಾ ಹೋದೆ. ಕವನಗಳು ನನ್ನ ಮನಸಿನ ಭಾವನೆಗಳನ್ನ ಭಿನ್ನಹಿಸುವ ಮಾಧ್ಯಮವಾಯಿತು, ಆದ ಕಾರಣದಿಂದನೆ ನಾನು "ಭಾವಪ್ರಿಯ" ಭಾವನೆಗಳನ್ನ ಪ್ರೀತಿಸುವವನು ಎಂದರ್ಥ.

ಇನ್ನು ಸಾಹಿತ್ಯದ ಬಗ್ಗೆ ಹೆಚ್ಚು ತಿಳಿದವನಲ್ಲ, ಸುಮ್ಮನೆ ಮನಸಿನ ಭಾವನೆಗಳನ್ನ ಗೀಚುತ್ತ ಹೋದಂತೆ ಗೆಳೆಯರು ಚೆನ್ನಾಗಿದೆ ಹೀಗೆ ಮುಂದುವರೆಸು ಎಂದು ಪ್ರೋತ್ಸಾಹಿಸಿದರು ಹಾಗೆ ಮುಂದುವರೆಸಿದ್ದೇನೆ, ಹೆಚ್ಚು ಓದುವ ಹವ್ಯಾಸವು ಇಲ್ಲಾ ಆದರೆ ಕನ್ನಡ ಬ್ಲಾಗಿನಲ್ಲಿ ಗೆಳೆಯರು ಹಂಚಿಕೊಳ್ಳುವ ಕತೆ ಕವನಗಳನ್ನ ಓದುತ್ತೇನೆ. ಕನ್ನಡದ ಅಭಿಮಾನವೇ ನನಗೆ ಬರೆಯುವಂತೆ ಪ್ರೇರೇಪಿಸುತ್ತದೆ. ಸಾಹಿತ್ಯದ ಕೃಷಿ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಇದೆ ಆದರೆ ನೀವುಗಳೇ ದಾರಿ ತೋರಬೇಕು. ಸಾಹಿತ್ಯ ಕೃಷಿಯ ಕನಸ್ಸೆಂದರೆ ಎಂದಾದರೂ ಒಂದು ದಿನ ಚಲನ ಚಿತ್ರಗಳಿಗೆ ಹಾಡುಗಳು ಬರೆಯಬೇಕು...ಜಯಂತ್ ಕಾಯ್ಕಿಣಿ .., ಯೋಗರಾಜ್ ಭಟ್ಟ ರಂತೆ ಹೆಸರು ಪಡೆಯಬೇಕು ಅನ್ನುವುದು ಒಂದು ಮಹದಾಸೆ ನನ್ನದು. ನನ್ನ ಕವನಗಳು ಬಹಳಷ್ಟು ಹಾಡುಗಳು ಇದ್ದ ಹಾಗೆ ಇರುತ್ತವೆ ಅದಕ್ಕೆ ನೀನು ಯಾಕೆ ಚಲನ ಚಿತ್ರಗಳಿಗೆ ಹಾಡುಗಳು ಬರೆಯಬಾರದು ಎಂದು ಸ್ನೇಹಿತರು ಕೇಳುತ್ತಿರುತ್ತಾರೆ.

ವೃತ್ತಿಯಲ್ಲಿ ನಾನು ಮೆಕ್ಯಾನಿಕಲ್ ಅಭಿಯಂತರ, ಕಳೆದು ೬ ವರ್ಷಗಳಿಂದ ಜನರಲ್ ಮೋಟೊರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಇದಕ್ಕೂ ಮುಂಚೆ ೩ ವರ್ಷ ಕೈನೆಟಿಕ್ ಕಂಪನಿಯಲ್ಲಿ ಅಹಮದ್ ನಗರ್, ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದೆ. ವೃತ್ತಿ ಜೀವನ ಹೀಗೆ ಸಾಗಿದೆ.

ನನ್ನ ಕವನಗಳನ್ನ ಓದಿದ ಗೆಳೆಯರೊಬ್ಬರು ನನಗೆ ಕನ್ನಡ ಬ್ಲಾಗ್ ಪರಿಚಯ ಮಾಡಿಸಿದರು, ಸ್ವಲ್ಪ ದಿನ ಎಲ್ಲರೂ ಹಂಚಿಕೊಳ್ಳುವ ಬರಹಗಳನ್ನ ಇಲ್ಲಿ ಓದುತ್ತಿದ್ದೆ, ಕವಿ ಗೆಳೆಯರು ಓದಿ ಮೆಚ್ಚಿಕೊಂಡು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುವುದು ತುಂಬಾನೇ ಖುಷಿ ಕೊಟ್ಟಿತು, ನನ್ನ ಕವನಗಳನ್ನ ಹಂಚಿಕೊಳ್ಳಲು ಹಾಗು ಪ್ರತಿಯಾಗಿ ಕವನಗಳ ಗುಣಮಟ್ಟ ಹೆಚ್ಚಿಸಿಕೊಳ್ಳಲು, ಸಾಹಿತ್ಯದಲ್ಲಿ ಬೆಳೆಯಲು ಕೂಡ ಸಹಾಯ ಆಗುತ್ತಿದೆ, ಅಲ್ಲದೆ ಕನ್ನಡವ ಉಳಿಸಿ ಬೆಳೆಸಲು ನಮ್ಮ ಕನ್ನಡದ ಬ್ಲಾಗು ಮಾಡುತ್ತಿರುವ ಕೆಲಸ ಶ್ಲಾಘನೀಯ. ಇನ್ನು ಹೆಚ್ಚು ಮರಿ ಕವಿಗಳಿಗೆ ಈ ವೇದಿಕೆ ದಾರಿ ದೀಪವಾಗಲಿ. ಕನ್ನಡ ಬ್ಲಾಗನ್ನು ಹುಟ್ಟು ಹಾಕಿದ ಎಲ್ಲಾರಿಗೂ, ನಡೆಸಿ ಬೆಳೆಸಿಕೊಂಡು ಹೋಗುತ್ತಿರುವ ಎಲ್ಲ ಹಿರಿಯ ಕವಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ನಟರಾಜು ನಿಮ್ಮ ಕವಿ ಪರಿಚಯದ ಲೇಖನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ, ಕನ್ನಡ ಬ್ಲಾಗ್ ಕವಿಗಳನ್ನ ಪರಿಚಯಿಸುವ ನಿಮ್ಮ ಪ್ರಯತ್ನ ಮೆಚ್ಚಲೇ ಬೇಕು. ತಮಗೂ ಸಹ ಅಭಿನಂದನೆಗಳು."

ಎಂದು ಮಾತು ಮುಗಿಸಿದ ಗೆಳೆಯ ಸುನಿಲ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://bhavapriya.blogspot.in/

ಗೆಳೆಯ ಸುನಿಲ್ ರವರ ಕವನಗಳ ಒಂದೆರಡು ಕವನಗಳ ಸಾಲುಗಳ ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ ಗೆಳೆಯರೇ..

ಅಕ್ಕ ಪಕ್ಕದ ಮನೆಯ ಜೋಡಿ ಹಕ್ಕಿ
ಯಾರ ಹುಡುಕುವೆ ಹೆಕ್ಕಿಹೆಕ್ಕಿ
ಅತ್ತ, ಇತ್ತ, ಮೇಲೆ ಕೆಳಗೆ
ಆ ಗೂಡಲಿ, ಈ ಮರದಲಿ,
ಏನನ್ನು ನೋಡುತಿರುವೆ ಇಣುಕಿ ಇಣುಕಿ?

*****
ಮೋಡಗಳ್ಯಾಕೋ ಧರೆಗೆ ಬಂದಾವ ಇಂದು.. 
ಸೌಮ್ಯದಿ ಚಲಿಸುತ್ತ ..ಯಾರನ್ನೋ ಆರಿಸುತ್ತ ..
ತವಕದಿ ಮುನ್ನುಗ್ಗುತ್ತಾ ..ಸುಯ್ಯನೆ ಕೂಗಿ ಕರೆಯುವಂತೆ ..!

