ಶುಕ್ರವಾರ, ಅಕ್ಟೋಬರ್ 19, 2012


ಎಲೆ ಮರೆ ಕಾಯಿ ೬೧
ಹಳೆಯ ಪತ್ರಗಳನ್ನೆಲ್ಲ
ಸಿಕ್ಕಿಸಿದ್ದ, ತಂತಿಯನ್ನು
ಬಿಸಾಡುವ ಮುನ್ನ
ಒಂದು ಪತ್ರ ಓದಿದೆ
ಬಾವ, ಅಕ್ಕನಿಗೆ ಬರೆದಿದ್ದು
"ನೀನು ನಾಳೆ ಬರದಿದ್ದರೆ
ಅಲ್ಲಿಯೇ ಇರಬಹುದು. ನನ್ನ ಮನೆಯ 
ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ
ನಿನ್ನ ಹೆಣ"
ಅಕ್ಕ ಈಗಿಲ್ಲ
ಬಾವನಿಗೆ ಇನ್ನೊಂದು ಮದುವೆಯಾಗಿದೆ

ಪ್ರೇಮ, ಸಂಸಾರ, ದೇವರು, ರಾಜಕೀಯ ಇವುಗಳ ಸುತ್ತ ಜನ ಗಿರಕಿ ಹೊಡೆಯುವ ಹಾಗೆ ಕೆಲವು ಬರಹಗಾರರ ಲೇಖನಗಳು ಕವಿತೆಗಳು ಇವುಗಳ ಸುತ್ತ ಗಿರಕಿ ಹೊಡೆಯುತ್ತವೆ. ಒಂದು ನಿರ್ದಿಷ್ಟ ಕಕ್ಷೆಯಲ್ಲೇ ಚಲಿಸುವಂತೆ ಆಣತಿ ಪಡೆದವರಂತೆ ಅಂತಹ ಬರಹಗಾರರು ಒಂದು ಪರಿಧಿಯನ್ನು ತಮ್ಮೊಳಗೆ ಕಟ್ಟಿಕೊಂಡು ತಮಗೆ ಗೊತ್ತಿಲ್ಲದೆ ಬಂಧಿತರಾಗಿಬಿಡುತ್ತಾರೆ. ಆ ಗಿರಕಿ ಹೊಡೆಯುವ ಕಕ್ಷೆಗಳು ಚಿಕ್ಕದಾದಷ್ಟು ಅವರ ಕವನಗಳು ಬರಹಗಳು ಏಕತಾನತೆಗೆ ಒಳಗಾಗಿ ಕ್ರಮೇಣ ಓದುಗರಿಗೆ ನೀರಸವೆನಿಸತೊಡಗುತ್ತವೆ. ತಮ್ಮ ಪರಿಧಿಯನ್ನು ಬಿಟ್ಟು ಹೊರ ಹಾರುವ ಸಾಮರ್ಥ್ಯ ಉಳ್ಳವರು ಒಂದು ಕಕ್ಷೆಯಿಂದ ಮತ್ತೊಂದು ಕಕ್ಷೆಗೆ ಜಿಗಿದು ಮತ್ತೊಂದು ಪರಿಧಿ ತಲುಪಿ ಅದರೊಳಗಿನ ಪ್ರಪಂಚವನ್ನು ನಮ್ಮೆದುರಿಗೆ ಬಿಚ್ಚಿಡುತ್ತಾ ಹೋಗುತ್ತಾರೆ. ಬಹುಶಃ ಉತ್ತಮ ಮತ್ತು ಶ್ರೇಷ್ಠ ಎನಿಸುವಂತಹ ವೈವಿಧ್ಯತೆಗಳಿಂದ ಕೂಡಿದ ಬರಹಗಳು ಕವಿತೆಗಳು ಮೂಡುವುದು ಅಂತಹವರಿಂದಲೇ ಎನಿಸುತ್ತೆ. ಶ್ರೇಷ್ಠ ಎನಿಸುವಂತಹುದನ್ನು ಅವರು ಎಲ್ಲಾ ಸಮಯದಲ್ಲೂ ಪದೇ ಪದೇ ಕಟ್ಟುವಲ್ಲಿ ವಿಫಲರಾದರೂ ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳ ಬಲ್ಲವರು ಮಾತ್ರ ಎಲ್ಲೆಡೆ ಸಲ್ಲುತ್ತಲೇ ಹೋಗುತ್ತಾರೆ. ಮೇಲಿನ ಸಾಲುಗಳನ್ನು ಓದುತ್ತಲೇ ಹೀಗೊಂದು ಭಾವನಾ ಲಹರಿಗೆ ನಾನು ಒಳಗಾಗಲು ಕಾರಣಗಳಿವೆ. ಯಾಕೆಂದರೆ ಅಷ್ಟು ಗಂಭೀರವಾದ ಕವಿತೆಯಂತೆ ಕಾಣುವ ಮೇಲಿನ ಮನ ಮುಟ್ಟುವ ಕವಿತೆಯ ಬರೆಯುವ ನಮ್ಮ ಈ ಕವಿ ಸಹೋದರ ಗಂಭೀರವಾದ ಬರಹಗಾರ ಎಂದು ನಾವಂದುಕೊಂಡರೆ ನಮ್ಮ ಊಹೆಯನ್ನು ಸುಳ್ಳು ಮಾಡಲೆಂದು ಈ ಕೆಳಗಿನ ಬರಹದಂತಹ ಬರಹಗಳನ್ನು ಬರೆದುಬಿಡುತ್ತಾರೆ..
"ಭಾನುವಾರ ಬೆಳಗ್ಗೆ ಹತ್ತು ಗಂಟೆಗೆಲ್ಲಾ ಮುದ್ದೆ, ಬಸ್ಸಾರು ಉಂಡು ಟೀ .ವಿ. ಮುಂದೆ ತೂಕಡಿಸುತ್ತಿದ್ದ ಕಿರಿಕ್ ಕಿಸ್ನಮೂರ್ತಿ. ಟೀ .ವಿ ಯಲ್ಲಿ  "ಜುರಾಸಿಕ್ ಪಾರ್ಕ್" ಚಲನ ಚಿತ್ರ ಬರುತ್ತಿತ್ತು. ಕಿರಿಕ್ ಕಿಸ್ನಮೂರ್ತಿಗೆ ಅರೆಬರೆ ಎಚ್ಚರ. ಡೈನೊಸರಸ್ ಬೇಲಿಯಿಂದ ಆಚೆ ಬಂದು ಒಬ್ಬನನ್ನು ತಿಂದು ಹಾಕಿದ ಮೇಲೆ ಮತ್ತೆ ಬರುವ ಸದ್ದು. ಭೂಮಿ ಗಡಗಡ. ನಿಂತ ನೀರು ಅಲ್ಲಾಡುತ್ತಿತ್ತು. "ಡಮ್", "ಡಮ್" ಎನ್ನುವ ಶಬ್ದ, ಡೈನೊಸರಸ್ ಪ್ರತ್ಯಕ್ಷವಾಗಿ  "ಕೀಈಈಈಈಈಈಈಈಈ" ಎಂದು ಕಿರಿಚಿಕೊಳ್ಳುತ್ತಿದೆ, ಎಮ್ಮೆಗಳ ಕೂಗು, ನಾಯಿಗಳ ಬೊಗಳುವಿಕೆ, ನಿಜವಾಗಿ ಮನೆಯಲ್ಲಾ, ಭೂಮಿಯಲ್ಲಾ ನಡುಗಿದ ಹಾಗೆ, ಪ್ರಳಯವೊ, ಭೂಕಂಪವೊ ಆದಂತೆ  ಆಯಿತು. ಕೀರಿಕ್ ಕಿಸ್ನಮೂರ್ತಿಗೆ ಎಚ್ಚರವಾಗಿ ಭಯಗೊಂಡು "ಇದೇನು. ಜುರಾಸಿಕ್ ಪಾರ್ಕ್ ನಲ್ಲಿ ನಾಯಿಗಳು, ಎಮ್ಮೆಗಳೂ ಇಲ್ಲ ಶಬ್ದ ಮಾತ್ರ ಬರ್ತಾ ಇದೆಯಲ್ಲ," ಎಂದು ಕೊಂಡು  ವಾಲ್ಯೂಮ್ ಕಡಿಮೆ ಮಾಡಿದ ಆದರೂ ನಾಯಿಗಳು ಬೊಗಳುತ್ತಲೆ ಇದ್ದವು, ಎಮ್ಮೆಗಳು ಕೂಗುತ್ತಿದ್ದವು." 

