ಗುರುವಾರ, ಆಗಸ್ಟ್ 30, 2012

ಎಲೆ ಮರೆ ಕಾಯಿ ೫೪ 
ಸತ್ತುಹೋಗಬೇಕೆಂದ ರಾತ್ರಿಗಳೆಲ್ಲಾ, 
ಅತ್ತು ಶರಣಾಗಿದ್ದೇನೆ, ನಿದಿರೆಗೆ ... 
ಹಾಗೇ !!! 
ಸತ್ತುಹೋದ ಆ ರಾತ್ರಿಗಳು, 
ನಿಶ್ಯಕ್ತ -ನಿರ್ಧಾರಗಳು, 
ಅತೃಪ್ತ -ಆತ್ಮಗಳಾಗಿವೆ... 

ಮೇಲಿನ ಕವಿತೆಯ ಸಾಲುಗಳನ್ನು ಓದುತ್ತಲೇ ಅಬ್ಬಾ! ಎನಿಸಿಬಿಟ್ಟಿತು. ನಮ್ಮ ಕನ್ನಡ ಬ್ಲಾಗಿನಲಿ ಈ ಕವಿತೆಯ ಓದಿದ ಗೆಳೆಯರೊಬ್ಬರು ಹೀಗೆ ಪ್ರತಿಕ್ರಿಯೆ ನೀಡಿದ್ದರು. "ಗೆಳೆಯ ಕವಿತೆಯ ಸಾಲುಗಳಲ್ಲಿ ಜೀವಂತಿಕೆ ಇದೆ .. ಧಗ್ದ ಮನದ ಅಂತರಾಳದ ನಾದವೊಂದು ಹಾಗೆ ಸುಮ್ಮನೆ ಹಾದುಹೋದಂತೆ.. ಸತ್ತುಹೋದ ಆ ರಾತ್ರಿಗಳು, ನಿಶ್ಯಕ್ತ ನಿರ್ಧಾರಗಳು, ಅತೃಪ್ತ ಆತ್ಮಗಳಾಗಿವೆ... ಎಂಬುದು ಒಂದು ಸುಂದರ ಪ್ರತಿಮೆ ...ಕವಿತೆಯ ಜೊತೆಗಿನ ನಿನ್ನ ಒಡನಾಟ ನಿರಂತರವಾಗಿ ಜಾರಿಯಲ್ಲಿರಲಿ .. ಕವಿತೆ ಧ್ಯಾನ ಕಣೋ ಗೆಳೆಯ ಅದು ತಪಸ್ಸು .." ನಮ್ಮ ಕವಿ ಗೆಳೆಯನ ಈ ಕವಿತೆಗೆ ಗೆಳೆಯನೊಬ್ಬರ ಹೀಗೊಂದು ಚಂದದ ಪ್ರತಿಕ್ರಿಯೆ ನೋಡಿ ಹೌದಲ್ವಾ ಕವಿತೆ ಎಂದರೆ ಒಂದು ಧ್ಯಾನ ಹಾಗು ತಪಸ್ಸಲ್ಲವೇ ಎನಿಸಿತು. ಎಷ್ಟೋ ಕವಿಗಳು ಧ್ಯಾನಕ್ಕೆ, ತಪಸ್ಸಿಗೆ ಜಗವನ್ನೇ ಮರೆತು ಕುಳಿತಾಗಲೇ ಅಲ್ಲವೇ ಅವರು ಹೆಣೆಯುವ ಪದಗಳ ಸರಮಾಲೆಗಳು ಚಂದದ ಕವಿತೆಗಳಾಗುವುದು.. ಒಮ್ಮೆಮ್ಮೊ ಧ್ಯಾನಕ್ಕೆ ಕುಳಿತ ಕವಿಯ ಎದುರು ರಂಭೆ ಮೇನಕೆಯರು ನರ್ತಿಸಿದಾಗ ಪ್ರೇಮ ಕವಿತೆಗಳು, ಧ್ಯಾನಕ್ಕೆ ಬೇರೆ ಇನ್ಯಾರಾದರೂ ಭಂಗ ತಂದರೆ ಸಿಟ್ಟಿನ ಕವಿತೆಗಳು ಹುಟ್ಟಿಬಿಡುತ್ತವೆ.