ಅತ್ತಾಗೆ ಕಪ್ಪಗು ಅಲ್ಲ ಇತ್ತಾಗ ಬೆಳ್ಳಗೂ ಅಲ್ಲ 
ತಿಳಿ ಕಪ್ಪು ಸವರಿದ ಹಾಗೆ ಮುಖದಾಗ 
ಬಿಡಿ ಬಿಡಿಯಾಗಿ ಹೊರಟಾಳ ...ಇವಳ ಚಲನವು ಯಾರ ಕಡೆಗೋ ? 
******
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))


ಗುರುವಾರ, ಸೆಪ್ಟೆಂಬರ್ 20, 2012


ಎಲೆ ಮರೆ ಕಾಯಿ ೫೭
ನನಗಿಂತ ನಿನ್ನ 
ಹೊತ್ತ ಹೃದಯ 
ಭಾರವಾಯಿತೆನೆಗೆ,
ಎಷ್ಟು ತಡೆದರೂ 
ನಿನ್ನೆಡೆಗೆ ವಾಲುತಿಹುದು,
ನಿನ್ನಯ ಪ್ರೇಮದಿ
ಸಮತಟ್ಟಾಗಿದ್ದ
ಮನದ ನೆಲವೂ..
ಇಳಿಜಾರಾಯ್ತೆ!!

ಮಕ್ಕಳು ಜಾರು ಬಂಡೆ ಕಂಡರೆ ಸಾಕು ಅವರು ಬೇರೆಯದೇ ಪ್ರಪಂಚಕ್ಕೆ ಹೊಕ್ಕಿ ಬಿಡುತ್ತಾರೆ. ಅಲ್ಲಿ ತಮ್ಮ ಜೊತೆಗಿರುವ ಅಪ್ಪ ಅಮ್ಮ ಯಾರೂ ಸಹ ಕಣ್ಣಿಗೆ ಕಾಣುವುದಿಲ್ಲ. ಅವರ ಕಣ್ಣಿಗೆ ಜಾರುಬಂಡೆಯೊಂದು ಬೆಟ್ಟದ ಹಾಗೆ. ಅವರು ಎಷ್ಟೇ ಪುಟ್ಟ ಮಕ್ಕಳಾಗಿದ್ದರೂ ಯಾರ ಸಹಾಯವನ್ನು ತೆಗೆದುಕೊಳ್ಳದೆ ಜಾರು ಬಂಡೆಯನ್ನು ಹತ್ತುವ ಪ್ರಯತ್ನ ಮಾಡುತ್ತಾರೆ. ಹಾಗೆ ಹತ್ತಿ ಜಾರು ಬಂಡೆಯ ಶಿಖರವ ತಲುಪಿದ ಮೇಲೆ ಆ ಇಳಿಜಾರಿನಲ್ಲಿ ಜಾರುತ್ತಾ ಬರುವಾಗ ಖುಷಿಯಿಂದ ಹಿಗ್ಗಿ ಬಿಡುತ್ತಾರೆ. ಜಾರುತ್ತಾ ತಮ್ಮ ಪಾದ ನೆಲವನ್ನು ಮುಟ್ಟಿದ ಮರುಕ್ಷಣ ಮತ್ತೆ ಜಾರು ಬಂಡೆಯನ್ನು ಏರಲು ಓಡುತ್ತಾರೆ. ಜಾರು ಬಂಡೆಯನ್ನು ಹತ್ತುವ ಕೆಲಸ ಯಾಕೋ ಅವರಿಗೆ ಕಷ್ಟದ ಕೆಲಸವಾಗಿ ಕಾಣುವುದಿಲ್ಲ. ಯಾಕೆಂದರೆ ಅಲ್ಲಿ ಜಾರುವಾಗ ಇರುವ ಸುಖವೇನೆಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಹಾಗೆಯೇ ಪ್ರೇಮಿಯೂ ಸಹ ಪ್ರೇಮವೆಂಬ ಜಾರುಬಂಡೆಯಂತಹ ಬೆಟ್ಟವನ್ನು ಎಷ್ಟೇ ಕಷ್ಟಗಳೂ ಎದುರಾದರೂ ಹತ್ತಿ ಅಲ್ಲಿ ಜಾರುತ್ತಾ ಸುಖಿಸುತ್ತಾನೆ. ಮಕ್ಕಳು ಮತ್ತು ಪ್ರೇಮಿಗಳು ತಮ್ಮ ತಮ್ಮ ಜಾರುಬಂಡೆಗಳ ಆಟದಲ್ಲಿ ಜಾರಿ ಜಾರಿ ಬಟ್ಟೆಯನ್ನು ಹರಿದುಕೊಳ್ಳುವುದು, ಮೈ ಕೈ ತರಚಿಕೊಳ್ಳುವುದು ಸಾಮಾನ್ಯ.. :)) ಯಾಕೋ ಮೇಲಿನ ಕವನದ ಸಾಲುಗಳ ಓದಿ ಅಬ್ಬಬ್ಬಾ!! ಎನಿಸಿಬಿಟ್ಟಿತು. ಕವಿಗಳ ಹೋಲಿಕೆಗಳೇ ಹಾಗೆ ನಾವು ಕಲ್ಪಿಸಿಲಾರದನ್ನು ಅವರು ಕಲ್ಪಿಸಿ ನಮ್ಮನ್ನು ಬೆರಗುಗೊಳಿಸಿಬಿಡುತ್ತಾರೆ. ಮನದ ನೆಲವನ್ನು ಇಳಿಜಾರಿಗೆ ಹೋಲಿಸಿ ನನ್ನಲ್ಲಿ ಹೀಗೊಂದು ಭಾವನಾ ಲಹರಿಗಳ ಎಬ್ಬಿಸಿದ ಗೆಳೆಯನ ಬ್ಲಾಗಿನ ಹೆಸರು ಹಿಂದಿನ ಹೆಸರು ಸೌಂಡ್ ಆಫ್ ಹಾರ್ಟ್ ಈಗ ಅದರ ಹೆಸರು "ಹೃದಯವಾಣಿ".

"ಮುಂಜಾನೆ ಏಳುವುದೆಂದರೆ ಅದೇಕೋ ಗೊತ್ತಿಲ್ಲ, ಪುಟಾಣಿ ಮಗು ತನ್ನ ಬಳಿ ಇದ್ದ ಆಟಿಕೆಯನ್ನು ಕೇಳಿದಾಗ ಕೊಡದೇ ಇದು ನನ್ನದು -ಇದು ನನ್ನದು, ನಾ ಯಾರಿಗೂ ಕೊಡುವುದಿಲ್ಲವೆಂದು ಮಾಡುವ ಮೊಂಡಾಟದಂತೆ ಮನವು ಮುಂಜಾನೆಯ ಅರೆನಿದ್ರೆಯನ್ನು ಬಿಟ್ಟುಕೊಡಲು ಹಿಂಜರಿಯುತಿತ್ತು."