ಮೇಲೆ ಕಂಡ ಕವಿತೆಯಲ್ಲಿ ಕಾಣುವ ಈ ಕವಿಯ ಗಂಭೀರ ಭಾವ ಮೇಲಿನ ಸಾಲಿನ ಲೇಖನದಲ್ಲಿ ಕಣ್ಮರೆಯಾದುದು ಹೇಗೆ ಎಂದು ಯೋಚಿಸಿದರೆ, ಒಂದು ಗಂಭೀರ ಭಾವದ ಕಕ್ಷೆಯಿಂದ ಹಾಸ್ಯದ ತುಂಟಾಟದ ಭಾವದ ಕಕ್ಷೆಗೆ ಜಿಗಿಯುವುದು ಈ ಕವಿಗೆ ಬರಹಗಾರನಿಗೆ ನೀರು ಕುಡಿದಷ್ಟೇ ಸಲೀಸು ಅನಿಸುತ್ತೆ.  ನಮ್ಮದೇ ಕನ್ನಡ ಚಿತ್ರರಂಗದಲ್ಲಿ ಒಮ್ಮೆ ಸಾಲು ಸಾಲು ಚಿತ್ರಗಳಲ್ಲಿ ಕಣ್ಣೀರ ಕೋಡಿಯನ್ನು ಹರಿಸುವ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರನಟಿಯೊಬ್ಬರು ತಮ್ಮ ಕಣ್ಣೀರಿನ ಕಕ್ಷೆಯಿಂದ ಜಿಗಿದು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಟಿಸಲು ಕಲಿತಿದ್ದು ಈಗ ಇತಿಹಾಸ. ತನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಒಂದು ಹಣೆಪಟ್ಟಿ ಪಡೆಯದೆ ಕಣ್ಣೀರು ಮತ್ತು ಹಾಸ್ಯ ಎರಡನ್ನೂ ನಿಭಾಯಿಸುವಂತಹ ಪಾತ್ರಗಳನ್ನು ಮಾಡಿದ್ದರೆ ಬಹುಶಃ ಆ ನಟಿ ಜನರ ಮನದಲ್ಲಿ ಇನ್ನೂ ಹೆಚ್ಚು ಕಾಲ ನಿಂತು ಬಿಡುತ್ತಿದ್ದರೇನೋ.. ಹಾಗೆ ನಮ್ಮ ಕವಿ ಸಹೋದರ ತಮ್ಮ ಸಾಹಿತ್ಯ ಕೃಷಿಯ ಮೊದಲ ದಿನಗಳಲ್ಲೇ ಒಂದೆಡೆ ಗಂಭೀರ ಮತ್ತೊಂಡೆಗೆ ಹಾಸ್ಯದ ಶೈಲಿಗಳಲ್ಲಿ ಕವಿತೆ ಮತ್ತು ಬರಹ ಎರಡೂ ಪ್ರಕಾರಗಳಲ್ಲಿ ಕೈಯಾಡಿಸುತ್ತಿದ್ದಾರೆ.  ಈ ಎರಡೂ ಪ್ರಕಾರಗಳು ಇವರಿಗೆ ಒಲಿಯುತ್ತಿರುವುದು ಒಲಿದಿರುವುದು ನಮ್ಮಂತಹ ಓದುಗರಿಗೆ ನಿಜಕ್ಕೂ ಖುಷಿಯ ಸಂಗತಿ.