ನಿಶ್ಯಕ್ತ ನಾಯಿಮರಿಯೊಂದು
ತನ್ನ ಬಾಲವನ್ನಾ ಅಲ್ಲಾಡಿಸುತ್ತಿದೆ, ದೇಹವೇ ಅಲುಗಾಡಿಸುತಿದೆ ಎಂಬಂತೆ...
ನಿಯತ್ತು ಮರೆತ ನಾಯಕ ನಸುನಗುತಿರುವಾ ಮೀಸೆಯೊಳಗೆ, 
ಕಿಸೆ ತುಂಬಿದ ಖುಷಿಯೊಳಗೆ

ನಮ್ಮ ವ್ಯವಸ್ಥೆಗಳ ಕುರಿತು ಕವಿತೆಗಳು, ವ್ಯಂಗ್ಯ ಚಿತ್ರಗಳು ನಿತ್ಯ ನಮಗೆ ಕಾಣಸಿಗುತ್ತವೆ. ಅವುಗಳು ನಮಗೆ ಹತ್ತಿರವಾಗುವುದು ಅವುಗಳ ಸರಳತೆಗಳಿಂದ. ಹೇಳಬೇಕಾದುದನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹೇಳಿ ಮುಗಿಸಿಬಿಡುವ ಪರಿ ಯಾಕೋ ಹೆಚ್ಚು ಸಲ ಬೇಗ ಮನಸ್ಸಿಗೆ ನಾಟಿಬಿಡುತ್ತದೆ. ಕವನಗಳನ್ನು ಹೀಗೆಯೇ ಬರೆಯಬೇಕು ಎಂಬ ಯಾವುದೇ ಚೌಕಟ್ಟಿಲ್ಲದೇ ಬರೆಯುವ ಕವಿತೆಗಳೂ ಸಹ ಚೌಕಟ್ಟಿನೊಳಗಿನ ಚಿತ್ರಗಳ ಹಾಗೆ ಒಮ್ಮೊಮ್ಮೆ ಸುಂದರವಾಗಿ ಕಾಣುತ್ತವೆ. 

"ಸಭಾಂಗಣದಲ್ಲಿ ಉಪನ್ಯಾಸಕ ದೊಡ್ಡ ದೊಡ್ಡ ಡೈಲಾಗ್ ಡೆಲಿವರಿ ಮಾಡ್ತಾ "ಪ್ರಾಣಿ ಹಿಂಸೆ ಮಾಡಬಾರದು ಹಾಗೇ ಹೀಗೆ" ಅಂತಿದ್ರು.... ಆ ಸಭೆಗೆ ಒಂದು ಸೊಳ್ಳೆ ಕೂಡ ಬಂದಿತ್ತು.. ಸರಿಯಾಗಿ ಕೇಳಿಸ್ತಿಲ್ಲಾಂತ ಅವರ ಹತ್ರಾನೆ ಹೋಯ್ತು.. ಉಪನ್ಯಾಸಕರಿಗೆ ಸೊಳ್ಳೆ ಯಾಕೋ ತುಂಬಾ ನಾಟಕ ಮಾಡ್ತಿದೆ ಅನಿಸ್ತು... ಚಟಾರಂತ ಒಂದು ಪೆಟ್ಟುಕೊಟ್ರು..... ಪಾಪ ಸೊಳ್ಳೆ ಕಮಕ್ ಕಿಮಕ್ ಕೂಡ ಮಾಡ್ದೆ ಸತ್ತೋಗಬಿಡ್ತು:)"