ಹಾಗೆ ಮೊಂಡಾಟ ಮಾಡುವ ಮನಸ್ಸನ್ನು ಪುಸಲಾಯಿಸಿ ಜಾಗಿಂಗ್ ಗೆ ಹೊರಡುವ ಹುಡುಗ ದಾರಿ ಮಧ್ಯದಲ್ಲಿ ಕೋಗಿಲೆಯ ದನಿ ಕೇಳಿ ಅದನು ಅನುಕರಿಸಿ ಅದು ಮತ್ತೆ ಮತ್ತೆ ಕೂಗುವಂತೆ ಮಾಡುವುದ ಕುರಿತು ಓದುವಾಗ ಯಾಕೋ ಖುಷಿಯಾಗುತ್ತದೆ. ಈ ಗೆಳೆಯನ ಲೇಖನ ಓದುತ್ತಿದ್ದಂತೆ ಕಾಲೇಜಿನ ದಿನಗಳಲ್ಲಿ ಕೋಳಿಗಳ ರೇಗಿಸಿ ಕೂಗಿಸುತ್ತಿದ್ದ ದಿನಗಳು ಯಾಕೋ ನೆನಪಿಗೆ ಬರುತ್ತವೆ. ನಮ್ಮ ಈ ಕವಿ ಗೆಳೆಯ ಬೆಳೆದು ದೊಡ್ಡವನಾಗಿದ್ದರೂ ಇನ್ನೂ ತನ್ನ ಮುಗ್ದತೆಯನ್ನು ಕಾಯ್ದಿಟ್ಟುಕೊಂಡಿರುವುದು ಖುಷಿಯ ವಿಚಾರ.

ಮಚ್ಚಿನಂತೆ ಹರಿತವಾದ ನಿನ್ನ ಸೌಂದರ್ಯದಿ 
ತೆಂಗಿನಕಾಯಿಯಂತಹ ಎನ್ನಯ ಮನದ ಸಿಪ್ಪೆಯನ್ನು ಸುಲಿದು 
ಅಂತರಂಗವೆಂಬ ಕಳಶವ ಬೇಧಿಸಿ 
ಹೃದಯವೆಂಬ ತಿಳಿಯಾದ ಬಿಳಿ ಕವಚದೊಳಗೆ
ಎಳನೀರಿನಂತೆ ಸವಿಯಾಗಿದ್ದ ನನ್ನನ್ನೇ ಹೀರಿಬಿಟ್ಟೆಯಲ್ಲೇ !!

ನೋಡಿ ಮುಗ್ದರಿಗೆ ಎಂತಹ ಸ್ಥಿತಿ ಬರುತ್ತೆ ಅಂತ :)). ಸುಮ್ಮನೆ ತಮಾಷೆಗೆ ಹಾಗಂದೆ. ಶಿವ ಶಂಭುಲಿಂಗನನ್ನು ಸದಾ ನೆನೆಯುತ್ತಾ ಬಹುಶಃ ತನ್ನ ಮನದಲ್ಲಿ ಮೂರ್ನಾಲ್ಕು ಕೋಣೆಗಳ ಮಾಡಿ ಒಮ್ಮೆ ಪ್ರೇಮದಲ್ಲಿ, ಒಮ್ಮೆ ಆಧ್ಯಾತ್ಮದಲ್ಲಿ, ಒಮ್ಮೆ ಹಾಸ್ಯದಲ್ಲಿ, ಹೆಚ್ಚಾಗಿ ಫೇಸ್ ಬುಕ್ ನಲ್ಲಿ ಕಳೆದು ಬಿಡುವ ನಮ್ಮ ನಡುವಿನ ಪುಟ್ಟ ಗಣಿ ಅಂದರೆ ಗಣೇಶ್ ಜಿ ಪಿ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ವಿಶೇಷ ಅತಿಥಿ. ಗಣಿ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಗಣೇಶ .ಜಿ.ಪಿ

"ಅಲ್ಲಿ ಇಲ್ಲಿ ಗೀಚೋ ಮಗುನ ನಿಮಗೆಲ್ಲ ಪರಿಚಯ ಮಾಡುಸ್ತಿನಿ ಅಂತ ನಮ್ಮ ನಟಣ್ಣ ಸ್ಯಾನೆ ತಲೆ ತಿಂದುಬಿಟ್ರು, ಅವರ ಆತ್ಮೀಯತೆಗೆ ಮಣಿದು ನಿಮ್ಮೆಲ್ಲರ ಮುಂದೆ ತಲೆಭಾಗಿಸಿ ನಮಸ್ಕರಿಸುತ್ತ ಅಪ್ಪ -ಅಮ್ಮರ ನೆನೆಯುತ್ತ :)) ಆ ನನ್ನ ಶಂಭುಲಿಂಗನ ಪಾದಕಮಲಗಳನ್ನು ಸ್ಮರಿಸುತ್ತ, ನನ್ನ ಪರಿಚಯ ಮಾಡಿಕೊಳ್ಳುತ್ತಿದ್ದೇನೆ, ಅಪ್ಪ -ಅಮ್ಮಂದಿರೆ, ಅಕ್ಕ -ಅಣ್ಣಂದಿರೆ, ಮತ್ತು ನೆಚ್ಚಿನ ಗೆಳೆಯ- ಗೆಳತಿಯರೆ,, ಇದೇನಪ್ಪ ಇದು ರಾಜಕಾರಣಿ ತರ ಶುರು ಹಚ್ಹ್ಕೊಬಿಟ್ಟ ಅನ್ಕೋಬೇಡಿ ನಿಮಗೆ ಮರ್ಯಾದೆ ಕೊಡಬೇಕಾದ್ದು ನನ್ನ ಧರ್ಮ ಅದಕ್ಕಷ್ಟೇ :))) ನಾನು ಸ್ವಲ್ಪ ಕುಯ್ಯೋದು ಜಾಸ್ತಿ ಒಂತರ ಲೆಕ್ಚರ್ ಅಂತಾರಲ್ಲ ಹಂಗೆ ಸ್ವಲ್ಪ ಸಹಿಸ್ಕೊಬೇಕು ದಯವಿಟ್ಟು. :))).

ನಾವು ಗಣೇಶ .ಜಿ.ಪಿ ಅಂತ ಹೇಳ್ಬಿಟ್ಟು ಎಲ್ಲ ಪ್ರೀತಿಯಿಂದ ಗಣಿ ಅಂತಾರೆ ,ನನ್ನ ಅಪ್ಪ ಹವಾಲ್ದಾರ್ , ಅಮ್ಮ ಗೃಹಿಣಿ ,ಇನ್ನು ಒಬ್ಬ ಪ್ರೀತಿಯ ಪುಟ್ಟ ತಮ್ಮ ನಾಲ್ವರ ಒಂದು ಪುಟ್ಟ ಸಂಸಾರ  ನಮ್ಮ ತಂದೆಯ ಊರು ಅರಸೀಕೆರೆ , ರೈತರಾಗಿದ್ದ ತಂದೆಗೆ ಪೋಲಿಸ್ ಪೇದೆ ಹುದ್ದೆ ಸಿಕ್ಕಿದ್ದರಿಂದ ಮೈಸೂರಿಗೆ ನಮ್ಮ ಪಯಣ ಬೆಳೆಯಿತು. ಅಪ್ಪನ ಪರಿಶ್ರಮ ಶಿಸ್ತಿನ ಹಾರೈಕೆ ನಮ್ಮಲ್ಲಿ ಸದ್ಗುಣಗಳ ಆಗರ (ಸ್ವಲ್ಪ ಬಿಲ್ಡ್ ಅಪ್ಗೆ ) ತುಂಬಿತು.  ನಮ್ಮದು ಮಧ್ಯಮ ವರ್ಗದ ಕುಟುಂಬ, ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ನಡೆಯುತ್ತಿತ್ತು. ಪ್ರಾಥಮಿಕ ಹಂತದಿಂದಲೂ ನನಗೆ ಚಿತ್ರ ಬರೆಯುವುದು, ಮತ್ತಿತರ ಕ್ರಿಯಾಶೀಲತೆಯಲ್ಲಿ ತುಂಬಾ ಆಸಕ್ತಿ ಹಾಗಾಗಿ ನಿರಂತರ ಚಟುವಟಿಕೆಗಳಲ್ಲಿ ಮುಳುಗಿರುತ್ತಿದ್ದೆ  ಎಲ್ಲ ವಿಭಾಗದಲ್ಲೂ ಭಾಗಿಯಾಗಬೇಕೆಂಬ ಹುಚ್ಚು ಬಯಕೆ ಆದದ್ದರಿಂದ ಸದಾ ಕಾಲ ಪ್ರಯತ್ನದಲ್ಲೇ ಇರುತ್ತಿದ್ದೆ. ಓದಿನಲ್ಲಿ ಏನು ಕಡಿಮೆ ಇರಲಿಲ್ಲ. ಪ್ರೋತ್ಸಾಹ ಸಿಗದೇ ಇದ್ದರು ಎಲ್ಲ ಸ್ಪರ್ಧೆಗಳಲ್ಲಿ ಸತತವಾಗಿ ಭಾಗವಹಿಸುತ್ತಿದ್ದೆ. ಮತ್ತೆ ಹೈಸ್ಕೂಲಿನಲ್ಲಿದ್ದಾಗ ನಮಗೆ ವಿ.ರಾಜಪ್ಪ ಎಂಬ ಕನ್ನಡ ಶಿಕ್ಷಕರಿದ್ದರು ಅವರ ಭೋದನಾ ಶೈಲಿ ನನ್ನ ಮನ ಹೊಕ್ಕಿತ್ತು ಆ ಸಮಯದಲ್ಲೇ ದ. ರಾ .ಬೇಂದ್ರೆಯವರ, ಕುವೆಂಪುರವರ ಕವಿ-ಕಾವ್ಯ ಪರಿಚಯ ಮತ್ತೆ ಅವರ ಕಾವ್ಯ ಶೈಲಿಯನ್ನು ಪಟ್ಯದಲ್ಲಿ ನೋಡಿ, ಅದರಲ್ಲೂ ನಮ್ಮ ರಾಜಪ್ಪ ಗುರುಗಳಿಂದ ಅದನ್ನು ಕೇಳುತಿದ್ದರೆ ಮನಕ್ಕೆ ಹಬ್ಬವೋ ಹಬ್ಬ. ಹೀಗೆ ನಾನು ಶ್ರೇಷ್ಠ ಕವಿಗಳ ಭಾವಚಿತ್ರ ಬರೆದು ಏನು ಗೀಚೋದು ಎಂದು ಭಾವಕ್ಕೆ ಒಳಗಾಗಿದ್ದೆ ಆಗ ಬರೆದ ಬದುಕಿನ ಮೊತ್ತ ಮೊದಲ ಕವನ ಇದು (೮ನೆ ತರಗತಿಯಲ್ಲಿದ್ದಾಗ )

