ಗುರುವಾರ, ಅಕ್ಟೋಬರ್ 4, 2012


ಎಲೆ ಮರೆ ಕಾಯಿ ೫೯

ಗೋರಿ ಕಟ್ಟುವ ಬನ್ನಿ
ನಾ ಮೇಲು ತಾ ಮೇಲೆಂದು
ಹೊಡೆದಾಡಿ ಸಾಯುತಿಹ
ಧರ್ಮಗಳಿಗೆ
ಗೋರಿ ಕಟ್ಟುವ ಬನ್ನಿ........

ಕವಿತೆಗಳಲ್ಲಿ, ಬರಹಗಳಲ್ಲಿ ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೋ, ಸಮಾಜದ ಬದಲಾವಣೆಗೋ ಕರೆ ನೀಡುವುದು ಸುಲಭದ ಕೆಲಸವಲ್ಲ. ನಾವು ನಿತ್ಯ ಯಾವುದ್ಯಾವುದೋ ಮೂಲೆಗಳಿಂದ ಕರೆಗಳನ್ನು ಕೇಳುತ್ತಲೇ ಇರುತ್ತೇವೆ. ದೇಶ, ಭಾಷೆ, ನೆಲ, ಜಲ ಎಲ್ಲದರ ಉಳಿವಿಗಾಗಿ ಕರೆಗಳು ಕೇಳುತ್ತಲೇ ಇರುತ್ತವೆ. ಇಲ್ಲಿ ಹೆಚ್ಚು ಸಲ ಕರೆಯ ಮಹತ್ವವೆಷ್ಟು ಎನ್ನುವುದರ ಬದಲಿಗೆ ಕರೆ ನೀಡಿದವರು ಯಾರು ಎಂಬುದರ ಮೇಲೆಯೇ ಕರೆಯ ಉದ್ದೇಶ ಸಫಲ ಅಥವಾ ವಿಫಲವಾಗುವ ಸಾಧ್ಯತೆಗಳಿರುತ್ತದೆ. ಬದಲಾವಣೆಯ ವಿಷಯ ಬಂದಾಗ ಎಲ್ಲರೂ ತಮ್ಮ ಸಣ್ಣ ಸಣ್ಣ ಗುಂಪುಗಳನ್ನು ಒಗ್ಗೂಡಿಸಿ ದೊಡ್ಡ ಸಮೂಹಗಳನ್ನು ಕಟ್ಟದ ಹೊರತು ಬದಲಾವಣೆ ಒಂದು ಕನಸಾಗಿಯೇ ಉಳಿದುಬಿಡುತ್ತದೆ. ಬದಲಾವಣೆಯ ಗಾಳಿ ಲೇಪಿಸಿಕೊಂಡು ಬಂದ ಕವಿತೆ ಬರಹಗಳು ಕಾಲ ಕ್ರಮೇಣ ಒಂದು ವರ್ಗಕ್ಕೆ ಮೀಸಲಾದಂತೆ ಹಣೆ ಪಟ್ಟಿ ಕಟ್ಟಿಕೊಂಡು ಎದುರು ನಿಂತಾಗ ಮತ್ತೊಂದು ವರ್ಗ ಇರುಸು ಮುರುಸಿಗೆ ಒಳಗಾಗುವುದು ಸಾಮಾನ್ಯ. ಅಂತಹ ಇರುಸು ಮುರುಸುಗಳನ್ನು ಓದುಗರಲ್ಲಿ ಹುಟ್ಟದಂತೆ ಮಾಡಿ ಮಾನವೀಯತೆ, ನೈತಿಕತೆ ತುಂಬಿದ ಸಮಾಜದಂತೆ ಒಂದು ಇಡೀ ಸಮೂಹವನ್ನೇ ಚಿಂತಿಸುವಂತೆ ಮಾಡುವುದು ಕವಿತೆಗಳ ಬರಹಗಳ ಉದ್ದೇಶವಾಗಬೇಕು. ಮೇಲೆ ಕಾಣಿಸಿದ ಕವಿತೆಯ ಸಾಲುಗಳು ಹಾಗೊಂದು ಮಾವನೀಯತೆ ಮೆರೆಯುವ ಆಶಯಗಳನ್ನು ಹೊತ್ತು ಎದುರು ನಿಂತಾಗ ಅದನ್ನು ಬಿಗಿದಪ್ಪುವ ಸಾಹಸವನ್ನು ಎಷ್ಟು ಜನ ಮಾಡುತ್ತಾರೋ ತಿಳಿಯದು. ಅಂದ ಹಾಗೆ ಹೀಗೊಂದು ಯೋಚನಾಲಹರಿಗೆ ನಾಂದಿ ಹಾಡುವಂತೆ ಮಾಡಿದ ಕವಿತೆಯ ಸಾಲುಗಳು ಕಂಡು ಬಂದದ್ದು ಬಿಸಿಲಿಗೆ ಸೆಡ್ಡು ಹೊಡೆದ ಜನಗಳ ನಾಡಿನವ.. ಎಂಬ ಅಡಿ ಬರಹವಿರುವ ಬಯಲ ಹುಡಿ ಎಂಬ ಬ್ಲಾಗಿನಲ್ಲಿ..