ಈ ಗೆಳೆಯನೇ ಹೀಗೆ ಸಪ್ತವಣ೯ ಎಂಬ ಹೆಸರಿನಿಂದ ಕವಿತೆ, ಚುಟುಕ, ಲಘು ಬರಹಗಳನ್ನು ಬರೆಯುತ್ತಲೇ ಪರೋಕ್ಷವಾಗಿ ಏನೋ ಒಂದು ಸಂದೇಶವನ್ನು ನಮಗೆ ನೀಡಿಬಿಡುತ್ತಾರೆ. ಈ ಗೆಳೆಯನ ಬ್ಲಾಗ್ ಹೆಸರನ್ನು ಸಪ್ತವರ್ಣ ಎನ್ನಬೇಕೋ ಅಥವಾ ಈ ಗೆಳೆಯನ ಹೆಸರಿನಿಂದಲೇ ಕರೆಯಬೇಕೋ ಗೊತ್ತಾಗುತ್ತಿಲ್ಲ. ಬ್ಲಾಗ್ ವಿಳಾಸದಲ್ಲಿರುವ ಸಪ್ತವರ್ಣ ಎಂಬುದು ಇವರ ಬ್ಲಾಗಿನ ಹೆಸರು ಎಂದುಕೊಳ್ಳೋಣ. ಅಂದ ಹಾಗೆ ಸಪ್ತವರ್ಣದ ಒಡೆಯರಾದ ಪ್ರತಾಪ್ ಬ್ರಹ್ಮಾವರ್ ಈ ವಾರದ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಅತಿಥಿಯಾಗಿ ಬಂದು ತಮ್ಮ ಮನದಾಳದ ಮಾತುಗಳನ್ನು ಹೀಗೆ ಹಂಚಿಕೊಂಡಿದ್ದಾರೆ.. ಅವರ ಮಾತುಗಳು ಸಹೃದಯಿಗಳೇ ಇಗೋ ನಿಮಗಾಗಿ.. 

ಪ್ರತಾಪ್ ಬ್ರಹ್ಮಾವರ್

"ಊರು ಬ್ರಹ್ಮಾವರ. ಓದು ಎಸ್ ಎಸ್ ಎಲ್ ಸಿ. ವೈಯಕ್ತಿಕ ಕಾರಣಗಳಿಂದ ಮುಂದೆ ಓದೋಕೆ ಆಗ್ಲಿಲ್ಲ. ಸದ್ಯಕ್ಕೆ ನನ್ನದೇ ಆದ ವ್ಯವಹಾರ. ಓದು ಇಷ್ಟ. ಪ್ರಕಾರಗಳಿಲ್ಲ. ಏನಾದ್ರು ಬರೆಯಬೇಕೆಂಬ ಅತಿಯಾದ ಒತ್ತಡವಿದ್ರೆ ಪೆನ್ನಿಗೆ ಜೀವ. ಹಾಳೆಗೆ ಅಕ್ಷರಗಳ ಬಣ್ಣ. ರವಿ ಮೂರ್ನಾಡು ಪ್ರೋತ್ಸಾಹ ಬ್ಲಾಗಿನಲಿ ಚಟುವಟಿಕೆ ಜಾಸ್ತಿಯಾಗಲು ಕಾರಣ. ಕತ್ತಲು ಬೆಳಕು ಇದ್ದ ಹಾಗೆ ಕೆಟ್ಟದ್ದು ಒಳ್ಳೇದು, ಎರಡನ್ನು ಒಪ್ಪಿಕೊಳ್ಳಬೇಕಾದುದು ಕಟು ಸತ್ಯ. ನಮ್ಮನ್ನು ನಾವು ತಿದ್ದಿಕೊಂಡ್ರೆ ಸಾಕು ಜಗತ್ತಿಗೆ ನಾವು ಮಾಡೋ ಉಪಕಾರ ಮತ್ತು ಒಳ್ಳೇದು ಅದೇ ಅಂದುಕೊಳ್ತೀನಿ. 
ಪ್ರತಾಪ್ ಬ್ರಹ್ಮಾವರ್