ಕಂದ
ಅಲ್ಲಿ ನೋಡು ಆಡುವ ಕಂದ
ಅದು ಆಡುವ ನೋಟವೇ ಚಂದ !!
ಆ ಕಂದ ಮುತ್ತಿತ್ತರೆ ಮಕರಂದ
ಅದನ್ನು ಸವಿದರೆ ಜೇಂಕಾರದ ಆನಂದ !!

ನಂತರ ಕವನ ಇರಲಿ ಅದರ ಜೊತೆಗೆ ಚಿತ್ರ ಬರೆಯುವುದು ಕೂಡ ಕ್ಷೀಣಿಸುತ್ತಾ ಹೋಯ್ತು ಹೈಸ್ಕೂಲಿನಲ್ಲಿ ವಚನಕಮ್ಮಟ ಎಂಬ ಸ್ಪರ್ಧೆ ಆಯೋಜಿಸಿದ್ದರು ಅದರಲ್ಲಿ ಭಾಗವಹಿಸಿದ ನಾನು ವಚನಗಳನ್ನು ಪಟಪಟನೆ ನುಡಿಯುತ್ತಿದೆ, ಎಲ್ಲರು ಕಂಡು ಬೆರಗಾಗುತಿದ್ದರು, ದುರಾದೃಷ್ಟವಶ ಅಂತರ ಸ್ಕೂಲಿನ ವಿಭಾಗದಲ್ಲಿ ಸಮಾದಾನಕರ ಬಹುಮಾನಕ್ಕೆ ತೃಪ್ತಿ ಪಡಬೇಕಾಯ್ತು. ಆಗಲೇ ಸಣ್ಣ ಪುಟ್ಟ ಉತ್ತೇಜಿಸುವ ಪುಸ್ತಕಗಳನು ಕೊಂಡುಕೊಳ್ಳುತ್ತಿದ್ದೆ. ಬಿಡುವಾದಾಗ ಓದುತಿದ್ದೆ. ಕಾಲೇಜಿನಲ್ಲಿ ಒಂದೆರಡು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ, ಮತ್ತೆ ಅಂತರಕಾಲೇಜು ವಿಭಾಗದಲ್ಲಿ ಭಾಗವಹಿಸಿದಾಗ ಪ್ರೋತ್ಸಾಹವಿಲ್ಲದೆ ಮತ್ತೆ ಮರುಕ ಪಟ್ಟೆ.  ಹೀಗೆ ಇದ್ದ ಕ್ರಿಯಾಶೀಲತೆಗಳಿಗೆ ಪ್ರೋತ್ಸಾಹ ಸಿಗದೇ ಎಲ್ಲ ನೀರಿಲ್ಲದೆ ಬಾಡುವ ಹೂಗಳಾದವು. ಓದಿ ವೈದ್ಯನಾಗಬೇಕೆಂದಿದ್ದೆ ದುಡ್ಡಿನ ಮೂಟೆ ಬೇಕೆಂದು ತಿಳಿದು ಮತ್ತು ಸರಿಯಾದ ಮಾರ್ಗದರ್ಶನವಿಲ್ಲದೆ ಏಕೋ ಮನಸ್ಸು ಆಸೆ ಕೈ ಬಿಟ್ಟಿತ್ತು. ನಂತರ ಇಂಜಿನಿಯರಿಂಗ್ ಸೇರಿದೆ. ಆಗಾಗ ಡೈರಿ ಗೀಚುವ ಹವ್ಯಾಸ ಇತ್ತು ಅದು ಆಗಾಗ ಸೋಮಾರಿತನಕ್ಕೆ ಸಿಕ್ಕಿ ಬಳಲುತಿತ್ತು, ಹಾಗೆ ಕಾಲೇಜಿನ ಹುಡುಕುತನ ಹುಡುಗಾಟದ ಬದುಕು ಒಳ್ಳೆಯ ನೀತಿ ಪಾಟವನ್ನೇ ಕಲಿಸಿತು ಎನ್ನಬಹುದು. ನಂತರ ಇಂಜಿನಿಯರಿಂಗ್ ಪದವಿ ಮುಗಿಸಿ, ಹೈದರಾಬಾದಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಒಂದು ವರ್ಷ ಕಾರ್ಯ ನಿರ್ವಹಿಸಿದೆ. ಅಪ್ಪ - ಅಮ್ಮರ ಅನಾರೋಗ್ಯ ಜೊತೆಗೆ ಸ್ನಾತಕೋತ್ತರ ಪದವಿ ಮುಗಿಸುವ ಹಂಬಲ ಶಂಭುಲಿಂಗನ ದಯೆ ಎನ್ನಬಹುದು ನನಗೂ ಅನಾರೋಗ್ಯ ಕಾಡಿತ್ತು ಜೊತೆಗೆ ನನ್ನಲ್ಲಿದ್ದ ನನ್ನತನ ಸ್ವಂತ ಆಲೋಚನೆಗಳಿಗೆ ಮರುಜೀವ ಕೊಡುವ ಹಂಬಲವು ಜೊತೆಗೆ ಹಿರಿ ಮಗನೆಂಬ ಜವಾಬ್ದಾರಿ ಹೆಚ್ಚಾಗಿತ್ತು ಅದಕ್ಕೆ ಆಗೋದೆಲ್ಲ ಒಳ್ಳೇದಕ್ಕೆ ಅಲ್ಲವೇ ಅಂತ ತಲೆ ಕೆಡಿಸ್ಕೊಳ್ಳದೆ ರಾಜಿನಾಮೆ ಇತ್ತು ಬಂದೆ.