ನಾನು ಹುಟ್ಟಿದೊಡನೆ 
ಮೊದಲು ಖುಷಿಯ ಪಟ್ಟವನು
ನನ್ನಪ್ಪ.....
ಅಮ್ಮನಿಗಿಂತ ಮೊದಲು
ಮುತ್ತು ಕೊಟ್ಟವ,
ನನಗೆ ನಡಿಗೆಯ 
ಕಲಿಸಲು ಮೊದಲ
ಗುರುವಾದಾತ...

ಸಿನಿಮಾ ಮತ್ತು ನಾಟಕದ ಲೋಕದಲ್ಲಿ ಕಲಾವಿದರ ಮಕ್ಕಳು ಕಲಾವಿದರಾಗುವ ಸಾಧ್ಯತೆಗಳು ಬಹುಶಃ ಹೆಚ್ಚಿರುತ್ತವೆ. ಯಾಕೆಂದರೆ ತಮ್ಮ ಮಕ್ಕಳು ಸಿನಿಮಾದಲ್ಲಿ ನಾಟಕದಲ್ಲಿ ಅಭಿನಯಿಸುವುದು ಬೇಡ ಎಂಬ ತಡೆಗೋಡೆಗಳನ್ನು ಹೆಚ್ಚು ಜನ ಹಾಕುತ್ತಾರೆ. ಅಚ್ಚರಿಯೆಂದರೆ ಅವರ ಮಕ್ಕಳು ಆ ತಡೆ ಗೋಡೆಯ ಸಂಧಿಯಲ್ಲಿ ವಿಸ್ಮಯ ಪ್ರಪಂಚವನ್ನು ಇಣುಕಿ ನೋಡುತ್ತಲೇ ಒಮ್ಮೆ ಆ ಗೋಡೆಯನ್ನು ಮುರಿದೋ ಇಲ್ಲ ದಾಟಿಯೋ ವಿಸ್ಮಯ ಪ್ರಪಂಚವನ್ನು ಸೇರಿಬಿಡುತ್ತಾರೆ. ಅಂತಹ ಕಲಾವಿದರ ತಂದೆ ತಾಯಿಯರು ಎಷ್ಟೇ ಯಶಸ್ಸು ಗಳಿಸಿದ್ದರೂ ತಾವೂ ಯಶಸ್ಸಿನ ರುಚಿ ನೋಡುವುದು ರಾಜಕೀಯಗಳು ಇಲ್ಲವೆಂದರೆ ತಮ್ಮ ಕಲಾ ಸಾಮರ್ಥ್ಯದಿಂದಲೇ. ಸಾಹಿತ್ಯ ಲೋಕ ಹಾಗಲ್ಲ. ಸಾಹಿತಿಗಳ ಮಕ್ಕಳು ಸಾಹಿತಿಗಳಾಗುವುದು ಬಹುಶಃ ತುಂಬಾ ಕಮ್ಮಿ. ಯಾಕೆಂದರೆ ತಂದೆ ತಾಯಿಗಳು ಸಾಹಿತ್ಯ ಲೋಕದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಅವರ ಬರಹದ ಪ್ರಭಾವಕ್ಕೆ ಒಳಗಾಗದೆ ಈಗಾಗಲೇ ಅವರ ತಂದೆ ತಾಯಿಗಳ ಬರಹದ ಪ್ರಭಾವಕ್ಕೆ ಒಳಗಾಗಿರುವ ಓದುಗರನ್ನು ತಮ್ಮ ಓದುಗರಂತೆ ಮಾಡಿಕೊಳ್ಳುವುದು ತುಂಬಾ ತುಂಬಾ ಕಷ್ಟದ ಕೆಲಸ. ಆ ಕಷ್ಟದ ಕೆಲಸವನ್ನು ಸತತ ಪರಿಶ್ರಮದಿಂದ ಸಾಧಸಿ ತೋರಿಸಿದರು ತುಂಬಾ ವಿರಳ.. ಮೇಲಿನ ಕವಿತೆಯ ಸಾಲುಗಳಿಗೂ ಈ ಟಿಪ್ಪಣಿಗೂ ಏನು ಸಂಬಂಧವೆಂದು ನೀವು ಕೇಳುವ ಮೊದಲು ಸ್ವಲ್ಪ ಸಮಯದಲ್ಲೇ ಈ ಟಿಪ್ಪಣಿಯ ಉದ್ದೇಶ ನಿಮಗೆ ತಿಳಿಯುವುದು..