ಚಿಕ್ಕದಾಗಿ, 
ಕವಿತೆಯಾಗು ಎಂದೆ, 
ಕತೆಯಾಗುತ್ತೇನೆ  ಎಂದಳು,
ಕತೆಯನ್ನು ಇಟ್ಟುಕೊಂಡು ಧಾರವಾಹಿ ಮಾಡುತ್ತಿದ್ದೇನೆ, 
ಕವಿತೆಗೆ ಬೇರೆಯವಳನ್ನು ಹುಡುಕುತ್ತಿದ್ದೇನೆ

ಮೇಲಿನ ಸಾಲುಗಳ ನೋಡಿ ಒಮ್ಮೆ ನಕ್ಕುಬಿಡಬೇಕು ಅನಿಸುತ್ತದಲ್ಲವೇ ಗೆಳೆಯರೇ.. ಹೀಗೆ ಒಮ್ಮೆ ನಗುವನ್ನು ಮತ್ತೊಮ್ಮೆ ಗಂಭೀರ ಮುಖ ಭಾವವನ್ನು ನಮ್ಮಲ್ಲಿ ಉಂಟು ಮೂಡುವಂತೆ ತನ್ನ ಕವಿತೆಗಳಿಗೆ ಹಾಸ್ಯ ಬರಹಗಳಿಗೆ ಆಣತಿಯಿತ್ತು ಕುಳಿತ್ತಲ್ಲಿಯೇ ಕಳ್ಳ ನಗೆ ಬೀರುವ ನಮ್ಮ ನಡುವಿನ ಬರಹಗಾರರ ಹೆಸರು ತುಂಟು ಕೃಷ್ಣ. ಇವರು ಬರೀ ತುಂಟಾಟ ಆಡೋದಿಲ್ಲ ಜೊತೆಗೆ ಕಿರಿಕ್ ಸಹ ಮಾಡುತ್ತಾರೆ. ಅದಕ್ಕೆ ಇವರ ಅಭಿಮಾನಗಳ ಕಣ್ಣಿನಲ್ಲಿ ಇವರು ಕಿರಿಕ್ ಕಿಸ್ನಣ್ಣ, ಈ ವಾರದ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ನಮ್ಮ ಕಿರಿಕ್ ಕಿಸ್ನಣ್ಣ ಅವರ ನಿಜವಾದ ಹೆಸರು ಕೃಷ್ಣಮೂರ್ತಿ.. ಕಿಸ್ನಣ್ಣನೊಡನೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ತುಂಟು ಕೃಷ್ಣ

"ನನ್ನ ಬಗ್ಗೆ ಬರೆದು ಕಳಿಸಿ ಎಂದು ನಟರಾಜ್ ಕೇಳಿದಾಗ ನನಗೆ ತುಂಬಾ ಸಂಕೋಚವಾಯಿತು. ಯಾಕೆಂದರೆ ನಾನು ಬರೆದಿರುವುದು ತುಂಬಾ ಕಡಿಮೆ ಅದರಲ್ಲಿ ಮೆಚ್ಚಿಗೆ ಪಡೆದ ಕವಿತೆಗಳು ಒಂದೋ, ಎರಡೋ, ಆದರೂ ನಟರಾಜ್ ಅವರ ಒತ್ತಾಯಕ್ಕೆ ಬರೆಯುತ್ತಿದ್ದೇನೆ.