ಕಾಲೇಜು ಶುರುವಾಗಲು ತುಂಬಾ ದಿನವಿರುವುದರಿಂದ ಕಾಲಹರಣಕೆಂದು ಈ ಅಂತರ್ಜಾಲದ ಫೆಸುಬುಕ್ಕಿಗೆ ಬರುತ್ತಿದ್ದೆ, ಆಗಲೇ ಕಂಡದ್ದು ಕನ್ನಡ ಬ್ಲಾಗ್, ಡೈರಿಯಲ್ಲಿ ವಿಮರ್ಶಿಸುತ್ತಿದ್ದ ಅಕ್ಷರಗಳು ಜೀವ ಪಡೆದು  ಬ್ಲಾಗಿನ, ಕವಿತೆಗಳ, ಕಥೆಗಳ ಓದತೊಡಗಿದವು, ಆಗಿನ ವಚನಾಮೃತದ ಸವಿಯೂ ಇನ್ನು ಮಾಸಿರಲಿಲ್ಲ ಅನ್ಸುತ್ತೆ ಅದರ ಜೊತೆಗೆ, ಅನುಭವ ಸಾತ್ ನೀಡ್ತು, ಕಾಣದ ಹಾಗೆ ನನ್ನ ಹೃದಯದ ದನಿ ಕೇಳತೊಡಗಿತ್ತು, ಕೈಬೆರಳುಗಳು ಕುಣಿಯತೊಡಗಿದ್ದವು. ಪ್ರಸಾದ್ ಮತ್ತು ಪಮ್ಮಿ ಗೊತ್ತೇ ಇರಬೇಕು ನಿಮಗೆ ಅವರ ಅಣ್ಣನಾಗಿರುವುದರಿಂದ ಅವರು ಈ ಅಣ್ಣನ ಹೃದಯದ ಮಾತುಗಳ ಅರಿತವರು ಅದನ್ನು ಬೇರೆಯವರು ಕೇಳಲಿ ಎಂದು ಹೊರ ತರುವಂತೆ ಹೇಳಿದರು, ಬ್ಲಾಗ್ ಮೊದಲಿಂದಲೂ ಬರೆಯಬೇಕು ಅಂದ್ಕೊಂಡು ಒಂದು ಬ್ಲಾಗ್ ಓಪನ್ ಮಾಡಿ ಆಂಗ್ಲದಲ್ಲಿ ಏನೇನೋ ಗೀಚಿದ್ದೆ. ನಿಮ್ಮನ್ನೆಲ್ಲ ನೋಡಿದ ಮೇಲೆ ಮಾತೃ ಭಾಷೆಯ ಹಿಡಿತವಿರುವಾಗ ಬೇರೆ ಭಾಷೆ ಏಕೆ ಎಂದು ಕನ್ನಡ ಬ್ಲಾಗನ್ನು ತಟ್ಟಿದೆ ಅದು ಹಾಗೆ ಬಾಗಿಲು ತಗಿದು ಮಿಡಿಯತೊಡಗಿತು :)

ಈ ಕನ್ನಡ ಬ್ಲಾಗನ್ನು ಪರಿಚಯಿಸಿದ ಆ ನನ್ನ ಇಬ್ಬರು ಪುಟ್ಟ ಕೂಸುಗಳಿಗೆ ಎಷ್ಟು ಧನ್ಯವಾದಗಳು ತಿಳಿಸಿದರೂ ಸಾಲದು ಮತ್ತೆ ಕನ್ನಡ ಬ್ಲಾಗ್ ಎಂಬ ವೇದಿಕೆ ಕೇವಲ ಒಂದು ಸಾಮಾನ್ಯ ವೇದಿಕೆಯಲ್ಲ ಇದು ಮನಸ್ಸಿನ ಆಳದಲ್ಲಿ ಅಡಗಿರುವ ನೆನಪಿನ ಮತ್ತು ಅನುಭವಗಳ ಗಣಿ ಇದ್ದ ಹಾಗೆ ಇಲ್ಲಿನ ಎಲ್ಲ ಸದಸ್ಯರ ಹಾರೈಕೆಯಲ್ಲಿ ದೂಳು ಕುಳಿತಿದ್ದ ನನ್ನ ಕನ್ನಡ ಸಾಹಿತ್ಯದ ಕೃಷಿಗೆ ಒಂದು ಆಯಾಮ ಸಿಕ್ಕಿದಂತಾಯ್ತು :))) ನಿಜವಾಗಲು ಫೆಸ್ಬುಕ್ಕು ಎಂಬ ಅಡ್ಡಾದಲ್ಲಿ ಕನ್ನಡ ಬ್ಲಾಗಿನ ಕನ್ನಡ ಸಾಹಿತ್ಯ ಕೃಷಿ ಅಮೋಘ ಎಲ್ಲ ನಿರ್ವಾಹಕ ಬಳಗಕ್ಕೂ ನನ್ನ ಅಭಿನಂದನೆಗಳು:))) ಕನ್ನಡ ಬ್ಲಾಗಿನ ಸದಸ್ಯ ಎಂಬ ಹೆಮ್ಮೆಯ ಗರ್ವ ಇದೆ :))) ಎಲ್ಲರ್ಗೂ ಒಬ್ಬ ಕಿರಿಯನಾಗಿ ಒಂದು ಸಣ್ಣ ಕಿವಿಮಾತು ಈ ಜೀವನ ಕ್ಷಣಿಕ ಇರುವಷ್ಟು ದಿನ ನಿಸ್ವಾರ್ಥ ಮನೋಭಾವದಿಂದ ವಸುದೈವ ಕುಟುಂಬ ಎಂಬಂತೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ ಕಲಹಕ್ಕೆ ಎಡೆ ಮಾಡಿಕೊಡದೆ ತಗ್ಗಿ ನಡೆದರೆ ಮೆಚ್ಚುವನು ನಮ್ಮ ಶಂಭುಲಿಂಗ ನಾನು ಎಂಬ ಭಾವ ಇರದೇ ನಮಗಿಂತ ಮೇಲೊಬ್ಬ ಇದ್ದಾನೆ ಎಂಬ ಭಾವ ಇಟ್ಟುಕೊಳ್ಳಿ ಅದು ನಿಮ್ಮ ಇಷ್ಟ ದೈವ ಇರಬಹುದು( ಆಸ್ತಿಕರಿಗೆ ) ,,, ನಾಸ್ತಿಕರಿಗೆ (ನಿಮ್ಮ ಆತ್ಮವೇ ಪರಮಾತ್ಮ ನೀವು ಅವನ ಪಾಲಕರು ಅಷ್ಟೇ ) ಎಂದು ಈ ಅಲ್ಪನ ಪರಿಚಯ ಮುಗಿಸಿದ್ದೇನೆ. ದಯವಿಟ್ಟು ಇಷ್ಟವಾದಲ್ಲಿ ತಲೆಗೆ ಹಚ್ಚಿ ಕೊಳ್ಳದೆ ಹೃದಯಕ್ಕೆ ಹಾಕಿಕೊಳ್ಳಿ ಇಷ್ಟವಾಗದಿದ್ದರೆ ತಲೆಗೆ ಬಿಟ್ಟುಬಿಡಿ ಅದು ಮರೆಸಿಬಿಡುತ್ತೆ :))) ಶಂಭುಲಿಂಗ ಎಲ್ಲರ್ಗೂ ಒಳ್ಳೆಯದನ್ನೇ ಮಾಡ್ಲಿ :))))"

ಎಂದು ಮಾತು ಮುಗಿಸಿದ ಗಣಿ ಜಾಸ್ತಿ ಕೊರೆದಿದ್ದರೆ ಗಣಿ ಬ್ಲಾಗಿನ ಲಿಂಕ್ ಕೆಳಗೆ ನೀಡಿರುವೆ. ಅಲ್ಲಿ ಹೋಗಿ ನಿಮ್ಮ ಕೋಪ ತೀರಿಸಿಕೊಳ್ಳಿ.. :)))

http://ganeshagp.blogspot.in/

ಗಣಿಯ ಒಂದು ಕವನ ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ..