"ಚಂದ್ರನ ಬೆಳದಿಂಗಳೇ ಅವಳ ಮೈಯ ಬಣ್ಣವಾಗಿತ್ತೋ ಏನೋ!!!! ಮೊಗದ ಮೇಲಿನ ನಗುವು ಹೂವನ್ನೂ ನಾಚಿಸುವಷ್ಟು ಸುಂದರವಾಗಿತ್ತು, ಆಹ್ಹಾ! ಆ ಕಂಗಳಲ್ಲಿ ನಕ್ಷತ್ರಗಳ ಸಮೂಹವೇ ಇತ್ತೇನೋ, ಯಾರೇ ಅವಳ ನೋಡಿದರೂ ಪ್ರೇಮದ ಬಂದೀಖಾನೆಗೆ ಬೀಳದೇ ಇರರು, ಅಷ್ಟು ಸೌಂದರ್ಯವತಿ ನನ್ನ ಮನದರಸಿ......"

ನಾನೊಂದು ಹೂವಾಗುವೆ
ಏಕೆಂದರೆ ನನ್ನ ಹುಡುಗಿಗೆ
ಹೂವೆಂದರೆ ಇಷ್ಟವಂತೆ

ನಾನೊಂದು ಮುಗುಳು ನಗುವಾಗುವೆ
ಏಕೆಂದರೆ ನನ್ನ ಮನದನ್ನೆಗೆ
ನಗುವೆಂದರೆ ಇಷ್ಟವಂತೆ

ಒಂದೆಡೆ ಸಮಾಜವನ್ನು ತಿದ್ದುವ ಪಣ ತೊಟ್ಟ ಕವಿಯಂತೆ ಕಾಣುವ ಈ ಕವಿ ಮತ್ತೊಂದೆಡೆ ಪ್ರೇಮದಲ್ಲಿ ಮಗ್ನನಾಗದಂತೆಯೂ ಭಗ್ನನಾದಂತೆಯೂ ಕಾಣುತ್ತಾ ತನ್ನ ಕವಿತೆ ಬರಹಗಳಿಂದ ನಮ್ಮನ್ನು ಹಿಡಿದಿಡುವ ಈ ಕವಿ ಗೆಳೆಯ ಯಾರು ಎಂದು ನಿಮಗೆ ಬಹುಶಃ ಗೊತ್ತಿರುವುದಿಲ್ಲ. ಮೊನ್ನೆ ಮೊನ್ನೆ ಜನುಮ ದಿನ ಆಚರಿಸಿಕೊಂಡ ಹಿರಿಯ ಲೇಖಕರಾದ ಕುಂ. ವೀರಭದ್ರಪ್ಪ ನವರ ಕಿರಿಯ ಪುತ್ರ ಪ್ರವರ ಕೆ ವಿ ಇಂದಿನ ಎಲೆ ಮರೆ ಕಾಯಿಯ ಅತಿಥಿ. ಫೇಸ್ ಬುಕ್ ನಲ್ಲಿ ಪ್ರವರ ಕೊಟ್ಟೂರು ಎಂದು ಪರಿಚಿತವಾಗಿರುವ ಗೆಳೆಯ ಪ್ರವರನ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಪ್ರವರ ಕೆ ವಿ 