ಚಿಕ್ಕಂದಿನಿಂದಲೂ ಬಾಲಮಂಗಳ, ಚಂದಮಾಮ, ಸುಧಾ, ತರಂಗ, ಇಲ್ಲಾ ಯಾವುದೇ ಓದೋಕೆ ಸಿಕ್ಕಿದ್ರು ಓದೋ ಆಸಕ್ತಿ. ಕಾಲೇಜಿನಲ್ಲಿ ನಡೆದ ಕವಿಗೋಷ್ಠಿಯಿಂದ ಪ್ರೇರಿತ. ಕನ್ನಡ ಮೇಷ್ಟ್ರು ದಿವಂಗತ ಸರ್ವೋತ್ತಮ ಶೆಟ್ಟರ ಪ್ರೋತ್ಸಾಹ. ಕಾದಂಬರಿ ಸಿಕ್ರೆ ರಾತ್ರಿ ನಾಲ್ಕಾದ್ರು ಓದಿ ಮುಗಿಸೋ ಹುಚ್ಚು (ಈಗ ಹಂಗೇನಿಲ್ಲ). ಶಾಲಾ ಪುಸ್ತಕದ ಕವಿತೆಗಳಂತೆ ಬರೀತಿರಬೇಕು ಅನ್ನೋ ಆಸಕ್ತಿ. ಎಲ್ಲಾ ವಿಷಯಗಳಿಗಿಂತ ಹೆಚ್ಚು ಜೊತೆಯಾದುದು ಓದು ಓದು ಓದು.. 

ಸಂಯುಕ್ತ ಕರ್ನಾಟಕದಲ್ಲೊಮ್ಮೆ ಪ್ರೋತ್ಸಾಹ ಪರಿಚಯ ಬರಹ, ಕವಿತೆಗಳು ಪ್ರಕಟವಾಗಿತ್ತು."

ಎಂದು ಚಿಕ್ಕದಾಗಿ ಮಾತನಾಡಿ ಮಾತು ಮುಗಿಸಿದ ಈ ಗೆಳೆಯನನ್ನು ಮಾತನಾಡಿಸುವುದು ಬಹಳ ಕಷ್ಟದ ಕೆಲಸ. ಅವರು ಹೆಚ್ಚು ಮಾತನಾಡದಿದ್ದರೂ ಪರವಾಗಿಲ್ಲ. ಅವರ ಬ್ಲಾಗಿನಲ್ಲಿ ಅವರ ಮಾತುಗಳನ್ನು ಕೇಳಿಸಿಕೊಳ್ಳೋಣ.. ಗೆಳೆಯ ಪ್ರತಾಪ್ ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ ಸಹೃದಯಿಗಳೇ.. 
http://sapthavarna.blogspot.in/ 

ಗೆಳೆಯ ಪ್ರತಾಪ್ ಬ್ರಹ್ಮಾವರ್ ರವರ ಒಂದೆರಡು ಕವಿತೆಯ ಸಾಲುಗಳನ್ನು ಈ ಕೆಳಗೆ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ ಗೆಳೆಯರೇ..

ಅಜ್ಜ ನೆಟ್ಟ ಆಲದ ಮರವಂತ... 
ನೇಣು ಹಾಕ್ಕೋಳ್ಳೋದು ಯಾಕ್ರಿ... ? 

ನೀವು ನಿಮ್ಮ್ ಮೊಮ್ಮಕ್ಕಳು ಹಗ್ಗ ಕಟ್ಟಿ ಉಯ್ಯಾಲೆ ಆಡಿದ್ರೆ ಸಾಕ್ರಿ..
*****
ಕರಗೊ ಕತ್ತಲೆ 
ಮರುಗಬೇಡ... 
ನಿನಗೆ ನಾಳೆಯು ಜನನದ
ನಗುವಿದೆ... ಬೆಳಕಿನಂತೆ 
****
ಎಲ್ಲರೆಂದರು, ಅವಳು 
ಮರುಭೂಮಿಯ ಮರಳು, 
ಹಿಂಬಾಲಿಸಬೇಡ 
ಮರುಳನಾಗುವೆ. 
"ನಾನೆಂದೆ, 
ಮರುಳನಾದರು 
ಪರವಾಗಿಲ್ಲ, ನಾ 
ನಲ್ಲೆಗಾಗಿ, ನಾನಲ್ಲೆ 
ಮರಳಾಗುವೆ...
(ಅವಳು- ಜೀವನ , ಗುರಿ)
****

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