ನಿನ್ನಯ ಕದನವೆಂಬ ಆಟಕೆ
ಈ ಜಡ -ಜಟಿಲವೆಂಬ
ಶಾರೀರವ ಮಾಡಿ ,
ಸಕಲ ಇಂದ್ರಿಯಗಳನಿತ್ತು
ಅವ ಮೂದಲಿಸಿ ,
ಲಾಲಿಸಿ -ಪಾಲಿಸಿ ,
ಕುಣಿಸಿ -ದಣಿಸಿ ,
ನೋವು-ನಲಿವೆಂಬ
ಕಷ್ಟ - ಕಾರ್ಪಣ್ಯಗಳನಿತ್ತು ,
ಕೊನೆಗೆ ಸಾಯಿಸಿ ಪರಾರಿಯಾಗುವ
ದುರಾತ್ಮವೆ, ಈ ಕದನಕೆ
ನೀನಿತ್ತಿದ್ದು ,ಏಕಾತ್ಮವಲ್ಲ !
ದ್ವಂದಾತ್ಮ !!
ಆಟದಿ ಸೋಲುಣಿಸಲಿತ್ತ
ಪ್ರೇತಾತ್ಮ ಒಂದಾದರೆ,
ಅದರೆದುರು ನೀ ಗೆಲ್ಲಲಿತ್ತ
ಆತ್ಮವೇ ಪರಮಾತ್ಮ !!!
ನಡುವೆ ನರಳುತಿಹುದು
ಎನ್ನಯ ಜೀವಾತ್ಮ ! :(:(


ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಶುಕ್ರವಾರ, ಸೆಪ್ಟೆಂಬರ್ 14, 2012


ಎಲೆ ಮರೆ ಕಾಯಿ ೫೬ 
ಆಕೆ ಮುನಿಸಿಕೊಂಡಾಗ 
ಪಾತ್ರೆಗಳೂ ಮಾತನಾಡುತ್ತವೆ.

ಅಕ್ಕಿ ಮುಗಿದಾಗಲೇ ಯಾಕೋ 
ಹಸಿವು ಹೆಚ್ಚಾಗುತ್ತದೆ.

ಕುಡಿದು ಓಡಿಸುವವನ ಗಾಡಿಯೂ
ತೂರಾಡುತ್ತಲೇ ಬರುತ್ತದೆ!!

ಕೆಲವು ಭಾವಗಳೇ ಹಾಗೆ ತಮ್ಮೊಳಗೆ ಮತ್ತೊಂದು ಭಾವವನ್ನು ನಮಗೆ ಕಂಡೂ ಕಾಣದಂತೆ ಅಡಗಿಸಿಕೊಂಡಿರುತ್ತವೆ. ಉದಾಹರಣೆಗೆ ಹುಸಿ ಕೋಪದೊಳಗಿನ ಪ್ರೀತಿ, ಹಸಿದವನ ಒಳಗಿರುವ ಜೀವನ ಮುಖಿ, ಮುಗುಳ್ನಗುವಿನ ಹಿಂದಿರುವ ಕುಹಕ, ಹೀಗೆ ಹುಡುಕುತ್ತಾ ಹೋದರೆ ಒಂದು ಭಾವದೊಳಗಿನ ಮತ್ತೊಂದು ಒಳ ಭಾವ ಅಥವಾ ಒಳಾರ್ಥ ನಮಗೆ ಗೋಚರಿಸುತ್ತಾ ಹೋಗುತ್ತದೆ. ಹೆಚ್ಚು ಸಲ ಹೊರ ಭಾವವನ್ನು ಮಾತ್ರ ಅರ್ಥೈಸಿಕೊಂಡು ಆ ಭಾವದ ಒಳಾರ್ಥವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತೇವೆ. ಆ ವಿಫಲತೆಯನ್ನು ಜನ ಮೂರ್ಖತನ ಎಂದು ಕರೆದುಬಿಡುತ್ತಾರೆ. ಗೆಳೆಯನೊಬ್ಬನ ಬ್ಲಾಗಿನಲ್ಲಿ ಮೇಲಿನ ಚಂದದ ಎರಡು ಸಾಲುಗಳ ಚುಟುಕಗಳ ಓದುತ್ತಲೇ ಯಾಕೋ ಹೀಗೊಂದು ಭಾವಗಳ ಕುರಿತ ಭಾವನಾ ಲಹರಿ ನನ್ನಲ್ಲಿ ಮೂಡುತ್ತಾ ಹೋಯಿತು. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಹೆಸರು "ಫ್ರೊಮ್ ಮೈ ಹಾರ್ಟ್"

"ಮದುವೆಗೆ ಮುಂಚೆ ಅಷ್ಟೇ ಇದೆಲ್ಲ, ಆಮೇಲೆ ..... ಏನಿಲ್ಲ. ಬರೀ ಬೊಗಳೆ ಪ್ರಪಂಚ. ಈ ಕರ್ಮಕ್ಕೆ ಲವ್ ಮ್ಯಾರೇಜ್ ಬೇರೆ ಯಾಕೆ ಬೇಕಿತ್ತೋ? ಪರಿಚಯವಾದ ದಿನಗಳಲ್ಲಿ ಅಟ್ ಲೀಸ್ಟ್ 10 ಗಂಟೆ ಫೋನಿನಲ್ಲೇ ಪ್ರಪಂಚ. ಕೂತಿದ್ದರೂ ನಿಂತಿದ್ದರೂ smsಗಳ ಮೇಲೆ sms. ಆ ಪ್ರೀತಿ ಮಾತು, ಆಗ ನೋಡುತ್ತಾ ಇದ್ದ ಮೂವೀಸ್, ಆಡ್ತಾ ಇದ್ದ ಹರಟೆ, ಭೇಟಿ ಆಗ್ತಾ ಇದ್ದ ದೇವಸ್ಥಾನ, ಬರೀತಾ ಇದ್ದ ಲೆಟರ್, ಕಳಿಸ್ತಾ ಇದ್ದ ಇ ಮೇಲ್, ಗ್ರೀಟಿಂಗ್ಸ್, ಆಗಾಗ ಕೊಡ್ತಾ ಇದ್ದ ಗಿಫ್ಟ್ಸ್.... ಪ್ರತಿಯೊಂದು ಹೇಗೆ ಮದುವೆ ಆದ ತಕ್ಷಣ ಮಾಯ ಆಗೋಯ್ತು ನೋಡು. ಎಲ್ಲಾ ಗಂಡಸರದ್ದು ಇದೇ ರಾಮಾಯಣ ಅಂತ ಕಾಣ್ಸುತ್ತೆ , ಬರೀ ಹುಡುಗಿರನ್ನ ಪಟಾಯಿಸೋಕೆ ಅಷ್ಟೆಲ್ಲಾ ಮಾಡ್ತಾರೆ ಅಂತ ಅನ್ಸುತ್ತೆ . ಹಿಂಗೆ ಇದ್ದಿದ್ರೆ ಮದುವೆ ಆಗದೇನೆ ಇರ್ಬೋದಿತ್ತು. ಈಗ ಸಾಲದ್ದಕ್ಕೆ ಮಗು ಬೇರೆ ಕೇಡು."