"ಬಯಲ ನಾಡು ಕೊಟ್ಟೂರಿನವ ನಾನು, ಹೆಸರು ಪ್ರವರ. ನನ್ನ ಸುತ್ತಲಿನ ಪರಿಸರ ನನ್ನನ್ನು ಬರೆಯುವಂತೆ ಮಾಡಿತು, ನಾಲ್ಕು ಕಾಸಿಗೋಸ್ಕರ ದಿನವಿಡೀ ದುಡಿಯುವ, ಕನಸುಗಳ ಅರ್ಥವೇ ಗೊತ್ತಿಲ್ಲದೊಂದಿಷ್ಟು ಜನರೂ ಇದ್ದಾರೆ ಹಾಗೆ ಇಂಥಹ ಮುಗ್ಧ ಜನರನ್ನ ಚಪ್ಪಲಿಗಿಂತಲೂ ಕಡೆಯಾಗಿ ನೋಡುವ, ಬಳಸಿಕೊಳ್ಳುವ ಅಧಿಕಾರಶಾಹಿ-ಬಂಡವಾಳಶಾಹಿಗಳೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬರೆಯಲಿಕ್ಕೆ ನನ್ನೊಳಗಿದ್ದ ಅಗಾಧ ಶಕ್ತಿಯೆಂದರೆ ನನ್ನಪ್ಪ, ಎಲ್ಲವನ್ನೂ ಮೆಟ್ಟಿ ನಿಲ್ಲಬೇಕೆಂಬ ಆತನ ಮಾತು......

ಮೊದಲು ಪ್ರೀತಿ-ಪ್ರೇಮದ ಕಡೆ ವಾಲಿದ್ದ ಕವಿತೆಗಳು, ಬರೆಯುತ್ತಾ ಹೋದಂತೆ ಬೇರೆಯೆಡೆಗೇ ಸೇಳೆದಂತಿತ್ತು. ಬರೆಯಲು ಶುರು ಮಾಡಿ ಮೂರು ವರುಷಗಳಾದವು, ಸಧ್ಯ ಎಮ್.ಸಿ.ಎ ಐದನೇ ಸೆಮಿಷ್ಟರ್ ನಲ್ಲಿ ಓದುತಿದ್ದೇನೆ. ಸಾಗಬೇಕಿರುವ ಹಾದಿ ತುಂಬಾ ಇದೆ ಹಾಗೆ ಅದು ನನ್ನನ್ನೇ ಕೆಕ್ಕರಿಸಿಕೊಂಡು ನೋಡಿದಂತೆ ಅನಿಸುತ್ತದೆ.