ನಾನು ಹುಟ್ಟಿದ್ದು , ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ, ನನ್ನ ತಂದೆ ಸರ್ಕಾರಿ ಶಾಲೆಯ ಉಪಾದ್ಯಾಯರಾಗಿದ್ದರು. ವರ್ಗಾವಣೆ ಆದ ಕಡೆ ಒಬ್ಬರೇ ಹೋಗುತ್ತಿದ್ದರು, ನಮ್ಮಗಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ಕರೆದುಕೊಂಡು ಹೋಗುತ್ತಿರಲಿಲ್ಲ. ಹಾಗಾಗಿ ಅಮ್ಮನೇ ಎಲ್ಲಾ. ನಮ್ಮ ಅಜ್ಜಿಗೆ ಮಧ್ಯಾಹ್ನದ ಸಮಯದಲ್ಲಿ ಅಮ್ಮ ಕಥೆ ಓದುತ್ತಿದ್ದರು. ಅನುಪಮ ನಿರಂಜನ, ಭೈರಪ್ಪ, ಕಾರಂತರು, ತ.ರಾ.ಸು, ತ್ರಿವೇಣಿ, ಎಂ.ಕೆ.ಇಂದಿರಾ, ಕುವೆಂಪು, ಇವರ ಕಥೆ ಗಳನ್ನು ಕೇಳಿ ಆನಂದಿಸುತ್ತಿದ್ದೆ. ಹೈಸ್ಕೂಲು ತಲುಪಿದಾಗ ಪತ್ತೇದಾರಿ ಕಾದಂಬರಿಗಳು, ಟಿ.ಕೆ. ರಾಮರಾವ್, ಎನ್. ನರಸಿಂಹಯ್ಯ ಮುಂತಾದವರು, ಪಾಠ ದಲ್ಲಿ ಬಂದ ಪದ್ಯ, ಕವಿತೆ, ಕಾವ್ಯದ ತುಣುಕು ಬಿಟ್ಟರೆ ಅದರ ತಂಟೆಗೆ ಹೋಗಿರಲಿಲ್ಲ. ಓದು ತುಂಬಾ ಹುಚ್ಚು..

ಫೇಸ್ ಬುಕ್ಕಿನಲ್ಲೇ ಕನ್ನಡವೇ ಸತ್ಯ ಗುಂಪಿನಲ್ಲಿ ನಾನು ಮೊದಲು ಕವಿತೆ ಬರೆದಿದ್ದು. ನನ್ನ ಮೊದಲ ಕವಿತೆ "ಅಮ್ಮ ಸತ್ತಾಗ ಅಳಲಿಲ್ಲ "

ಅಮ್ಮ ಸತ್ತಾಗ ಅಳಲಿಲ್ಲ
ಅವಳನ್ನೆತ್ತಿ ಚಟ್ಟದ ಮೇಲಿಟ್ಟಾಗಲೂ ಅಳಲಿಲ್ಲ
ಹೂಹಾರಗಳನ್ನೆಲ್ಲಾ ಎತ್ತಿ ಎಸೆದಾಗಲೂ ಅಳಲಿಲ್ಲ
ಆದರೆ ಅವಳ ಪ್ರದಕ್ಷಣೆ ಮಾಡಿ
ಪಾದಕ್ಕೆ ನಮಸ್ಕರಿಸುವಾಗ
ಅವಳ ಒಡೆದು ಹೋದ ಪಾದಗಳಿಂದ
ಒಸರಿದ್ದ ರಕ್ತದ ಹನಿಗಳನ್ನು ಕಂಡು
ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ

ಕನ್ನಡ ಬ್ಲಾಗ್, ನಿಲುಮೆ, ಭಾವುಕ ಮನಸ್ಸುಗಳ ವೇದಿಕೆ, ಕಥೆ ಕವನ ಕಾಲಹರಣ, ಮುಂತಾದ ಬ್ಲಾಗುಗಳಲ್ಲಿ ನನ್ನ ಕವಿತೆ ಹಾಕುತ್ತಿದ್ದೆ. ಕಾಗುಣಿತದ ತಪ್ಪುಗಳಿಂದ ಭಯಪಟ್ಟು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ, ಕನ್ನಡ ಬ್ಲಾಗಿನ ಶ್ರೀಯುತ ಪುಷ್ಪರಾಜ್ ಚೌಟ ನನ್ನ ತಪ್ಪುಗಳನ್ನು ತಿದ್ದಿ, ದಾರಿಗೆ ತಂದಿದ್ದಾರೆ, ಕೆಲವೊಮ್ಮೆ ಕಟುವಾಗಿ ಟೀಕಿಸಿದ್ದಾರೆ, ಅವರಿಗೆ ನನ್ನ ವಂದನೆಗಳು. ಅವರಂತೆ ಶ್ರೀಯುತ ಶ್ರೀಯುತ ಮೋಹನ್. ವಿ.ಕೊಳ್ಳೇಗಾಲ, ರವಿ ಮೊರ್ನಾಡ, ರವಿ ತಿರುಮಲೈ ಅಣ್ಣ, ಮುಂತಾದ ಅನೇಕರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರಿಗೆಲ್ಲ ನನ್ನ ಪ್ರಣಾಮಗಳು. ನನ್ನನ್ನು ಮಾತನಾಡಿಸಿ ನನ್ನಲ್ಲಿರುವ ಸಾಹಿತ್ಯದ, ಸ್ನೇಹದ, ಕೀಳರಿಮೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಿದ ತಮಗೂ ಮತ್ತು ಫೇಸ್ ಬುಕ್ಕಿನ ಅನೇಕ ಸ್ನೇಹಿತರಿಗೆ ನನ್ನ ಅನಂತಾನಂತ ಧನ್ಯವಾಧಗಳು. ."

ಎಂದು ಮಾತು ಮುಗಿಸಿದ ನಮ್ಮ ಕಿರಿಕ್ ಕಿಸ್ನಣ್ಣನ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗಿನ ಲಿಂಕ್ ಕೆಳಗೆ ನೀಡಿರುವೆ. ಕಿಸ್ನಣ್ಣ ಹೇಳುವಂತೆ ಟೈಪಿಂಗ್ ಮಾಡುವಾಗ ಅಲ್ಲಲ್ಲಿ ಕಾಗುಣಿತ ದೋಷಗಳಿದ್ದರೆ ಕಿಸ್ನಣ್ಣನನ್ನು ಕ್ಷಮಿಸಿಬಿಡಿ.. :)

ಕಿಸ್ನಣ್ಣನ ಬ್ಲಾಗಿನ ಹೆಸರು ಹಂಸಗೀತೆ..