ಹೀಗೆ ತನ್ನ ನಲ್ಮೆಯ ಸಂಗಾತಿಯ ಕೋಪವನ್ನು ಕುರಿತು ಬರೆಯುತ್ತಾ ಹೋಗುವ ಬರಹಗಾರ ಯಾಕೋ ಗೊತ್ತಿಲ್ಲ ಅವನ ಸರಳ ಬರಹದ ಶೈಲಿಯಿಂದ ನಮಗೆ ಹೆಚ್ಚು ಹೆಚ್ಚು ಹತ್ತಿರವಾಗಿಬಿಡುತ್ತಾನೆ. ಈ ಗೆಳೆಯನ ಬರಹಗಳನ್ನು ಓದಿದಾಗ ಹಸಿದು ಬೆಳೆದವನಿಗಷ್ಟೇ ಅನ್ನದ ಮತ್ತು ಪ್ರೀತಿಯ ಮಹತ್ವ ತಿಳಿದಿರುತ್ತದೆ ಎಂದೆನಿಸಿತ್ತದೆ.

ಕುಡಿಯಲೋದ ಕರುವನೆಳೆದು,
ಕಂಬದಲ್ಲಿ ಕಟ್ಟಿಹಾಕಿ,
ತಾಯಮೊಲೆಯ ಹಿಂಡಿ ಕರೆದು,
ಹಾಲು ತಂದು ಮೊಸರ ಮಾಡಿ,
ಮೊಸರ ಗಡಿಗೆ ಕೆಳಗೆ ಬೀಳೆ,
ವ್ಯರ್ಥವಾಯಿತೇ, ಇಲ್ಲ ಅರ್ಥವಾಯಿತೇ?

ಈ ಗೆಳೆಯನ ಮೇಲಿನ ಕವಿತೆಯ ಸಾಲುಗಳ ಓದಿದಾಗ ಆ ಸಾಲುಗಳಲ್ಲಿ ಒಂದು ಚಂದದ ಲಯ ತುಂಬಿದೆ ಎಂದೆನಿಸುತ್ತೆ ಅಲ್ಲವೇ ಗೆಳೆಯರೇ? ಬರೀ ಕವಿತೆಗಳಲ್ಲಿ ಅಷ್ಟೇ ಅಲ್ಲ ಬದುಕಿನಲ್ಲೂ ಸಹ ಲಯ ತಂದುಕೊಂಡು ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಎಂಬ ಪುಟ್ಟ ಹಳ್ಳಿಯಿಂದ ಝೆಕ್ ರಿಪಬ್ಲಿಕ್ ನ ಪ್ರಾಗ್ ಎಂಬ ಸುಂದರ ನಗರ ತಲುಪಿ ಅಲ್ಲಿಂದಲೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಈ ಗೆಳೆಯನ ಬದುಕು ನಿಜಕ್ಕೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. "ಹಾಯ್ ನಟ್ಟು, ನಮಸ್ಕಾರ, ಎಲೆಮರೆ ಕಾಯಿಗಾ!! ಮೈ ಗಾಡ್, ನಂಗೆ ಬಹಳ ಮುಜುಗರವಾಗ್ತಾ ಇದೆ. ನಾನು ಅಂತ ದೊಡ್ಡ ಬರಹಗಾರ ಏನಲ್ಲ, ನೀವು ಪರಿಚಯ ಮಾಡ್ತಾ ಇರೋ ವ್ಯಕ್ತಿಗಳಿಗೆ ಹೋಲಿಸಿದರೆ ನಂದೇನೂ ಇಲ್ಲ." ಎಂದು ಮುಜುಗರಪಡುತ್ತಲೇ ಇಂತಹುದೊಂದು ಚಂದದ ಪರಿಚಯವನ್ನು ಗೆಳೆಯ ಸಂತೋಷ್ ಕುಮಾರ್ ಎಲ್ ಎಮ್ ಅವರು ನಮ್ಮೊಡನೆ ಹಂಚಿಕೊಂಡಿದ್ದಾರೆ. ಸಹೃದಯಿಗಳೇ, ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಗೆಳೆಯ ಸಂತೋಷನ ಪರಿಚಯ ಇಗೋ ನಿಮಗಾಗಿ....

ಸಂತೋಷ್ ಕುಮಾರ್ ಎಲ್ ಎಮ್

"ನಮಸ್ಕಾರ ಗೆಳೆಯರೇ, ಹೇಳೋಕೆ ಹೇಳಿಕೊಳ್ಳುವಂಥ ಸಾಧನೆಯೇನೂ ಮಾಡಿಲ್ಲ. ಗೆಳೆಯ ನಟ್ಟುವಿನ ಒತ್ತಾಯದ ಮೇರೆಗೆ ಇದನ್ನು ಬರೆಯುತ್ತಿದ್ದೇನೆ ಅತೀ ಸಾಮಾನ್ಯ ಮಾಹಿತಿ ಬೇಕೆಂದರೆ ಈ ಕೆಳಗಿನವುಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಹುಟ್ಟಿದ್ದು ಅಮ್ಮನೂರು ಹಾಸನ ಜಿಲ್ಲೆಯ ಆರಕಲಗೂಡಿನ ಬಬಗಳಲೆ ಗ್ರಾಮ. ಬೆಳೆದಿದ್ದು ಪೂರ್ತಿ ಈಗಿನ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ. ಓದಿದ್ದು ಸರಕಾರಿ ಶಾಲೆ. ಹತ್ತರ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ವಲಸೆ. ಮತ್ತೆ ತಿರುಗಿ ನೋಡಲಾಗಿಲ್ಲ. ಈಗ ಸದ್ಯಕ್ಕೆ ನನ್ನ ಇಂಜಿನಿಯರಿಂಗ್ ಪದವಿ ನೋಡಿ ಬಹುರಾಷ್ಟ್ರೀಯ ಕಂಪನಿಯೊಂದು ಕೆಲಸ ಕೊಟ್ಟಿದೆ. ಪ್ರೀತಿಸಿದವಳೊಟ್ಟಿಗೆ ಮದುವೆಯಾಗಿ ಸದ್ಯ ಮುದ್ದು ಬಂಗಾರಿಯೊಬ್ಬಳಿಗೆ ನಾನು ಪ್ರೀತಿಯ ತಂದೆಯಾಗಿದ್ದೇನೆ:)

ನನ್ನ ಹವ್ಯಾಸ: ಸಂಗೀತ, ಚಲನಚಿತ್ರ, ಮಿಮಿಕ್ರೀ, ಹಾಡುವುದು, ಪ್ರವಾಸ ಹಾಗೂ ಸಾಹಿತ್ಯ.

ಭೈರಪ್ಪ, ತೇಜಸ್ವಿ, ಕಾರಂತ, ದಿನಕರ ದೇಸಾಯಿ ಮುಂತಾದ ಕವಿಗಳ ಸಾಹಿತ್ಯದಲ್ಲಿ ಕಣ್ಣಾಡಿಸಿದ್ದೇನೆ, ಭಾರತೀಯ ಲೇಖಕ ಚೇತನ್ ಭಗತ್ ರವರ ಆಂಗ್ಲ ಸಾಹಿತ್ಯವನ್ನೂ ಓದಿದ್ದೇನೆ. ರವಿ ಬೆಳಗೆರೆಯವರ ಬರೆಯುವ ಶೈಲಿ ನನಗಿಷ್ಟ. ಸಾಹಿತ್ಯವೆಂಬುದು ಸಾಧ್ಯವಾದಷ್ಟು ಜನಗಳ ಮುಟ್ಟುವಂತಿರಬೇಕು ಎಂಬುದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ಸರಳ ಭಾಷೆಯ, ಆದರೆ ಪರಿಣಾಮಕಾರಿ ಶಕ್ತಿಯುಳ್ಳ ಸಾಹಿತ್ಯವನ್ನು ಹೆಚ್ಚು ಇಷ್ಟಪಡುತ್ತೇನೆ. ಜೊತೆಗೆ ಬರೆಯುವಾಗಲೂ ಸರಳ ಭಾಷೆಯಲ್ಲೇ ಬರೆಯಲು ಪ್ರಯತ್ನ ಮಾಡುತ್ತೇನೆ. ಕನ್ನಡದ ಮೇಲಿನ ಪ್ರೀತಿ ನನ್ನನ್ನು ಬರೆಯಲು ಶುರು ಮಾಡಿದೆ.