ಮೊದಲ ಕವನ

ನನ್ನ ಜನರಿವರು

ನನ್ನ ಕವಿತೆಗೆ ಎಣ್ಣೆ
ಎರೆದು ಹಣತೆ ಹಚ್ಚಿದವರು
ನನ್ನ ಜನ
ಜಾತಿ ಮತ ಕುಲವೇನೆಂದು
ತಿಳಿದಿಲ್ಲ
ತಿಳಿದಿರುವುದೊಂದೆ ಬಾಳಬೇಕೆಂಬ.........

ನೀರು ಕಾಣದೆ ಬಯಲು
ಬರಡಾಗಿರಲು ಜಾಲಿ ಗಿಡಗಳು
ಹಸಿರ ತೋರಿಸಿ ನಗುತಲಿವೆ
ಇದೆ ನಗುವ ನನ್ನ ಜನ
ನನಗೆ ಕಲಿಸಿದ್ದು.......

ಸುರಿದ ಬೆವರಿನ ನಾತ
ಆರುವ ಯಾವುದೇ ಸುಳಿವಿಲ್ಲ.
ಕಷ್ಟದಲ್ಲಿಳಿದ ಉಪ್ಪು ಬೆವರಿನಂತವರು
ನನ್ನ ಜನಗಳು ಕಪ್ಪು ಮಣ್ಣಿನಂತವರು
ಸುರಿದಷ್ಟು ತಂಪು... ಬೆಳೆದಷ್ಟು ಹರವು...

ಹಾಕಿರುವ ಕೆರಗಳು ಸವೆದು
ಸಣಕಲಾದರೂ ಬಿಡಲೊಲ್ಲದ ನನ್ನ ಜನ
ಜೀವನದ ಮೇಲಿನ ಆಸೆಯನು
ನನಗೆ ಕಲಿಸಿದ್ದು.....

ಹೊಟ್ಟೆ ತುಂಬಲಾರದ ಊಟ
ಉಂಡರೂ ಸರಿಯೇ ಪ್ರೀತಿ
ಸ್ನೇಹವ ಉಂಡು ಒಂದೊಮ್ಮೆ
ಡೇಗಿದರೆ......

ಕನಸಿಲ್ಲದ ಊರಿಗೆ ನಿದ್ರೆಯ ಪಯಣ
ಇಂಥವರು ನನ್ನ ಜನ
ಜೀವನದ ಪಾಠವ ಹೇಳಿಕೊಟ್ಟವರು.

ಉಳಿದಂತೆ ನನ್ನ ನೆಚ್ಚಿನ ಕವನಗಳ ಲಿಂಕನ್ನು ನಿಮಗೆ ಕಳಿಸಿರುತ್ತೇನೆ...... ಧನ್ಯವಾದಗಳು ಗೆಳೆಯ"