http://hamasageethe.blogspot.in

ಕಿಸ್ನಣ್ಣನ ಒಂದೆರಡು ಕವಿತೆಯ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ಅಂದು, 
ನನಗೆ ಹೆಸರಿಡುವಾಗ ಅಪ್ಪ ನನಗೆ ಕಿವಿಯಲ್ಲಿ
ಮೂರು ಬಾರಿ ನನ್ನ ಹೆಸರು ಹೇಳಿದ್ದರು
ನನಗೆ ಕೇಳಿರಲಿಲ್ಲ 
ಇಂದು
ಮೃತ ಅಪ್ಪನ ಕಿವಿಯಲ್ಲಿ ನಾನು ಮೂರು ಬಾರಿ
ನಾರಾಯಣ, ಎಂದು ಹೇಳಿದೆ
ಅವರಿಗೂ ಕೇಳಲಿಲ್ಲ
ಅಂದು ಆರಂಭ,
ಇಂದು ಅಂತ್ಯ
*****
ಶಕುಂತಲೆಗೆ, ದುಷ್ಯಂತ ಉಂಗುರ ಕೊಟ್ಟು ಹೇಳಿದ
ನನ್ನನ್ನು ಮರೆಯಬೇಡ. 
ನಾನೂ, ಅವಳಿಗೆ ಉಂಗುರ ಕೊಟ್ಟು ಹೇಳಿದೆ
ನನ್ನನ್ನು ಮರೆತುಬಿಡು. 
ಶಕುಂತಲೆಯ ಉಂಗುರ ಸಿಕ್ಕಿತು ಮೀನಿನ ಹೊಟ್ಟೆಯಲ್ಲಿ
ನನ್ನ ಉಂಗುರ ಸಿಕ್ಕಿತು ಗೆಳೆಯನ  ಬೆರಳಿನಲ್ಲಿ
ದುಷ್ಯಂತನಿಗೆ ಶಕುಂತಲೆಯ ನೆನಪಾಯಿತು
ಮಗನನ್ನು ನೋಡಿ
ನನಗೂ ನನ್ನ ಗೆಳೆಯನಿಗೂ ಜಗಳ ಆಯಿತು
ಅವಳ ಮಗನನ್ನು ನೋಡಿ ....
*****
ಹಳೆಯ ಪತ್ರಗಳನ್ನೆಲ್ಲ
ಸಿಕ್ಕಿಸಿದ್ದ, ತಂತಿಯನ್ನು
ಬಿಸಾಡುವ ಮುನ್ನ
ಒಂದು ಪತ್ರ ಓದಿದೆ
ಬಾವ, ಅಕ್ಕನಿಗೆ ಬರೆದಿದ್ದು
"ನೀನು ನಾಳೆ ಬರದಿದ್ದರೆ
ಅಲ್ಲಿಯೇ ಇರಬಹುದು. ನನ್ನ ಮನೆಯ 
ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ
ನಿನ್ನ ಹೆಣ"
ಅಕ್ಕ ಈಗಿಲ್ಲ
ಬಾವನಿಗೆ ಇನ್ನೊಂದು ಮದುವೆಯಾಗಿದೆ
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

3 ಕಾಮೆಂಟ್‌ಗಳು:

  1. Hi Krishna Sir,
    Just forget about grammar mistakes.
    we are already aware that we get gold from the earth with mud.
    But after all the cleaning process, ultimately what matters is GOLD, not MUD!!

    Keep writing, we are really enjoying your literature.

    Hi Nattu, As usual good work:)


    ಪ್ರತ್ಯುತ್ತರಅಳಿಸಿ
  2. ಸರಳತೆಯು ಮೈಗೂಡಿಸಿಕೊಂಡ ಕವಿ ಕಿಟ್ಟಪ್ಪ ಅನಿಸುತ್ತದೆ. ಸರಳತೆಯು ಅವರ ಶೈಲಿಯ ವೈಶಿಷ್ಟ್ಯ.

    ನೇರಾ ನೇರಾ ಬರೆಯುವುದು ಕವಿಗೆ ಒಂದು ಸವಾಲಿದ್ದಂತೆ. ಇವರ ನಿರೂಪಣೆಯು ನನಗೆ ನೆಚ್ಚಿಗೆಯಾಯಿತು.

    ಇಂತಹ ಕವಿಯನ್ನು ನಮಗಾಗಿ ಪರಿಚಯಿಸಿದ ನಟಣ್ಣನಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ನಾನು ತುಂಬಾ ಇಷ್ಟ ಪಡುವ ಬರಹಗಾರರಲ್ಲಿ ಇವರೊಬ್ಬರು...ಧನ್ಯವಾದಗಳು ನಟರಾಜ್...ಇವರನ್ನು ನಿಮ್ಮ ಎಲೆ ಮರೆಕಾಯಿಯಲ್ಲಿ ಪರಿಚಯಿಸಿದ್ದಕ್ಕೆ.. :))

    ಪ್ರತ್ಯುತ್ತರಅಳಿಸಿ