ಮೈಸೂರಿನಲ್ಲಿ ಪ್ರಥಮ ವರ್ಷದ ಪಿಯುಸಿಯಲ್ಲಿ ನಾ ಓದುತ್ತಿದ್ದಾಗ ಹಾಗೆ ಸುಮ್ಮನೆ ಕುಳಿತಿರಲಾರದೇ (ಜೀವನದ ಪ್ರಪ್ರಥಮ) ಒಂದು ಚುಟುಕ ಬರೆದೆ.

ನಾನಂದುಕೊಂಡಂತೆಯೇ,
ಅಂದು,
ನನ್ನ ಪ್ರಿಯೆ,
ಪ್ರೇಮಪತ್ರವ ಕೊಟ್ಟಳು
ನನಗೊಂದು..!!
ಅಗ್ರಹಾರದಲ್ಲಿಯ,
ಆಕೆಯ,
ಪ್ರಿಯಕರನಿಗೆ,
ಕೊಟ್ಟು ಬರಲೆಂದು!!  

ಈ ಚುಟುಕ ನೋಡಿ ನಕ್ಕು, ಅಂದು ನನ್ನ ಗೆಳೆಯರು ಕೊಟ್ಟ ಷಹಬ್ಬಾಷ್ ಗಿರಿ ಎಷ್ಟೊಂದು ಉತ್ಸಾಹ ಕೊಟ್ಟಿತೆಂದರೆ, ಕೇವಲ ಒಂದಷ್ಟು ತಿಂಗಳುಗಳಲ್ಲೇ ಡೈರಿಯೊಂದರಲ್ಲಿ ಸುಮಾರು ಮುನ್ನೂರು ಕವನಗಳನ್ನು ಬರೆದೆ! ಮತ್ತೆ ವಿದ್ಯಾಭ್ಯಾಸದ ಗುಂಗಿನಲ್ಲಿ ನನ್ನ ಈ ಹವ್ಯಾಸವನ್ನು ಪಕ್ಕಕ್ಕಿರಿಸಬೇಕಾಯಿತು.ಈಗ ಮತ್ತೊಮ್ಮೆ ಬರೋಬ್ಬರಿ ಹನ್ನೆರಡು ವರ್ಷಗಳ ನಂತರ, ಅರಿವಿಲ್ಲದೇ ಆರಂಭಿಸಿದ ನನ್ನದೇ ಬ್ಲಾಗಿನ ಮುಖಾಂತರ ಮತ್ತೊಮ್ಮೆ ಸಾಹಿತ್ಯ ಪಯಣ ಶುರುವಾಗಿದೆ. ಫೇಸ್ ಬುಕ್ ನ "ಕನ್ನಡ ಬ್ಲಾಗ್" ಗೆಳೆಯರ ಒಡನಾಟದೊಂದಿಗೆ ಮತ್ತೊಮ್ಮೆ ಕಳೆದು ಹೋದ ಅಮೂಲ್ಯ ವಸ್ತು ಮತ್ತೊಮ್ಮೆ ಸಿಕ್ಕಂತಾಗಿದೆ. ಸಾಹಿತ್ಯಕ್ಕೆ ಹೆಚ್ಚು ಸಮಯ ಮೀಸಲಿಡಲಾಗದಿದ್ದರೂ ಸಮಯ ಸಿಕ್ಕಾಗಲೆಲ್ಲ ಹೊಸ ಪುಸ್ತಕಗಳ ಮೊರೆ ಹೋಗುತ್ತೇನೆ. ಓದುವ ಅಥವಾ ಬರೆಯುವ ಸಾಹಿತ್ಯದಲ್ಲಿ ನನ್ನನ್ನು ಬಹಳ ಕಾಡುವ ವಿಷಯಗಳೆಂದರೆ ಹಸಿವು,ಸಾವು,ಸಂಬಂಧ ಹಾಗೂ ಜೀವನ. ನಾ ಏನೇ ಬರೆದರೂ ಅವುಗಳು ನನ್ನ ಮನಸ್ಸಿನಲ್ಲಿ ಸ್ವಲ್ಪ ಸಮಯ ಬೀಡು ಬಿಡಲು ಅವಕಾಶ ಮಾಡಿ, ಕೊಂಚ ಗಿರಕಿ ಹೊಡೆಯಬಿಟ್ಟು ನಂತರವೇ ಹಾಳೆಗೆ ಗೀಚುತ್ತೇನೆ.

ಹೀಗೆಯೇ ಇನ್ನೊಂದಷ್ಟು ಬರೆಯುವ ಶಕ್ತಿ ತಾಯಿ ಕನ್ನಡಾಂಬೆ ಕೊಡಲಿ.

ಅರಿಯದಿಹ ಅಂತ್ಯದತನಕ
ಹುಟ್ಟಿನಿಂದ ಪರಿಪೂರ್ಣತೆಯೆಡೆಗೆ
ನಡೆಯುತಿಹ ಪಯಣವೇ ಜೀವನ

ಕನ್ನಡ ಬ್ಲಾಗ್ ಅತ್ಯಂತ ಆರೋಗ್ಯಕಾರಿ ಕನ್ನಡ ಸಾಹಿತ್ಯ ತಾಣ. ಇಲ್ಲಿ ಪ್ರತೀ ಕನ್ನಡ ಸಾಹಿತ್ಯಪ್ರಿಯರಿಗೆ ತುಂಬು ಹೃದಯದ ಸ್ವಾಗತ ಸಿಗುತ್ತದೆ. ಪ್ರತೀ ಸದಸ್ಯರು ಮುಕ್ತ ಮನಸ್ಸಿನಿಂದ ತಮ್ಮ ಸಾಹಿತ್ಯವನ್ನು ಪ್ರಕಟಿಸುವುದಾಗಲಿ ಮತ್ತು ಇನ್ನೊಬ್ಬರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದಾಗಲಿ ಮಾಡುತ್ತಾರೆ. ಈಗಾಗಲೇ ತನ್ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಕಬ್ಲಾ, ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿಯ ಎಲ್ಲ ಕನ್ನಡಿಗರನ್ನು ಸೆಳೆಯುತ್ತದೆ ಅನ್ನುವುದು ನನ್ನ ಆಶಯ:) --ಸಂತು"

ಎಂದು ಮಾತು ಮುಗಿಸಿದ ಗೆಳೆಯ ಸಂತುವಿನ ಚಂದದ ಮಾತುಕತೆ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುವೆ ಗೆಳೆಯರೇ.. ಸಂತೋಷ್ ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ.. ಪೋಸ್ಟ್ ಗಳು ಕಡಿಮೆ ಇವೆ ಎನಿಸಿದರೂ ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..

http://frommyheartsanthu.blogspot.in/
ಅವರ ಇಂಗ್ಲೀಷ್ ಬ್ಲಾಗ್ ಸಹ ಇದೆ ನೀವಲ್ಲಿ ಅವರಿರುವ ದೇಶದ ಫೋಟೋಗಳನ್ನು ನೋಡಬಹುದು :))
http://santhu-world.blogspot.in/

ಗೆಳೆಯರೇ, ಗೆಳೆಯ ಸಂತುವಿನ ಕವಿತೆಗಳ ಕೆಲವು ಆಯ್ದ ಸಾಲುಗಳು ನಿಮಗಾಗಿ..

ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ. 
ಟೊಳ್ಳು ಪೊಳ್ಳು ಸುಳ್ಳು ನುಡಿದು,
ನನ್ನ ಕಳ್ಳನನ್ನಾಗಿಸುವ,
ನಾಲಗೆಯ ಮೇಲೆ ನನಗನುಮಾನ.
*****
ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
*****
ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))