ಗೆಳೆಯ ಪ್ರವರನ ಮಾತು ತುಂಬಾ ತುಂಬಾ ಚಿಕ್ಕದಾಯಿತು ಎಂದುಕೊಳ್ಳುತ್ತಿದ್ದಂತೆ "ನಟಣ್ಣ ಹೇಳೋಕೆ ಜಾಸ್ತಿ ಇಲ್ವೇನೊ ಅನ್ನಿಸ್ತಿದೆ.... ಬೇಂದ್ರೆ ಕವನ ಸ್ಪರ್ಧೆಯಲ್ಲೂ ಎರಡು ಬಾರಿ ನನ್ನ ಕವನಗಳು ಸೆಲೆಕ್ಟ್ ಆಗಿದ್ವು...... ಬಂಡಾಯದ ಕಡೆ ಒಲವು" ಎಂದು ಹೇಳುತ್ತಾ ಮುಗಿಸಿದ ಅವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಹಿರಿಯ ಲೇಖಕರ ಮಗನಾಗಿದ್ದರೂ ತನ್ನ ಬರಹಗಳಿಂದ ತನ್ನದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತಿರುವ ಈ ಗೆಳೆಯನಿಗೆ ಶುಭವಾಗಲಿ. ಈ ಗೆಳೆಯ ಉತ್ತಮ ಛಾಯಾಗ್ರಾಹಕ ಸಹ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಗೆಳೆಯ ಪ್ರವರನ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಅಲ್ಲಿ ಅವರ ಕವಿತೆ, ಲೇಖನಗಳ ಜೊತೆ ಜೊತೆಗೆ ಅವರ ಕಾಲೇಜಿನ ದಿನಗಳ ವಿಡೀಯೋಗಳು ಮತ್ತು ಅವರದೇ ಕೈಯಿಂದ ಮೂಡಿರುವ ಪೆನ್ನು ಪೆನ್ಸಿಲ್ ನಿಂದ ಬರೆದ ಚಂದದ ಚಿತ್ರಗಳಿವೆ. ಕವಿತೆಗಳ ಓದಿ, ಚಿತ್ರಗಳ ವಿಡಿಯೋಗಳ ನೋಡಿ ಖುಷಿ ಪಡಿ..

http://kumveepravara.blogspot.in/

ಪ್ರವರ ಅವರ ಕವಿತೆಗಳ ಒಂದೆರಡು ಕವಿತೆಗಳ ಕೆಲವು ಸಾಲುಗಳು ಈ ಕೆಳಗಿನಂತಿವೆ.. ಖುಷಿಯಿಂದ ಓದಿಕೊಳ್ಳಿ..

ಏಕೆ,
ಮೊನ್ನೆ ಕೆರೆ ಏರಿಯ ಮೇಲೆ
ಬರುವೆನೆಂದು ಏಕೆ ಬರಲಿಲ್ಲ?
ಏನಾದರು ಮನೆಯಲ್ಲಿ
ತೊಂದರೆಯಾಯ್ತೆ?
ಅಥವಾ
ನಾನೆ ಮರೆತುಹೋದೆನೆ
*****
ನಿನ್ನ ನಗುವ ಕಂಡ 
ಮಾರನೇ ದಿನ
ಮನಸು ಹೊಚ್ಚ ಹೊಸತಂತಾಗಿದೆ
ಮುಂಗಾರಿನ ಮೊದಲ ಮಳೆಗೆ
ಘಮಗುಡುವ ಮಣ್ಣಿನಂತೆ.....
ಮಳೆಯ ಸ್ಪರ್ಷಕೆ
ಮೊಗವ ಅರಳಿಸಿ ನಗುವ
ಹಸಿರ ಚಿಗುರ ಎಲೆಯ ಮೇಲಿನ 
ಹನಿಗಳಂತೆ....
*****
ನಿನ್ನ ಕೆಂಪ್ ತುಟಿ ನೋಡಿದಾಗ್ಲೆಲ್ಲಾ
ಗುಲಾಬಿ ಹೂವ ನೆನಪಾಗ್ತೈತಿ
ದುಂಬಿ ಬಂದು ಅದರ್ ಮ್ಯಾಲೆ ಕುಂತಾಗ
ನಿನ್ನ ತುಟಿಗೆ ನೋವಾತೇನ ಅನಸ್ತೈತಿ
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :)))

1 ಕಾಮೆಂಟ್‌:

  1. ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಜನಿಸಿದೆ...ಸುಂದರ ಪರಿಚಯ..ಕುವೆಂಪು ಮತ್ತು ಪೂ.ಚಂ.ತೇ..ಜೋಡಿಯಂತೆ..ಕುಂ.ವೀ. ಹಾಗು ಕುಂ.ವೀ.ಪ್ರ..ಕೂಡ ಬೆಳಗಲಿ...ಶುಭಾಶಯಗಳು..ಹಾಗು ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